ಪದೇ ಪದೇ ಬಿಸಿನೀರು ಕೇಳಿದ್ದಕ್ಕೆ ವರನನ್ನು ಹುಚ್ಚ ಎಂದ ವಧು: ರಣರಂಗವಾಯಿತು ಮದುವೆ ಮಂಟಪ
ಉತ್ತರ ಪ್ರದೇಶದ ಕಾನ್ಪುರದಲ್ಲಿ ಮದುವೆಯೊಂದು ವರನ ನಡವಳಿಕೆಯಿಂದಾಗಿ ಮುರಿದುಬಿದ್ದಿದೆ. ವಧು, ವರ ತಡವಾಗಿ ಬಂದಿದ್ದಲ್ಲದೆ, ಕುಡಿದು ವಿಚಿತ್ರವಾಗಿ ವರ್ತಿಸಿದ್ದ, ಪದೇ ಪದೇ ಬಿಸಿನೀರು ಕೇಳುತ್ತಿದ್ದ ಎಂದು ಆರೋಪಿಸಿದ್ದಾಳೆ. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ವರನನ್ನು ಹುಚ್ಚ ಎಂದಿದ್ದಕ್ಕೆ ಎರಡೂ ಕಡೆಯವರ ನಡುವೆ ಜಗಳವಾಗಿದ್ದು, ಪೊಲೀಸರು ಮಧ್ಯಪ್ರವೇಶಿಸಿ ರಾಜಿ ಸಂಧಾನ ಮಾಡಿದ್ದಾರೆ.

ಕೆಲವೊಂದು ಮದುವೆಗಳು ಮಂಟಪದಲ್ಲಿ ಮುರಿದು (Wedding Called) ಹೋಗಿರುವ ಸುದ್ದಿಗಳು ವೈರಲ್ ಆಗಿವೆ. ಕೆಲವೊಂದು ಕಡೆ ವಧು ಸರಿ ಇದ್ರೆ ವರ ಸರಿ ಇರುವುದಿಲ್ಲ. ಇನ್ನು ಕೆಲವು ಕಡೆ ವರ ಸರಿ ಇದ್ರೆ, ವಧು ಸರಿ ಇರುವುದಿಲ್ಲ. ಇತ್ತೀಚಿಗಿನ ದಿನಗಳಲ್ಲಿ ಚಿಕ್ಕ ಚಿಕ್ಕ ವಿಷಯಕ್ಕೆ ಮದುವೆ ಮುರಿದು ಬೀಳುವ ಘಟನೆಗಳು ಹೆಚ್ಚಾಗಿವೆ. ಇದೀಗ ಇಂಥಹದೇ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಚರ್ಚೆ ನಡೆಸಿದ್ದಾರೆ. ವಧು ತಾನು ಮದುವೆ ಆಗಬೇಕಿದ್ದ ವರನ ನಡವಳಿಕೆ ಬಗ್ಗೆ ಆರೋಪ ಮಾಡಿದ್ದಾಳೆ. ಇದರಿಂದ ಮದುವೆಯೇ ನಿಂತೋಗಿದೆ. ಈ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಸಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಳ್ಳಿಯೊಂದರಲ್ಲಿ ನಡೆದಿದೆ. ಈ ಹಳ್ಳಿಯಲ್ಲಿ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮಕ್ಕೆ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದರು. ಮದುವೆ ಮೆರವಣಿಗೆ ಕೂಡ ಆರಂಭವಾಗಿತ್ತು. ಆದರೆ ವಧು ಈ ಮೆರವಣಿಗೆಯಲ್ಲಿ ಬರಲು ಹಿಂದೇಟು ಹಾಕಿದ್ದಾಳೆ. ಮದುವೆಗೂ ಕೂಡ ಎಲ್ಲ ತಯಾರಿಗಳನ್ನು ಮನೆಯವರು ಮಾಡಿಕೊಂಡಿದ್ದಾರೆ. ಆದರೆ ವರ ವರ್ತನೆ ನೋಡಿ ಮದುವೆ ಆಗಲು ವಧು ಒಲ್ಲೆ ಎಂದಿದ್ದಾಳೆ.
ವಧು, ವರ ಮತ್ತು ಅವನ ಸಂಬಂಧಿಕರ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ಮದುವೆ ಮೆರವಣಿಗೆಗೆ ವರ ಕಡೆಯವರು ತಡವಾಗಿ ಬಂದಿದ್ದಾರೆ. ಹಾಗೂ ಕೆಲವರು ಅದರಲ್ಲಿ ಕುಡಿದಿದ್ದರು. ಜತೆಗೆ ವರನು ಪದೇ ಪದೇ ಬಿಸಿನೀರು ಕೇಳುತ್ತಿದ್ದ, ಅವನು ಹುಚ್ಚನಂತೆ ಆಡುತ್ತಿದ್ದ ಎಂದು ವಧು ದೂರಿದ್ದಾಳೆ. ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ತಮ್ಮ ಮಗನನ್ನು ಹುಚ್ಚ ಎಂದು ಕರೆದಿದ್ದಕ್ಕೆ ವರನ ಕುಟುಂಬದವರು ವಧುವಿನ ವಿರುದ್ಧ ಆಕ್ರೋಶಗೊಂಡಿದ್ದು, ದೊಡ್ಡ ಜಗಳವೇ ನಡೆದಿದೆ. ಮದುವೆಗೆ ಬಂದಿದ್ದ ಸಂಬಂಧಿಕರು ಇವರ ಜಗಳ ನೋಡಿ ಅಲ್ಲಿಂದ ಹೋಗಿದ್ದಾರೆ.
ಇದನ್ನೂ ಓದಿ: ಜೀವನಕ್ಕಾಗಿ ಲಾರಿ ಓಡಿಸುವ ಕಾಯಕ; ಬದುಕಿಗೆ ಸ್ಫೂರ್ತಿ ಗೋವಿಂದಣ್ಣನ ಮಾತು
ಮದುವೆ ಮನೆಯಲ್ಲಿ ಜಗಳ ಜೋರಾಗಿರುವುದನ್ನು ಕಂಡು ಯಾರೋ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಕೊನೆಗೆ ಪೊಲೀಸರು ಮಧ್ಯೆಪ್ರವೇಶಿಸಿ, ಎರಡೂ ಕಡೆಯವರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಮದುವೆಯ ಸಾಮಗ್ರಿಗಳು ಮತ್ತು ಖರ್ಚು ಮಾಡಿದ ಹಣವನ್ನು ಹಿಂದಿರುಗಿಸುವ ವ್ಯವಹಾರದ ಬಗ್ಗೆ ಎರಡೂ ಕಡೆಯವರು ರಾಜಿ ಮಾಡಿಕೊಂಡು, ಒಂದು ಒಪ್ಪಂದಕ್ಕೆ ಬಂದರು. ಈ ಘಟನೆಗೆ ಸಂಬಂಧಿಸಿದಂತೆ ಯಾರೂ ಯಾವುದೇ ಲಿಖಿತ ದೂರು ದಾಖಲಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




