ಮೈದಾನದಲ್ಲಿ ದೇವದತ್ ಪಡಿಕ್ಕಲ್ಗೆ ಸಿಕ್ಕಿದ ಚಿನ್ನದ ಸರ ಯಾರದ್ದು ಗೊತ್ತಾ?
IPL 2026 RCB vs KKR: ಐಪಿಎಲ್ನ 57ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್ಗಳಲ್ಲಿ 192 ರನ್ ಕಲೆಹಾಕಿದ್ದರು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 19.1 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಆರ್ಸಿಬಿ ತಂಡ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 57ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್ಗಳಲ್ಲಿ 192 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಲು ಕ್ರೀಸ್ಗೆ ಆಗಮಿಸಿದ ದೇವದತ್ ಪಡಿಕ್ಕಲ್ಗೆ ಮೈದಾನದಲ್ಲಿ ಚಿನ್ನದ ಸರ ಬಿದ್ದು ಸಿಕ್ಕಿತ್ತು.
ಬೌನ್ಸರ್ಗೆ ತುಂಡಾದ ಚಿನ್ನದ ಸರ!
ಆರ್ಸಿಬಿ ಇನಿಂಗ್ಸ್ನ ನಾಲ್ಕನೇ ಓವರ್ನಲ್ಲಿ ಕೆಕೆಆರ್ ವೇಗಿ ಕಾರ್ತಿಕ್ ತ್ಯಾಗಿ ಎಸೆದ ತೀಕ್ಷ್ಣವಾದ ಬೌನ್ಸರ್ ಆರ್ಸಿಬಿ ಆರಂಭಿಕ ಆಟಗಾರ ಜೇಕಬ್ ಬೆಥೆಲ್ ಅವರ ಹೆಲ್ಮೆಟ್ಗೆ ಬಲವಾಗಿ ಬಡಿಯಿತು. ಚೆಂಡು ಗಾಳಿಯಲ್ಲಿ ಚಿಮ್ಮಿ ನೇರವಾಗಿ ಕಾರ್ತಿಕ್ ತ್ಯಾಗಿ ಕೈಸೇರಿತು.
ಈ ತೀವ್ರ ಪೆಟ್ಟಿನ ಭರಾಟೆಗೆ ಬೆಥೆಲ್ ಕುತ್ತಿಗೆಯಲ್ಲಿದ್ದ ದುಬಾರಿ ಚಿನ್ನದ ಸರ ತುಂಡಾಗಿ ಪಿಚ್ ಮೇಲೆಯೇ ಬಿದ್ದಿತ್ತು. ಆದರೆ ಔಟ್ ಆದ ಬೇಸರದಲ್ಲಿದ್ದ ಬೆಥೆಲ್, ತಮ್ಮ ಸರ ಕಳೆದುಹೋಗಿರುವುದನ್ನು ಗಮನಿಸದೇ ಪೆವಿಲಿಯನ್ನತ್ತ ಹೆಜ್ಜೆ ಹಾಕಿದ್ದರು.
ಬೆಥೆಲ್ ವಿಕೆಟ್ ಪತನದ ಬಳಿಕ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ದೇವದತ್ ಪಡಿಕ್ಕಲ್ ಕ್ರೀಸ್ಗೆ ಬಂದರು. ಗಾರ್ಡ್ ತಗೆದುಕೊಂಡು ಪಿಚ್ ಪರಿಶೀಲನೆ ನಡೆಸುತ್ತಿದ್ದಾಗ, ಅವರಿಗೆ ಪಿಚ್ ಮಧ್ಯದಲ್ಲಿ ಹೊಳೆಯುತ್ತಿದ್ದ ಚಿನ್ನದ ಸರ ಕಾಣಿಸಿದೆ.
ತಕ್ಷಣವೇ ಅದನ್ನು ಕೈಗೆತ್ತಿಕೊಂಡ ಪಡಿಕ್ಕಲ್, ಮೈದಾನದಲ್ಲಿದ್ದ ಆನ್-ಫೀಲ್ಡ್ ಅಂಪೈರ್ಗಳಿಗೆ ಸುರಕ್ಷಿತವಾಗಿ ಹಸ್ತಾಂತರಿಸಿದರು. ಆ ಮೂಲಕ ಆ ಸರವು ಮರಳಿ ಬೆಥೆಲ್ ಕೈಸೇರುವಂತೆ ಮಾಡಿದರು.
View this post on Instagram
ಪಡಿಕ್ಕಲ್ ಅವರ ಈ ಪ್ರಾಮಾಣಿಕ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕ್ರೀಡಾಭಿಮಾನಿಗಳಿಂದ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.
ಗೆದ್ದು ಬೀಗಿದ ಆರ್ಸಿಬಿ:
ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್ಗಳಲ್ಲಿ 192 ರನ್ ಕಲೆಹಾಕಿದ್ದರು. ಈ ಕಠಿಣ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ (105) ಅಜೇಯ ಶತಕ ಸಿಡಿಸಿದರು.
ಈ ಶತಕದ ನೆರವಿನೊಂದಿಗೆ ಆರ್ಸಿಬಿ ತಂಡವು 19.1 ಓವರ್ಗಳಲ್ಲಿ 194 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.




