Russia- Ukraine War: ಖಾರ್ಕಿವ್​ನಲ್ಲಿ ಸಿಲುಕಿದ್ದ ಎಲ್ಲ ಭಾರತೀಯರ ಸ್ಥಳಾಂತರ; ಸುಮಿಯತ್ತ ಸರ್ಕಾರದ ಚಿತ್ತ

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಷ್ಯಾದ ನಿಯಂತ್ರಣದಲ್ಲಿರುವ ಖಾರ್ಕಿವ್ ಪ್ರದೇಶದಲ್ಲಿ ಈಗ ಯಾವುದೇ ಭಾರತೀಯರೂ ಉಳಿದಿಲ್ಲ, ಎಲ್ಲರನ್ನೂ ಸುರಕ್ಷಿತವಾಗಿ ಶಿಫ್ಟ್​ ಮಾಡಲಾಗಿದೆ ಎಂದು ಖಚಿತಪಡಿಸಿದೆ.

Russia- Ukraine War: ಖಾರ್ಕಿವ್​ನಲ್ಲಿ ಸಿಲುಕಿದ್ದ ಎಲ್ಲ ಭಾರತೀಯರ ಸ್ಥಳಾಂತರ; ಸುಮಿಯತ್ತ ಸರ್ಕಾರದ ಚಿತ್ತ
ಸಾಂದರ್ಭಿಕ ಚಿತ್ರ
Updated By: ಸುಷ್ಮಾ ಚಕ್ರೆ

Updated on: Mar 05, 2022 | 7:54 PM

ಉಕ್ರೇನ್: ಉಕ್ರೇನಿಯನ್ ನಗರಗಳಲ್ಲಿ ರಷ್ಯಾದ ತೀವ್ರವಾದ ಶೆಲ್ ದಾಳಿ ಮುಂದುವರಿದಂತೆ ಭಾರತದ ಸ್ಥಳಾಂತರಿಸುವ ಯೋಜನೆಯು ವೇಗವನ್ನು ಪಡೆದುಕೊಂಡಿದೆ. ಇಂದು ರಷ್ಯಾ (Russia) ಉಕ್ರೇನ್​ನಲ್ಲಿ (Ukraine) ತಾತ್ಕಾಲಿಕ ಕದನ ವಿರಾಮ ಘೋಷಿಸಿತ್ತು. ಹಾಗೇ, ಉಕ್ರೇನ್​ನ ನಗರಗಳಲ್ಲಿ ಸಿಲುಕಿರುವ ಭಾರತೀಯರು ಮತ್ತು ಇತರೆ ವಿದೇಶೀಯರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲು ಅವಕಾಶ ಒದಗಿಸಲಾಗುವುದು ಎಂದು ಕೂಡ ರಷ್ಯಾ ಹೇಳಿತ್ತು. ಇದೀಗ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಷ್ಯಾದ ನಿಯಂತ್ರಣದಲ್ಲಿರುವ ಖಾರ್ಕಿವ್ ಪ್ರದೇಶದಲ್ಲಿ ಈಗ ಯಾವುದೇ ಭಾರತೀಯರೂ ಉಳಿದಿಲ್ಲ, ಎಲ್ಲರನ್ನೂ ಸುರಕ್ಷಿತವಾಗಿ ಶಿಫ್ಟ್​ ಮಾಡಲಾಗಿದೆ ಎಂದು ಖಚಿತಪಡಿಸಿದೆ. 600ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿರುವ ಉಕ್ರೇನ್‌ನ ಸುಮಿ ಪ್ರದೇಶದಲ್ಲಿನ ಭಾರತೀಯರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಭರದಿಂದ ಸಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

Pisochyn ಮತ್ತು Kharkivನಿಂದ ಮುಂದಿನ ಕೆಲವು ಗಂಟೆಗಳಲ್ಲಿ ನಾವು ಭಾರತೀಯರೆಲ್ಲರನ್ನೂ ವಾಪಾಸ್ ಕರೆಸಿಕೊಳ್ಳಲಿದ್ದೇವೆ. ಇದೀಗ ಖಾರ್ಕಿವ್‌ನಲ್ಲಿ ಯಾವ ಭಾರತೀಯರೂ ಸಿಲುಕಿಕೊಂಡಿಲ್ಲ. ಇನ್ನು ನಮ್ಮ ಸಂಪೂರ್ಣ ಗಮನ ಸುಮಿ ಮೇಲೆ ಇರಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ಉಕ್ರೇನ್‌ನಲ್ಲಿ ಇನ್ನೂ ಎಷ್ಟು ಮಂದಿ ಇದ್ದಾರೆ ಎಂಬುದನ್ನು ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಹತ್ತಿರದ ಪಿಸೊಚಿನ್‌ನಲ್ಲಿ ಇಂದು ಸ್ಥಳಾಂತರಿಸುವಿಕೆಯನ್ನು ಪೂರ್ಣಗೊಳಿಸಲು ಸರ್ಕಾರ ಆಶಿಸುತ್ತಿದೆ ಎಂದು ಅದು ಹೇಳಿದೆ. ಕಳೆದ 24 ಗಂಟೆಗಳಲ್ಲಿ ಸುಮಾರು 2,900 ವಿಮಾನಗಳು ಈಗಾಗಲೇ ಲ್ಯಾಂಡ್ ಆಗಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. “ಇದುವರೆಗೆ ಸುಮಾರು 13,300 ಜನರು ಭಾರತಕ್ಕೆ ಮರಳಿದ್ದಾರೆ ಮತ್ತು ಮುಂದಿನ 24 ಗಂಟೆಗಳ ಕಾಲ 13 ವಿಮಾನಗಳನ್ನು ನಿಗದಿಪಡಿಸಲಾಗಿದೆ” ಎಂದು ಸಚಿವಾಲಯ ತಿಳಿಸಿದೆ.

ಖಾರ್ಕಿವ್ ಪ್ರದೇಶದ ಪಿಸೊಚಿನ್‌ನಿಂದ 298 ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಉಕ್ರೇನ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ತಿಳಿಸಿದೆ. ಸಚಿವಾಲಯದ ಪ್ರಕಾರ, ಪೂರ್ವ ಉಕ್ರೇನ್, ವಿಶೇಷವಾಗಿ ಖಾರ್ಕಿವ್ ಮತ್ತು ಪಿಸೊಚಿನ್ ಮೇಲೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಉಕ್ರೇನ್‌ನ ಗಡಿಯಿಂದ 20,000ಕ್ಕೂ ಹೆಚ್ಚು ಭಾರತೀಯರು ನಿರ್ಗಮಿಸಿದ್ದಾರೆ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: Russia-Ukraine War: ರಷ್ಯಾ ವಶಕ್ಕೆ ಸಿಲುಕಿ ನರಕವಾಗಿದ್ದ ಉಕ್ರೇನ್​ನ ಬಂದರು ನಗರಿ ಮರಿಪೊಲ್ ಜನರೀಗ ಕೊಂಚ ನಿರಾಳ

Russia- Ukraine War: ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಸಿದ್ಧ ಎಂದ ರಷ್ಯಾ