ಡಾ. ರಾಜ್ ಸಮಾಧಿ ವಿವಾದ: ನಾನು ಹೇಳಿದ ವಿಚಾರ ಸುಳ್ಳಲ್ಲ, ದಬ್ಬಾಳಿಕೆ ಒಪ್ಪಲ್ಲ ಎಂದ ಚೇತನ್
ಡಾ. ರಾಜ್ಕುಮಾರ್ ಅವರ ಸಮಾಧಿ ನಿರ್ಮಾಣಕ್ಕೆ ಸರ್ಕಾರ ಜಾಗ ನೀಡಿದ್ದನ್ನು ನಟ ಚೇತನ್ ಅಹಿಂಸಾ ಪ್ರಶ್ನಿಸಿದ್ದಾರೆ. ಆ ಮೂಲಕ ಅವರು ವಿವಾದ ಸೃಷ್ಟಿಸಿದ್ದಾರೆ. ಅವರು ಕ್ಷಮೆ ಕೇಳಬೇಕು ಎಂದು ಅನೇಕರು ಪಟ್ಟು ಹಿಡಿದಿದ್ದರು. ಈ ಎಲ್ಲ ಘಟನೆಗಳಿಗೆ ಪ್ರತಿಕ್ರಿಯೆ ನೀಡಲು ಚೇತನ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ.

ನಟ ಚೇತನ್ ಅಹಿಂಸಾ ಅವರು ಡಾ. ರಾಜ್ಕುಮಾರ್ ಸಮಾಧಿ (Dr Rajkumar Samadhi) ಬಗ್ಗೆ ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಅಣ್ಣಾವ್ರ ಸಮಾಧಿ ಸಲುವಾಗಿ ಸರ್ಕಾರ ಎರಡೂವರೆ ಜಾಗವನ್ನು ನೀಡಿದ್ದು ಸರಿಯಲ್ಲ ಎಂದು ಅವರು ಹೇಳಿದ್ದರು. ಆ ಹೇಳಿಕೆಗೆ ರಾಜ್ ಅಭಿಮಾನಿಗಳು ಮತ್ತು ಕನ್ನಡಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಚೇತನ್ (Chetan Kumar Ahimsa) ಕ್ಷಮೆ ಕೇಳಬೇಕು ಎಂದು ಎಲ್ಲರೂ ಒತ್ತಾಯಿಸಿದ್ದರು. ಆದರೆ ಕ್ಷಮೆ ಕೇಳಿಸಲು ಬಂದವರು ತಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಎಂದು ಚೇತನ್ ಈಗ ಗರಂ ಆಗಿದ್ದಾರೆ. ಈ ಬಗ್ಗೆ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ.
‘ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಾನು ಯಾರ ಭಾವನೆಗೂ ಧಕ್ಕೆ ತಂದಿಲ್ಲ. ಒಂದು ವೇಳೆ ಧಕ್ಕೆ ತಂದಿದ್ದರೆ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಿ. ಅದನ್ನು ಎದುರಿಸಲು ನಾನು ಸಿದ್ಧ. ಯಾರೇ ಬಂದು ದಬ್ಬಾಳಿಕೆ ಮಾಡುವುದು ಪ್ರಜಾಪ್ರಭುತ್ವ ಅಲ್ಲ. ನಾನು ವಿಷಾದ ವ್ಯಕ್ತಪಡಿಸಿದ್ದೇನೆ. ಹಾಗಂತ ನಾನು ಹೇಳಿದ ವಿಚಾರ ಸುಳ್ಳಲ್ಲ, ದಬ್ಬಾಳಿಕೆಯನ್ನು ನಾನು ಒಪ್ಪಲ್ಲ’ ಎಂದು ಚೇತನ್ ಅವರು ಹೇಳಿದ್ದಾರೆ.
‘ನಾನು ವಿವಾಷ ವ್ಯಕ್ತಪಡಿಸಿದ ಮಾತ್ರಕ್ಕೆ ನಾನು ಹೇಳಿದ ವಿಚಾರ ಸುಳ್ಳಾಗಲ್ಲ. ನಾನು ಹೇಳಿದ್ದರಲ್ಲಿ ಸತ್ಯ ಇದೆ. ಈಗಲೂ ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಅಣ್ಣಾವ್ರು ಬದುಕಿದ್ದಾಗ ಎರಡೂವರೆ ಎಕರೆ ಜಾಗವನ್ನು ನಿಮ್ಮ ಸ್ಮಾರಕಕ್ಕೆ ನೀಡುತ್ತೇವೆ ಎಂದಿದ್ದರೆ ಅವರೇ ಬೇಡ ಅಂತ ಹೇಳುತ್ತಿದ್ದರು. ನಾನು ಪ್ರಚಾರಕ್ಕೋಸ್ಕರ ಈ ರೀತಿ ಹೇಳಿಲ್ಲ. ಇದು ವಿಚಾರಕ್ಕೋಸ್ಕರ ಮಾತ್ರ’ ಎಂದು ಚೇತನ್ ಹೇಳಿದ್ದಾರೆ.
‘ನಮಗೆ ಅಣ್ಣಾವ್ರ ಕುಟುಂಬಕ್ಕೆ ಬಗ್ಗೆ ಏನೂ ತಕರಾರು ಇಲ್ಲ. ಅವರ ಅಭಿಮಾನಿ ಬಳಗದ ಬಗ್ಗೆಯೂ ತಕರಾರು ಇಲ್ಲ. ಸರ್ಕಾರದ ಯೋಜನೆಗಳಲ್ಲಿ ಒಬ್ಬರಿಗೆ ಜಾಗ ಕೊಟ್ಟು, ಇನ್ನುಳಿದವರಿಗೆ ಕೊಟ್ಟಿಲ್ಲ ಎಂದರೆ ಚಿತ್ರರಂಗದಲ್ಲಿ ಬೇರೆ ಬೇರೆ ಸಮಸ್ಯೆಗಳು ಆಗುತ್ತವೆ. ಇರುವ ಸಮಸ್ಯೆಗೆ ಪರಿಹಾರ ಸಿಗಲ್ಲ. ಸ್ಟಾರ್ ಸಂಸ್ಕೃತಿಯನ್ನು ನಾನು ವಿರೋಧಿಸುತ್ತೇನೆ’ ಎಂದಿದ್ದಾರೆ ಚೇತನ್ ಅಹಿಂಸಾ.
ಇದನ್ನೂ ಓದಿ: ಡಾ. ರಾಜ್ಕುಮಾರ್ ಸಮಾಧಿ ವಿವಾದ: ಕ್ಷಮೆ ಕೇಳುವಾಗ ಸತಾಯಿಸಿದ್ರಾ ನಟ ಚೇತನ್? ವಿಡಿಯೋ ನೋಡಿ
‘ಸೌಜನ್ಯದಿಂದ ಮಾತನಾಡಿದರೆ ಮಾತ್ರ ನಾನು ಬದ್ಧನಾಗಿರುತ್ತೇನೆ. ಆದರೆ ಗೂಂಡಾ ವರ್ತನೆ ಮಾಡಿದರೆ, ಮಹಿಳೆ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿದರೆ ಅದಕ್ಕೆ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು. ಪೊಲೀಸರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನನಗೆ ಯಾರ ಮೇಲೂ ವೈಯಕ್ತಿಕ ಸೇಡು ಇಲ್ಲ. ಪ್ರಜಾಪ್ರಭುತ್ವ ಎತ್ತಿ ಹಿಡಿಯುತ್ತೇನೆ’ ಎಂದು ಚೇತನ್ ಅಹಿಂಸಾ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




