ದೀಪಿಕಾ ಪಡುಕೋಣೆ ಬಗ್ಗೆ ಹೆಚ್ಚಾಯ್ತು ಅಪಪ್ರಚಾರ; ‘ಕಲ್ಕಿ 2’ ಸಿನಿಮಾದಿಂದಲೂ ಔಟ್?
ದೀಪಿಕಾ ಪಡುಕೋಣೆ ಅವರಿಗೆ ಹೊಸ ಅವಕಾಶಗಳು ಸಿಗುವುದನ್ನು ತಪ್ಪಿಸಲು ಕೆಲವರು ಹುನ್ನಾರ ನಡೆಸಿದ್ದಾರೆ. ಆ ಕಾರಣದಿಂದಲೇ ಅವರ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಅಭಿಮಾನಿಗಳಿಗೆ ಸತ್ಯ ಏನೆಂಬುದು ತಿಳಿದಿದೆ. ‘ಸ್ಪಿರಿಟ್’ ಸಿನಿಮಾ ತಂಡದ ಜೊತೆ ವೈಮನಸ್ಸು ಉಂಟಾದ ಬಳಿಕ ಈ ರೀತಿಯ ಗಾಸಿಪ್ಗಳು ಹೆಚ್ಚಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ನಟಿ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗ ನಡುವೆ ಕಿರಿಕ್ ಆಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ದೀಪಿಕಾ ಪಡುಕೋಣೆ ಅವರು ಪ್ರಭಾಸ್ (Prabhas) ನಟನೆಯ ‘ಸ್ಪಿರಿಟ್’ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಬೇಕಿತ್ತು. ಈ ಸಿನಿಮಾಗೆ ಸಂದೀಪ್ ರೆಡ್ಡಿ ವಂಗ (Sandeep Reddy Vanga) ಅವರು ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ಈ ಚಿತ್ರದ ಶೂಟಿಂಗ್ ಆರಂಭ ಆಗಿಲ್ಲ. ಅಷ್ಟರಲ್ಲಾಗಲೇ ನೆಗೆಟಿವ್ ಸುದ್ದಿಗಳು ಕೇಳಿಬರಲು ಆರಂಭಿಸಿವೆ. ಈ ಸಿನಿಮಾದಿಂದ ದೀಪಿಕಾ ಪಡುಕೋಣೆ (Deepika Padukone) ಹೊರನಡೆದಿದ್ದಾರೆ. ಅದರಿಂದಾಗಿ ‘ಕಲ್ಕಿ 2898 ಎಡಿ’ ಸಿನಿಮಾದ ಸೀಕ್ವೆಲ್ ಕೂಡ ಅವರ ಕೈ ತಪ್ಪಿದೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.
ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಅದರ ಸೀಕ್ವೆಲ್ ಸೆಟ್ಟೇರಲು ಇನ್ನೂ ಸಮಯ ಹಿಡಿಯಲಿದೆ. ಈಗಾಗಲೇ ದೀಪಿಕಾ ಅವರು ‘ಸ್ಪಿರಿಟ್’ ಸಿನಿಮಾ ತಂಡದ ಜೊತೆ ಕಿರಿಕ್ ಮಾಡಿಕೊಂಡಿದ್ದರಿಂದ ಪ್ರಭಾಸ್ ನಟನೆಯ ‘ಕಲ್ಕಿ 2’ ಸಿನಿಮಾ ಕೂಡ ದೀಪಿಕಾ ಕೈ ತಪ್ಪಬಹುದು ಎಂಬುದು ಗಾಸಿಮ್ ಮಂದಿಯ ಲೆಕ್ಕಾಚಾರ.
ಆದರೆ ಇದು ಸಂಪೂರ್ಣ ಗಾಳಿಸುದ್ದಿ ಎನ್ನಲಾಗಿದೆ. ದೀಪಿಕಾ ಪಡುಕೋಣೆ ಬಗ್ಗೆ ಅಪಪ್ರಚಾರ ಮಾಡಬೇಕು ಎಂಬ ಉದ್ದೇಶದಿಂದಲೇ ಕೆಲವರು ಇಂಥ ಸುದ್ದಿ ಹಬ್ಬಿಸುತ್ತಿದ್ದಾರೆ. ಹಲವು ಸಿನಿಮಾ ತಂಡದ ಜೊತೆ ದೀಪಿಕಾ ಜಗಳ ಮಾಡಿಕೊಂಡರು ಎಂಬ ಸುದ್ದಿ ಹಬ್ಬಿದರೆ ಮುಂದಿನ ದಿನಗಳಲ್ಲಿ ಅವರಿಗೆ ಸಿಗುವ ಆಫರ್ ಕಡಿಮೆ ಆಗುತ್ತವೆ. ಆ ರೀತಿ ಆಗಲಿ ಎಂಬುದು ಕೆಲವರ ಹುನ್ನಾರ.
‘ಕಲ್ಕಿ 2’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರ ಪಾತ್ರಕ್ಕೆ ಸಂಬಂಧಿಸಿದ ಕಥೆ ಮುಂದುವರಯಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಚಿತ್ರತಂಡದಿಂದ ಅವರನ್ನು ಹೊರಗಿಡುವ ಸಾಧ್ಯತೆಯೇ ಇಲ್ಲ. ಅಲ್ಲದೇ, ಈ ಸಿನಿಮಾ ಸೆಟ್ಟೇರಲಿ ಇನ್ನೂ ಸಮಯ ಇದೆ. ಶೂಟಿಂಗ್ ಶುರುವಾಗುವುದಕ್ಕೂ ಮುನ್ನವೇ ಅವರು ಚಿತ್ರತಂಡದ ಜೊತೆ ಕಿರಿಕ್ ಮಾಡಿಕೊಳ್ಳಲು ಹೇಗೆ ಸಾಧ್ಯ ಎಂದು ಅಭಿಮಾನಿಗಳು ದೀಪಿಕಾ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ.
ಇದನ್ನೂ ಓದಿ: ಅಲ್ಲು ಅರ್ಜುನ್-ಅಟ್ಲಿ ಚಿತ್ರಕ್ಕೆ ದೀಪಿಕಾ ಎಂಟ್ರಿ ಅಧಿಕೃತ; ಪ್ರೋಮೋ ರಿಲೀಸ್
ವೃತ್ತಿ ಜೀವನ ಮತ್ತು ಖಾಸಗಿ ಜೀವನಕ್ಕೆ ಸಮನಾಗಿ ಸಮಯ ನೀಡಲು ದೀಪಿಕಾ ಪಡುಕೋಣೆ ನಿರ್ಧರಿಸಿದ್ದಾರೆ. ಆ ಕಾರಣದಿಂದಲೇ ಅವರು ‘ಸ್ಪಿರಿಟ್’ ಸಿನಿಮಾದ ಸೆಟ್ನಲ್ಲಿ 8 ಗಂಟೆಗಿಂತ ಹೆಚ್ಚು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದರು. ಅವರ ಈ ಮಾತಿನಿಂದ ಸಂದೀಪ್ ರೆಡ್ಡಿ ವಂಗ ಕೋಪಗೊಂಡಿದ್ದಾರೆ. ಅಲ್ಲಿಂದ ಕಿರಿಕ್ ಆರಂಭ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.