ಸಿನಿಮಾ ಸೋಲಿಗೆ ಮುಸ್ಲಿಂ ಪಾತ್ರ ಕಾರಣವೇ? ನಟಿಯ ವಾದಕ್ಕೆ ರಾಜ್ಕುಮಾರ್ ಸಂತೋಷಿ ಅಸಮ್ಮತಿ
‘ಬಟ್ವಾರಾ 1947’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿ ಸೋಲು ಅನುಭವಿಸಿತು. ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಅವರು ಮುಸ್ಲಿಂ ವ್ಯಕ್ತಿಯ ಪಾತ್ರವನ್ನು ಮಾಡಿದ್ದಾರೆ. ಆ ಕಾರಣದಿಂದಲೇ ಪ್ರೇಕ್ಷಕರು ಈ ಸಿನಿಮಾವನ್ನು ಒಪ್ಪಿಕೊಳ್ಳಲಿಲ್ಲ ಎಂದು ಶಬಾನಾ ಆಜ್ಮಿ ಹೇಳಿದ್ದರು. ಅದಕ್ಕೆ ನಿರ್ದೇಶಕ ರಾಜ್ಕುಮಾರ್ ಸಂತೋಷಿ ಪ್ರತಿಕ್ರಿಯೆ ನೀಡಿದ್ದಾರೆ.

ಬಾಲಿವುಡ್ನ ಹಿರಿಯ ನಿರ್ದೇಶಕ ರಾಜ್ಕುಮಾರ್ ಸಂತೋಷಿ ನಿರ್ದೇಶನದ, ನಟ ಸನ್ನಿ ಡಿಯೋಲ್ ಅಭಿನಯದ ‘ಬಟ್ವಾರಾ 1947’ (Batwara 1947) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. ಈ ಚಿತ್ರದ ಹಿನ್ನಡೆಗೆ ಸಂಬಂಧಿಸಿದಂತೆ ಹಿರಿಯ ನಟಿ ಶಬಾನಾ ಆಜ್ಮಿ (Shabana Azmi) ನೀಡಿದ್ದ ಹೇಳಿಕೆಗೆ ನಿರ್ದೇಶಕ ರಾಜ್ಕುಮಾರ್ ಸಂತೋಷಿ ಈಗ ಪ್ರತಿಕ್ರಿಯಿಸಿದ್ದು, ಅವರ ಅಭಿಪ್ರಾಯವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಶಬಾನಾ ಅಜ್ಮಿ, ‘ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಸನ್ನಿ ಡಿಯೋಲ್ (Sunny Deol) ಅವರಂತಹ ನಟನನ್ನು ಮುಸ್ಲಿಂ ಪಾತ್ರದಲ್ಲಿ ಸ್ವೀಕರಿಸಲು ಸಿದ್ಧರಿಲ್ಲದೇ ಇರುವುದೇ ಈ ಸಿನಿಮಾ ಸೋಲಿಗೆ ಕಾರಣವಿರಬಹುದು’ ಎಂದು ಹೇಳಿದ್ದರು.
‘ಈ ಹಿಂದೆ ಕೂಲಿ ಮತ್ತು ದೀವಾರ್ ಮುಂತಾದ ಸಿನಿಮಾಗಳಲ್ಲಿ ಅಮಿತಾಭ್ ಬಚ್ಚನ್ ಅವರು ಮುಸ್ಲಿಂ ಪಾತ್ರಗಳನ್ನು ಬಹಳ ಸಹಜವಾಗಿ ನಿರ್ವಹಿಸಿದ್ದರು ಮತ್ತು ಪ್ರೇಕ್ಷಕರು ಅದನ್ನು ಒಪ್ಪಿಕೊಂಡಿದ್ದರು. ಆದರೆ ಈಗ ಪ್ರೇಕ್ಷಕರು ಸನ್ನಿ ಡಿಯೋಲ್ ಅವರನ್ನು ಮುಸ್ಲಿಂ ಪಾತ್ರದಲ್ಲಿ ನೋಡಲು ಹಿಂಜರಿಯುತ್ತಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಸಮಾಜದಲ್ಲಿ ಇಂತಹ ವಾತಾವರಣ ಸೃಷ್ಟಿಯಾಗುತ್ತಿದೆಯೇ?’ ಎಂದು ಶಬಾನಾ ಆಜ್ಮಿ ಪ್ರಶ್ನಿಸಿದ್ದರು.
ರಾಜ್ಕುಮಾರ್ ಸಂತೋಷಿ ತಿರುಗೇಟು:
ಶಬಾನಾ ಆಜ್ಮಿ ಅವರ ಈ ಹೇಳಿಕೆಗೆ ‘ವೆರೈಟಿ ಇಂಡಿಯಾ’ಗೆ ನೀಡಿದ ಸಂದರ್ಶನದಲ್ಲಿ ತಿರುಗೇಟು ನೀಡಿರುವ ನಿರ್ದೇಶಕ ರಾಜ್ಕುಮಾರ್ ಸಂತೋಷಿ, ‘ಈ ವಾದದಲ್ಲಿ ಯಾವುದೇ ಅರ್ಥವಿಲ್ಲ. ನಾವು ಬೇರೆ ಸಮುದಾಯದ ಹೀರೋಗಳನ್ನು ಒಪ್ಪಿಕೊಳ್ಳದ ಹಂತಕ್ಕೆ ತಲುಪಿದ್ದೇವೆಯೇ? ನಮ್ಮ ದೇಶದ ಪ್ರೇಕ್ಷಕರು ಬುದ್ಧಿವಂತರು ಮತ್ತು ವಿದ್ಯಾವಂತರು. ಹಾಗಿದ್ದಾಗ ಸಿನಿಮಾದಲ್ಲಿ ದೊಡ್ಡ ತಪ್ಪು ನಡೆದಿದೆ ಎಂದು ಹೇಗೆ ಹೇಳಲು ಸಾಧ್ಯ?’ ಎಂದಿದ್ದಾರೆ.
ಮುಂದುವರಿದು ಮಾತನಾಡಿದ ರಾಜ್ಕುಮಾರ್ ಸಂತೋಷಿ ಅವರು, ‘ಇತ್ತೀಚಿನ ದಿನಗಳಲ್ಲಿ ನಾವು ಸಹಿಷ್ಣುತೆ ಮತ್ತು ಸಮಗ್ರತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಪ್ರೇಕ್ಷಕರು ಹಾಗೂ ವಿಮರ್ಶಕರು ನಿರ್ದೇಶಕನ ಉದ್ದೇಶ ಮತ್ತು ಲೇಖಕ ಹೇಳಲು ಹೊರಟಿರುವ ವಿಚಾರವನ್ನು ಗಮನಿಸಬೇಕು’ ಎಂದು ಮನವಿ ಮಾಡಿದ್ದಾರೆ. ರಾಜ್ಕುಮಾರ್ ಸಂತೋಷಿ ಅವರ ಈ ಸ್ಪಷ್ಟನೆಯಿಂದಾಗಿ ‘ಬಟ್ವಾರಾ 1947’ ಸಿನಿಮಾದ ಸೋಲಿನ ಚರ್ಚೆ ಈಗ ಕೇವಲ ಗಲ್ಲಾಪೆಟ್ಟಿಗೆಯ ಗಳಿಕೆಗೆ ಸೀಮಿತವಾಗದೆ, ಭಾರತೀಯ ಚಿತ್ರರಂಗದಲ್ಲಿ ಧಾರ್ಮಿಕ ಗುರುತು, ಪಾತ್ರಗಳ ಆಯ್ಕೆ ಮತ್ತು ಸಮಾಜದ ಸಹಿಷ್ಣುತೆಯ ಕುರಿತಾದ ಹೊಸ ಸಂವಾದಕ್ಕೆ ದಾರಿ ಮಾಡಿಕೊಟ್ಟಿದೆ.
ಇದನ್ನೂ ಓದಿ: ‘ಸನ್ನಿ ಡಿಯೋಲ್ ಮುಸ್ಲಿಂ ಎಂಬುದನ್ನು ಒಪ್ಪಿಕೊಳ್ಳಲು ಆಗಲಿಲ್ಲ’: ಶಬಾನಾ ಆಜ್ಮಿ
‘ಎಲ್ಲ ಧರ್ಮದ ಶ್ರೇಷ್ಠತೆಯನ್ನು ಗೌರವಿಸುತ್ತೇನೆ’
ತಮ್ಮ ವೈಯಕ್ತಿಕ ನಂಬಿಕೆಗಳ ಬಗ್ಗೆ ಪ್ರಸ್ತಾಪಿಸಿದ ರಾಜ್ಕುಮಾರ್ ಸಂತೋಷಿ, ‘ನಾನು ಹಿಂದೂ. ದೇವಸ್ಥಾನಕ್ಕೆ ಹೋಗುತ್ತೇನೆ, ನನ್ನ ಮಗನ ಹೆಸರು ರಾಮ್. ಆದರೆ ನಾನು ಯಾವುದೇ ಧರ್ಮದ ವಿರುದ್ಧವಿಲ್ಲ. ಎಲ್ಲ ಧರ್ಮಗಳಲ್ಲಿರುವ ಶ್ರೇಷ್ಠ ವಿಚಾರಗಳನ್ನು ಸ್ವೀಕರಿಸಲು ಬಯಸುತ್ತೇನೆ. ಹಿಂದೂ ಧರ್ಮವು ಯಾವಾಗಲೂ ಎಲ್ಲರನ್ನೂ ಒಳಗೊಳ್ಳುವುದನ್ನು ಬೋಧಿಸುತ್ತದೆಯೇ ಹೊರತು ಹೊರಗಿಡುವುದನ್ನಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




