AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯಾರು ಚಪ್ಪಾಳೆ ತಟ್ಟುತ್ತಾರೆ’? ಜಯ್​ ಶಾರನ್ನು ಲೇವಡಿ ಮಾಡಿದ ಮಾಜಿ ಪಾಕ್ ಆಟಗಾರ

Asia Cup 2023: ಮುಲ್ತಾನ್‌ನಲ್ಲಿ ನಡೆಯಲಿರುವ ಕಾಂಟಿನೆಂಟಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಎಲ್ಲಾ ರಾಷ್ಟ್ರಗಳ ಮಂಡಳಿಗಳ ಅಧ್ಯಕ್ಷರೊಂದಿಗೆ ಪಾಲ್ಗೊಳ್ಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಜಯ್ ಶಾ ಅವರನ್ನು ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಇದೀಗ ಈ ಆಹ್ವಾನದ ಕುರಿತು ಅಸಮಾಧಾನ ಹೊರಹಾಕಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ, ಜಯ್​ ಶಾರನ್ನು ಆಹ್ವಾನಿಸಿದ್ದಕ್ಕಾಗಿ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಯಾರು ಚಪ್ಪಾಳೆ ತಟ್ಟುತ್ತಾರೆ’? ಜಯ್​ ಶಾರನ್ನು ಲೇವಡಿ ಮಾಡಿದ ಮಾಜಿ ಪಾಕ್ ಆಟಗಾರ
ಜಯ್ ಶಾ
ಪೃಥ್ವಿಶಂಕರ
|

Updated on: Aug 20, 2023 | 3:21 PM

Share

ಈ ಬಾರಿಯ ಏಷ್ಯಾಕಪ್ (Asia Cup 2023) ಆಗಸ್ಟ್ 30 ರಂದು ಮುಲ್ತಾನ್‌ನಲ್ಲಿ ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ, ನೇಪಾಳ ತಂಡವನ್ನು ಎದುರಿಸಲಿದೆ. ಈ ಬಾರಿ ಪಾಕಿಸ್ತಾನ ಮತ್ತು ಶ್ರೀಲಂಕಾ (Pakistan and Sri Lanka) ಜಂಟಿಯಾಗಿ ಈ ಮೆಗಾ ಈವೆಂಟ್ ಅನ್ನು ಆಯೋಜಿಸಲು ಸಿದ್ಧವಾಗಿವೆ. ಹೀಗಾಗಿ ವಾಡಿಕೆಯಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಸಿಸಿಐ (BCCI) ಕಾರ್ಯದರ್ಶಿ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿನ್​ನ (ACC) ಹಾಲಿ ಅಧ್ಯಕ್ಷರಾಗಿರುವ ಜಯ್​ ಶಾ (Jay Shah) ಅವರಿಗೆ ಮೊದಲ ಪಂದ್ಯವನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ಬರಬೇಕೆಂದು ಆಹ್ವಾನ ನೀಡಿತ್ತು. ಈ ಮೊದಲೇ ಜಯ್​ ಶಾ ಪಾಕ್ ಮಂಡಳಿಯ ಆಹ್ವಾನವನ್ನು ತಿರಸ್ಕರಿಸಿದ್ದರು. ಇದೀಗ ಪಾಕ್ ಮಂಡಳಿಯಿಂದ ಅಧಿಕೃತ ಆಹ್ವಾನ ಬಂದಿದ್ದು, ಜಯ್​ ಶಾ ಉದ್ಘಾಟನಾ ಪಂದ್ಯವನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ಹೋಗುತ್ತಾರೋ, ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಈ ನಡುವೆ ಪಾಕ್ ಮಂಡಳಿ, ಜಯ್​ ಶಾ ಅವರಿಗೆ ನೀಡಿದ ಆಹ್ವಾನದ ಬಗ್ಗೆ ಇದೇ ಪಾಕ್ ತಂಡದ ಮಾಜಿ ಆಟಗಾರ ಲೇವಡಿ ಮಾಡಿದ್ದಾರೆ.

ವರದಿ ಪ್ರಕಾರ ಮುಲ್ತಾನ್‌ನಲ್ಲಿ ನಡೆಯಲಿರುವ ಕಾಂಟಿನೆಂಟಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಎಲ್ಲಾ ರಾಷ್ಟ್ರಗಳ ಮಂಡಳಿಗಳ ಅಧ್ಯಕ್ಷರೊಂದಿಗೆ ಪಾಲ್ಗೊಳ್ಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಜಯ್ ಶಾ ಅವರನ್ನು ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಇದೀಗ ಈ ಆಹ್ವಾನದ ಕುರಿತು ಅಸಮಾಧಾನ ಹೊರಹಾಕಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ, ಜಯ್​ ಶಾರನ್ನು ಆಹ್ವಾನಿಸಿದ್ದಕ್ಕಾಗಿ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಡಿಐ ಏಷ್ಯಾಕಪ್​ ಸ್ಟ್ರೈಕ್ ರೇಟ್ ವಿಚಾರದಲ್ಲಿ ಈ ತಂಡದ ಆಟಗಾರರೇ ಬೆಸ್ಟ್

ತಮ್ಮ ನಿರ್ಧಾರದಿಂದ ಯು-ಟರ್ನ್

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಈ ಬಗ್ಗೆ ಮಾತನಾಡಿರುವ ಬಸಿತ್ ಅಲಿ, ‘ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿರುವ ಜಯ್ ಶಾ ಅವರು ಏಷ್ಯಾಕಪ್‌ ವೀಕ್ಷಿಸಲು ಪಾಕಿಸ್ತಾನಕ್ಕೆ ಬರಬೇಕು. ಪಾಕ್ ಮಂಡಳಿ ಇತರ ಮಂಡಳಿಗಳ ಮುಖ್ಯಸ್ಥರಿಗೆ ಆಹ್ವಾನ ಕಳುಹಿಸಿರುವಂತೆ ಜಯ್ ಷಾ ಅವರಿಗೂ ಆಹ್ವಾನವನ್ನು ಕಳುಹಿಸಿದೆ. ಜಯ್​ ಶಾ ಅವರನ್ನು ಈ ಮೊದಲು ಆಹ್ವಾನಿಸಲಾಗಿತ್ತು. ಜಯ್​ ಶಾ ಕೂಡ ಪಾಕಿಸ್ತಾನಕ್ಕೆ ಬರಲು ಒಪ್ಪಿಕೊಂಡಿದ್ದರು. ಆದರೆ ರಾಜಕೀಯ ಒತ್ತಡದಿಂದ ತಮ್ಮ ನಿರ್ಧಾರದಿಂದ ಯು-ಟರ್ನ್ ತೆಗೆದುಕೊಂಡರು. ಎಸಿಸಿ ಅಧ್ಯಕ್ಷರಾಗಿರುವ ಅವರು ಯಾವುದೇ ದೇಶದಲ್ಲಿ ನಡೆದರೂ ಎಲ್ಲಾ ಕಾರ್ಯಕ್ರಮಗಳಿಗೆ ಹಾಜರಾಗಬೇಕು. ಅವರು ಬರದಿದ್ದರೆ ಅದು ಅವರಿಗೆ ನಷ್ಟ’ ಎಂದು ಅಲಿ ಹೇಳಿದ್ದಾರೆ.

ಮಾಜಿ ಆಟಗಾರರನ್ನು ಆಹ್ವಾನಿಸಿದ್ದರೆ ಉತ್ತಮ

ಮುಂದುವರೆದು ಮಾತನಾಡಿದ ಬಸಿತ್ ಅಲಿ, ‘ಮಂಡಳಿಯ ಮುಖ್ಯಸ್ಥರ ಬದಲು ಪಂದ್ಯಾವಳಿಯ ಆರಂಭಿಕ ಪಂದ್ಯಕ್ಕೆ ಭಾಗವಹಿಸುವ ಎಲ್ಲಾ ರಾಷ್ಟ್ರಗಳ ಮಾಜಿ ಆಟಗಾರರನ್ನು ಪಿಸಿಬಿ ಆಹ್ವಾನಿಸಿದ್ದರೆ ಉತ್ತಮ. ಪಾಕ್ ಕ್ರಿಕೆಟ್ ಮಂಡಳಿ ಸಾಧ್ಯವಾದಷ್ಟು ಮಾಜಿ ಕ್ರಿಕೆಟಿಗರಿಗೆ ಆಹ್ವಾನ ಕಳುಹಿಸಬೇಕು. ಶ್ರೀಲಂಕಾದ ರಣತುಂಗ, ಸಂಗಕ್ಕಾರ, ಜಯಸೂರ್ಯ, ಭಾರತ ತಂಡದ ಕಪಿಲ್ ದೇವ್, ಸುನಿಲ್ ಗವಾಸ್ಕರ್, ಸಚಿನ್, ಸೌರವ್ ಗಂಗೂಲಿ. ಈ ತರಹ ಬಾಂಗ್ಲಾದೇಶ, ಅಫ್ಘಾನಿಸ್ತಾನ, ನೇಪಾಳ ತಂಡದ ಮಾಜಿ ಆಟಗಾರರಿಗೆ ಆಹ್ವಾನವನ್ನು ಕಳುಹಿಸಿದರೆ ಅದು ಉತ್ತಮವಾಗಿರುತ್ತದೆ.

ಜಯ್ ಶಾರನ್ನು ನೋಡಿ ಯಾರು ಚಪ್ಪಾಳೆ ತಟ್ಟುತ್ತಾರೆ?

ಏಕೆಂದರೆ ಕ್ರೀಡಾಂಗಣದಲ್ಲಿರುವ ಜನರು ಮಾಜಿ ಕ್ರಿಕೆಟಿಗರನ್ನು ಮೈದಾನದಲ್ಲಿ ನೋಡಿದರೆ ಸಂತೋಷ ಪಡುವುದಲ್ಲದೆ ಚಪ್ಪಾಳೆ, ಶಿಳ್ಳೆ ಮೂಲಕ ಹರ್ಷ ವ್ಯಕ್ತಪಡಿಸುತ್ತಾರೆ. ಆದರೆ ಜಯ್ ಶಾ ಅವರಂತಹ ಮಂಡಳಿಯ ಮುಖ್ಯಸ್ಥರನ್ನು ನೋಡಿ ಯಾರು ಚಪ್ಪಾಳೆ ತಟ್ಟುತ್ತಾರೆ?. ಹೀಗಾಗಿ ಮಾಜಿ ಕ್ರಿಕೆಟ್ ಆಟಗಾರರನ್ನು ಆಹ್ವಾನಿಸಬೇಕು’ ಎಂದು ಅಲಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ