RCB: ವಿವಾದದ ನಡುವೆ ಗುಟ್ಟಾಗಿ ಸಪ್ತಪದಿ ತುಳಿದ ಆರ್‌ಸಿಬಿ ವೇಗಿ ಯಶ್ ದಯಾಳ್

Yash Dayal Wedding: ಕಳೆದ ವರ್ಷ ಆರ್‌ಸಿಬಿಯ ಮೊದಲ ಐಪಿಎಲ್ ಪ್ರಶಸ್ತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೇಗಿ ಯಶ್ ದಯಾಳ್ ಗುಟ್ಟಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ ಎಂದು ವರದಿಯಾಗಿದೆ. ವಾಸ್ತವವಾಗಿ ದಯಾಳ್ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಅಂದಿನಿಂದ ದಯಾಳ್ ವಿರುದ್ಧ ತನಿಖೆ ನಡೆಯುತ್ತಿದೆ.

RCB: ವಿವಾದದ ನಡುವೆ ಗುಟ್ಟಾಗಿ ಸಪ್ತಪದಿ ತುಳಿದ ಆರ್‌ಸಿಬಿ ವೇಗಿ ಯಶ್ ದಯಾಳ್
Yash Dayal

Updated on: Mar 15, 2026 | 6:48 PM

2026 ರ ಐಪಿಎಲ್ (IPL 2026) ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹಾಲಿ ಚಾಂಪಿಯನ್ ಆರ್​ಸಿಬಿ (RCB) ಸತತ ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ. ಆದರೆ ಸೀಸನ್ ಪ್ರಾರಂಭವಾಗುವ ಮೊದಲೇ ಆರ್​ಸಿಬಿ ವೇಗಿ ಯಶ್ ದಯಾಳ್ (Yash Dayal) ಗುಟ್ಟಾಗಿ ವೈವಾವಿಕ ಜೀವನಕ್ಕೆ ಕಾಲಿರಿಸಿದ್ದಾರೆ. ವಾಸ್ತವವಾಗಿ ಯಶ್ ದಯಾಳ್ ಹುಡುಗಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಾತ್ರವಲ್ಲದೆ ಅವರನ್ನು ಯಾವಾಗ ಬೇಕಾದರೂ ಬಂಧಿಸಿ ಜೈಲಿಗಟ್ಟಬಹುದು. ಹೀಗಿರುವಾಗ ಯಶ್ ದಯಾಳ್ ರಹಸ್ಯವಾಗಿ ಮದುವೆಯಾಗಿ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಗುಟ್ಟಾಗಿ ನಡೆದ ದಯಾಳ್ ಮದುವೆ

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ. ಯಶ್ ದಯಾಳ್ ಅವರ ವಿವಾಹ ಫೆಬ್ರವರಿ 4 ರಂದು ಉತ್ತರ ಪ್ರದೇಶದ ನೋಯ್ಡಾದಲ್ಲಿ ನೆರವೇರಿದ್ದು, ಇದೀಗ ಅದರ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಮದುವೆಯನ್ನು ತುಂಬಾ ರಹಸ್ಯವಾಗಿಡಲಾಗಿದ್ದು, ಎರಡೂ ಕುಟುಂಬಗಳ ಸದಸ್ಯರು ಮಾತ್ರ ಹಾಜರಿದ್ದರು ಎಂದು ವರದಿಯಾಗಿದೆ. ಅಚ್ಚರಿಯ ಸಂಗತಿಯೆಂದರೆ ಯಶ್ ದಯಾಳ್ ತಮ್ಮ ಸ್ನೇಹಿತರನ್ನಾಗಲಿ ಅಥವಾ ಯಾವುದೇ ಕ್ರಿಕೆಟಿಗರನ್ನಾಗಲಿ ತಮ್ಮ ಮದುವೆಗೆ ಆಹ್ವಾನಿಸಿಲ್ಲ. ಯಶ್ ದಯಾಳ್, ವ್ಲಾಗರ್ ಶ್ವೇತಾ ಪುಂಡಿರ್ ಅವರನ್ನು ವರಿಸಿದ್ದಾರೆ ಎಂದು ವರದಿಯಾಗಿದೆ.

ಇನ್ನು ಯಶ್ ದಯಾಳ್ ಅವರ ವೃತ್ತಿಜೀವನದ ವಿಚಾರಕ್ಕೆ ಬರುವುದಾದರೆ.. ಐಪಿಎಲ್‌ನಲ್ಲಿ ಆರ್​ಸಿಬಿ ತಂಡದ ಪರ ಆಡುತ್ತಿರುವ ದಯಾಳ್, ತಂಡದ ಪ್ರಮುಖ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಆದಾಗ್ಯೂ ಈ ಆವೃತ್ತಿಯಲ್ಲಿ ಅವರು ತಂಡದ ಪರ ಆಡುತ್ತಾರೋ, ಇಲ್ಲವೋ ಎಂಬುದು ಖಚಿತವಾಗಿಲ್ಲ. ಏಕೆಂದರೆ ಕಳೆದ ವರ್ಷ ಯುವತಿಯೊಬ್ಬಳು ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆ ಪ್ರಕರಣ ಪ್ರಸ್ತುತ ವಿಚಾರಣೆಯಲ್ಲಿದೆ. ದಯಾಳ್ ಅವರ ವಿರುದ್ಧ ಕೇಳಿ ಬಂದ ಈ ಆರೋಪದಿಂದಾಗಿ ಆರ್​ಸಿಬಿ ಕೂಡ ಮುಜುಗರಕ್ಕೀಡಾಗಬೇಕಾಯಿತು. ಹೀಗಾಗಿ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ದಯಾಳ್​ರನ್ನು ಆರ್​ಸಿಬಿ ಆಡಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಜಾಮೀನು ಅರ್ಜಿ ವಜಾ; ಆರ್​ಸಿಬಿ ವೇಗಿ ಯಶ್ ದಯಾಳ್​ಗೆ ಬಂಧನ ಭೀತಿ

ದಯಾಳ್ ವಿರುದ್ಧ ಅತ್ಯಾಚಾರದ ಆರೋಪ

ಕಳೆದ ವರ್ಷ ಆರ್‌ಸಿಬಿ ತಂಡದ ಗೆಲುವಿನಲ್ಲಿ ಎಡಗೈ ವೇಗಿ ಯಶ್ ದಯಾಳ್ ಪ್ರಮುಖ ಪಾತ್ರ ವಹಿಸಿದ್ದರು. ಆದಾಗ್ಯೂ, ಆರ್‌ಸಿಬಿ ಪ್ರಶಸ್ತಿ ಗೆದ್ದ ಕೆಲವೇ ದಿನಗಳಲ್ಲಿ, ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ದಯಾಳ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ದಯಾಳ್ ಅವರೊಂದಿಗಿನ ಹಳೆಯ ಫೋಟೋಗಳು ಮತ್ತು ಚಾಟ್‌ಗಳನ್ನು ಹಂಚಿಕೊಂಡ ಅವರು, ಮದುವೆಯ ಸುಳ್ಳು ಭರವಸೆ ನೀಡಿ ದಯಾಳ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಇದರ ನಂತರ, ದಯಾಳ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದಾಗ್ಯೂ, ಅಲಹಾಬಾದ್ ಹೈಕೋರ್ಟ್ ದಯಾಳ್ ಬಂಧನಕ್ಕೆ ತಡೆ ನೀಡಿತ್ತು.

Published On - 6:44 pm, Sun, 15 March 26

Follow Us