ವಂಚನೆ ಕೇಸ್ನಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ನಿರ್ದೋಷಿ; ದೆಹಲಿ ಕೋರ್ಟ್ನಿಂದ ಮಹತ್ವದ ತೀರ್ಪು
ಭಾರತ ತಂಡದ ಮಾಜಿ ಕ್ರಿಕೆಟಿಗ ಜೇಕಬ್ ಮಾರ್ಟಿನ್ ಅವರನ್ನು 22 ವರ್ಷಗಳ ಹಳೆಯ ನಕಲಿ ವೀಸಾ ಪ್ರಕರಣದಿಂದ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ನಿರ್ದೋಷಿ ಎಂದು ಖುಲಾಸೆಗೊಳಿಸಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಅವರಿಗೆ ಬಿಡುಗಡೆ ಸಿಕ್ಕಿದ್ದು, ತಮ್ಮ ಕಳೆದುಹೋದ ಗೌರವ ಮರಳಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು
- 22 ವರ್ಷಗಳ ಸುದೀರ್ಘ ಹೋರಾಟಕ್ಕೆ ಮುಕ್ತಿ
- ಜೇಕಬ್ ಮಾರ್ಟಿನ್ ನಿರ್ದೋಷಿ
- ಕೆಲಸ ಕಳೆದುಕೊಂಡು ಪಟ್ಟ ಕಷ್ಟ ಅಷ್ಟಿಷ್ಟಲ್ಲ
ಟೀಮ್ ಇಂಡಿಯಾ ಪರ 10 ಏಕದಿನ ಪಂದ್ಯಗಳನ್ನು ಆಡಿರುವ ಭಾರತದ ಮಾಜಿ ಕ್ರಿಕೆಟಿಗ ಜೇಕಬ್ ಮಾರ್ಟಿನ್ ಅವರನ್ನು 22 ವರ್ಷಗಳ ಹಳೆಯ ಅಪರಾಧ ಪ್ರಕರಣದಿಂದ ನವದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಸಂಪೂರ್ಣವಾಗಿ ನಿರ್ದೋಷಿ ಎಂದು ಖುಲಾಸೆಗೊಳಿಸಿದೆ. 2004 ರಲ್ಲಿ ದಾಖಲಾಗಿದ್ದ ನಕಲಿ ವೀಸಾ ಮತ್ತು ಪಾಸ್ಪೋರ್ಟ್ ಸ್ಟಾಂಪಿಂಗ್ ಪ್ರಕರಣದಲ್ಲಿ ಅವರ ವಿರುದ್ಧ ಯಾವುದೇ ಬಲವಾದ ಆಧಾರಗಳಿಲ್ಲದ ಕಾರಣ ಈ ಮಹತ್ವದ ತೀರ್ಪು ಹೊರಬಿದ್ದಿದೆ.
ಪ್ರಕರಣದ ಹಿನ್ನೆಲೆ ಮತ್ತು ಆರೋಪಗಳು
2004ರಲ್ಲಿ ನಡೆದ ಈ ಪ್ರಕರಣದಲ್ಲಿ ಜೇಕಬ್ ಮಾರ್ಟಿನ್ ವಿರುದ್ಧ ಐಪಿಸಿ ಸೆಕ್ಷನ್ಗಳು ಮತ್ತು ಪಾಸ್ಪೋರ್ಟ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ನಕಲಿ ಯುಕೆ ಇಮಿಗ್ರೇಷನ್ ಸ್ಟಾಂಪ್, ಪ್ರಯಾಣದ ವ್ಯವಸ್ಥೆ ಮತ್ತು ಹಣಕಾಸಿನ ವಹಿವಾಟಿನ ಆರೋಪಗಳನ್ನು ಮಾಡಲಾಗಿತ್ತು. ಆದರೆ ಇವುಗಳನ್ನು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಾಧಾರಗಳು ಸಿಗಲಿಲ್ಲ. ಅಂತಿಮವಾಗಿ ನ್ಯಾಯಾಲಯವು ಜೇಕಬ್ ಅವರು ಈ ಪ್ರಕರಣದಲ್ಲಿ ನಿರಪರಾಧಿ ಎಂದು ಘೋಷಿಸಿದೆ.
ಮಾಜಿ ಕ್ರಿಕೆಟಿಗನ ನೋವಿನ ನುಡಿಗಳು
ತೀರ್ಪಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜೇಕಬ್ ಮಾರ್ಟಿನ್ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡರು. ‘2004ರಲ್ಲಿ ನಮ್ಮ ತಂಡವು ಇಂಗ್ಲೆಂಡ್ಗೆ ಪ್ರವಾಸ ಕೈಗೊಂಡಾಗ ಒಬ್ಬ ಆಟಗಾರ ವೀಸಾ ಅವಧಿ ಮೀರಿದ ನಂತರವೂ ಅಲ್ಲೇ ಉಳಿದುಕೊಂಡಿದ್ದನು. ಆತ ನಕಲಿ ಇಮಿಗ್ರೇಷನ್ ಸ್ಟಾಂಪ್ ಹಾಕಿಸಿಕೊಂಡು ಭಾರತಕ್ಕೆ ಮರಳಿದಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದನು. ಮೂಲ ಎಫ್ಐಆರ್ನಲ್ಲಿ ಜೇಕಬ್ ಹೆಸರಿರಲಿಲ್ಲ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟಿಗ ಎಂಬ ಕಾರಣಕ್ಕೆ ತನಿಖೆ ವೇಳೆ ನನ್ನ ಹೆಸರನ್ನು ಸೇರಿಸಲಾಗಿತ್ತು’ ಎಂದು ಅವರು ಹೇಳಿದರು.
ಬದುಕಿನಲ್ಲಾದ ಆಘಾತ ಮತ್ತು ನಿರಾಳತೆ
ಈ 22 ವರ್ಷಗಳ ಸುದೀರ್ಘ ಕಾನೂನು ಹೋರಾಟದಿಂದಾಗಿ ತಾವು ಅಪಾರ ಮಾನಸಿಕ ಒತ್ತಡ ಅನುಭವಿಸಿದ್ದಾಗಿ ಅವರು ತಿಳಿಸಿದ್ದಾರೆ. ಈ ಪ್ರಕರಣದಿಂದಾಗಿ ಅವರು ರೈಲ್ವೆ ಇಲಾಖೆಯಲ್ಲಿದ್ದ ಉದ್ಯೋಗವನ್ನು ಕಳೆದುಕೊಂಡಿದ್ದರು. ಬಿಸಿಸಿಐನಿಂದಲೂ ಯಾವುದೇ ಬೆಂಬಲ ಸಿಗಲಿಲ್ಲ. ಈಗ ನ್ಯಾಯಾಲಯ ನೀಡಿದ ಈ ತೀರ್ಪು ತಮ್ಮ ಜೀವನದಲ್ಲಿ ದೊಡ್ಡ ಮಟ್ಟದ ನಿರಾಳತೆಯನ್ನು ತಂದಿದೆ ಮತ್ತು ಬದುಕಿಗೆ ಹೊಸ ತಿರುವು ನೀಡಿದೆ ಎಂದು ಅವರು ಭಾವನಾತ್ಮಕವಾಗಿ ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ




