ವನ್ಯಜೀವಿ ಕಳ್ಳಸಾಗಾಣಿಕೆ ಭಾರೀ ದೊಡ್ಡ ಬಿಸಿನೆಸ್; ವರ್ಷದಲ್ಲಿ ಎಷ್ಟು ಅಕ್ರಮ ಟ್ರೇಡಿಂಗ್ ನಡೆಯುತ್ತೆ ಗೊತ್ತಾ?

Know About Business Of Illegal Wildlife trading: ಇಂಟರ್ಪೋಲ್ ಪ್ರಕಾರ ಒಂದು ವರ್ಷದಲ್ಲಿ ನಡೆಯುವ ಅಕ್ರಮ ವನ್ಯಜೀವಿ ಮಾರಾಟದ ಒಟ್ಟು ಬಿಸಿನೆಸ್ ಸುಮಾರು 20 ಬಿಲಿಯನ್ ಡಾಲರ್. ಅಂದರೆ, ಒಂದೂವರೆ ಲಕ್ಷ ಕೋಟಿ ರೂಗೂ ಹೆಚ್ಚು ಮೊತ್ತದ ಅಕ್ರಮ ವೈಲ್ಡ್​ಲೈಫ್ ಟ್ರೇಡಿಂಗ್ ನಡೆಯುತ್ತದೆ. ನಾರ್ಕೋಟಿಕ್ಸ್ ಬಿಟ್ಟರೆ ಇದು ಅತಿದೊಡ್ಡ ಅಕ್ರಮ ಟ್ರೇಡಿಂಗ್ ಎನಿಸಿದೆ. ಆನೆ, ಘೇಂಡಾ ಮೃಗದಂತಹ ದೈತ್ಯ ಪ್ರಾಣಿಗಳ ಬೇಟೆಯನ್ನು ನಿಯಂತ್ರಿಸಲು ಸರ್ಕಾರ ಬಹುತೇಕ ಯಶಸ್ವಿಯಾಗಿದೆ. ಆದರೆ, ಚಿರತೆ, ಕಾಡುಹಂದಿ, ಜಿಂಕೆ, ನವಿಲು ಮೊದಲಾದ ಪ್ರಾಣಿ, ಪಕ್ಷಿಗಳನ್ನು ರಕ್ಷಿಸಲು ಪೂರ್ಣವಾಗಿ ಸಾಧ್ಯವಾಗುತ್ತಿಲ್ಲ.

ವನ್ಯಜೀವಿ ಕಳ್ಳಸಾಗಾಣಿಕೆ ಭಾರೀ ದೊಡ್ಡ ಬಿಸಿನೆಸ್; ವರ್ಷದಲ್ಲಿ ಎಷ್ಟು ಅಕ್ರಮ ಟ್ರೇಡಿಂಗ್ ನಡೆಯುತ್ತೆ ಗೊತ್ತಾ?
ವನ್ಯಜೀವಿಗಳ ಟ್ರೇಡಿಂಗ್
Follow us
|

Updated on: Oct 26, 2023 | 2:59 PM

ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ದೆಸೆಯಿಂದ ಈಗ ಮತ್ತೊಮ್ಮೆ ವನ್ಯಜೀವಿಗಳ (wildlife) ಬಗ್ಗೆ ಚರ್ಚೆ ಶುರುವಾಗಿದೆ. ವನ್ಯಜೀವಿಗಳ ಬೇಟೆಯಾಡುವುದನ್ನು ಅದರ ಯಾವುದೇ ಅಂಗದ ಭಾಗವನ್ನು ಇಟ್ಟುಕೊಳ್ಳುವುದು ನಿಷೇಧಿಸಲಾಗಿದೆ. ನಿಷೇಧ ಎಂದಿದ್ದ ಮೇಲೆ ಅಕ್ರಮವಾಗಿ ಆ ಚಟುವಟಿಕೆಗಳು ನಡೆಯುತ್ತಿರುತ್ತವೆ. ಬೇರೆ ಬೇರೆ ಕಾರಣಗಳಿಗೆ ವನ್ಯಜೀವಿಗಳ ದೇಹದ ಭಾಗಗಳು (wild animals body parts) ವಿಶ್ವಾದ್ಯಂತ ಬೇಡಿಕೆ ಹೊಂದಿವೆ. ಹೀಗಾಗಿ, ಅಕ್ರಮ ಕಳ್ಳಸಾಗಾಣಿಕೆದಾರರಿಗೆ ಇದೊಂದು ದೊಡ್ಡ ಬಿಸಿನೆಸ್ ಆಗಿದೆ. ಅಂತಾರಾಷ್ಟ್ರೀಯ ಪೊಲೀಸ್ ನೆಟ್ವರ್ಕ್ ಆಗಿರುವ ಇಂಟರ್ಪೋಲ್ ಪ್ರಕಾರ ಒಂದು ವರ್ಷದಲ್ಲಿ ನಡೆಯುವ ಅಕ್ರಮ ವನ್ಯಜೀವಿ ಮಾರಾಟದ ಒಟ್ಟು ಬಿಸಿನೆಸ್ ಸುಮಾರು 20 ಬಿಲಿಯನ್ ಡಾಲರ್. ಅಂದರೆ, ಒಂದೂವರೆ ಲಕ್ಷ ಕೋಟಿ ರೂಗೂ ಹೆಚ್ಚು ಮೊತ್ತದ ಅಕ್ರಮ ವೈಲ್ಡ್​ಲೈಫ್ ಟ್ರೇಡಿಂಗ್ ನಡೆಯುತ್ತದೆ. ನಾರ್ಕೋಟಿಕ್ಸ್ ಬಿಟ್ಟರೆ ಇದು ಅತಿದೊಡ್ಡ ಅಕ್ರಮ ಟ್ರೇಡಿಂಗ್ ಎನಿಸಿದೆ.

ಕರ್ನಾಟಕದಲ್ಲೇ ಅದೆಷ್ಟು ವನ್ಯಜೀವಿಗಳ ಬೇಟೆಯಾಗುತ್ತಿದೆಯೋ ಲೆಕ್ಕವೇ ಇಲ್ಲ. ಕಾಡು ಹಂದಿ, ಜಿಂಕೆ ಇತ್ಯಾದಿ ಕಾಡುಪ್ರಾಣಿಗಳನ್ನು ಮಾಂಸಕ್ಕಾಗಿ ಬೇಟೆಯಾಡುವುದು ಸಾಮಾನ್ಯವಾಗಿ ಹೋಗಿದೆ. ದಂತಕ್ಕಾಗಿ ಸಾಲು ಸಾಲಾಗಿ ಅನೆಗಳನ್ನು ಬೇಟೆಯಾಡುತ್ತಿದ್ದ ವೀರಪ್ಪನ್​ನನ್ನು ಮೀರಿಸುವ ಮರಿ ವೀರಪ್ಪನ್​ಗಳು ಹೆಚ್ಚಾಗಿದ್ದಾರೆ. ಅಷ್ಟೊಂದು ಬಿಗಿ ಕ್ರಮದ ಮಧ್ಯೆಯೂ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ.

ಭಾರತದಲ್ಲಿ 1,800ಕ್ಕೂ ಹೆಚ್ಚು ಪ್ರಭೇದದ ವನ್ಯಜೀವಿಗಳು ಮತ್ತು ಅವುಗಳ ದೇಹದ ಭಾಗಗಳ ಮಾರಾಟವನ್ನು ನಿಷೇಧಿಸಲಾಗಿದೆ. ಆನೆಗಳ ದಂತ, ಘೇಂಡಾ ಮೃಗದ ಕೋಡು, ಹಾವಿನ ಚರ್ಮ, ಹುಲಿ ಉಗುರು, ಚಿರತೆ ಉಗುರು, ಮೂಳೆ, ಚರ್ಮ, ಮುಂಗೂಸಿಯ ಕೂದಲು ಇತ್ಯಾದಿಗಳಿಗಾಗಿ ಆ ಪ್ರಾಣಿಗಳನ್ನು ಬೇಟೆಯಾಡಲಾಗುತ್ತಿದೆ. ಇದರಿಂದ ಅವುಗಳ ಸಂತತಿ ಗಣನೀಯವಾಗಿ ಕಡಿಮೆ ಆಗುತ್ತಾ ಬಂದಿದೆ.

ಇದನ್ನೂ ಓದಿ: ಹಲವರನ್ನು ಪರಚಿದ ಹುಲಿ ಉಗುರು: ವನ್ಯಜೀವಿ ಸಂಪತ್ತು, ಅಂಗಾಂಗ ಹೊಂದಿದವರಿಗೆ ಡಬಲ್ ಶಾಕ್, ನುಂಗಂಗಿಲ್ಲ..ಉಗುಳಂಗಿಲ್ಲ..

ಪ್ಯಾಂಗೋಲಿನ್​ನಂತೂ ಬಹಳ ಪಾಪದ ಪ್ರಾಣಿ. ಇದರ ಮಾಂಸಕ್ಕೆ ಚೀನಾ, ವಿಯೆಟ್ನಾಂನಂತಹ ದೇಶಗಳಲ್ಲಿ ಬೇಡಿಕೆ ಇದೆ. ಅನೇಕ ವನ್ಯಜೀವಿಗಳ ಮಾಂಸವನ್ನು ಚೀನೀಯರು ಸೇವಿಸುತ್ತಾರೆ. ಚೀನಾದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಲ್ಲಿ ವನ್ಯಜೀವಿಗಳ ದೇಹದ ಭಾಗವನ್ನು ಬಳಸಲಾಗುತ್ತದೆ.

ಭಾರತದಲ್ಲಿ ಪ್ಯಾಂಗೋಲಿನ್​ಗಳು ಸುಲಭವಾಗಿ ಸಿಕ್ಕಿಬೀಳುತ್ತವೆ. ಇವು ಬಹಳ ನಿರುಪದ್ರವಿ ಪ್ರಾಣಿಗಳು. ಯಾರನ್ನೂ ಕಚ್ಚುವುದಿಲ್ಲ. ಪಾಪದ ಪ್ರಾಣಿಯಾದರೂ ಕಳ್ಳಸಾಗಾಣಿಕೆದಾರರಿಗೆ ಪಾಪ ಎನಿಸುವುದಿಲ್ಲ. ಭಾರತದಲ್ಲಿ 2018ರಿಂದ 2022ರವರೆಗೆ ಐದು ವರ್ಷದಲ್ಲಿ 1,200ಕ್ಕೂ ಹೆಚ್ಚು ಪ್ಯಾಂಗೋಲಿನ್​ಗಳ ಅಕ್ರಮ ಮಾರಾಟ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಪೈಕಿ ಕರ್ನಾಟಕದಲ್ಲೇ 129 ಪ್ಯಾಂಗೋಲಿನ್​ಗಳ ಟ್ರೇಡಿಂಗ್ ನಡೆಸಲು ಯತ್ನಿಸಲಾಗಿದೆ.

ಆನೆ, ಘೇಂಡಾ ಮೃಗದಂತಹ ದೈತ್ಯ ಪ್ರಾಣಿಗಳ ಬೇಟೆಯನ್ನು ನಿಯಂತ್ರಿಸಲು ಸರ್ಕಾರ ಬಹುತೇಕ ಯಶಸ್ವಿಯಾಗಿದೆ. ಆದರೆ, ಚಿರತೆ, ಕಾಡುಹಂದಿ, ಜಿಂಕೆ, ನವಿಲು ಮೊದಲಾದ ಪ್ರಾಣಿ, ಪಕ್ಷಿಗಳನ್ನು ರಕ್ಷಿಸಲು ಪೂರ್ಣವಾಗಿ ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಳಿಯನ ಕೊರಳಲ್ಲಿಯೂ ಹುಲಿ ಉಗುರಿನ ಲಾಕೆಟ್ ಪತ್ತೆ

ಭಯಾನಕ ರೋಗಗಳಿಗೆ ಕಾರಣ

ವಿಶ್ವವನ್ನು ಬೆಚ್ಚಿಬೀಳಿಸಿದ ಅನೇಕ ರೋಗಗಳಿಗೆ ವನ್ಯಜೀವಿಗಳೇ ಮೂಲವೆಂಬುದು ಸಾಬೀತಾಗಿದೆ. ಕೋವಿಡ್, ಸಾರ್ಸ್, ಮಂಗನ ಕಾಯಿಲೆ, ಮಂಕಿಪಾಕ್ಸ್, ಇಬೋಲಾ, ಹಕ್ಕಿರೋಗ, ಹಂದಿಜ್ವರ ಇತ್ಯಾದಿಗಳಿಗೆ ವನ್ಯಜೀವಿಗಳ ದೇಹದೊಳಗಿರುವ ವೈರಸ್, ಬ್ಯಾಕ್ಟೀರಿಯಾ ಇತ್ಯಾದಿ ಸೂಕ್ಷ್ಮಜೀವಿಗಳು ಮೂಲವೆನ್ನಲಾಗಿದೆ. ಈ ವನ್ಯಜೀವಿಗಳ ಸಂಪರ್ಕದಿಂದ ವೈರಸ್, ಬ್ಯಾಕ್ಟೀರಿಯಾಗಳು ಮನುಷ್ಯನ ದೇಹ ಸೇರಿ ಆ ಮೂಲಕ ಹೊಸ ರೋಗಗಳು ಉದ್ಭವವಾಗುತ್ತಾ ಬಂದಿವೆ.

ಈ ಎಲ್ಲಾ ಕಾರಣಗಳಿಂದ ವನ್ಯಜೀವಿಗಳಿಂದ ಮನುಷ್ಯ ದೂರವಾಗಿದ್ದುಬಿಡುವುದು ಎಲ್ಲರಿಗೂ ಕ್ಷೇಮ ಎಂಬುದು ತಜ್ಞರ ಮನವಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ