ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಭೇಟಿಯಾದ ನಟ ಜಾನ್ ಅಬ್ರಹಾಂ
‘ದಿ ಡಿಪ್ಲೊಮ್ಯಾಟ್’ ಚಿತ್ರ ಮಾರ್ಚ್ 14ಕ್ಕೆ ತೆರೆಕಾಣುತ್ತಿದೆ. ಜಾನ್ ಅಬ್ರಹಾಂ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರನ್ನು ಜಾನ್ ಅಬ್ರಹಾಂ ಭೇಟಿಯಾಗಿದ್ದಾರೆ. ಈ ವೇಳೆ ಅವರು ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ.

ನವದೆಹಲಿ, 13 ಮಾರ್ಚ್ 2025: ನಟ ಜಾನ್ ಅಬ್ರಹಾಂ (John Abraham) ಅವರು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ (S Jaishankar) ಅವರನ್ನು ಇಂದು ನವದೆಹಲಿಯಲ್ಲಿ ಭೇಟಿಯಾದರು. ಜಾನ್ ಅಬ್ರಹಾಂ ನಟಿಸಿದ ‘ದಿ ಡಿಪ್ಲೊಮ್ಯಾಟ್’ (The Diplomat) ಸಿನಿಮಾ ಮಾರ್ಚ್ 14ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಜಾನ್ ಅಬ್ರಾಹಂ ಅವರು ಭಾರತೀಯ ರಾಯಭಾರಿ ಪಾತ್ರ ಮಾಡಿದ್ದಾರೆ. ಆ ಕಾರಣದಿಂದ ಅವರು ಸಿನಿಮಾ ಬಿಡುಗಡೆಗೂ ಮುನ್ನ ವಿದೇಶಾಂಗ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆದಿದ್ದಾರೆ. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ವಿಷಯ ಹಂಚಿಕೊಂಡಿದ್ದಾರೆ.
ಈ ಭೇಟಿಯ ವೇಳೆ ಎಸ್. ಜೈಶಂಕರ್ ಮತ್ತು ಜಾನ್ ಅಬ್ರಹಾಂ ಅವರು ಸಿನಿಮಾದ ವಿಷಯ ಮಾತ್ರವಲ್ಲದೇ ಫುಟ್ಬಾಲ್ ಕುರಿತಾಗಿಯೂ ಮಾತನಾಡಿದರು. ಜೈಶಂಕರ್ ಅವರಿಗೆ ಜಾನ್ ಅಬ್ರಹಾಂ ಅವರು ಫುಟ್ಬಾಲ್ ಜರ್ಸಿಯನ್ನು ಉಡುಗೊರೆಯಾಗಿ ನೀಡಿದರು. ‘ಜಾನ್ ಅಬ್ರಹಾಂ ಅವರ ಹೊಸ ಸಿನಿಮಾ ಡಿಪ್ಲೊಮ್ಯಾಟ್ ಬಗ್ಗೆ ಆಸಕ್ತಿಕರ ಚರ್ಚೆ ನಡೆಸಿದೆವು. ಸಿನಿಮಾ ಕುರಿತು ಮಾತ್ರವಲ್ಲದೇ ಫುಟ್ಬಾಲ್ ಹಾಗೂ ಈಶಾನ್ಯದ ವಿಷಯಗಳ ಬಗ್ಗೆಯೂ ಮಾತನಾಡಿದೆವು’ ಎಂದು ಜೈಶಂಕರ್ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಜಾನ್ ಅಬ್ರಹಾಂ ಅವರು ಕೂಡ ಈ ಭೇಟಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ನಾನು ಅತ್ಯಂತ ಗೌರವದಿಂದ ಕಾಣುವ ಜೈಶಂಕರ್ ಸರ್ ಅವರನ್ನು ಭೇಟಿ ಮಾಡಿ ಖುಷಿ ಆಯಿತು. ನಾವು ಅನೇಕ ವಿಷಯಗಳ ಬಗ್ಗೆ ಚರ್ಚೆ ಮಾಡಿದೆವು’ ಎಂದು ಅವರು ಪೋಸ್ಟ್ ಮಾಡಿದ್ದಾರೆ.
An interesting conversation with @TheJohnAbraham on his new movie The Diplomat. As also on football, the North East and our respective worlds. pic.twitter.com/BGQbzgcmb1
— Dr. S. Jaishankar (@DrSJaishankar) March 13, 2025
‘ದಿ ಡಿಪ್ಲೊಮ್ಯಾಟ್’ ಸಿನಿಮಾದಲ್ಲಿ ವಿದೇಶಾಂಗ ವ್ಯವಹಾರಗಳ ಸಂಕೀರ್ಣ ಜಗತ್ತನ್ನು ತೋರಿಸಲಾಗುತ್ತಿದೆ. ರಿಯಲ್ ಲೈಫ್ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಈ ಚಿತ್ರವು ರಾಜತಾಂತ್ರಿಕತೆಯ ಸವಾಲುಗಳು ಮತ್ತು ಸೂಕ್ಷ್ಮ ವ್ಯತ್ಯಾಸಗಳ ಮೇಲೆ ಬೆಳಕು ಚೆಲ್ಲುವ ಗುರಿಯನ್ನು ಹೊಂದಿದೆ. ಮಾರ್ಚ್ 14ರಂದು ಬಿಡುಗಡೆ ಆಗಲಿರುವ ಈ ಚಿತ್ರಕ್ಕೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇದನ್ನೂ ಓದಿ: ಕಳೆದ 25 ವರ್ಷಗಳಿಂದ ಸಿಹಿಯನ್ನು ತಿಂದೇ ಇಲ್ಲ ಜಾನ್ ಅಬ್ರಹಾಂ
ಈ ಸಿನಿಮಾದಲ್ಲಿ ಜಾನ್ ಅಬ್ರಹಾಂ ಅವರ ವೃತ್ತಿ ಜೀವನದ ಭಿನ್ನವಾದ ಪಾತ್ರ ಇದೆ. ಶಿವಂ ನಾಯರ್ ಅವರು ನಿರ್ದೇಶನ ಮಾಡಿದ್ದಾರೆ. ಭೂಷಣ್ ಕುಮಾರ್, ಕೃಷನ್ ಕುಮಾರ್, ಜಾನ್ ಅಬ್ರಹಾಂ, ವಿಪುಲ್ ಡಿ. ಶಾ, ಅಶ್ವಿನ್ ವಾರ್ದೆ, ರಾಜೇಶ್ ಬಹ್ಲ್, ಸಮೀರ್ ದೀಕ್ಷಿತ್, ಜತೀಶ್ ವರ್ಮಾ, ರಾಕೇಶ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:26 pm, Thu, 13 March 25