‘ಮುನ್ನಾ ಭಾಯ್-ಸರ್ಕ್ಯೂಟ್’ ಪಾತ್ರಗಳಿಗೆ ರಾಮ-ಹನುಮಂತನೇ ಪ್ರೇರಣೆ: ನಿರ್ದೇಶಕ ರಾಜ್ಕುಮಾರ್ ಹಿರಾನಿ
ನಿರ್ದೇಶಕ ರಾಜ್ಕುಮಾರ್ ಹಿರಾನಿ ಅವರು ‘ಮುನ್ನಾ ಭಾಯ್ MBBS’ ಮತ್ತು ‘ಲಗೇ ರಹೋ ಮುನ್ನಾ ಭಾಯ್’ ಸಿನಿಮಾಗಳ ಪಾತ್ರಗಳ ಬಗ್ಗೆ ಇಂಟರೆಸ್ಟಿಂಗ್ ವಿಷಯ ತಿಳಿಸಿದ್ದಾರೆ. ‘ಮುನ್ನಾ ಭಾಯ್ ಮತ್ತು ಸರ್ಕ್ಯೂಟ್ ಪಾತ್ರಗಳು ರಾಮ-ಹನುಮಂತನ ರೀತಿ ಎಂದು ಅವರು ಹೇಳಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ..

ಮುಖ್ಯಾಂಶಗಳು
- ‘ಎಲ್ಲರಿಗೂ ಒಬ್ಬ ಸರ್ಕ್ಯೂಟ್ ಬೇಕು’ ಎಂದಿದ್ದಾರೆ ನಟ ಅರ್ಷದ್ ವಾರ್ಸಿ.
- ಮತ್ತೆ ಒಂದಾದ ‘ಮುನ್ನ ಭಾಯ್ ಎಂಬಿಬಿಎಸ್’ ಜೋಡಿ ಹಿರಾನಿ-ಅರ್ಷದ್.
- ಫೇಮಸ್ ಪಾತ್ರದ ಹಿಂದಿರುವ ಆಸಕ್ತಿಕರ ವಿಷಯ ತಿಳಿಸಿದ ನಿರ್ದೇಶಕ ಹಿರಾನಿ.
ಬಾಲಿವುಡ್ನ ಸಾರ್ವಕಾಲಿಕ ಸೂಪರ್ ಹಿಟ್ ಚಿತ್ರಗಳಾದ ‘ಮುನ್ನಾ ಭಾಯ್ MBBS’ ಮತ್ತು ‘ಲಗೇ ರಹೋ ಮುನ್ನಾ ಭಾಯ್’ ಚಿತ್ರಗಳ ಯಶಸ್ಸಿನ ಹಿಂದಿನ ಅಸಲಿ ರಹಸ್ಯವನ್ನು ನಿರ್ದೇಶಕ ರಾಜ್ಕುಮಾರ್ ಹಿರಾನಿ (Rajkumar Hirani) ಕೊನೆಗೂ ಬಿಚ್ಚಿಟ್ಟಿದ್ದಾರೆ. ಚಿತ್ರದಲ್ಲಿ ಸಂಜಯ್ ದತ್ (ಮುನ್ನಾ ಭಾಯ್) ಮತ್ತು ಅರ್ಷದ್ ವಾರ್ಸಿ (ಸರ್ಕ್ಯೂಟ್) ನಡುವಿನ ಅದ್ಭುತ ಸ್ನೇಹದ ಬಾಂಡಿಂಗ್ಗೆ ಪ್ರಭು ಶ್ರೀರಾಮ (Lord Rama) ಮತ್ತು ಹನುಮಂತನ ಸಂಬಂಧವೇ ಪ್ರೇರಣೆ ಎಂದು ಅವರು ಹೇಳಿದ್ದಾರೆ.
ಪಿಟಿಐ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಹಿರಾನಿ, ‘ನಮ್ಮ ಮನಸ್ಸಿನಲ್ಲಿ ಸರ್ಕ್ಯೂಟ್ ಪಾತ್ರವು ಮುನ್ನಾ ಭಾಯ್ ಪಾಲಿಗೆ ಹನುಮಂತನಂತಿತ್ತು. ಮುನ್ನಾ ಭಾಯ್ ಆತನಿಗೆ ರಾಮನಿದ್ದಂತೆ. ಭಾಯ್ ಒಂದು ಮಾತು ಹೇಳಿದರೆ ಮುಗಿಯಿತು, ಸರ್ಕ್ಯೂಟ್ ಅದಕ್ಕೆ ಯಾವುದೇ ಮರುಪ್ರಶ್ನೆ ಹಾಕುತ್ತಿರಲಿಲ್ಲ. ಕಣ್ಣು ಮುಚ್ಚಿ ಆ ಕೆಲಸ ಮಾಡುತ್ತಿದ್ದ. ಆ ಮಟ್ಟದ ಅಚಲವಾದ ನಿಷ್ಠೆ ಮತ್ತು ಭಕ್ತಿಯನ್ನು ಆ ಪಾತ್ರದಲ್ಲಿ ತರಲು ನಾವು ಬಯಸಿದ್ದೆವು’ ಎಂದು ತಿಳಿಸಿದ್ದಾರೆ.
ಇದೇ ವಿಷಯವಾಗಿ ಮಾತನಾಡಿದ ನಟ ಅರ್ಷದ್ ವಾರ್ಸಿ, ‘ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಬ್ಬ ಸರ್ಕ್ಯೂಟ್ನಂತಹ ಸ್ನೇಹಿತ ಇರಬೇಕೆಂದು ಬಯಸುತ್ತಾರೆ. ನನಗೂ ಕೂಡ ಅಂತಹದೇ ಒಬ್ಬ ಗೆಳೆಯ ಬೇಕು’ ಎಂದು ನಗುತ್ತಾ ಹೇಳಿದ್ದಾರೆ. ಅಲ್ಲದೆ, ಆರಂಭದಲ್ಲಿ ಹಿರಾನಿ ಅವರ ಬಗ್ಗೆ ತಮಗೆ ಅಷ್ಟಾಗಿ ತಿಳಿಯದೇ ಇದ್ದರೂ, ಕಥೆ ಕೇಳಿದ ತಕ್ಷಣ ಅವರ ಕಥೆ ಹೇಳುವ ಶೈಲಿ ಮತ್ತು ಅವರಲ್ಲಿದ್ದ ಮಾನವೀಯ ದೃಷ್ಟಿಕೋನ ತಮಗೆ ಬಹುವಾಗಿ ಇಷ್ಟವಾಯಿತು ಎಂದು ಅರ್ಷದ್ ನೆನಪಿಸಿಕೊಂಡಿದ್ದಾರೆ.
ಬಹಳ ವರ್ಷಗಳ ನಂತರ ನಿರ್ದೇಶಕ ರಾಜ್ಕುಮಾರ್ ಹಿರಾನಿ ಹಾಗೂ ಅರ್ಷದ್ ವಾರ್ಸಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಬಾರಿ ಸಿನಿಮಾವಲ್ಲ, ಬದಲಿಗೆ ಒಟಿಟಿ ವೆಬ್ ಸರಣಿಯೊಂದಕ್ಕಾಗಿ ಇವರಿಬ್ಬರು ಕೈಜೋಡಿಸಿದ್ದಾರೆ. ‘ಪ್ರೀತಮ್ ಅಂಡ್ ಪೆಡ್ರೊ’ (Pritam and Pedro) ಹೆಸರಿನ ಈ ಸೈಬರ್ ಕ್ರೈಂ ಕಾಮಿಡಿ ಥ್ರಿಲ್ಲರ್ ಸರಣಿಗೆ ಹಿರಾನಿ ನಿರ್ಮಾಪಕರಾಗಿದ್ದಾರೆ.
ಇದನ್ನೂ ಓದಿ: ‘ಮುನ್ನಾಭಾಯ್ ಎಂಬಿಬಿಎಸ್ ಸಿನಿಮಾ ಒಂದು ಡಿಸಾಸ್ಟರ್ ಅಂದಿದ್ದರು’; ರಾಜಕುಮಾರ್ ಹಿರಾನಿ
ವಿಶೇಷವೆಂದರೆ, ರಾಜ್ಕುಮಾರ್ ಹಿರಾನಿ ಅವರ ಪುತ್ರ ವೀರ್ ಹಿರಾನಿ ಈ ಸರಣಿಯ ಮೂಲಕ ನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಸೂಪರ್ ಹಿಟ್ ‘ಪಾತಾಳ್ ಲೋಕ್’ ಖ್ಯಾತಿಯ ಅವಿನಾಶ್ ಅರುಣ್ ನಿರ್ದೇಶಿಸಿರುವ ಈ ಸರಣಿಯು ಜುಲೈ 3 ರಿಂದ ‘ಜಿಯೋಹಾಟ್ಸ್ಟಾರ್’ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




