ಈ ಬಾರಿಯ ಸೋಲಿಗೆ ರಿಷಭ್ ಪಂತ್ ನೀಡಿದ ಕಾರಣವೇನು ಗೊತ್ತಾ?

IPL 2026 LSG vs RR; ಲಕ್ನೋ ಸೂಪರ್ ಜೈಂಟ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೂಡ ಸೋತಿದೆ. ಈ ಸೋಲಿನೊಂದಿಗೆ ಮೊದಲಾರ್ಧ ಮುಗಿಸಿರುವ ಎಸ್​ಎಲ್​ಜಿ ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಇದಾಗ್ಯೂ ದ್ವಿತೀಯಾರ್ಧದಲ್ಲಿ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಕಂಬ್ಯಾಕ್ ಮಾಡುವ ವಿಶ್ವಾಸವಿದೆ ಎಂದಿದ್ದಾರೆ ರಿಷಭ್ ಪಂತ್.

ಈ ಬಾರಿಯ ಸೋಲಿಗೆ ರಿಷಭ್ ಪಂತ್ ನೀಡಿದ ಕಾರಣವೇನು ಗೊತ್ತಾ?
Rishabh Pant

Updated on: Apr 23, 2026 | 9:02 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-19 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಕಳಪೆ ಪ್ರದರ್ಶನ ಮುಂದುವರೆದಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 32ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 40 ರನ್​ಗಳಿಂದ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್​ಗಳಲ್ಲಿ 159 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 18 ಓವರ್​ಗಳಲ್ಲಿ 119 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಎಲ್​ಎಸ್​ಜಿ ಪಡೆ 40 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

ಈ ಸೋಲಿನ ಬಳಿಕ ಮಾತನಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್, ತಂಡದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ನಮ್ಮ ಬ್ಯಾಟಿಂಗ್ ವಿಭಾಗವು ಸತತವಾಗಿ ಕೈಕೊಡುತ್ತಿದೆ. ಈ ಸೋಲನ್ನು ವಿವರಿಸುವುದು ಕಷ್ಟ. ತಂಡವಾಗಿ ನಮಗೆ ಇದು ನಿರಾಸೆ ತಂದಿದೆ. ಮೈದಾನದಲ್ಲಿ ಚೆಂಡು ಸ್ವಿಂಗ್ ಆಗುತ್ತಿದ್ದಾಗ ನಾವು ಸ್ವಲ್ಪ ಸಮಯ ತೆಗೆದುಕೊಂಡು ಆಡಬೇಕಿತ್ತು. ನಾನೂ ಸೇರಿದಂತೆ ಬ್ಯಾಟರ್‌ಗಳು ಇನ್ನಿಂಗ್ಸ್ ಅನ್ನು ಆಳವಾಗಿ ಕೊಂಡೊಯ್ಯುವಲ್ಲಿ ವಿಫಲರಾದೆವು” ಎಂದು ಪಂತ್ ಒಪ್ಪಿಕೊಂಡಿದ್ದಾರೆ.

ಬ್ಯಾಟಿಂಗ್ ಬಗ್ಗೆ ಅಸಮಾಧಾನವಿದ್ದರೂ, ಬೌಲರ್‌ಗಳ ಶ್ರಮವನ್ನು ರಿಷಭ್ ಪಂತ್ ಶ್ಲಾಘಿಸಿದ್ದಾರೆ. “ನಮ್ಮ ಬೌಲರ್‌ಗಳು ಅದ್ಭುತವಾಗಿ ಕೆಲಸ ಮಾಡಿದರು. ರಾಜಸ್ಥಾನದಂತಹ ಬಲಿಷ್ಠ ತಂಡವನ್ನು 159 ರನ್‌ಗಳಿಗೆ ಕಟ್ಟಿಹಾಕಿದ್ದು ಸಣ್ಣ ವಿಷಯವಲ್ಲ. ಆದರೆ ಬೌಲರ್‌ಗಳ ಈ ಪರಿಶ್ರಮಕ್ಕೆ ಬ್ಯಾಟರ್‌ಗಳು ಬೆಂಬಲ ನೀಡಬೇಕಿತ್ತು. ಆದರೆ ನಮ್ಮ ಬ್ಯಾಟರ್​ಗಳಿಗೆ ಅದು ಸಾಧ್ಯವಾಗಿಲ್ಲ” ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಸತತ ಸೋಲುಗಳಿಂದ ಕಂಗೆಟ್ಟಿರುವ ಲಕ್ನೋ ಸೂಪರ್ ತಂಡಕ್ಕೆ ಆತ್ಮವಿಶ್ವಾಸ ತುಂಬಲು ಪ್ರಯತ್ನಿಸಿದ ರಿಷಭ್ ಪಂತ್ “ನಾವು ಸೋಲಿಗೆ ಕಾರಣಗಳನ್ನು ಹೊರಗೆ ಹುಡುಕುವ ಬದಲು, ನಮ್ಮ ಒಳಗಡೆಯೇ ಹುಡುಕಬೇಕಿದೆ. ನಮ್ಮಲ್ಲಿ ಸಾಮರ್ಥ್ಯವಿದೆ, ಅದನ್ನು ಪ್ರದರ್ಶಿಸುವ ಅಗತ್ಯವಿದೆ. ತಲೆ ಎತ್ತಿ ನಿಂತು ಮುನ್ನುಗ್ಗೋಣ, ನಾವು ಖಂಡಿತವಾಗಿಯೂ ಲಯಕ್ಕೆ ಮರಳುತ್ತೇವೆ ಎಂಬ ನಂಬಿಕೆ ನನಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಈಗಲೇ RCB ಆಟಗಾರನ ಆಯ್ಕೆ ಮಾಡಿ: CSKಗೆ ಐಡಿಯಾ ನೀಡಿದ ಅಶ್ವಿನ್

ಒಟ್ಟಿನಲ್ಲಿ ಕಳಪೆ ಬ್ಯಾಟಿಂಗ್​ನಿಂದಾಗಿ ಲಕ್ನೋ ಸೂಪರ್ ಜೈಂಟ್ಸ್ ಮತ್ತೊಮ್ಮೆ ಸೋಲನುಭವಿಸಿದೆ. ಈ ಸೋಲಿಗೆ ಬ್ಯಾಟರ್​ಗಳೇ ಕಾರಣ. ಹೀಗಾಗಿ ಈ ಸಮಸ್ಯೆಯನ್ನು ನಾವು ಶೀಘ್ರದಲ್ಲೇ ಬಗೆಹರಿಸಿಕೊಳ್ಳಬೇಕಿದೆ. ಈ ಮೂಲಕ ದ್ವಿತೀಯಾರ್ಧದಲ್ಲಿ ಕಂಬ್ಯಾಕ್ ಮಾಡಬೇಕು, ಕಂಬ್ಯಾಕ್ ಮಾಡುವ ವಿಶ್ವಾಸವಿದೆ ಎಂದು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಹೇಳಿದ್ದಾರೆ.

 

 

Follow Us