Banking Frauds: ಬ್ಯಾಂಕಿಂಗ್ ಅಕ್ರಮ; ನಿಮ್ಮ ಖಾತೆಗೆ ಹೀಗೂ ಬೀಳಬಹುದು ಕನ್ನ, ಇರಲಿ ಎಚ್ಚರ

| Updated By: ಗಣಪತಿ ಶರ್ಮ

Updated on: Oct 24, 2022 | 1:38 PM

ಲಿಂಕ್​ಗಳನ್ನು ಕಳುಹಿಸುವ ಮೂಲಕ ವಂಚಕರು ಹೇಗೆ ಬ್ಯಾಂಕ್ ಗ್ರಾಹಕರನ್ನು ಮೋಸಗೊಳಿಸಬಹುದು, ಅದನ್ನು ತಡೆಯಲು ಏನು ಮಾಡಬೇಕು ಎಂಬ ವಿವರ ಇಲ್ಲಿದೆ.

Banking Frauds: ಬ್ಯಾಂಕಿಂಗ್ ಅಕ್ರಮ; ನಿಮ್ಮ ಖಾತೆಗೆ ಹೀಗೂ ಬೀಳಬಹುದು ಕನ್ನ, ಇರಲಿ ಎಚ್ಚರ
ಸಾಂದರ್ಭಿಕ ಚಿತ್ರ
Image Credit source: PTI
Follow us on

ಬ್ಯಾಂಕಿಂಗ್​ ಮತ್ತು ಹಣಕಾಸು ಅಕ್ರಮಗಳಿಗೆ (Banking Frauds) ಸಂಬಂಧಿಸಿ ಜಾಗೃತಿ ಮೂಡಿಸುವ ಸಲುವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಂಡಿದೆ. ಚಿತ್ರಕಥೆ ಮೂಲಕ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಪುಸ್ತಕವೊಂದನ್ನು ಕೆಲ ಸಮಯ ಹಿಂದೆ ಆರ್​ಬಿಐ ಹೊರತಂದಿತ್ತು. ವಂಚನೆಯ ನಲವತ್ತು ಮುಖಗಳನ್ನು ಅದರಲ್ಲಿ ಪರಿಚಯಿಸಿ ‘ರಾಜು ಮತ್ತು ನಲ್ವತ್ತು ಕಳ್ಳರು (Raju and the forty thieves)’ ಎಂಬ ಶೀರ್ಷಿಕೆಯಡಿ ಜಾಗೃತಿ ಮೂಡಿಸುವ ಯತ್ನ ಅದರಲ್ಲಿ ಮಾಡಲಾಗಿದೆ.

ಲಿಂಕ್​ಗಳನ್ನು ಕಳುಹಿಸುವ ಮೂಲಕ ವಂಚಕರು ಹೇಗೆ ಗ್ರಾಹಕರನ್ನು ಮೋಸಗೊಳಿಸಬಹುದು ಎಂಬುದನ್ನು ಆರ್​ಬಿಐ ಮೊದಲ ಚಿತ್ರಕಥೆಯಲ್ಲಿ ವಿವರಿಸಿದೆ.

ರಾಜು ಮತ್ತು ನಲ್ವತ್ತು ಕಳ್ಳರು ಭಾಗ – 1

ಇದನ್ನೂ ಓದಿ
Dhanteras 2022: ಭಾರತ-ಪಾಕ್ ಪಂದ್ಯದ ವೇಳೆ ಬಿಕೋ ಎಂದ ಆಭರಣ ಮಾರುಕಟ್ಟೆ; ನಂತರ ಚೇತರಿಸಿದ ಮಾರಾಟ
Share Market Predictions: ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ ರಜೆ, ತ್ರೈಮಾಸಿಕ ಫಲಿತಾಂಶ, ಮಾಸಾಂತ್ಯ…
ICICI Bank Q2 Result: ತ್ರೈಮಾಸಿಕ ಫಲಿತಾಂಶ; ಐಸಿಐಸಿಐ ಬ್ಯಾಂಕ್ ನಿವ್ವಳ ಲಾಭದಲ್ಲಿ ಭಾರೀ ಜಿಗಿತ
Dhanteras 2022: ದೀಪಾವಳಿಯ ಎರಡು ದಿನ 40 ಸಾವಿರ ಕೋಟಿ ರೂ. ವಹಿವಾಟು ನಿರೀಕ್ಷೆ; ಸಿಎಐಟಿ

ಒಂದು ದಿನ ರಾಜು ಎಂಬ ವ್ಯಕ್ತಿಯ ಮೊಬೈಲ್​ಗೆ ಸಂದೇಶವೊಂದು ಬರುತ್ತದೆ. ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿಯನ್ನು ಎರಡು ದಿನಗಳ ಒಳಗಾಗಿ ಅಪ್​ಡೇಟ್ ಮಾಡದಿದ್ದರೆ ಅಕೌಂಟ್ ಬ್ಲಾಕ್ ಆಗಲಿದೆ. ಈ ಲಿಂಕ್ ಕ್ಲಿಕ್ ಮಾಡಿ ಕೆವೈಸಿ ಅಪ್​ಡೇಟ್ ಮಾಡಿ ಎಂಬ ಸಂದೇಶವಾಗಿತ್ತದು. ರಾಜು ಆ ಲಿಂಕ್ ಅನ್ನು ಕ್ಲಿಕ್ ಮಾಡುತ್ತಾರೆ. ಆದರೆ, ಕೆವೈಸಿ ಅಪ್​ಡೇಟ್ ಮಾಡಲು ಸಾಧ್ಯವಾಗುವುದಿಲ್ಲ. ತಕ್ಷಣ ಅವರ ಮೊಬೈಲ್​ಗೆ ಒಂದು ಕರೆ ಬರುತ್ತದೆ. ಬಳಿಕ ಸಂಭಾಷಣೆ ಹೀಗೆ ನಡೆಯುತ್ತದೆ;

ರಾಜು: ಬ್ಯಾಂಕ್ ಖಾತೆಯಲ್ಲಿರುವ ಎಲ್ಲ ಹಣ ಬ್ಲಾಕ್ ಆಗುತ್ತದೆಯೇ? ನಾನು ಕೆವೈಸಿ ಅಪ್​ಡೇಟ್ ಮಾಡಬೇಕಿದೆ.

ವಂಚಕ: ನಾನು XYZ ಇಂಥ ಬ್ಯಾಂಕ್​ನಿಂದ ಕರೆ ಮಾಡುತ್ತಿದ್ದೇನೆ. ಕೆವೈಸಿ ಅಪ್​ಡೇಟ್ ಮಾಡುವಲ್ಲಿ ಸಮಸ್ಯೆ ಎದುರಿಸುತ್ತಿದ್ದೀರಾ?

ರಾಜು: ಹೌದು ಲಿಂಕ್ ಕೆಲಸ ಮಾಡುತ್ತಿಲ್ಲ.

ವಂಚಕ: ವೆಬ್​ಸೈಟ್ ಹೆಚ್ಚಿನ ಲೋಡ್ ಎದುರಿಸುತ್ತಿರಬಹುದು. ನಾನು ಮ್ಯಾನುವಲ್ ಆಗಿ ನಿಮ್ಮ ವಿವರ ಅಪ್​ಡೇಟ್ ಮಾಡುತ್ತೇನೆ. ನಿಮ್ಮ ಯೂಸರ್​ನೇಮ್, ಪಾಸ್​​ವರ್ಡ್ ಹಾಗೂ ಒಟಿಪಿ (ವನ್ ಟೈಮ್ ಪಾಸ್ವರ್ಡ್) ಕಳುಹಿಸಿ.

ರಾಜು: ಎಲ್ಲ ವಿವರ ನಿಮಗೆ ಮೆಸೇಜ್ ಮಾಡಿದ್ದೇನೆ.

ವಂಚಕ: ನಿಮ್ಮ ಕೆವೈಸಿ ವಿವರ ಯಶಸ್ವಿಯಾಗಿ ಅಪ್​ಡೇಟ್ ಮಾಡಲಾಗಿದೆ.

ರಾಜು: ಥ್ಯಾಂಕ್​ ಯೂ

ಇದಾದ ಕೆಲವೇ ಕ್ಷಣಗಳಲ್ಲಿ ರಾಜು ಮೊಬೈಲ್​ಗೆ 50,000 ರೂ. ಖಾತೆಯಿಂದ ಡ್ರಾ ಆಗಿರುವ ಬಗ್ಗೆ ಸಂದೇಶ ಬರುತ್ತದೆ. ರಾಜು ತಕ್ಷಣ ಅಪರಿಚಿತ ಸಂಖ್ಯೆಗೆ (ಈ ಹಿಂದೆ ಕೆವೈಸಿ ವಿವರಕ್ಕಾಗಿ ಯೂಸರ್​ನೇಮ್, ಪಾಸ್ವರ್ಡ್ ಕಳುಹಿಸಿದ ಸಂಖ್ಯೆ) ಕರೆ ಮಾಡುತ್ತಾರೆ. ಆದರೆ ಆ ವ್ಯಕ್ತಿ ಕರೆ ಸ್ವೀಕಾರ ಮಾಡುವುದೇ ಇಲ್ಲ. ಆಗ ರಾಜುಗೆ ತಪ್ಪಿನ ಅರಿವಾಗುತ್ತದೆ.

ಇರಲಿ ಎಚ್ಚರ

ಹೀಗೆ ಅಪರಿಚಿತ ಸಂಖ್ಯೆಗಳಿಂದ ಬರುವ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಅಥವಾ ಆ ಲಿಂಕ್​ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಿ. ಕೆವೈಸಿ ಅಪ್​ಡೇಟ್ ಮಾಡಬೇಕಿದ್ದರೆ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಧಿಕೃತ ಸಿಬ್ಬಂದಿ ಜತೆ ಮಾತ್ರವೇ ವ್ಯವಹರಿಸಿ. ಯೂಸರ್​ ನೇಮ್, ಪಾಸ್ವರ್ಡ್, ಒಟಿಪಿಗಳನ್ನು ಯಾವುದೇ ಕಾರಣಕ್ಕೂ ಇತರರ ಜತೆ ಹಂಚಿಕೊಳ್ಳಬೇಡಿ. ವಂಚನೆಗೆ ಒಳಗಾದಲ್ಲಿ ತಕ್ಷಣವೇ ಹತ್ತಿರದ ಸೈಬರ್ ಕ್ರೈಂ ಠಾಣೆಗೆ ಭೇಟಿ ನೀಡಿ ದೂರು ನೀಡಿ ಎಂದು ಗ್ರಾಹಕರಿಗೆ ಆರ್​ಬಿಐ ಎಚ್ಚರಿಕೆ ನೀಡಿದೆ.

(ಮಾಹಿತಿ ಮತ್ತು ಕೃಪೆ – ಆರ್​ಬಿಐ)

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:36 pm, Mon, 24 October 22