ಕ್ಯಾಚ್ ಹಿಡಿಯಲ್ಲ, ರನ್ ಹೊಡೆಯಲ್ಲ, ಬೌಲಿಂಗ್ ಬಗ್ಗೆ ಕೇಳಬೇಕಿಲ್ಲ; ಇವರೇನಾ ಟಿ20 ಚಾಂಪಿಯನ್ಸ್..!
Team India T20 Crisis: ಟಿ20 ವಿಶ್ವಕಪ್ ಗೆದ್ದು ಸಂಭ್ರಮಿಸಿದ್ದ ಟೀಂ ಇಂಡಿಯಾ ಕೆಲವೇ ತಿಂಗಳಲ್ಲಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಸರಣಿ ಸೋತು ಹೀನಾಯ ಪ್ರದರ್ಶನ ತೋರಿದೆ. ಕಳಪೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮತ್ತು ನಾಯಕತ್ವದಲ್ಲಿನ ಚುರುಕುತನದ ಕೊರತೆಗಳು ಈ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ. ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿರುವ ತಂಡ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ಭವಿಷ್ಯ ಕಷ್ಟ.

ಟೀಂ ಇಂಡಿಯಾ (Team India).. ಕೆಲವೇ ತಿಂಗಳುಗಳ ಹಿಂದೆ ವಿಶ್ವದ ಬಲಿಷ್ಠ ತಂಡಗಳನೆಲ್ಲ ಮಣಿಸಿ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿ ಹಿಡಿದಿತ್ತು. ಆದರೆ ಈ ಕೆಲವೇ ತಿಂಗಳಲ್ಲಿ ತಂಡದ ಪ್ರದರ್ಶನ ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದೆ. ಒಂದರ್ಥದಲ್ಲಿ ಮೈದಾನದಲ್ಲಿ ಕ್ರಿಕೆಟ್ ಶಿಶುಗಳಂತೆ ವರ್ತಿಸುತ್ತಿರುವ ಟೀಂ ಇಂಡಿಯಾ ಆಟಗಾರರು ಕೋಟ್ಯಾಂತರ ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಐರ್ಲೆಂಡ್ ವಿರುದ್ಧ ಟಿ20 ಸರಣಿ ಸೋತಾಗಲೇ ಎಚ್ಚೆತ್ತುಕ್ಕೊಳ್ಳದ ಟೀಂ ಇಂಡಿಯಾ, ಇದೀಗ ಪ್ರತಿ ಪಂದ್ಯದಲ್ಲೂ ಅದಕ್ಕೆ ಬೆಲೆ ತೆರುತ್ತಿದೆ. ಇಂಗ್ಲೆಂಡ್ನಲ್ಲಿ ಅಕ್ಷರಶಃ ಪಾತಾಳಕ್ಕೆ ಕುಸಿದಿರುವ ತಂಡದ ಪ್ರದರ್ಶನವನ್ನು ಮೇಲೇತ್ತಲ್ಲು ಪಾವಡವೇ ನಡೆಯಬೇಕಿದೆ.
ಐರ್ಲೆಂಡ್ ವಿರುದ್ಧದ ಟಿ20 ಸರಣಿ ಸೋಲಿಗೆ ಟೀಂ ಇಂಡಿಯಾದ ಯಾವೆಲ್ಲ ತಪ್ಪುಗಳು ಕಾರಣವಾಗಿದ್ದವೋ ಅದೇ ಕಾರಣಗಳು ಇದೀಗ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಸೋಲಿಗೆ ಕಾರಣವಾಗಿವೆ. ಐರ್ಲೆಂಡ್ ವಿರುದ್ಧ ಮೊಟ್ಟ ಮೊದಲ ಬಾರಿಗೆ ಪಂದ್ಯವೊಂದನ್ನು ಸೋತಿದ್ದ ಭಾರತ ತಂಡ, ಮೊದಲ ಬಾರಿಗೆ ಟಿ20 ಸರಣಿಯನ್ನು ಕಳೆದುಕೊಂಡತ್ತು. ಅದು 2-0 ಅಂತರದಲ್ಲಿ ಅಂದರೆ ಟೀಂ ಇಂಡಿಯಾ, ಐರ್ಲೆಂಡ್ ವಿರುದ್ಧ ವೈಟ್ ವಾಶ್ ಆಗಿತ್ತು. ಇದು ಭಾರತೀಯ ಅಭಿಮಾನಿಗಳನ್ನು ಆಘಾತಕ್ಕೊಳಪಡಿಸಿತ್ತು. ಇದೀಗ ಇಂಗ್ಲೆಂಡ್ ವಿರುದ್ಧ 14 ವರ್ಷಗಳ ನಂತರ ಮೊಟ್ಟ ಮೊದಲ ಬಾರಿಗೆ ಟಿ20 ಸರಣಿ ಸೋತಿದೆ. ಹಾಗಿದ್ದರೆ ಟೀಂ ಇಂಡಿಯಾದ ಈ ಸೋಲುಗಳಿಗೆ ಕಾರಣವೇನು ಎಂಬುದನ್ನು ನೋಡುವುದಾದರೆ..
ಕಳಪೆ ಬ್ಯಾಟಿಂಗ್
ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾದ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಪ್ರಮುಖವಾದದ್ದು, ತಂಡದ ಕಳಪೆ ಬ್ಯಾಟಿಂಗ್. ಈ ಪ್ರವಾಸದಲ್ಲಿ ಅಭಿಷೇಕ್ ಶರ್ಮಾ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಹೊರತುಪಡಿಸಿ ಉಳಿದ ಯಾವ ಆಟಗಾರನಿಂದಲೂ ಒಂದೇ ಒಂದು ಅರ್ಧಶತಕದ ಇನ್ನಿಂಗ್ಸ್ ಮೂಡಿ ಬಂದಿಲ್ಲ. ತಂಡದ ಪರ ಅಭಿಷೇಕ್ ಶರ್ಮಾ ಕೊಂಚ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿದ್ದನ್ನು ಬಿಟ್ಟರೆ, ಉಳಿದವರದ್ದು ಅತ್ಯಂತ ಹೀನಾಯ ಪ್ರದರ್ಶನ. ಸಂಜು ಸ್ಯಾಮ್ಸನ್, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ತಿಲಕ್ ವರ್ಮಾ ಶಿವಂ ದುಬೆರಂತಹ ಟಿ20 ಸ್ಪೆಷಲಿಸ್ಟ್ಗಳೇ ತಂಡದಲ್ಲಿ ತುಂಬಿ ತುಳುಕುತ್ತಿದ್ದರೂ, ಅವರ್ಯಾರಿಗೂ ಇಂಗ್ಲೆಂಡ್ ಬೌಲರ್ಗಳನ್ನು ದಂಡಿಸಲು ಸಾಧ್ಯವಾಗಲಿಲ್ಲ.
ಕಳಪೆ ಬೌಲಿಂಗ್
ಇಂಗ್ಲೆಂಡ್ಗೆ ಹೋಲಿಸಿದರೆ, ಟೀಂ ಇಂಡಿಯಾದ ಬೌಲಿಂಗ್ ವಿಭಾಗದಲ್ಲಿ ಅನುಭವದ ಕೊರತೆ ಇದೆ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಅರ್ಷದೀಪ್ ಸಿಂಗ್ರನ್ನು ಹೊರತುಪಡಿಸಿ ಉಳಿದವರಿಗೆ ಇಂಗ್ಲೆಂಡ್ ನೆಲದಲ್ಲಿ ಹೆಚ್ಚು ಆಡಿದ ಅನುಭವವಿಲ್ಲ. ಆದರೆ ಇಂಗ್ಲೆಂಡ್ನಲ್ಲಿ ಆಡಿದ ಅರ್ಷದೀಪ್ಗೆ ಸಿಂಗ್ಗೆ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಇನ್ನ ಉಳಿದವರ ಸ್ಥಿತಿಯನ್ನು ಹೊಸದಾಗಿ ವಿವರಿಸಬೇಕಿಲ್ಲ. ಯಾವೊಬ್ಬ ವೇಗಿಯೂ ಪಿಚ್ಗೆ ಅನುಗುಣವಾಗಿ ಬೌಲಿಂಗ್ ಮಾಡುವ ಸಾಮಾನ್ಯೂ ಜ್ಞಾನವನ್ನು ತೋರಲಿಲ್ಲ. ವಿಕೆಟ್ ಪಡೆಯುವುದಿರಲಿ, ಯಾರೊಬ್ಬರಿಗೂ ರನ್ಗಳಿಗೆ ಕಡಿವಾಣ ಹಾಕುವುದಕ್ಕೆ, ಜೊತೆಯಾಟವನ್ನು ಮುರಿಯುವುದಕ್ಕೆ ಸಾಧ್ಯವಾಗಲಿಲ್ಲ. ಇದರ ಲಾಭ ಪಡೆದ ಇಂಗ್ಲೆಂಡ್ ಆಟಗಾರರು ಆರಂಭದಲ್ಲಿ ವಿಕೆಟ್ಗಳನ್ನು ಕಳೆದುಕೊಂಡರೂ ಆ ನಂತರ ಉತ್ತಮ ಜೊತೆಯಾಟಗಳನ್ನು ಕಟ್ಟಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಅತ್ಯಂತ ಕಳಪೆ ಫಿಲ್ಡಿಂಗ್
ಟೀಂ ಇಂಡಿಯಾದ ಈ ಹೀನಾಯ ಸೋಲಿಗೆ ತಂಡದ ಕಳಪೆ ಫಿಲ್ಡಿಂಗ್ ಪ್ರಮುಖ ಕಾರಣ ಎಂಬುದರಲ್ಲಿ ಯಾವುದೇ ಸುಳ್ಳಿಲ್ಲ. ಐರ್ಲೆಂಡ್ ಪ್ರವಾಸದಿಂದ ಹಿಡಿದು ಇದೀಗ ಇಂಗ್ಲೆಂಡ್ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲೂ ಟೀಂ ಇಂಡಿಯಾ ಫಿಲ್ಡರ್ಗಳಿಗೆ ಕ್ಯಾಚ್ ಹಿಡಿಯುವುದೆಂದರೆ ಅತ್ಯಂತ ಕಷ್ಟಕರವಾದ ಕೆಲಸವಾಗಿದೆ. ಜಡ ಹಿಡಿದವರಂತೆ ವರ್ತಿಸುತ್ತಿರುವ ಫಿಲ್ಡರ್ಗಳು ಸೀದಾ ಕೈಗೆ ಬಂದು ಕೂರುತ್ತಿರುವ ಕ್ಯಾಚ್ಗಳನ್ನು ಹಿಡಿಯುತ್ತಿಲ್ಲ. ಇನ್ನ ಸ್ವಲ್ಪ ದೂರ ಓಡಿ ಹೋಗಿ ಹಿಡಿಯಬೇಕೆನ್ನುವ ಕ್ಯಾಚ್ಗಳನ್ನು ಬಿಟ್ಟೇ ಬಿಡುತ್ತಾರೆ ಎಂಬುದನ್ನು ಅವರು ಕೈಚೆಲ್ಲುವ ಮುನ್ನವೇ ಅಭಿಮಾನಿಗಳು ಊಹಿಸುತ್ತಿದ್ದಾರೆ. ಟೀಂ ಇಂಡಿಯಾ ಇಷ್ಟು ಕಳಪೆಯಾಗಿ ಫಿಲ್ಡಿಂಗ್ ಮಾಡಿದ್ದನ್ನು ಹಿಂದೆಂದೂ ನೋಡಿರಲಿಲ್ಲ.
IND vs ENG: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ; ತಂಡದಲ್ಲಿ 2 ಬದಲಾವಣೆ
ನಾಯಕತ್ವದಲ್ಲಿ ಚುರುಕುತನವಿಲ್ಲ
ಇನ್ನು ಇದೇ ಮೊದಲ ಬಾರಿಗೆ ಭಾರತ ಟಿ20 ತಂಡದ ನಾಯಕತ್ವವನ್ನು ನಿಭಾಯಿಸುತ್ತಿರುವ ಶ್ರೇಯಸ್ ಅಯ್ಯರ್ಗೆ ಯಾವ ಸಂದರ್ಭದಲ್ಲಿ ಯಾವ ಬೌಲರ್ನ ಬಳಸಬೇಕು? ಯಾರನ್ನು ಎಲ್ಲಿ ಫಿಲ್ಡಿಂಗ್ಗೆ ನಿಲ್ಲಿಸಬೇಕು? ಯಾವ ಬ್ಯಾಟ್ಸ್ಮನ್ಗೆ ಯಾವ ರೀತಿಯ ತಂತ್ರವನ್ನು ಹೆಣೆಯಬೇಕು? ಎಂಬುದನ್ನು ನಿರ್ಧರಿಸುವಲ್ಲಿ ಶ್ರೇಯಸ್ ಸಂಪೂರ್ಣವಾಗಿ ವಿಫಲರಾದರು. ತಂಡದಲ್ಲಿ ಇಷ್ಟೆಲ್ಲ ನ್ಯೂನತೆಗಳಿದ್ದರೂ ಆಡಿರುವ 7 ಪಂದ್ಯಗಳಲ್ಲಿ ಆಟಗಾರರಲ್ಲಿ ಒಂದೇ ಒಂದು ಬದಲಾವಣೆಗಳಾಗಿಲ್ಲ. ಯಾರೊಬ್ಬರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಕೆಲಸಕ್ಕೂ ಕೈಹಾಕಿಲ್ಲ. ಇದರ ಪರಿಣಾಮವಾಗಿ ತಂಡಕ್ಕೆ ಹಿಂದೆಂದೂ ಕಾಣದ ಸೋಲುಗಳು ಎದುರಾಗುತ್ತಿವೆ. ಟೀಂ ಇಂಡಿಯಾ ಆದಷ್ಟು ಬೇಗ ತನ್ನ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ, ಮುಂದಿನ ಜಿಂಬಾಬ್ವೆ ಸರಣಿಯನ್ನು ಸೋಲುವುದರಲ್ಲಿ ಯಾವುದೇ ಅನುಮಾನವಿಲ್ಲ.




