IND vs SA: ಟಾಸ್ ಕೂಡ ನಡೆಯದೆ 4ನೇ ಟಿ20 ಪಂದ್ಯ ರದ್ದು; ಟಿಕೆಟ್ ಖರೀದಿಸಿದವರ ಕಥೆ ಏನು?
India vs SA 4th T20 Cancelled: ಲಕ್ನೋದಲ್ಲಿ ಭಾರತ vs ದಕ್ಷಿಣ ಆಫ್ರಿಕಾ 4ನೇ T20 ಪಂದ್ಯ ದಟ್ಟ ಮಂಜಿನಿಂದ ರದ್ದಾಗಿದೆ. ಈ ಕಾರಣದಿಂದಾಗಿ, ಅಭಿಮಾನಿಗಳಿಗೆ ಟಿಕೆಟ್ ಹಣ ಮರುಪಾವತಿ ಕುರಿತು ಪ್ರಶ್ನೆ ಮೂಡಿತ್ತು. ಬಿಸಿಸಿಐ ನಿಯಮದಂತೆ, ಒಂದೇ ಒಂದು ಚೆಂಡು ಎಸೆಯದೆ ಪಂದ್ಯ ರದ್ದಾದರೆ, ಟಿಕೆಟ್ ಬುಕಿಂಗ್ ಶುಲ್ಕವನ್ನು ಕಡಿತಗೊಳಿಸಿ ಉಳಿದ ಸಂಪೂರ್ಣ ಹಣವನ್ನು ಕ್ರಿಕೆಟ್ ಅಭಿಮಾನಿಗಳಿಗೆ ಮರುಪಾವತಿ ಮಾಡಲಾಗುತ್ತದೆ. ಅಂದರೆ ಅಭಿಮಾನಿಗಳಿಗೆ ಟಿಕೆಟ್ ಹಣ ಮರುಪಾವತಿಯಾಗಲಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಿನ 4ನೇ ಟಿ20 ಪಂದ್ಯ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ( Lucknow Cricket) ಡಿಸೆಂಬರ್ 17 ರಂದು ನಡೆಯಬೇಕಿತ್ತು. ಆದರೆ ಮೈದಾನದ ತುಂಬ ದಟ್ಟ ಮಂಜು ಆವರಿಸಿದ ಕಾರಣ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ತಲಾ ಐದು ಓವರ್ ಪಂದ್ಯವನ್ನು ಆಡಿಸುವ ಸಲುವಾಗಿ ಅಂಪೈರ್ಗಳು 6 ಬಾರಿ ಟಾಸ್ ಮುಂದೂಡಿದರು. ಆದರೆ ಸಮಯ ಮೀರಿದ ಕಾರಣ ರಾತ್ರಿ 9:30 ಕ್ಕೆ ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರವನ್ನು ಅಂಪೈರ್ಗಳು ಪ್ರಕಟಿಸಿದರು. ಹೀಗಾಗಿ 4ನೇ ಟಿ20 ಪಂದ್ಯ ಒಂದು ಎಸೆತವನ್ನು ಎಸೆಯಲು ಸಾಧ್ಯವಾಗದೆ ರದ್ದಾಯಿತು. ಆದರೆ ದುಬಾರಿ ಹಣ ನೀಡಿ ಟಿಕೆಟ್ ಖರೀದಿಸಿದ ಅಭಿಮಾನಿಗಳಿಗೆ ಟಿಕೆಟ್ ಹಣ ಮರುಪಾವತಿಯಾಯಿತಾ? ಇದಕ್ಕೆ ಬಿಸಿಸಿಐ (BCCI) ನಿಯಮ ಏನು ಹೇಳುತ್ತದೆ ಎಂಬುದನ್ನು ನೋಡಿದಾಗ..
ಟಾಸ ಕೂಡ ನಡೆಯದೆ 4ನೇ ಟಿ20 ರದ್ದು
ವಾಸ್ತವವಾಗಿ ಈ ರೀತಿಯ ದಟ್ಟ ಮಂಜಿನ ಕಾರಣದಿಂದಾಗಿ ಪಂದ್ಯವನ್ನು ರದ್ದುಗೊಳಿಸುತ್ತಿರುವುದು ತೀರ ಅಪರೂಪದ ಘಟನೆಯಾಗಿದೆ. ಮಳೆಯಿಂದಾಗಿ ಹಾಗೂ ಕೆಟ್ಟ ಹವಾಮಾನದಿಂದಾಗಿ ಪಂದ್ಯವನ್ನು ರದ್ದುಗೊಳಿಸಿದ ಘಟನೆಗಳು ಭಾರತದಲ್ಲಿ ಸಾಕಷ್ಟು ಭಾರಿ ನಡೆದಿವೆ. ಅಂತಹ ಸಮಯದಲ್ಲಿ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಅಭಿಮಾನಿಗಳಿಗೆ ನಿರಾಸೆಯಾಗದಂತೆ ಬಿಸಿಸಿಐ ಕೂಡ ಟಿಕೆಟ್ ಹಣವನ್ನು ಮರುಪಾವತಿಸಿತ್ತು. ಆದರೆ 4ನೇ ಟಿ20 ಪಂದ್ಯ ಮಂಜಿನ ಕಾರಣದಿಂದ ರದ್ದಾಗಿರುವುದರಿಂದ ಟಿಕೆಟ್ ಹಣ ಮರುಪಾವತಿಯಾಗುತ್ತಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಅದಕ್ಕೆ ಉತ್ತರ ಹೌದು..
ಟಿಕೆಟ್ ಹಣ ಮರುಪಾವತಿಯಾಗುತ್ತಾ?
ಈ ರೀತಿಯ ಪ್ರಕೃತಿ ವೈಪರಿತ್ಯಗಳಿಂದ ಪಂದ್ಯ ರದ್ದಾದರೆ ಟಿಕೆಟ್ ಹಣವನ್ನು ಮರುಪಾವತಿ ಮಾಡುವ ಸಲುವಾಗಿ ಬಿಸಿಸಿಐ ಎರಡು ಪ್ರಮುಖ ನಿಯಮಗಳನ್ನು ಜಾರಿ ಮಾಡಿದೆ. ಮೊದಲ ನಿಯಮದ ಪ್ರಕಾರ, ಒಂದೇ ಒಂದು ಚೆಂಡು ಎಸೆಯದೆ ಪಂದ್ಯ ರದ್ದಾದರೆ, ಟಿಕೆಟ್ ಬುಕಿಂಗ್ ಶುಲ್ಕವನ್ನು ಕಡಿತಗೊಳಿಸಿದ ನಂತರ ಸಂಪೂರ್ಣ ಹಣವನ್ನು ಕ್ರಿಕೆಟ್ ಅಭಿಮಾನಿಗಳಿಗೆ ಹಿಂತಿರುಗಿಸಲಾಗುತ್ತದೆ. ಎರಡನೇ ನಿಯಮದ ಪ್ರಕಾರ, ಪಂದ್ಯ ಪ್ರಾರಂಭವಾಗಿ ನಂತರ ಹವಾಮಾನ ವೈಪರೀತ್ಯದಿಂದಾಗಿ ರದ್ದಾದರೆ, ಯಾವುದೇ ಟಿಕೆಟ್ ಹಣವನ್ನು ಮರುಪಾವತಿಸಲಾಗುವುದಿಲ್ಲ. ಅಂದರೆ ಲಕ್ನೋದಲ್ಲಿ ಟಾಸ್ ಕೂಡ ನಡೆಯದ ಕಾರಣ, ಟಿಕೆಟ್ ಖರೀದಿಸಿ ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಬಂದಿದ್ದ ಅಭಿಮಾನಿಗಳಿಗೆ ಟಿಕೆಟ್ ಬುಕಿಂಗ್ ಶುಲ್ಕವನ್ನು ಕಡಿತಗೊಳಿಸಿ ಉಳಿದ ಪೂರ ಹಣವನ್ನು ಮರುಪಾವತಿ ಮಾಡಲಾಗುತ್ತದೆ.
IND vs SA: ದಟ್ಟ ಮಂಜಿನಿಂದ 4ನೇ ಟಿ20 ಪಂದ್ಯ ರದ್ದು; ಸರಣಿಯಲ್ಲಿ ಭಾರತದ ಮೇಲುಗೈ
ಸರಣಿಯ ಸ್ಥಿತಿ ಏನು?
ಮೊದಲ ನಾಲ್ಕು ಪಂದ್ಯಗಳ ನಂತರ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಕಟಕ್ನಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು ಭಾರತ ಗೆದ್ದರೆ, ಮುಲ್ಲನ್ಪುರದಲ್ಲಿ ನಡೆದ ಎರಡನೇ ಟಿ20 ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದುಕೊಂಡಿತು. ಧರ್ಮಶಾಲಾದಲ್ಲಿ ನಡೆದ ಮೂರನೇ ಟಿ20ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇದೀಗ ನಾಲ್ಕನೇ ಟಿ20 ಪಂದ್ಯ ರದ್ದಾದ ನಂತರ, ಡಿಸೆಂಬರ್ 19 ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉಭಯ ತಂಡಗಳ ನಡುವೆ ಐದನೇ ಮತ್ತು ಅಂತಿಮ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಏಕೆಂದರೆ ಈ ಪಂದ್ಯವನ್ನು ಭಾರತ ಗೆದ್ದರೆ ಸರಣಿ ಅದರ ಕೈಸೇರಲಿದೆ, ಒಂದು ವೇಳೆ ಸೋತರೆ ಸರಣಿ 2-2 ರಿಂದ ಸಮಬಲಗೊಳ್ಳಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:05 pm, Thu, 18 December 25
