ಸುಶಾಂತ್ ಮಾಜಿ ಮ್ಯಾನೇಜರ್ದು ಆತ್ಮಹತ್ಯೆಯಲ್ಲ ಕೊಲೆ; ರಾಜಕಾರಣಿ ಮಕ್ಕಳ ಮೇಲೆ ಆರೋಪ
ದಿಶಾ ಸಾಲಿಯನ್ ಅವರ ತಂದೆ ಅವರ ಮಗಳ ಸಾವು ಆತ್ಮಹತ್ಯೆಯಲ್ಲ, ಬದಲಿಗೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಎಂದು ಆರೋಪಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅವರು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಮತ್ತು ಇತರರನ್ನು ಆರೋಪಿಗಳಾಗಿ ಹೆಸರಿಸಿದ್ದಾರೆ. ಈ ಪ್ರಕರಣವು ಸುಶಾಂತ್ ಸಿಂಗ್ ರಜಪೂತ್ರ ಸಾವಿನೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಲಾಗುತ್ತಿದೆ.

ನಟ ಸುಶಾಂತ್ ಸಿಂಗ್ ರಜಪೂತ್ (Sushanth Singh Rajput) ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಬದಲಿಗೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆಕೆಯ ತಂದೆ ಆರೋಪಿಸಿದ್ದಾರೆ. ಈ ವಿಚಾರದಲ್ಲಿ ಅವರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ದಿಶಾ ಕೊಲೆ ಪ್ರಕರಣದಲ್ಲಿ ಪ್ರಕರಣ ದಾಖಲಿಸಬೇಕು ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಶಾಸಕ ಆದಿತ್ಯ ಠಾಕ್ರೆ, ನಟಿ ರಿಯಾ ಚಕ್ರವರ್ತಿ ಮತ್ತು ಇತರರನ್ನು ಆರೋಪಿಗಳೆಂದು ಹೆಸರಿಸಿ ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಆದ್ದರಿಂದ, ಈ ವಿಷಯವು ಮತ್ತೊಮ್ಮೆ ಚರ್ಚೆಗೆ ಬಂದಿದೆ.
ಕರ್ನಾಟಕದ ಉಡುಪಿಯಲ್ಲಿ ಜನಿಸಿದ ದಿಶಾ ಸಾಲಿಯನ್ ಒಬ್ಬ ಸೆಲೆಬ್ರಿಟಿ ಮ್ಯಾನೇಜರ್ ಆಗಿದ್ದರು. ಅವರು ವರುಣ್ ಶರ್ಮಾ, ಸುಶಾಂತ್ ಸಿಂಗ್ ರಜಪೂತ್ ಮತ್ತು ಭಾರತಿ ಸಿಂಗ್ ಅವರಂತಹ ಜನಪ್ರಿಯ ನಟರೊಂದಿಗೆ ಕೆಲಸ ಮಾಡಿದ್ದರು. ಇದಲ್ಲದೆ, ಅವರು ಅನೇಕ ಜಾಹೀರಾತು ಏಜೆನ್ಸಿಗಳೊಂದಿಗೆ ಸಂಬಂಧ ಹೊಂದಿದ್ದರು. ಅವರು ಟಿವಿ ನಟ ರೋಹನ್ ರಾಯ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಮತ್ತು ಅವರ ಸಾವಿಗೆ ಕೆಲವು ತಿಂಗಳುಗಳ ಮೊದಲು ಅವರು ನಿಶ್ಚಿತಾರ್ಥ ಮಾಡಿಕೊಂಡರು.
2020ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ನಟಿ ರಿಯಾ ಚಕ್ರವರ್ತಿ ಅವರ ಬಳಿ ದಿಶಾ ಬಗ್ಗೆ ಕೇಳಲಾಯಿತು. ಏಕೆಂದರೆ ರಿಯಾ ಮತ್ತು ಸುಶಾಂತ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಮತ್ತು ದಿಶಾ ಸುಶಾಂತ್ ಅವರ ಮ್ಯಾನೇಜರ್ ಆಗಿದ್ದರು.
ಜೂನ್ 9, 2020 ರಂದು, ಮುಂಬೈನ ಮಲಾಡ್ನಲ್ಲಿರುವ ಕಟ್ಟಡದ 14ನೇ ಮಹಡಿಯಿಂದ ಬಿದ್ದು ದಿಶಾ ಸಾಲಿಯನ್ ನಿಧನರಾದರು. ನಂತರ, ದಿಶಾ ಸಾವು ಸುಶಾಂತ್ ಸಾವಿನೊಂದಿಗೆ ಸಂಬಂಧ ಹೊಂದಿತ್ತು ಎನ್ನಲಾಗಿತ್ತು. ದಿಶಾ ಸತ್ತ ಐದೇ ದಿನಕ್ಕೆ ಸುಶಾಂತ್ (ಜೂನ್ 14, 2020) ನಿಧನರಾದರು. 28 ವರ್ಷದ ದಿಶಾ ಸಾವಿನ ನಂತರ ಮುಂಬೈ ಪೊಲೀಸರು ಆಕಸ್ಮಿಕ ಸಾವು ಎಂದು ದಾಖಲಿಸಿಕೊಂಡಿದ್ದರು. ಆಗಸ್ಟ್ 2021 ರಲ್ಲಿ, ಪೊಲೀಸರು ಈ ಪ್ರಕರಣದಲ್ಲಿ ಮುಕ್ತಾಯ ವರದಿಯನ್ನು ಸಲ್ಲಿಸಿದರು. ಪೊಲೀಸರ ಪ್ರಕಾರ, ಈ ಪ್ರಕರಣದಲ್ಲಿ ಅವರಿಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ.
ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ಕೇಸ್ಗೆ ಮರುಜೀವ; ಫೆ.19ರಂದು ಮತ್ತೆ ಕೋರ್ಟ್ ವಿಚಾರಣೆ
ಅರ್ಜಿ ಸಲ್ಲಿಕೆ
ಈಗ ದಿಶಾಳ ತಂದೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ದಿಶಾಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಅರ್ಜಿಯನ್ನು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯದೊಂದಿಗೆ ಸಲ್ಲಿಸಲಾಗಿದೆ. ಅದರಂತೆ, ದಿಶಾ ಬಾಲಿವುಡ್ ಪಾರ್ಟಿಯಲ್ಲಿ ಆದಿತ್ಯ ಠಾಕ್ರೆ, ಸೂರಜ್ ಪಾಂಚೋಲಿ ಮತ್ತು ಇತರರ ಸಮ್ಮುಖದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ವೀಕ್ಷಿಸಿದರು. ಅದಕ್ಕಾಗಿಯೇ ಆಕೆಯ ಮೇಲೆ ಮೊದಲು ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಕೊಲೆ ಮಾಡಲಾಯಿತು. ಆದರೆ, ಆಕೆಯ ಮೃತದೇಹವನ್ನು ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಲು ಮಲಾಡ್ನ ಕಟ್ಟಡವೊಂದರ ಬಳಿ ಬಿಡಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.