ಗಂಭೀರ್- ಕೊಹ್ಲಿ ನಡುವೆ ಮುನಿಸು; ಮೌನ ಮುರಿದ ಬ್ಯಾಟಿಂಗ್ ಕೋಚ್
Kohli-Gambhir Rift Rumors Debunked: ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವೆ ಭಿನ್ನಾಭಿಪ್ರಾಯದ ವದಂತಿಗಳು ಹರಿದಾಡಿದ್ದವು. ಆದರೆ, ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಕೊಹ್ಲಿ ಮತ್ತು ಗಂಭೀರ್ ಹಲವು ಬಾರಿ ಮಾತನಾಡಿದ್ದಾರೆ, ಡ್ರೆಸ್ಸಿಂಗ್ ರೂಮ್ ವಾತಾವರಣ ಉತ್ತಮವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಬ್ಬರ ನಡುವೆ ಉತ್ತಮ ಬಾಂಧವ್ಯವಿದ್ದು, ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಕೋಟಕ್ ಹೇಳಿದ್ದಾರೆ.

ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಮತ್ತು ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (Virat Kohli) ನಡುವೆ ಬಿರುಕು ಮೂಡಿದೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಇದಕ್ಕೆ ಪೂರಕವಾಗಿ ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಅಭ್ಯಾಸದ ವೇಳೆ ಡಗೌಟ್ನಲ್ಲಿ ಕುಳಿತಿರುವ ವೇಳೆ ಇವರಿಬ್ಬರ ನಡುವೆ ಯಾವುದೇ ಮಾತುಕತೆ ನಡೆಯುತ್ತಿಲ್ಲ ಎಂದು ವರದಿಯಾಗಿದೆ. ಅಲ್ಲದೆ ಎಡ್ಜ್ಬಾಸ್ಟನ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯಕ್ಕೂ ಮುಂಚಿನ ಅಭ್ಯಾಸದ ಸಮಯದಲ್ಲಿ ಇವರಿಬ್ಬರು ಪರಸ್ಪರ ಮಾತನಾಡದೇ ಇರುವುದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿತ್ತು. ಇದನ್ನು ಗಮನಿಸಿದವರು ಇಬ್ಬರು ನಡುವೆ ಏನೂ ಸರಿಯಿಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಆದರೀಗ ಹರಿದಾಡುತ್ತಿರುವ ವದಂತಿಗಳ ಬಗ್ಗೆ ತಂಡದ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಮೌನ ಮುರಿದಿದ್ದಾರೆ.
ವಿರಾಟ್, ಗಂಭೀರ್ ನಡುವೆ ಬಿರುಕು?
ಕಾರ್ಡಿಫ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಈ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದರು. ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಕೇಳಿದಾಗ, ಕೊಟಕ್ ಮುಗುಳ್ನಗುತ್ತಾ, ‘ವಿರಾಟ್ ಮತ್ತು ಗೌತಮ್ ಇಂದು ಕನಿಷ್ಠ 10 ಬಾರಿ ಮಾತನಾಡಿರಬೇಕು. ಪರಸ್ಪರ ಮಾತನಾಡಲು ಅವರಿಗೆ ಯಾವುದೇ ಸೇತುವೆ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಇಂತಹ ಆಧಾರರಹಿತ ವದಂತಿಗಳು ಹೇಗೆ ಹುಟ್ಟಿಕೊಳ್ಳುತ್ತವೆ ಎಂದು ತನಗೆ ಅರ್ಥವಾಗುತ್ತಿಲ್ಲ. ಡ್ರೆಸ್ಸಿಂಗ್ ಕೋಣೆಯಲ್ಲಿನ ವಾತಾವರಣ ಪರಿಪೂರ್ಣವಾಗಿದೆ ಮತ್ತು ಇಬ್ಬರ ನಡುವೆ ಎಲ್ಲವೂ ಸರಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಹಾಗೆಯೇ ಕಾರ್ಡಿಫ್ ಏಕದಿನ ಪಂದ್ಯದ ಉದಾಹರಣೆಯನ್ನು ಉಲ್ಲೇಖಿಸಿ ಕೋಟಕ್, ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ಗಂಭೀರ್ ನಡುವೆ ಉತ್ತಮ ಬಾಂಧವ್ಯವಿದೆ. ಇದಕ್ಕೆ ಉದಾಹರಣೆಯಾಗಿ ವಿರಾಟ್ ಕೊಹ್ಲಿ ಮೈದಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ, ಅವರು ಡ್ರೆಸ್ಸಿಂಗ್ ಕೋಣೆ ಮತ್ತು ಮುಖ್ಯ ಕೋಚ್ ಗಂಭೀರ್ಗೆ ಕ್ರೀಸ್ನಿಂದಲೇ ಒಂದು ಪ್ರಮುಖ ಸಂದೇಶವನ್ನು ಕಳುಹಿಸಿದರು. ಕಾರ್ಡಿಫ್ ಪಿಚ್ ಸ್ವಲ್ಪ ನಿಧಾನವಾಗಿತ್ತು ಮತ್ತು ಶಾರ್ಟ್-ಪಿಚ್ ಚೆಂಡುಗಳು ಸುಲಭವಾಗಿ ಬ್ಯಾಟ್ಗೆ ಬರುತ್ತಿರಲಿಲ್ಲ ಎಂದು ಕೊಹ್ಲಿ ಕ್ರೀಸ್ನಿಂದಲೇ ನಮಗೆ ಸಂದೇಶ ಕಳುಹಿಸಿದ್ದರು ಎಂದಿದ್ದಾರೆ.
ಸತತ ಸೋಲುಗಳು; ಗಂಭೀರ್, ಅಯ್ಯರ್ ಜೊತೆಗೆ ಬಿಸಿಸಿಐ ಪರಿಶೀಲನಾ ಸಭೆ
2ನೇ ಏಕದಿನ ಪಂದ್ಯದಲ್ಲಿ ಅರ್ಧಶತಕ
ಎರಡೂ ತಂಡಗಳ ನಡುವೆ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್ಗಳಿಂದ ಸೋತಿತು. ಆದಾಗ್ಯೂ, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಉತ್ತಮ ಇನ್ನಿಂಗ್ಸ್ ಆಡಿದರು. ಅವರು 66 ಎಸೆತಗಳಲ್ಲಿ 8 ಬೌಂಡರಿಗಳನ್ನು ಒಳಗೊಂಡಂತೆ 65 ರನ್ ಗಳಿಸಿದರು. ವಿರಾಟ್ ಕ್ರೀಸ್ನಲ್ಲಿರುವವರೆಗೂ, ಟೀಂ ಇಂಡಿಯಾ ದೊಡ್ಡ ಸ್ಕೋರ್ನ ಹಾದಿಯಲ್ಲಿತ್ತು. ಆದಾಗ್ಯೂ, ಅವರ ವಿಕೆಟ್ ಪತನದ ಬಳಿಕ ತಂಡದ ಇನ್ನಿಂಗ್ಸ್ ಕುಸಿಯಿತು. ಇದರ ಪರಿಣಾಮವಾಗಿ ಸರಣಿ 1-1 ರಲ್ಲಿ ಸಮಬಲಗೊಂಡಿದೆ.




