ಈಗಲೇ RCB ಆಟಗಾರನ ಆಯ್ಕೆ ಮಾಡಿ: CSKಗೆ ಐಡಿಯಾ ನೀಡಿದ ಅಶ್ವಿನ್
IPL 2026 CSK: ಈ ಬಾರಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈವರೆಗೆ 6 ಪಂದ್ಯಗಳನ್ನಾಡಿದೆ. ಈ ಆರು ಮ್ಯಾಚ್ಗಳಲ್ಲಿ ಸಿಎಸ್ಕೆ ತಂಡ ಗೆದ್ದಿರುವುದು ಕೇವಲ 2 ಪಂದ್ಯಗಳಲ್ಲಿ ಮಾತ್ರ. ಇದರ ನಡುವೆ ಖಲೀಲ್ ಅಹ್ಮದ್, ನಾಥನ್ ಎಲ್ಲಿಸ್, ಆಯುಷ್ ಮ್ಹಾತ್ರೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಗಾಯದ ಸಮಸ್ಯೆಗೆ ಪರಿಹಾರವಾಗಿ ಅಶ್ವಿನ್ ಲೋನ್ ಐಡಿಯಾ ನೀಡಿದ್ದಾರೆ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸತತ ಸೋಲುಗಳಿಂದ ಕಂಗೆಟ್ಟಿದೆ. ಈ ಸೋಲುಗಳ ನಡುವೆ ಆಟಗಾರರ ಗಾಯದ ಸಮಸ್ಯೆ ಸಿಎಸ್ಕೆ ಫ್ರಾಂಚೈಸಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಸ್ಫೋಟಕ ದಾಂಡಿಗ ಆಯುಷ್ ಮ್ಹಾತ್ರೆ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇತ್ತ ಸತತ ಸೋಲು ಮತ್ತು ಪ್ರಮುಖ ಆಟಗಾರರ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್ ಒಂದು ಮಹತ್ವದ ಸಲಹೆ ನೀಡಿದ್ದಾರೆ. ಅದು ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಯುವ ಪ್ರತಿಭೆಯೊಬ್ಬರನ್ನು ‘ಲೋನ್’ (Loan) ಆಧಾರದ ಮೇಲೆ ಪಡೆಯಲು..!
ಇತ್ತೀಚೆಗೆ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 18 ವರ್ಷದ ಆಯುಷ್ ಮ್ಹಾತ್ರೆ ಎಡಗಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಈ ಸಮಸ್ಯೆಯಿಂದ ಚೇತರಿಸಿಕೊಳ್ಳಲು 6 ರಿಂದ 12 ವಾರಗಳ ಕಾಲಾವಕಾಶ ಬೇಕಾಗಿರುವುದರಿಂದ ಅವರು ಈ ಬಾರಿಯ ಐಪಿಎಲ್ನಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಇದು ಸಿಎಸ್ಕೆಗೆ ಭಾರಿ ಹೊಡೆತ ನೀಡಿದೆ.
ಅಶ್ವಿನ್ ಐಡಿಯಾ!
ಆಯುಷ್ ಮ್ಹಾತ್ರೆ ಹೊರಬಿದ್ದ ಬೆನ್ನಲ್ಲೇ ರವಿಚಂದ್ರನ್ ಅಶ್ವಿನ್ ಸಿಎಸ್ಕೆ ತಂಡಕ್ಕೆ ಸೂಪರ್ ಐಡಿಯಾ ನೀಡಿದ್ದಾರೆ. ಸಿಎಸ್ಕೆ ಫ್ರಾಂಚೈಸಿಯು ಆರ್ಸಿಬಿ ತಂಡದ ಯುವ ಆಟಗಾರ ವಿಹಾನ್ ಮಲ್ಹೋತ್ರಾ ಅವರನ್ನು ಮಿಡ್-ಸೀಸನ್ ಲೋನ್ ಮೂಲಕ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ವಿಹಾನ್ ಅತ್ಯಂತ ಪ್ರತಿಭಾವಂತ ಆಟಗಾರನಾಗಿದ್ದು, ಆರ್ಸಿಬಿ ಪರ ಈವರೆಗೆ ಒಂದು ಪಂದ್ಯವನ್ನೂ ಆಡಿಲ್ಲ. ಅವರು ಸಿಎಸ್ಕೆಗೆ ಉತ್ತಮ ಆಯ್ಕೆಯಾಗಬಲ್ಲರು. ಹೀಗಾಗಿ ಸಿಎಸ್ಕೆ ಫ್ರಾಂಚೈಸಿ ಆರ್ಸಿಬಿ ಜೊತೆ ಮಾತುಕತೆ ನಡೆಸಿ ಅವರನ್ನು ಲೋನ್ ಮೂಲಕ ಪಡೆಯುವುದು ಉತ್ತಮ ಎಂದಿದ್ದಾರೆ.
ವಿಹಾನ್ ಮಲ್ಹೋತ್ರಾ ಯಾರು?
ವಿಹಾನ್ ಮಲ್ಹೋತ್ರಾ 19 ವರ್ಷದ ಪ್ರತಿಭಾನ್ವಿತ ಬ್ಯಾಟರ್. 2026ರ ಹರಾಜಿನಲ್ಲಿ ಆರ್ಸಿಬಿ ಇವರನ್ನು 30 ಲಕ್ಷ ರೂ.ಗೆ ಖರೀದಿಸಿದೆ. ಇದಾಗ್ಯೂ ಅವರು ಆರ್ಸಿಬಿ ಪರ ಇನ್ನೂ ಕೂಡ ಪಾದಾರ್ಪಣೆ ಮಾಡಿಲ್ಲ.
ಇತ್ತ ಆರ್ಸಿಬಿ ಪರ ಈವರೆಗೆ ಯಾವುದೇ ಪಂದ್ಯವಾಡದಿರುವ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ವಿಹಾನ್ ಅವರನ್ನು ಲೋನ್ ಮೂಲಕ ಪಡೆದುಕೊಳ್ಳುವುದು ಉತ್ತಮ. ಈ ಮೂಲಕ ಆಯುಷ್ ಮ್ಹಾತ್ರೆ ಅವರ ಬದಲಿಯಾಗಿ ಬಳಸಿಕೊಳ್ಳಬೇಕೆಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
ಒಂದು ವೇಳೆ ಆರ್ಸಿಬಿ ಒಪ್ಪದಿದ್ದರೆ, ಭಾರತದ ಅಂಡರ್-19 ವಿಕೆಟ್ ಕೀಪರ್ ಬ್ಯಾಟರ್ ಅಭಿಜ್ಞಾನ್ ಕುಂಡು ಅವರನ್ನು ಭವಿಷ್ಯದ ದೃಷ್ಟಿಯಿಂದ ತಂಡಕ್ಕೆ ಸೇರಿಸಿಕೊಳ್ಳಲು ಅಶ್ವಿನ್ ಸೂಚಿಸಿದ್ದಾರೆ.
ಆರ್ಸಿಬಿ ಯಾಕೆ ಲೋನ್ ನೀಡಬೇಕು?
ಅಶ್ವಿನ್ ಪ್ರಕಾರ, ಪ್ರಸ್ತುತ ಆರ್ಸಿಬಿ ತಂಡವು ಅಂಕಪಟ್ಟಿಯಲ್ಲಿ ಭದ್ರವಾದ ಸ್ಥಾನದಲ್ಲಿದೆ. ಆದರೆ ಸಿಎಸ್ಕೆ ಕೆಳಮಟ್ಟದಲ್ಲಿದೆ. ಆರ್ಸಿಬಿಯಲ್ಲಿ ಅವಕಾಶ ಸಿಗದ ಆಟಗಾರನಿಗೆ ಸಿಎಸ್ಕೆ ಪರ ಆಡಲು ಅವಕಾಶ ನೀಡುವ ಮೂಲಕ ಆರ್ಸಿಬಿ ಹಣವನ್ನೂ ಗಳಿಸಬಹುದು ಮತ್ತು ಆಟಗಾರನಿಗೆ ಅನುಭವವೂ ಸಿಗುತ್ತದೆ ಎಂಬುದು ಅಶ್ವಿನ್ ವಾದ.
ಐಪಿಎಲ್ ಲೋನ್ ನಿಯಮವೇನು?
ಐಪಿಎಲ್ನಲ್ಲಿ ಆಟಗಾರರ ‘ಮಿಡ್-ಸೀಸನ್ ಲೋನ್’ ನಿಯಮವು ತಂಡಗಳು ತಮ್ಮಲ್ಲಿರುವ ಆಟಗಾರರನ್ನು ತಾತ್ಕಾಲಿಕವಾಗಿ ಬೇರೆ ತಂಡಗಳಿಗೆ ನೀಡಲು ಅವಕಾಶ ಮಾಡಿಕೊಡುತ್ತದೆ. ಈ ನಿಯಮದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ…
- ಪಂದ್ಯಗಳ ಮಿತಿ ನಿಯಮ: ಆವೃತ್ತಿಯ ಅರ್ಧಭಾಗದವರೆಗೆ ಕೇವಲ 2 ಅಥವಾ ಅದಕ್ಕಿಂತ ಕಡಿಮೆ ಪಂದ್ಯಗಳಲ್ಲಿ (ಪ್ಲೇಯಿಂಗ್ ಇಲೆವೆನ್ ಅಥವಾ ಕನ್ಶನ್ ಸಬ್ಸ್ಟಿಟ್ಯೂಟ್ ಆಗಿ) ಭಾಗವಹಿಸಿದ ಆಟಗಾರರು ಮಾತ್ರ ಲೋನ್ ಪಡೆಯಲು ಅರ್ಹರು.
- ಆಯ್ಕೆಯ ನಿಯಮ: ಈ ನಿಯಮವು ಭಾರತೀಯ ಮತ್ತು ವಿದೇಶಿ, ಇಬ್ಬರೂ ಕ್ಯಾಪ್ಡ್ ಮತ್ತು ಅನ್ಕ್ಯಾಪ್ಡ್ ಆಟಗಾರರಿಗೆ ಅನ್ವಯಿಸುತ್ತದೆ.
- ಒಂದು ಬಾರಿ ಅವಕಾಶ: ಒಬ್ಬ ಆಟಗಾರನನ್ನು ಒಂದು ಸೀಸನ್ನಲ್ಲಿ ಕೇವಲ ಒಮ್ಮೆ ಮಾತ್ರ ಲೋನ್ ಮೇಲೆ ನೀಡಲು ಅವಕಾಶವಿದೆ.
- ಆಟಗಾರ ಆಯ್ಕೆಯ ಸಮಯ: ಸಾಮಾನ್ಯವಾಗಿ ಲೋನ್ ವಿಂಡೋ ಸೀಸನ್ನ 7ನೇ ಪಂದ್ಯದಿಂದ 34ನೇ ಪಂದ್ಯದವರೆಗೆ ತೆರೆದಿರುತ್ತದೆ.
- ಮೂಲ ತಂಡದ ವಿರುದ್ಧ ಆಡುವಂತಿಲ್ಲ: ಲೋನ್ ಪಡೆದ ಆಟಗಾರನು ತನ್ನನ್ನು ಲೋನ್ ನೀಡಿದ ಮೂಲ ತಂಡದ ವಿರುದ್ಧದ ಪಂದ್ಯದಲ್ಲಿ ಆಡುವಂತಿಲ್ಲ.
- ಸಹಮತಿ: ಲೋನ್ ಪ್ರಕ್ರಿಯೆಗೆ ಆಟಗಾರನ ಒಪ್ಪಿಗೆಯೂ ಅನಿವಾರ್ಯವಾಗಿರುತ್ತದೆ.
- ಸಂಭಾವನೆ: ಆಟಗಾರನ ಮೂಲ ಹರಾಜು ಮೊತ್ತವನ್ನು ಅವರ ಮೂಲ ಫ್ರಾಂಚೈಸಿ ಪಾವತಿಸುತ್ತದೆ. ಆದರೆ, ಲೋನ್ ಅವಧಿಯಲ್ಲಿ ಅವರು ಆಡುವ ಪಂದ್ಯಗಳ ಫೀಸ್ ಅನ್ನು ಅವರನ್ನು ಪಡೆದ ಹೊಸ ತಂಡವು ಪಾವತಿಸಬೇಕಾಗುತ್ತದೆ.
- ಲೋನ್ ಫೀಸ್: ಎರಡು ತಂಡಗಳು ಪರಸ್ಪರ ಒಪ್ಪಂದದ ಮೇರೆಗೆ ಹೆಚ್ಚುವರಿ ‘ಲೋನ್ ಫೀಸ್’ ಅನ್ನು ನಿಗದಿಪಡಿಸಬಹುದು. ಇದು ಐಪಿಎಲ್ ಸ್ಯಾಲರಿ ಕ್ಯಾಪ್ ವ್ಯಾಪ್ತಿಗೆ ಬರುವುದಿಲ್ಲ.
- ಲೋನ್ ಅವಧಿ: ಲೋನ್ ಪಡೆದ ಆಟಗಾರನು ಆ ಸೀಸನ್ನ ಅಂತ್ಯದವರೆಗೆ ಹೊಸ ತಂಡದಲ್ಲೇ ಇರುತ್ತಾರೆ. ಸೀಸನ್ ಮುಗಿದ ನಂತರ ಅವರು ಮತ್ತೆ ತಮ್ಮ ಮೂಲ ತಂಡಕ್ಕೆ ಮರಳಬೇಕು. ಅಂದರೆ ಆರ್ಸಿಬಿ ಆಟಗಾರ ಸಿಎಸ್ಕೆಗೆ ಹೋದರೆ, ಮುಂದಿನ ಸೀಸನ್ನಲ್ಲಿ ಮತ್ತೆ ಆರ್ಸಿಬಿ ತಂಡಕ್ಕೆ ಮರಳಬೇಕು.
ಇದನ್ನೂ ಓದಿ: ಕೇವಲ 227 ಎಸೆತಗಳು… ವೈಭವ್ ಆರ್ಭಟಕ್ಕೆ ಐಪಿಎಲ್ ದಾಖಲೆ ಉಡೀಸ್
ಆಯುಷ್ ಮ್ಹಾತ್ರೆ ಅವರ ಗಾಯದ ಸಮಸ್ಯೆಯ ಹಿನ್ನೆಲೆಯಲ್ಲಿ ಈ ನಿಯಮವನ್ನು ಬಳಸಿಕೊಂಡು ಆರ್ಸಿಬಿಯ ವಿಹಾನ್ ಮಲ್ಹೋತ್ರಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ತಮ್ಮ ತಂಡಕ್ಕೆ ಆಯ್ಕೆ ಮಾಡುವಂತೆ ರವಿಚಂದ್ರನ್ ಅಶ್ವಿನ್ ಸಲಹೆ ನೀಡಿದ್ದಾರೆ. ಈ ಐಡಿಯಾ ಬಳಸಿಕೊಂಡು ಸಿಎಸ್ಕೆ ಆರ್ಸಿಬಿ ಆಟಗಾರನನ್ನು ತಂಡಕ್ಕೆ ಆಯ್ಕೆ ಮಾಡಲಿದೆಯಾ ಕಾದು ನೋಡಬೇಕಿದೆ.
Published On - 8:31 am, Thu, 23 April 26




