‘ಮಗುವನ್ನು ಕಳೆದುಕೊಂಡಂತೆ ಅನಿಸುತ್ತಿದೆ’; ಖಿನ್ನತೆ ಸ್ಥಿತಿಗೆ ಹೋದ ಆಮಿರ್ ಖಾನ್
ಬಾಲಿವುಡ್ ನಟ ಆಮಿರ್ ಖಾನ್ 'ಏಕ್ ದಿನ್' ಚಿತ್ರದ ಸೋಲಿನಿಂದ ತೀವ್ರ ಹತಾಶರಾಗಿದ್ದಾರೆ. ಮಗ ಜುನೈದ್ ಖಾನ್ ನಟನೆಯ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ವಿಫಲವಾದಾಗ, ಅದು ಮಗುವನ್ನು ಕಳೆದುಕೊಂಡಷ್ಟು ನೋವು ನೀಡಿದೆ ಎಂದು ಆಮಿರ್ ಹೇಳಿದ್ದಾರೆ. ಸಿನಿಮಾ ಸೋತಾಗ 2-3 ತಿಂಗಳು ದುಃಖದಿಂದ ಹೊರಬರಲು ಸಮಯ ಬೇಕಾಗುತ್ತದೆ. ಆದರೂ, ಅವರು ಮುಂದಿನ ಯಶಸ್ಸಿನ ನಿರೀಕ್ಷೆಯಲ್ಲಿದ್ದು, ಸಿನಿಮಾ ನಿರ್ಮಾಣದ ಮೇಲೆ ಗಮನ ಹರಿಸುತ್ತಿದ್ದಾರೆ.

ಬಾಲಿವುಡ್ ಖ್ಯಾತ ನಟ ಆಮಿರ್ ಖಾನ್ ಸದ್ಯ ತೀವ್ರ ಹತಾಶೆಯಲ್ಲಿದ್ದಾರೆ. ತಮ್ಮ ಸಿನಿಮಾಗಳಿಗಾಗಿ ಅಪಾರ ಶ್ರಮ ಹಾಕುವ ಆಮಿರ್ ಖಾನ್, ಚಿತ್ರಗಳು ಸೋತಾಗ ಆ ದುಃಖದಿಂದ ಹೊರಬರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಇತ್ತೀಚೆಗೆ ತಮ್ಮ ನಿರ್ಮಾಣದ, ಮಗ ಜುನೈದ್ ಖಾನ್ ನಟನೆಯ ‘ಏಕ್ ದಿನ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋತಿರುವುದು ಆಮಿರ್ ಖಾನ್ ಅವರಿಗೆ ತೀವ್ರ ಆಘಾತವನ್ನುಂಟು ಮಾಡಿದೆ.
ಈ ಚಿತ್ರದ ಬಗ್ಗೆ ಆಮಿರ್ ಖಾನ್ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಮಗನ ಸಿನಿಮಾದ ಕಥೆ ಇಷ್ಟವಾಗಿ ತಾವೇ ಸ್ವತಃ ಭಾವನಾತ್ಮಕ ನಿರ್ಧಾರ ಕೈಗೊಂಡು ಚಿತ್ರವನ್ನು ನಿರ್ಮಿಸಿದ್ದರು. ಆದರೆ ಸಿನಿಮಾ ಅಂದುಕೊಂಡಂತೆ ಯಶಸ್ಸು ಕಾಣಲಿಲ್ಲ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಆಮಿರ್, ಸಿನಿಮಾ ಸೋತಾಗ ತಾವು 2-3 ತಿಂಗಳುಗಳ ಕಾಲ ತೀವ್ರ ಬೇಸರ ಅಥವಾ ಖಿನ್ನತೆಯ ಸ್ಥಿತಿಗೆ ಜಾರುವುದಾಗಿ ಹೇಳಿಕೊಂಡಿದ್ದಾರೆ.
‘ನನ್ನ ಸಿನಿಮಾ ಸೋತಾಗ ಹೃದಯ ಒಡೆದಂತಾಗುತ್ತದೆ. ಚಿತ್ರ ಎಂಬುದು ನಮಗೆ ಸ್ವಂತ ಮಗುವಿನಂತೆ. ಅದು ವಿಫಲವಾದಾಗ ಅಥವಾ ಪ್ರೇಕ್ಷಕರಿಂದ ತಿರಸ್ಕೃತಗೊಂಡಾಗ ಅತಿಯಾದ ನೋವಾಗುತ್ತದೆ. ಆ ಸೋಲಿನ ದುಃಖವನ್ನು ಅನುಭವಿಸುವುದು ಕಷ್ಟ. ಅದು ಮಗುವನ್ನು ಕಳೆದುಕೊಂಡಷ್ಟೇ ನೋವು ನೀಡುತ್ತದೆ. ಅದನ್ನು ಸಂಪೂರ್ಣವಾಗಿ ಅತ್ತು ಹೊರಹಾಕಿದಾಗ ಮಾತ್ರ ನಮಗೆ ಮುಂದಿನ ಕೆಲಸದತ್ತ ಗಮನ ಹರಿಸಲು ಸಾಧ್ಯವಾಗುತ್ತದೆ’ ಎಂದು ಆಮಿರ್ ಖಾನ್ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ನೆಪೋಟಿಸಂ ಇರೋದು ನಿಜ, ಅದರಿಂದಲೇ ನನಗೆ ಕೆಲಸ ಸಿಗುತ್ತಿದೆ: ಆಮಿರ್ ಖಾನ್ ಮಗನ ನೇರ ಮಾತು
ಇತ್ತ ಮಗ ಜುನೈದ್ ಖಾನ್ ಕೂಡ ತಂದೆಯ ಸ್ಥಿತಿಯ ಬಗ್ಗೆ ಮಾತನಾಡಿದ್ದು, ‘ಇಷ್ಟೆಲ್ಲಾ ವರ್ಷಗಳ ಅನುಭವದ ನಂತರವೂ ತಂದೆಗೆ ಸಿನಿಮಾದ ಸೋಲುಗಳು ಇಂದಿಗೂ ತುಂಬಾ ಕಾಡುತ್ತವೆ. ‘ಏಕ್ ದಿನ್’ ಚಿತ್ರದ ಕಥೆ ಕೇಳಿ ಭಾವುಕರಾಗಿದ್ದ ಅವರು, ನನಗಾಗಿ ತಾವೇ ನಿರ್ಮಾಣ ಮಾಡುವುದಾಗಿ ಹಠ ಹಿಡಿದಿದ್ದರು. ಆದರೆ ಸಿನಿಮಾ ಸೋತಿದೆ’ ಎಂದಿದ್ದಾರೆ. ಈ ಸೋಲಿನ ನಡುವೆಯೂ ಆಮಿರ್ ಖಾನ್ ಮುಂದಿನ ದಿನಗಳಲ್ಲಿ ಮತ್ತೆ ಯಶಸ್ಸು ಕಾಣುವ ಭರವಸೆಯಲ್ಲಿದ್ದಾರೆ. ಸದ್ಯ ಅವರು ನಟನೆಗಿಂತ ಸಿನಿಮಾ ಬಗ್ಗೆ ಗಮನ ಹರಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





