‘ಬಜರಂಗಿ ಭಾಯಿಜಾನ್ 2’ ಚಿತ್ರಕ್ಕೆ ಕಥೆ ರೆಡಿ; ಸದ್ದಿಲ್ಲದೆ ನಡೆಯಿತು ಸಲ್ಮಾನ್-ವಿಜಯೇಂದ್ರ ಪ್ರಸಾದ್ ಭೇಟಿ
ಸಲ್ಮಾನ್ ಖಾನ್ ಮತ್ತು ವಿಜಯೇಂದ್ರ ಪ್ರಸಾದ್ ಅವರ ಇತ್ತೀಚಿನ ಭೇಟಿಯಿಂದ ಬಜರಂಗಿ ಭಾಯಿಜಾನ್ 2 ರ ಬಗ್ಗೆ ಉತ್ಸಾಹ ಹೆಚ್ಚಾಗಿದೆ. ವಿಜಯೇಂದ್ರ ಪ್ರಸಾದ್ ಮೊದಲ ಚಿತ್ರಕ್ಕೆ ಕಥೆ ಬರೆದಿದ್ದರು ಮತ್ತು ಈಗ ಸೀಕ್ವೆಲ್ಗಾಗಿ ಕಥೆಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಸಲ್ಮಾನ್ ಖಾನ್ ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಖಚಿತವಾಗಿದೆ,

ಸಲ್ಮಾನ್ ಖಾನ್ (Salman Khan) ವೃತ್ತಿ ಜೀವನದ ಸೂಪರ್ ಹಿಟ್ ಚಿತ್ರಗಳಲ್ಲಿ ‘ಭಜರಂಗಿ ಬಾಯಿಜಾನ್’ ಸಿನಿಮಾ ಕೂಡ ಒಂದು. ಸರಿಯಾಗಿ 10 ವರ್ಷಗಳ ಹಿಂದೆ ಈ ಚಿತ್ರ ತೆರೆಗೆ ಬಂದು ಸೂಪರ್ ಹಿಟ್ ಆಯಿತು. ಸಲ್ಮಾನ್ ಖಾನ್ ಅವರು ಬಜರಂಗಿ ಭಾಯಿಜಾನ್ ಆಗಿ ಗಮನ ಸೆಳೆದರೆ, ಮುನ್ನಿ ಪಾತ್ರದಲ್ಲಿ ಹರ್ಷಾಲಿ ಮಲ್ಹೋತ್ರಾ ನಿರ್ವಹಿಸಿದ್ದರು. ಈಗ ಈ ಚಿತ್ರಕ್ಕೆ ಸಿಕ್ವೆಲ್ ತರಲು ಎಲ್ಲಾ ಸಿದ್ಧತೆ ನಡೆದಿದೆ ಎಂದು ವರದಿ ಆಗಿದೆ. ಸಲ್ಮಾನ್ ಖಾನ್ ಅವರು ಇತ್ತೀಚೆಗೆ ನಿರ್ದೇಶಕ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರನ್ನು ಸೈಲೆಂಟ್ ಆಗಿ ಭೇಟಿ ಮಾಡಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
‘ಬಜರಂಗಿ ಭಾಯಿಜಾನ್’ ಸಿನಿಮಾಗೆ ಕಥೆ ಬರೆದಿದ್ದು ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್. ಈ ಚಿತ್ರವನ್ನು ಸಲ್ಮಾನ್ ಖಾನ್, ರಾಕ್ಲೈನ್ ವೆಂಕಟೇಶ್, ಕಬೀರ್ ಖಾನ್ ಒಟ್ಟಾಗಿ ನಿರ್ಮಾಣ ಮಾಡಿದ್ದರು. ಕಬೀರ್ ಖಾನ್ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ಸೂಪರ್ ಹಿಟ್ ಆಯಿತು. ಭಾರತದಲ್ಲಿ ಮಿಸ್ ಆಗುವ ಪಾಕಿಸ್ತಾನದ ಹುಡುಗಿ ಮುನ್ನಿಯನ್ನು ಮರಳಿ ಅವಳ ಊರು ತಲುಪಿಸೋ ಕತೆಯನ್ನು ಈ ಚಿತ್ರ ಹೊಂದಿತ್ತು. ಈಗ ಸಲ್ಲುಗೆ ತುರ್ತಾಗಿ ಮತ್ತೊಂದು ಗೆಲುವಿನ ಅಗತ್ಯವಿದೆ. ಹೀಗಾಗಿ, ಈ ಚಿತ್ರಕ್ಕೆ ಎರಡನೇ ಪಾರ್ಟ್ ಮಾಡುವ ಆಲೋಚನೆ ಬಂದಿದೆ.
ಸಲ್ಮಾನ್ ಖಾನ್ ಹಾಗೂ ವಿಜಯೇಂದ್ರ ಪ್ರಸಾದ್ ಇತ್ತೀಚೆಗೆ ಮುಂಬೈನಲ್ಲಿ ಭೇಟಿ ಆಗಿದ್ದಾರೆ. ಇಬ್ಬರೂ ಸೇರಿ ‘ಬಜರಂಗಿ ಭಾಯಿಜಾನ್ 2’ ಚಿತ್ರಕ್ಕೆ ಒಂದು ಕಥೆ ಯೋಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಥೆಯನ್ನು ಮತ್ತಷ್ಟು ಅಭಿವೃದ್ಧಿ ಮಾಡಿ ಸರಿಯಾದ ರೂಪಕ್ಕೆ ತರುವ ಜವಾಬ್ದಾರಿ ಈಗ ವಿಜಯೇಂದ್ರ ಪ್ರಸಾದ್ ಅವರ ಹೆಗಲು ಏರಿದೆ. ಈ ಚಿತ್ರವನ್ನು ಕಬೀರ್ ಖಾನ್ ಅವರೇ ನಿರ್ದೇಶನ ಮಾಡುತ್ತಾರಾ? ಈ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
ಇದನ್ನೂ ಓದಿ: ಒಂದಂಕಿ ತಲುಪಿದ ‘ಸಿಕಂದರ್’ ಕಲೆಕ್ಷನ್; ನನಗೆ ಬಾಲಿವುಡ್ ಬೆಂಬಲ ಬೇಕಿದೆ ಎಂದ ಸಲ್ಮಾನ್ ಖಾನ್
ಮುನ್ನಿ ಪಾತ್ರ ಮಾಡಿದ ಹರ್ಷಾಲಿ ಈಗ ಬೆಳೆದು ದೊಡ್ಡವಳಾಗಿದ್ದಾಳೆ. ಇದೇ ಆ್ಯಂಗಲ್ನಲ್ಲಿ ಕಥೆ ಸಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ವಿಜಯೇಂದ್ರ ಪ್ರಸಾದ್ ಅವರು ಕಥೆಯನ್ನು ಮಾಡಿದರು ಎಂದರೆ ಅಲ್ಲಿ ಯಶಸ್ಸು ಗ್ಯಾರಂಟಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.