AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ಅವನು ಹೋಗುತ್ತಿದ್ದ ರೀತಿ ನಿಮಗೆ ಕಾಣಿಸಲಿಲ್ಲವೇ?”: ಸುನಿಲ್ ಗವಾಸ್ಕರ್ ಆಕ್ರೋಶ

India vs England: ಭಾರತದ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್​ಗಳಲ್ಲಿ 257 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 201 ರನ್​ಗಳಿಸಿ 56 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಅವನು ಹೋಗುತ್ತಿದ್ದ ರೀತಿ ನಿಮಗೆ ಕಾಣಿಸಲಿಲ್ಲವೇ?: ಸುನಿಲ್ ಗವಾಸ್ಕರ್ ಆಕ್ರೋಶ
Vaibhav Sooryavanshi - Sunil GavaskarImage Credit source: Google
ಝಾಹಿರ್ ಯೂಸುಫ್
|

Updated on: Jul 12, 2026 | 2:00 PM

Share

ಇಂಗ್ಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಿಂದ ಯುವ ದಾಂಡಿಗ ವೈಭವ್ ಸೂರ್ಯವಂಶಿಯನ್ನು ಕೈ ಬಿಟ್ಟಿದಕ್ಕೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂದ್ಯದ ವೇಳೆ ಬೆಂಚ್‌ ಮೇಲೆ ಕುಳಿತಿದ್ದ ಯುವ ಆಟಗಾರನ ಬೇಸರದ ಮುಖಭಾವವನ್ನು ಕಂಡು ಸೋನಿ ಸ್ಪೋರ್ಟ್ಸ್ ವಾಹಿನಿಯಲ್ಲಿ ಭಾವುಕರಾಗಿ ಮಾತನಾಡಿದ ಗವಾಸ್ಕರ್, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸುನಿಲ್ ಗವಾಸ್ಕರ್ ಹೇಳಿದ್ದೇನು?

ಪಂದ್ಯದ ವೇಳೆ ಬೌಂಡರಿ ಲೈನ್ ಬಳಿ ಹೋಗುತ್ತಿದ್ದ ವೈಭವ್ ಸೂರ್ಯವಂಶಿಯ ಬಗ್ಗೆ ಮಾತನಾಡಿದ ಸುನಿಲ್ ಗವಾಸ್ಕರ್,  “ಅವನು ನಡೆದು ಹೋಗುತ್ತಿದ್ದ ರೀತಿಯನ್ನು ನೀವು ಗಮನಿಸಿದಿರಾ? ಅವನು ಸಂಪೂರ್ಣವಾಗಿ ನಿರಾಶೆಗೊಂಡಿದ್ದಾನೆ. ಕೇವಲ ಮೂರು ಪಂದ್ಯಗಳ ನಂತರ 15 ವರ್ಷದ ಹುಡುಗನನ್ನು ತಂಡದಿಂದ ಕೈಬಿಡುವುದು ತಪ್ಪು” ಎಂದು ಗವಾಸ್ಕರ್ ಆಕ್ರೋಶ ಹೊರಹಾಕಿದ್ದಾರೆ.

ವೈಭವ್ ಹುಕ್ ಶಾಟ್ ಆಡಲು ಹೋಗಿ ಎರಡು ಬಾರಿ ಔಟ್ ಆಗಿರಬಹುದು. ಆದರೆ, ತಪ್ಪುಗಳಿಂದ ಕಲಿಯಲು ಅವರಿಗೆ ಈ ಪಂದ್ಯದಲ್ಲಿ ಅವಕಾಶ ನೀಡಬೇಕಿತ್ತು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್ ಈಗಾಗಲೇ 3-0 ಅಂತರದಲ್ಲಿ ಸರಣಿ ಗೆದ್ದುಕೊಂಡಿತ್ತು. ಈ ಸತ್ತ ಸರಣಿಯ ಕೊನೆಯ ಪಂದ್ಯದಲ್ಲಿ ಸೂರ್ಯವಂಶಿಗೆ ಮತ್ತೊಂದು ಅವಕಾಶ ನೀಡಬೇಕಿತ್ತು. ಆದರೆ ಯುವ ಆಟಗಾರನನ್ನು ನೀವು ಏಕಾಏಕಿ ಕಡೆಗಣಿಸಿದ್ದೀರಿ. ಇದರಿಂದ ಆತನಿಗೆ ನಿರಾಸೆಯಾಗಿರುವುದು ಸ್ಪಷ್ಟ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಅಯ್ಯರ್ ಸಮರ್ಥನೆ:

ಭಾರತದ ಅತ್ಯಂತ ಕಿರಿಯ ಅಂತಾರಾಷ್ಟ್ರೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವೈಭವ್, ಆಡಿದ 3 ಪಂದ್ಯಗಳಲ್ಲಿ (14, 13, 15) ಒಟ್ಟು 42 ರನ್ ಗಳಿಸಿದ್ದರು.

ಆದರೆ ಕೊನೆಯ ಪಂದ್ಯಕ್ಕೆ ತಂಡಕ್ಕೆ ಮರಳಿದ ಹಿರಿಯ ಆಟಗಾರ ಸಂಜು ಸ್ಯಾಮ್ಸನ್ ಅವರಿಗಾಗಿ ವೈಭವ್ ಅವರನ್ನು ಮ್ಯಾನೇಜ್‌ಮೆಂಟ್ ಬೆಂಚ್ ಕಾಯುವಂತೆ ಮಾಡಿತು.

ಭವಿಷ್ಯದ ಅತ್ಯುತ್ತಮ ತಂಡದ ಸಂಯೋಜನೆಯನ್ನು ಹುಡುಕುವ ನಿಟ್ಟಿನಲ್ಲಿ ಸ್ಯಾಮ್ಸನ್ ಅವರನ್ನು ಆಡಿಸಲಾಯಿತು ಎಂದು ನಾಯಕ ಶ್ರೇಯಸ್ ಅಯ್ಯರ್ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ವೈಭವ್​ಗೆ ಮಾಜಿ ಕ್ರಿಕೆಟಿಗರ ಬೆಂಬಲ:

ಇಂಗ್ಲೆಂಡ್‌ನ ಮಾಜಿ ಆಟಗಾರ ಗ್ರೇಮ್ ಸ್ವಾನ್ ಕೂಡ ಸುನಿಲ್ ಗವಾಸ್ಕರ್ ಅವರ ಮಾತಿಗೆ ದನಿಗೂಡಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಆಟಗಾರನನ್ನು ತಂಡದಿಂದ ಕೈಬಿಡುವುದು ಅವರ ಆತ್ಮವಿಶ್ವಾಸಕ್ಕೆ ಧಕ್ಕೆ ತರಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಪ್ರಮುಖ ಸ್ಟ್ರೈಕರ್​ಗೆ ರೆಡ್ ಕಾರ್ಡ್​: ಅರ್ಜೆಂಟೀನಾ ಪಂದ್ಯದಲ್ಲಿ ಮತ್ತೆ ವಿವಾದ!

ಯುವ ಪ್ರತಿಭೆಯ ಹೆಗಲ ಮೇಲೆ ಕೈಹಾಕಿ “ಇದು ನಿನ್ನ ಅಂತರಾಷ್ಟ್ರೀಯ ವೃತ್ತಿಜೀವನದ ಅಂತ್ಯವಲ್ಲ” ಎಂದು ಹಿರಿಯರು ಧೈರ್ಯ ತುಂಬಬೇಕು. ಈ ಮೂಲಕ ನಿರಾಶನಾಗಿರುವ ವೈಭವ್​ಗೆ ಸ್ಫೂರ್ತಿ ತುಂಬಬೇಕಾದ ಕೆಲಸ ಮಾಡಬೇಕಿದೆ ಎಂದು ಇದೇ ವೇಳೆ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

Follow Us