AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂದ್ರ ಕಿಂಗ್ ತಾಲೂಕ: ಉಪ್ಪಿ, ರಾಮ್ ನಟಿಸಿರುವ ಸಿನಿಮಾ ಹೇಗಿದೆ?

ಆಂದ್ರ ಕಿಂಗ್ ತಾಲೂಕ: ಉಪ್ಪಿ, ರಾಮ್ ನಟಿಸಿರುವ ಸಿನಿಮಾ ಹೇಗಿದೆ?
Andhra King Taluka
ಆಂಧ್ರ ಕಿಂಗ್ ತಾಲೂಕ
UA
  • Time - 163 Minutes
  • Released - November 27, 2025
  • Language - Telugu
  • Genre - Action, Drama
Cast - ರಾಮ್ ಪೋತಿನೇನಿ, ಉಪೇಂದ್ರ, ಭಾಗ್ಯಶ್ರೀ ಬೋರ್ಸೆ, ಮುರಳಿ ಶರ್ಮಾ. ರಾವ್ ರಮೇಶ್.
Director - ಮಹೇಶ್ ಬಾಬು ಪಿ
3.5
Critic's Rating
ಮಂಜುನಾಥ ಸಿ.
|

Updated on:Nov 27, 2025 | 4:13 PM

Share

ರಾಮ್ ಪೋತಿನೇನಿ, ಉಪೇಂದ್ರ, ಭಾಗ್ಯಶ್ರೀ ಬೋರ್ಸೆ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ತೆಲುಗು ಸಿನಿಮಾ ‘ಆಂಧ್ರ ಕಿಂಗ್ ತಾಲೂಕ’ ಇಂದು (ನವೆಂಬರ್ 27) ಬಿಡುಗಡೆ ಆಗಿದೆ. ಕನ್ನಡದ ಸ್ಟಾರ್ ಹೀರೋ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಾರಣಕ್ಕೆ ಕರ್ನಾಟಕದ ಸಿನಿಮಾ ಪ್ರೇಮಿಗಳಲ್ಲಿಯೂ ಈ ಸಿನಿಮಾ ನಿರೀಕ್ಷೆ ಮೂಡಿಸಿತ್ತು. ಅದ್ಧೂರಿ ಫೈಟುಗಳು, ಕಿವಿಗಡಚಿಕ್ಕುವ ಹಿನ್ನೆಲೆ ಸಂಗೀತ, ಐಶಾರಾಮಿ ಸೆಟ್ಟುಗಳು, ಐಟಂ ಹಾಡುಗಳೇ ತುಂಬಿರುವ ಈಗಿನ ಸ್ಟಾರ್ ಹೀರೋ, ಪ್ಯಾನ್ ಇಂಡಿಯಾ, ಮಾಸ್ ಮಸಾಲ ಸಿನಿಮಾಗಳ ಕಾಲದಲ್ಲಿ ಕತೆ ಆಧರಿಸಿದ ಕಮರ್ಶಿಯಲ್ ಸಿನಿಮಾ ಆಗಿ ‘ಆಂಧ್ರ ಕಿಂಗ್ ತಾಲೂಕ’ ಗಮನ ಸೆಳೆಯುತ್ತದೆ. ಹಾಗೆ ನೋಡಿದರೆ ರಾಮ್ ಪೋತಿನೇನಿಯ ಈ ಹಿಂದಿನ ಕೆಲ ಸಿನಿಮಾಗಳು ‘ಮಾಸ್ ಮಸಾಲ’ ಸೂತ್ರದಲ್ಲಿಯೇ ಇದ್ದವು, ಆದರೆ ಅವು ಫ್ಲಾಪ್ ಆಗಿದ್ದವು. ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ಮೂಲಕ ಸ್ವತಃ ರಾಮ್ ‘ಹೀರೋಗಿರಿ’ ಪ್ರಭಾವಳಿಯಿಂದ ಹೊರಬಂದು ಒಂದು ಅಪ್ಪಟ ಸಿನಿಮಾನಲ್ಲಿ ನಟಿಸಿದ್ದಾರೆ.

‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ಒಬ್ಬ ಅಭಿಮಾನಿ ಹಾಗೂ ಒಬ್ಬ ಸ್ಟಾರ್ ಹೀರೋ ನಡುವೆ ನಡೆಯುವ ಕತೆ. ಈ ಹಿಂದೆ ಶಾರುಖ್ ಖಾನ್ ಅವರು ಇಂಥಹಾ ಒಂದು ಪ್ರಯತ್ನವನ್ನು ‘ಫ್ಯಾನ್’ ಸಿನಿಮಾ ಮೂಲಕ ಮಾಡಿದ್ದರು. ಅದು ಸಹ ಒಳ್ಳೆಯ ಸಿನಿಮಾ ಆಗಿತ್ತು. ಕತೆಯ ಗುಣಮಟ್ಟ, ಹೇಳುತ್ತಿರುವ ಮೌಲ್ಯಗಳ ಆಧಾರದಲ್ಲಿ ನೋಡುವುದಾದರೆ ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ‘ಫ್ಯಾನ್’ಗಿಂತಲೂ ಎತ್ತರದಲ್ಲಿ ನಿಲ್ಲುತ್ತದೆ.

‘ಆಂಧ್ರ ಕಿಂಗ್ ತಾಲೂಕ’ ಸಿನಿಮಾದ ಕತೆ ನಡೆಯುವ ಕೇಂದ್ರ ಸ್ಥಳ ಗೋದಾವರಿ ನದಿಯ ಮಧ್ಯದ ಒಂದು ನಡು ಗಡ್ಡಯ ಮೇಲಿನ ಊರು. ಆ ಊರಿನ ಹೆಸರು ‘ಗೌಡಪಲ್ಲಿ ಲಂಕ’. ಆ ಊರಿಗೆ ರಸ್ತೆಯಿಲ್ಲ, ಕರೆಂಟಿಲ್ಲ, ಶಾಲೆ ಇಲ್ಲ. ಊರಿನ ಜನ ಬೆಳಗಾದರೆ ಇರುವ ಕೆಲವು ಬೋಟು ಹತ್ತಿ ದಡಕ್ಕೆ ಬರುತ್ತಾರೆ ದಡದಲ್ಲಿ ಕಾಯುತ್ತಿರುವ ಮೇಸ್ತ್ರಿಗಳು ಅವರನ್ನು ಕೂಲಿಗೆ ಕರೆದೊಯ್ಯುತ್ತಾರೆ. ಕರೆಂಟಿಲ್ಲದ ಕಾರಣ, ಮಕ್ಕಳು ಕತ್ತಲಲ್ಲಿ ಕಳೆದು ಹೋಗಬಾರದೆಂದು ಕೊರಳಿಗೆ ಗಂಟೆ ಕಟ್ಟಿರುತ್ತಾರೆ. ದಡದ ಊರಿನವರಿಗೆ ಲಂಕದ ಜನರೆಂದರೆ ಕೂಲಿ ಆಳುಗಳಷ್ಟೆ. ಆ ಊರಿನ ಯುವಕ ಸಾಗರ್ (ರಾಮ್ ಪೋತಿನೇನಿ), ಆಂಧ್ರ ಕಿಂಗ್ ಸೂರ್ಯ (ಉಪೇಂದ್ರ)ಗೆ ದೊಡ್ಡ ಅಭಿಮಾನಿ. ಸಾಗರ್, ಆಂಧ್ರ ಕಿಂಗ್ ಅಭಿಮಾನಿಯಾಗಲು ಪ್ರಬಲ ಕಾರಣವಿದೆ. ಸಾಗರ್​​ನ ಅಭಿಮಾನ, ಆ ಊರಿನ ಭವಿಷ್ಯವನ್ನು ಬದಲಾಯಿಸುತ್ತದೆ.

ಇದನ್ನೂ ಓದಿ:ಅರ್ಧಕ್ಕೆ ನಿಂತು ಹೋಯ್ತು ಪವನ್ ಕಲ್ಯಾಣ್ ನಟನೆಯ ಸಿನಿಮಾ

ಅಭಿಮಾನಿಯ ಕತೆ ಎಂದೊಡನೆ, ಇಲ್ಲಿ ಸ್ಟಾರ್ ವಾರ್ಸ್ ಇರುತ್ತದೆ, ಇತರೆ ಹೀರೋಗಳ ಫ್ಯಾನ್ಸ್​​ಗಳ ಜೊತೆ ಜಗಳ ಮಾಡಿ ಹೀರೋಗಿರಿ ಮೆರೆಯುತ್ತಾನೆ, ಅಭಿಮಾನಿ ಕಷ್ಟದಲ್ಲಿದ್ದಾಗ ಸ್ಟಾರ್ ಹೀರೋ ಬಂದು ಸಹಾಯ ಮಾಡುತ್ತಾನೆ ಎಂದೇನೂ ಇಲ್ಲ. ಎಲ್ಲೋ ಇರುವ, ಈತ ಎಂದೂ ನೋಡದ ಸಿನಿಮಾ ನಾಯಕ, ಅಭಿಮಾನಿಯ ಜೀವನದ ಮೇಲೆ ಹೇಗೆಲ್ಲ ಪ್ರಭಾವ ಬೀರುತ್ತಾನೆ. ಇಂಥಹಾ ಒಬ್ಬ ಅಭಿಮಾನಿ ತನಗಿದ್ದಾನೆ ಎಂದೂ ಸಹ ತಿಳಿಯದ ಒಬ್ಬ ಸ್ಟಾರ್ ಹೀರೋ ಜೀವನನ್ನು ಒಬ್ಬ ಸಾಮಾನ್ಯ ಅಭಿಮಾನಿ ಹೇಗೆ ಬದಲಾಯಿಸುತ್ತಾನೆ ಎಂಬುದನ್ನು ‘ಆಂಧ್ರ ಕಿಂಗ್’ ಸಿನಿಮಾ ಹೇಳುತ್ತದೆ.

ಮೇಲ್ನೋಟಕ್ಕೆ ‘ಆಂಧ್ರ ಕಿಂಗ್’ ಸಿನಿಮಾ ಅಭಿಮಾನಿ ಹಾಗೂ ಸ್ಟಾರ್ ಹೀರೋ ಕುರಿತಾದ ಕತೆಯಾದರೂ, ಒಳ ಪದರದಲ್ಲಿ ಇದು ಸೋತವರ ಕತೆ, ನಿಕೃಷ್ಟಕ್ಕೆ ಒಳಗಾದವರ ಕತೆ, ಗೆಲ್ಲುವ ಛಲದ ಕತೆ. ಅಕ್ಕ ಪಕ್ಕದಲ್ಲಿಯೇ ಸ್ಪೂರ್ತಿಯನ್ನು ಹುಡುಕುವ ಕತೆ. ಸಿನಿಮಾದ ‘ಟೆಕ್ಸ್ಟ್’ ಮತ್ತು ‘ಸಬ್ ಟೆಕ್ಸ್ಟ್’ ಎರಡೂ ಪರಿಣಾಮಕಾರಿಯಾಗಿಯೂ, ಒಂದಕ್ಕೊಂದು ಪೂರಕವಾಗಿಯೂ ಇದೆ. ‘ಆಂಧ್ರ ಕಿಂಗ್’ ಸಿನಿಮಾ ಇತ್ತೀಚೆಗಿನ ಇತರೆ ಕೆಲವು ಕಮರ್ಶಿಯಲ್ ಸಿನಿಮಾಗಳಿಗಿಂತಲೂ ಭಿನ್ನವಾಗಿ ನಿಲ್ಲುವುದು ಇದೇ ಕಾರಣಕ್ಕೆ.

ಸಿನಿಮಾದ ಬರವಣೆಗೆ ಚೆನ್ನಾಗಿದೆ. ಕೆಲವೆಡೆಯಂತೂ ಅದ್ಭುತವಾಗಿದೆ. ಸಾಗರ್ (ರಾಮ್ ಪೋತಿನೇನಿ), ಆಂಧ್ರ ಕಿಂಗ್ (ಉಪೇಂದ್ರ)ಗೆ ಏಕೆ ಫ್ಯಾನ್ ಆದ ಎಂಬ ಫ್ಲ್ಯಾಷ್ ಬ್ಯಾಕ್ ಅದ್ಭುತವಾಗಿದೆ. ಹಾಗೆಯೇ, ಸಾಗರ್​​ನ ತಂದೆ, ಊರಿನವರಿಗೆ ಹೇಳುವ ಕತೆ. ಸಾಗರ್, ತಾನೇಕೆ ಸವಾಲಿನಲ್ಲಿ ಸೋತೆ ಎಂದು ಆಂಧ್ರ ಕಿಂಗ್​​ಗೆ ನೀಡುವ ಕಾರಣ. ಆಂಧ್ರ ಕಿಂಗ್, ನಾಯಕಿಯ ತಂದೆಗೆ ಅಭಿಮಾನಿಗಳ ಬಗ್ಗೆ ಹೇಳುವ ಸಣ್ಣ ಡೈಲಾಗ್ ಹೀಗೆ ಹೆಕ್ಕುತ್ತಾ ಹೋದರೆ ಹಲವು ಇವೆ. ಸಿನಿಮಾದ ಸನ್ನಿವೇಶಗಳು, ಪಾತ್ರಗಳ ನಡುವಿನ ಆರ್ಕ್ ಅಥವಾ ಪರಿಪೂರ್ಣತೆ ಹೆಣೆದು ಪೋಣಿಸಿದಂತಿದೆ. ಇಬ್ಬರು ಸೂಪರ್ ಸ್ಟಾರ್ ಹೀರೋಗಳು ಇರುವ ಸಿನಿಮಾ ಆದರೂ ಸಹ ಸಿನಿಮಾ ನಿಂತಿರುವುದು ಫೈಟು, ಅಬ್ಬರದ ಡೈಲಾಗ್​​ಗಳ ಮೇಲಲ್ಲ ಬದಲಿಗೆ ಭಾವನಾತ್ಮಕ ಸನ್ನಿವೇಶಗಳ ಮೇಲೆ. ಇದೇ ಈ ಸಿನಿಮಾವನ್ನು ನೋಡುಗರಿಗೆ ಆಪ್ತಗೊಳಿಸುತ್ತದೆ. ರಾಮ್ ಬಹಳ ವರ್ಷಗಳ ಬಳಿಕ ಮತ್ತೆ ತಮ್ಮ ಹಳೆಯ ಲಯಕ್ಕೆ ಈ ಸಿನಿಮಾ ಮೂಲಕ ಮರಳಿದ್ದಾರೆ. ಉಪೇಂದ್ರ ಅವರಿಗೂ ಸಹ ಇದೊಂದು ಭಿನ್ನ ಸಿನಿಮಾ, ಭಿನ್ನ ಪಾತ್ರ.

ಇದನ್ನೂ ಓದಿ:ಪತಿಯಿಂದ ಕಿರುಕುಳ; ಕೋರ್ಟ್ ಮೊರೆ ಹೋದ ಉಪೇಂದ್ರ ಸಿನಿಮಾ ನಟಿ 

ಸಾಮಾನ್ಯ ಯುವಕನ ಪಾತ್ರದಲ್ಲಿ ರಾಮ್ ಪೋತಿನೇನಿ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾಕ್ಕಾಗಿ ಅವರ ತಮ್ಮ ‘ಹೀರೋಗಿರಿ’ಯನ್ನು ಪಕ್ಕಕ್ಕೆ ಇರಿಸಿದ್ದಾರೆ. ಉಪೇಂದ್ರ ಸಹ, ಸೂಪರ್ ಸ್ಟಾರ್ ಆಗಿ ಗಮನ ಸೆಳೆಯುತ್ತಾರೆ. ಉಪೇಂದ್ರಗೆ ಹೆಚ್ಚಿನ ದೃಶ್ಯಗಳು ಇಲ್ಲವಾದರೂ ಇಡೀ ಸಿನಿಮಾನಲ್ಲಿ ಅವರ ಪ್ರೆಸೆನ್ಸ್ ಪ್ರೇಕ್ಷಕನಿಗೆ ತಿಳಿಯುತ್ತಲೇ ಇರುತ್ತದೆ. ಉಪ್ಪಿ ತೆರೆ ಮೇಲೆ ಬಂದಾಗ ತಮ್ಮ ನಟನೆಯಿಂದ ಗಮನ ಸೆಳೆಯುತ್ತಾರೆ. ನಾಯಕಿ ಭಾಗ್ಯಶ್ರೀ ಸಹ ತಮ್ಮ ನಟನೆಯಿಂದ, ಸೌಂದರ್ಯದಿಂದ ಗಮನ ಸೆಳೆಯುತ್ತಾರೆ. ನಾಯಕಿಯ ತಂದೆ, ಚಿತ್ರಮಂದಿರದ ಮಾಲೀಕನ ಪಾತ್ರದಲ್ಲಿ ಮುರಳಿ ಶರ್ಮಾ ಅದ್ಭುತವಾದ ನಟನೆ ನೀಡಿದ್ದಾರೆ. ನಾಯಕನ ತಂದೆಯ ಪಾತ್ರದಲ್ಲಿ ರಾವ್ ರಮೇಶ್ ನಟನೆಯೂ ಚೆನ್ನಾಗಿದೆ.

ಸಿನಿಮಾದ ಚಿತ್ರಕತೆ ಮತ್ತು ಸಂಭಾಷಣೆಗೆ ಎಲ್ಲರಿಗಿಂತಲೂ ಹೆಚ್ಚಿನ ಅಂಕ ಸಲ್ಲಲೇ ಬೇಕು. ಈ ಎರಡರ ಜೊತೆಗೆ ನಿರ್ದೇಶನವನ್ನೂ ನಿಭಾಯಿಸಿರುವವರು ಮಹೇಶ್ ಬಾಬು ಪಚ್ಚಿಗೊಲ್ಲ. ಈ ಹಿಂದೆ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಮೂಲಕ ಗಮನ ಸೆಳೆದಿದ್ದ ಮಹೇಶ್ ಬಾಬು ಪಿ, ‘ಆಂಧ್ರ ಕಿಂಗ್’ ಮೂಲಕ ತಾವೊಬ್ಬ ಪ್ರತಿಭಾವಂತ ನಿರ್ದೇಶಕ ಎಂಬುದನ್ನು ಸಾಬೀತುಪಡಿಸಿದ್ದಾರೆ. ಸಿನಿಮಾದ ಸಂಗೀತ ಮತ್ತು ಸಿನಿಮಾಟೊಗ್ರಫಿ ಸಹ ಚೆನ್ನಾಗಿದೆ. ಒಟ್ಟಾರೆ ಇದೊಂದು ಅಬ್ಬರವಿಲ್ಲದೆ, ಸರಳವಾದ, ಹೆಚ್ಚೇನು ನೆಗೆಟಿವ್ ಅಂಶಗಳು ಇಲ್ಲದ, ಫೀಲ್ ಗುಡ್ ರೀತಿಯ ಸಿನಿಮಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:07 pm, Thu, 27 November 25

Follow Us