IND vs SL: 22 ಎಸೆತಗಳ ನಂತರ ಖಾತೆ ತೆರೆದು ಬಾಲ್ ಕಳೆದು ಹಾಕಿದ ಪಂತ್
Rishabh Pant's New Batting Mantra: ರಿಷಭ್ ಪಂತ್ ಅವರ ಹೊಡಿಬಡಿ ಆಟ ಬದಲಾಗಿದೆ. ಶ್ರೀಲಂಕಾ ಅಭ್ಯಾಸ ಪಂದ್ಯದಲ್ಲಿ ಪಂತ್ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದರು, 22 ಎಸೆತಗಳಲ್ಲಿ ಖಾತೆ ತೆರೆದು ಆಶ್ಚರ್ಯ ಮೂಡಿಸಿದರು. ಮುಂಬರುವ ಟೆಸ್ಟ್ ಸರಣಿಗೆ, ವಿಶೇಷವಾಗಿ ಲಂಕಾ ಸ್ಪಿನ್ನರ್ಗಳನ್ನು ಎದುರಿಸಲು ಈ ಹೊಸ ವಿಧಾನ ಅನುಸರಿಸಿದ್ದಾರೆ. ಇದು ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವನ್ನು ಸೂಚಿಸುತ್ತದೆ, ತಂಡದ ಅಗತ್ಯಗಳಿಗೆ ತಕ್ಕಂತೆ ತಮ್ಮ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ.

ರಿಷಭ್ ಪಂತ್ (Rishabh Pant) ಎಂದರೆ ನಮಗೆ ತಟ್ಟನೆ ನೆನಪಾಗುವುದು ಅವರ ಹೊಡಿಬಡಿ ಆಟ. ವೃತ್ತಿಜೀವನದ ಆರಂಭದಲ್ಲಿ ಯಾವುದೇ ಮಾದರಿಯಾಗಿರಲಿ ನಾನು ಆಡುವುದು ಹೀಗೆ ಎಂದು ತೋರಿಸಿಕೊಟ್ಟಿದ್ದ ಪಂತ್ ಕ್ರೀಸ್ನಲ್ಲಿ ಇರುವವರೆಗೆ ತಂಡದ ಸ್ಕೋರ್ ಬೋರ್ಡ್ ಶರವೇಗದಲ್ಲಿ ಓಡುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪಂತ್ ಅವರ ಆ ಹಳೆಯ ಆಟ ಕಣ್ಮರೆಯಾಗಿದೆ. ಐಪಿಎಲ್ನಲ್ಲೂ ಪಂತ್ ಆರ್ಭಟ ಅಷ್ಟಿರಲಿಲ್ಲ. ಇದೀಗ ಟೀಂ ಇಂಡಿಯಾದಲ್ಲೂ ರನ್ ಬರ ಎದುರಿಸುತ್ತಿರುವ ಪಂತ್ ಶ್ರೀಲಂಕಾ ಪ್ರವಾಸದಲ್ಲಿ ಟೆಸ್ಟ್ ಸರಣಿ ಪ್ರಾರಂಭವಾಗುವ ಮೊದಲು ಹಿಂದೆಂದೂ ಕಾಣದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ಶ್ರೀಲಂಕಾ ಕ್ರಿಕೆಟ್ XI ವಿರುದ್ಧದ ಅಭ್ಯಾಸ ಪಂದ್ಯದ ಅಂತಿಮ ದಿನದಂದು, ಪಂತ್ ಆಕ್ರಮಣಕಾರಿ ಬ್ಯಾಟಿಂಗ್ಗೆ ಬದಲಾಗಿ ರಕ್ಷಣಾತ್ಮಕ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಇದರ ಪರಿಣಾಮವಾಗಿ ಪಂತ್ ತಮ್ಮ ಖಾತೆ ತೆರೆಯಲು ಬರೋಬ್ಬರಿ 22 ಎಸೆತಗಳನ್ನು ತೆಗೆದುಕೊಂಡರು.
3ನೇ ಕ್ರಮಾಂಕದಲ್ಲಿ ಬಂದ ಪಂತ್
ಕೊಲಂಬೊದಲ್ಲಿ ನಡೆದ ಅಭ್ಯಾಸ ಪಂದ್ಯದ ಕೊನೆಯ ದಿನದಂದು, ಟೀಂ ಇಂಡಿಯಾ 207 ರನ್ಗಳ ಗುರಿ ಬೆನ್ನಟ್ಟಬೇಕಾಯಿತು. ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿ ಶತಕದ ಜೊತೆಯಾಟವಾಡಿದರು. ಮೊದಲ ಇನ್ನಿಂಗ್ಸ್ನಲ್ಲಿ ವಿಫಲರಾಗಿದ್ದ ಜೈಸ್ವಾಲ್ ಈ ಬಾರಿ ಅರ್ಧಶತಕ ಗಳಿಸಿ 61 ರನ್ ಗಳಿಸಿ ನಿವೃತ್ತರಾದರು. ಹೀಗಾಗಿ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 3 ರನ್ಗಳಿಗೆ ಔಟಾಗಿದ್ದ ರಿಷಭ್ ಪಂತ್ಗೆ ಮೂರನೇ ಕ್ರಮಾಂಕಕ್ಕೆ ಬಡ್ತಿ ನೀಡಲಾಯಿತು.
ಸಿಕ್ಸರ್ ಮೂಲಕ ಖಾತೆ ತೆರೆದ ಪಂತ್
ಶ್ರೀಲಂಕಾದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಪಂದ್ಯದ ಅಭ್ಯಾಸವನ್ನು ಪಡೆಯಲು ಪಂತ್ಗೆ ಇದು ಕೊನೆಯ ಅವಕಾಶವಾಗಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಅವರನ್ನು ಔಟ್ ಮಾಡಿದ ರೀತಿ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಹೀಗಾಗಿ ಪಂತ್ ಬ್ಯಾಟಿಂಗ್ ಮಾಡಲು ಪ್ರಾರಂಭಿಸಿದ ತಕ್ಷಣ, ನೋಡುಗರು ಆಶ್ಚರ್ಯಚಕಿತರಾದರು. ಹಿಂದಿನ ಇನ್ನಿಂಗ್ಸ್ನ ಐದನೇ ಎಸೆತದಲ್ಲಿ ಸಿಕ್ಸರ್ ಹೊಡೆಯಲು ಪ್ರಯತ್ನಿಸುವಾಗ ಔಟಾಗಿದ್ದ ಪಂತ್, ಎರಡನೇ ಇನ್ನಿಂಗ್ಸ್ನ ಆರಂಭದಲ್ಲಿ ಒಂದೇ ಒಂದು ದೊಡ್ಡ ಹೊಡೆತವನ್ನು ಪ್ರಯತ್ನಿಸಲಿಲ್ಲ.
what a shot by Rishabh pant!🤩 Absolute beauty!! pic.twitter.com/jY7aKjkb2W
— S~` (@duhh_itzsarthak) August 9, 2026
ಹೀಗಾಗಿ ಪಂತ್ 21 ಎಸೆತಗಳಾದರೂ ತಮ್ಮ ಖಾತೆ ತೆರೆದಿರಲಿಲ್ಲ. ಇದರಿಂದ ಒತ್ತಡಕ್ಕೊಳಗಾಗದ ನಾಯಕ ಗಿಲ್ ಸಿಕ್ಸರ್ ಬಾರಿಸುವ ಯತ್ನದಲ್ಲಿ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದೆಡೆ ಪಂತ್ ಮಾತ್ರ ತಮ್ಮ ತಾಳ್ಮೆಯ ಆಟವನ್ನು ಮುಂದುವರೆಸಿದರು. ಪರಿಣಾಮವಾಗಿ, ಪಂತ್ ಬರೋಬ್ಬರಿ 21 ಎಸೆತಗಳಲ್ಲಿ ಯಾವುದೇ ರನ್ ಗಳಿಸಲಿಲ್ಲ. ಆದರೆ 22 ನೇ ಎಸೆತದಲ್ಲಿ ಆಫ್-ಸ್ಪಿನ್ನರ್ ವಿರುದ್ಧ ನೇರ ಬೌಂಡರಿಯ ಮೇಲೆ ಸಿಕ್ಸರ್ ಬಾರಿಸಿ ತಮ್ಮ ರನ್ ಖಾತೆ ತೆರೆದರು. ಅವರ ಶಾಟ್ ಎಷ್ಟು ಶಕ್ತಿಶಾಲಿಯಾಗಿತ್ತೆಂದರೆ ಚೆಂಡು ಮೈದಾನದಿಂದ ಹೊರಗೆ ಹೋಯಿತು. ಇದರಂದ ಅಂಪೈರ್ ಹೊಸ ಚೆಂಡನ್ನು ತರಿಸಬೇಕಾಯಿತು.
Rishabh Pant: ಅತಿ ಹೆಚ್ಚು ತೆರಿಗೆ ಪಾವತಿ; ಅಗ್ರಸ್ಥಾನಕ್ಕೇರಿದ ರಿಷಭ್ ಪಂತ್
ಪಂತ್ ತಾಳ್ಮೆಯ ಆಟಕ್ಕೆ ಕಾರಣವೇನು?
ಈ ಸಿಕ್ಸರ್ ನಂತರವೂ ಪಂತ್ ಅದೇ ಶೈಲಿಯಲ್ಲಿ ಬ್ಯಾಟಿಂಗ್ ಮುಂದುವರಿಸಿದರು. ಸಾಂದರ್ಭಿಕವಾಗಿ ಸಿಕ್ಸರ್ಗಳನ್ನು ಬಾರಿಸಿದರೂ ಪಂತ್ 67 ಎಸೆತಗಳನ್ನು ಎದುರಿಸಿ ಮತ್ತೊಂದು ದೊಡ್ಡ ಹೊಡೆತವನ್ನು ಪ್ರಯತ್ನಿಸುವ ಮೂಲಕ ಔಟಾದರು. ಒಟ್ಟಾರೆಯಾಗಿ, ಪಂತ್ ತಮ್ಮ 68 ಎಸೆತಗಳ ಇನ್ನಿಂಗ್ಸ್ನಲ್ಲಿ ಮೂರು ಸಿಕ್ಸರ್ಗಳು ಮತ್ತು ಒಂದು ಬೌಂಡರಿಯೊಂದಿಗೆ 28 ರನ್ ಗಳಿಸಿ ಔಟಾದರು. ಅಷ್ಟಕ್ಕೂ ಪಂತ್ ಇಷ್ಟು ತಾಳ್ಮೆಯ ಬ್ಯಾಟಿಂಗ್ ಮಾಡಲು ಪ್ರಮುಖ ಕಾರಣ, ಮುಂಬರುವ ಸರಣಿಯಲ್ಲಿ ಶ್ರೀಲಂಕಾ ಸ್ಪಿನ್ನರ್ಗಳನ್ನು ಎದುರಿಸಬೇಕಾದ ಪ್ರಮುಖ ಸವಾಲು. ಲಂಕಾ ನೆಲದಲ್ಲಿ ಸ್ಪಿನ್ನರ್ಗಳನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಹೀಗಾಗಿ ಪಂತ್ ಲಂಕಾ ಸ್ಪಿನ್ನರ್ಗಳನ್ನು ಎದುರಿಸುವ ಸಲುವಾಗಿ ಹೆಚ್ಚು ಹೆಚ್ಚು ಎಸೆತಗಳನ್ನು ಆಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:23 pm, Sun, 9 August 26




