
ಬೆಂಗಳೂರು, ಮೇ 27: ದೆಹಲಿಯಲ್ಲಿ ಕಾಂಗ್ರೆಸ್ (Congress) ಹೈಕಮಾಂಡ್ ನಾಯಕರೊಂದಿಗೆ ಮಂಗಳವಾರ ನಡೆದ 7 ಗಂಟೆಗಳ ದೀರ್ಘಾವಧಿ ಸಭೆಯ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು (ಮೇ 27) ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸೌಧದಲ್ಲಿ ನಡೆದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಸಿಎಂ, ಹೈಕಮಾಂಡ್ ಸಭೆಯ ಕುರಿತಾದ ಪ್ರಶ್ನೆ ಎದುರಿಸಬೇಕಾಯಿತು. ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ದೆಹಲಿಗೆ ಹೋಗಿದ್ದ ವಿಚಾರದ ಬಗ್ಗೆ ನಾಳೆ (ಗುರುವಾರ) ಎಲ್ಲವನ್ನೂ ಮುಕ್ತವಾಗಿ ಮಾತನಾಡುತ್ತೇನೆ’ ಎಂದು ಹೇಳಿದರು. ಆ ಮೂಲಕ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ದೆಹಲಿಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ನಡೆದ ‘ಒನ್-ಟು-ಒನ್’ ರಹಸ್ಯ ಚರ್ಚೆಯ ಬಳಿಕ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲು ಒಪ್ಪಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದರ ಬೆನ್ನಲ್ಲೇ ಇಂದು ಬೆಂಗಳೂರಿನಲ್ಲಿ ಸಿಎಂ ಅವರ ಬಾಡಿ ಲ್ಯಾಂಗ್ವೇಜ್ ವಿಭಿನ್ನವಾಗಿ ಕಂಡುಬಂದಿದ್ದು, ಎಂದಿನ ವೇಗ ಕಾಣಿಸಲಿಲ್ಲ. ನಿಧಾನಗತಿಯಲ್ಲೇ ಕಾರಿಳಿದು ಬಂದು ನೆಹರೂ ಪ್ರತಿಮೆಗೆ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ಜಮೀರ್ ಅಹ್ಮದ್ ಖಾನ್, ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಸಮ್ಮುಖದಲ್ಲಿ ಪುಷ್ಪಾರ್ಚನೆ ಮಾಡಿದರು. ತದನಂತರ ಕೆಪಿಸಿಸಿ ಕಚೇರಿಯ ಕಾರ್ಯಕ್ರಮಕ್ಕೆ ತೆರಳದ ಅವರು ನೇರವಾಗಿ ತಮ್ಮ ‘ಕಾವೇರಿ’ ನಿವಾಸಕ್ಕೆ ಮರಳಿದರು.
ಏತನ್ಮಧ್ಯೆ, ಸಿಎಂ ನಿವಾಸಕ್ಕೆ ಸಚಿವರಾದ ಸಂತೋಷ್ ಲಾಡ್, ಎಂ.ಸಿ. ಸುಧಾಕರ್, ಹಿರಿಯ ನಾಯಕ ಆರ್.ವಿ. ದೇಶಪಾಂಡೆ, ಶಾಸಕರುಗಳಾದ ಯಶವಂತರಾಯ ಪಾಟೀಲ್, ಶಿವಲಿಂಗೇಗೌಡ, ನಾಗೇಂದ್ರ, ಕೆ.ವೈ. ನಂಜೇಗೌಡ ಹಾಗೂ ಎಂಎಲ್ಸಿ ರಾಜೇಂದ್ರ ಭೇಟಿ ನೀಡಿ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಹೈಕಮಾಂಡ್ ಮುಂದೆ ನಡೆದ ಚರ್ಚೆಗಳು ಹಾಗೂ ತಾವು ರಾಜೀನಾಮೆ ನಿಲುವು ತಳೆಯಲು ಕಾರಣವಾದ ಸಂದರ್ಭಗಳನ್ನು ಸಿಎಂ ತಮ್ಮ ಆಪ್ತರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸಿಎಂ ಕುರ್ಚಿ ಬಿಡಲು ಸಿದ್ದರಾಮಯ್ಯ ಕೊನೆಗೂ ಒಪ್ಪಿದ್ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ಇದೇ ವೇಳೆ ಸಿಎಂ ಅವರನ್ನು ಭೇಟಿಯಾದ ಜೆಡಿಎಸ್ ಹಿರಿಯ ಶಾಸಕ ಜಿ.ಟಿ. ದೇವೇಗೌಡ ಪ್ರತಿಕ್ರಿಯಿಸಿ, ‘ಮಾನವೀಯತೆ ಕಾರಣಕ್ಕೆ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದೇನೆ. ಅವರು ಸುದೀರ್ಘ ರಾಜಕಾರಣ ಮಾಡಿದವರು, ಅವರಿಗೆ ಏನು ಮಾಡಬೇಕು ಎಂದು ಗೊತ್ತಿರುತ್ತದೆ, ಅವರ ನಿರ್ಧಾರಕ್ಕೆ ಒಳ್ಳೆಯದಾಗಲಿ’ ಎಂದಿದ್ದಾರೆ. ಒಟ್ಟಾರೆಯಾಗಿ ನಾಳೆ ಸಿಎಂ ನೀಡಲಿರುವ ಅಧಿಕೃತ ಹೇಳಿಕೆಯ ಮೇಲೆಯೇ ಇಡೀ ರಾಜ್ಯದ ದೃಷ್ಟಿ ನೆಟ್ಟಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Wed, 27 May 26