
ಬೆಂಗಳೂರು, ಆಗಸ್ಟ್ 23: ಸಂಚಾರ ದಟ್ಟಣೆ ನಿಯಂತ್ರಿಸಲು ಉದ್ದೇಶಿಸಲಾಗಿರುವ 16.75 ಕಿ.ಮೀ. ಉದ್ದದ ಉತ್ತರ-ದಕ್ಷಿಣ (ಹೆಬ್ಬಾಳದಿಂದ ಸಿಲ್ಕ್ ಬೋರ್ಡ್) ಸುರಂಗ ರಸ್ತೆ ಯೋಜನೆಗೆ ಅದಾನಿ ಎಂಟರ್ಪ್ರೈಸಸ್ (Adani Enterprises) ಅತ್ಯಂತ ಕಡಿಮೆ ಮೊತ್ತದ ಟೆಂಡರ್ (L1 Bidder) ಸಲ್ಲಿಸಿದ ಸಂಸ್ಥೆಯಾಗಿ ಹೊರಹೊಮ್ಮಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಆದರೆ, ಗುತ್ತಿಗೆಯನ್ನು ಇನ್ನೂ ಹಂಚಲಾಗಿಲ್ಲ. ಇದೇ ವೇಳೆ, ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಅವರು ಸಿಎಂ ಡಿಕೆಶಿ (DK Shivakumar) ಅವರನ್ನು ಭೇಟಿ ಮಾಡಿದ್ದಾರೆ.
ಈ ಟನಲ್ ಪ್ರಾಜೆಕ್ಟ್ ಕಾರ್ಯಗತಗೊಳಿಸಲೆಂದು ರಚಿಸಲಾಗಿರುವ ‘ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್’ (B-SMILE) ಹಾಗೂ ರಾಜ್ಯ ಸರ್ಕಾರ ಈ ಯೋಜನೆಗೆ ಅಂದಾಜಿಸಿದ್ದ ಯೋಜನಾ ವೆಚ್ಚ ₹17,698 ಕೋಟಿ. ಅದಾನಿ ಗ್ರೂಪ್ ಸಲ್ಲಿಸಿರುವ ಬಿಡ್ ಮೊತ್ತ ₹22,267 ಕೋಟಿ. ಇದು ಸರ್ಕಾರದ ಅಂದಾಜಿಗಿಂತ ಸುಮಾರು ₹4,569 ಕೋಟಿ (ಶೇ. 24 ರಿಂದ 28 ರಷ್ಟು) ಹೆಚ್ಚಾಗಿದೆ.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವಾರ್ಷಿಕ 3,075 ರೂ ಪಾಸ್; ಇದರ ಬಳಕೆ ಹೇಗೆ, ಬಳಕೆಯಾಗದ ಟೋಲ್ಗಳು ಯಾವುವು?
ಈ ಸುರಂಗ ರಸ್ತೆ ಯೋಜನೆಯನ್ನು BOT (Build-Operate-Transfer) ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಶೇ. 40 ರಷ್ಟು ಮೊತ್ತವನ್ನು ಸರ್ಕಾರ (Viability Gap Funding) ಹಾಗೂ ಉಳಿದ ಶೇ. 60 ರಷ್ಟು ಮೊತ್ತವನ್ನು ಖಾಸಗಿ ಸಂಸ್ಥೆ ಭರಿಸಲಿದೆ. ತಾಂತ್ರಿಕ ಮೌಲ್ಯಮಾಪನ ಹಂತದಲ್ಲಿ ಅದಾನಿ ಗ್ರೂಪ್ ಹಾಗೂ ಹೈದರಾಬಾದ್ ಮೂಲದ ವಿಶ್ವ ಸಮುದ್ರ ಇಂಜಿನಿಯರಿಂಗ್ ಲಿಮಿಟೆಡ್ ಮಾತ್ರ ಅರ್ಹತೆ ಪಡೆದಿದ್ದವು. ಅಂತಿಮವಾಗಿ ಅದಾನಿ ಸಂಸ್ಥೆ L1 ಆಗಿ ಹೊರಹೊಮ್ಮಿದೆ.
ಟೆಂಡರ್ ಮೊತ್ತವು ಸರ್ಕಾರದ ಅಂದಾಜಿಗಿಂತ ಗಮನಾರ್ಹವಾಗಿ ಹೆಚ್ಚಿರುವುದರಿಂದ, ಈ ಬಿಡ್ ಅನ್ನು ಅಂಗೀಕರಿಸಬೇಕೇ, ಮಾತುಕತೆ ನಡೆಸಿ ಮೊತ್ತ ಕಡಿಮೆ ಮಾಡಬೇಕೇ ಅಥವಾ ಮರು-ಟೆಂಡರ್ ಕರೆಯಬೇಕೇ ಎಂಬುದರ ಕುರಿತು ರಾಜ್ಯ ಸಚಿವ ಸಂಪುಟದ (Cabinet) ಅಂತಿಮ ನಿರ್ಧಾರ ಬಾಕಿ ಇದೆ.
ಅದಾನಿ ಎಂಟರ್ಪ್ರೈಸಸ್ ಛೇರ್ಮನ್ ಗೌತಮ್ ಅದಾನಿ ಅವರು ಇಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಹೋಗಿದ್ದಾರೆ. ಕನಕಪುರದಲ್ಲಿರುವ ಶ್ರೀ ರವಿಶಂಕರ್ ಗುರೂಜಿ ಅವರ ಆಶ್ರಮಕ್ಕೆ ಆಗಮಿಸಿದ್ದ ಅದಾನಿ, ವಾಪಸ್ ಹೋಗುವಾಗ ಸಿಎಂ ನಿವಾಸಕ್ಕೆ ತೆರಳಿ ಡಿಕೆಶಿ ಅವರನ್ನು ಭೇಟಿ ಮಾಡಿದರೆನ್ನಲಾಗಿದೆ. ಆದರೆ, ಏನು ಮಾತುಕತೆ ನಡೆಯಿತು ಎಂಬುದು ಗೊತ್ತಾಗಿಲ್ಲ. ಸಿಎಂ ಮತ್ತು ಅದಾನಿ ವತಿಯಿಂದ ಅಧಿಕೃತ ಹೇಳಿಕೆಗಳು ಬಂದಿಲ್ಲ.

ಇದನ್ನೂ ಓದಿ: ಹಬ್ಬದ ಸೀಸನ್ನಲ್ಲಿ ಸಕ್ಕರೆ ಲಭ್ಯತೆ ಖಚಿತಪಡಿಸಲು ಮತ್ತು ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರ ಕೈಗೊಂಡ ವಿವಿಧ ಕ್ರಮಗಳೇನು?
ಇದೇ ವೇಳೆ, ಅಂತಿಮ ಗುತ್ತಿಗೆ ಅನುಮೋದನೆಗೆ ಮುನ್ನವೇ ಅದಾನಿ ಎಂಟರ್ಪ್ರೈಸಸ್ ನಿಯಮಾವಳಿಗಳ ಪ್ರಕಾರ ಮಾರ್ಗದುದ್ದಕ್ಕೂ ಮಣ್ಣಿನ ಪರೀಕ್ಷೆ (Geotechnical Investigation / Soil Testing) ಮತ್ತು ಪ್ರಾಥಮಿಕ ಸರ್ವೇ ಕಾರ್ಯಗಳನ್ನು ಆರಂಭಿಸಿದೆ.
ಅದಾನಿ ಗ್ರೂಪ್ ದೇಶದ ಹಲವೆಡೆ ವಿವಿಧ ಏರ್ಪೋರ್ಟ್, ಸೀಪೋರ್ಟ್ಗಳನ್ನು ನಿರ್ವಹಿಸುತ್ತಿದೆ. ಮಂಗಳೂರು ಏರ್ಪೋರ್ಟ್ ಕೂಡ ಅದಾನಿ ನಿರ್ವಹಣೆಯಲ್ಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:40 pm, Sun, 23 August 26