AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಭವ್ ಚಮತ್ಕಾರಕ್ಕೆ ಅಂಪೈರ್ ನಿರ್ಧಾರವೇ ಬದಲು!

ಕ್ರಿಕೆಟ್ ಮೈದಾನದಲ್ಲಿ ಅಂಪೈರ್ ತೀರ್ಪನ್ನು ಸವಾಲು ಮಾಡುವುದು ಸುಲಭದ ಮಾತಲ್ಲ, ಅದರಲ್ಲೂ 15 ವರ್ಷದ ಆಟಗಾರನೊಬ್ಬ ಇಡೀ ತಂಡದ ನಾಯಕನನ್ನೇ ಒಪ್ಪಿಸಿ ರಿವ್ಯೂ ತೆಗೆದುಕೊಳ್ಳುವಂತೆ ಮಾಡುವುದೆಂದರೆ ಅದು ಸಾಮಾನ್ಯ ಸಮಯಪ್ರಜ್ಞೆಯಲ್ಲ! ಚೆನ್ನೈನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಮಾಡಿದ್ದು ಇದನ್ನೇ.

ವೈಭವ್ ಚಮತ್ಕಾರಕ್ಕೆ ಅಂಪೈರ್ ನಿರ್ಧಾರವೇ ಬದಲು!
ವೈಭವ್ ಸೂರ್ಯವಂಶಿImage Credit source: BCCI
ಝಾಹಿರ್ ಯೂಸುಫ್
|

Updated on: Sep 08, 2026 | 2:04 PM

Share

ಚೆನ್ನೈನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಮೂರನೇ ದಿನದಾಟದಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಎಲ್ಲರ ಗಮನ ಸೆಳೆದಿದ್ದಾರೆ. ವಿಶೇಷವೆಂದರೆ, ಈ ಬಾರಿ ಅವರು ಎಲ್ಲರ ಚಿತ್ತ ತನ್ನತ್ತ ಸೆಳೆದಿದ್ದು ಬ್ಯಾಟಿಂಗ್‌ನಿಂದಲ್ಲ. ಬದಲಾಗಿ ಚಾಣಾಕ್ಷತನದಿಂದ ಡಿಆರ್‌ಎಸ್ ತೆಗೆದುಕೊಳ್ಳುವಂತೆ ನಾಯಕನನ್ನು ಒತ್ತಾಯಿಸುವ ಮೂಲಕ!

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಈಸ್ಟ್ ಝೋನ್ ತಂಡವು ತನ್ನ ಪ್ರಥಮ ಇನಿಂಗ್ಸ್‌ನಲ್ಲಿ ಭರ್ಜರಿ 708 ರನ್‌ ಗಳಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಸೌತ್ ಝೋನ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ದಾಳಿಗಿಳಿದ ವೇಗಿ ಮುಖೇಶ್ ಕುಮಾರ್ ಎಸೆದ ಚೆಂಡು,  ರಿಕ್ಕಿ ಭುಯಿ ಅವರ ಬ್ಯಾಟ್‌ಗೆ ಸವರಿ ವಿಕೆಟ್ ಕೀಪರ್ ಕೈ ಸೇರಿತು. ಈ ವೇಳೆ ಈಸ್ಟ್ ಝೋನ್ ಆಟಗಾರರು ಔಟ್‌ಗಾಗಿ ಬಲವಾಗಿ ಅಪೀಲ್ ಮಾಡಿದರೂ, ಆನ್-ಫೀಲ್ಡ್ ಅಂಪೈರ್ ಔಟ್ ನೀಡಲು ನಿರಾಕರಿಸಿದರು

ಆದರೆ, ಸ್ಲಿಪ್ ಫೀಲ್ಡಿಂಗ್ ನಿಂತಿದ್ದ ವೈಭವ್ ಸೂರ್ಯವಂಶಿ ಅವರಿಗೆ ಚೆಂಡು ಬ್ಯಾಟ್‌ಗೆ ತಗುಲಿರುವುದು ಸ್ಪಷ್ಟವಾಗಿ ಗೊತ್ತಾಗಿತ್ತು. ಕೂಡಲೇ ನಾಯಕ ಇಶಾನ್ ಕಿಶನ್ ಬಳಿ ಓಡಿ ಬಂದ ವೈಭವ್, “ದಯವಿಟ್ಟು ರಿವ್ಯೂ ತಗೊಳ್ಳಿ, ತಗೊಳ್ಳಿ!” ಎಂದು ಬಲವಾಗಿ ಒತ್ತಾಯಿಸಿದರು. 15 ವರ್ಷದ ಹುಡುಗನ ಆತ್ಮವಿಶ್ವಾಸವನ್ನು ನಂಬಿದ ಇಶಾನ್ ಕಿಶನ್ ತಡಮಾಡದೆ ಡಿಆರ್‌ಎಸ್ ಮೊರೆ ಹೋದರು.

ಅಲ್ಟ್ರಾಎಡ್ಜ್‌ನಲ್ಲಿ ಸಿಕ್ಕ ತೀರ್ಪು!

ವಿಡಿಯೋ ಮರುಪರಿಶೀಲನೆ ಮಾಡಿದಾಗ, ಅಲ್ಟ್ರಾಎಡ್ಜ್ ತಂತ್ರಜ್ಞಾನದಲ್ಲಿ ಚೆಂಡು ಬ್ಯಾಟ್‌ಗೆ ತಗುಲಿರುವುದು ‘ಸ್ಪೈಕ್’ ಮೂಲಕ ಸ್ಪಷ್ಟವಾಗಿ ಗೋಚರಿಸಿತು. ಇದರಿಂದಾಗಿ ಅಂಪೈರ್ ತಮ್ಮ ನಿರ್ಧಾರವನ್ನು ಬದಲಿಸಿ ರಿಕ್ಕಿ ಭುಯಿ ಅವರಿಗೆ ಔಟ್ ಘೋಷಿಸಿದರು. ವೈಭವ್ ಸೂರ್ಯವಂಶಿ ಅವರ ಈ ಒಂದು ಗಟ್ಟಿ ನಿರ್ಧಾರ, ಈಸ್ಟ್ ಝೋನ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟಿತು.

ಇದು ಎರಡನೇ ಬಾರಿ!

ವೈಭವ್ ಸೂರ್ಯವಂಶಿ ಈ ಟೂರ್ನಿಯಲ್ಲಿ ಇಂತಹ ಚಮತ್ಕಾರ ಮಾಡುತ್ತಿರುವುದು ಇದು ಮೊದಲೇನಲ್ಲ. ಇದಕ್ಕೂ ಮುನ್ನ ಸೆಂಟ್ರಲ್ ಝೋನ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಹಂಗಾಮಿ ನಾಯಕನಾಗಿದ್ದ ವೈಭವ್, ಸಮಯ ಮುಗಿಯಲು ಕೇವಲ 3 ಸೆಕೆಂಡುಗಳು ಬಾಕಿ ಇರುವಾಗ ಅತ್ಯಂತ ನಿಖರವಾದ ಡಿಆರ್‌ಎಸ್ ಕರೆ ತೆಗೆದುಕೊಂಡು ಕ್ರೀಸ್‌ನಲ್ಲಿದ್ದ ಆರ್ಯನ್ ಜುಯಲ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದ್ದರು.

ಇದನ್ನೂ ಓದಿ: ಕೆಎಲ್ ರಾಹುಲ್ ಕಣಕ್ಕಿಳಿಯುವುದು ಯಾವ ತಂಡದ ಪರ? ಕೊನೆಗೂ ಸಿಕ್ತು ಸ್ಪಷ್ಟನೆ

ಅತಿ ಕಿರಿಯ ವಯಸ್ಸಿನಲ್ಲೇ ಮೈದಾನದಲ್ಲಿ ತೀಕ್ಷ್ಣ ನಾಯಕತ್ವದ ಗುಣಗಳನ್ನು ಪ್ರದರ್ಶಿಸುತ್ತಿರುವ ವೈಭವ್ ಸೂರ್ಯವಂಶಿ ಅವರ ಈ ಚಾಣಾಕ್ಷ ನಡೆಗೆ, ಕ್ರಿಕೆಟ್ ಪಂಡಿತರು ಹಾಗೂ ಅಭಿಮಾನಿಗಳಿಂದ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

Follow Us