
ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ 6 ಆರೋಪಿಗಳು ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಈ ಮೊದಲು ನೀಡಿದ್ದ ಜಾಮೀನು ರದ್ದಾದ ಬಳಿಕ ದರ್ಶನ್ (Darshan), ಪವಿತ್ರಾ ಗೌಡ, ಜಗದೀಶ್, ಅನುಕುಮಾರ್ ಮುಂತಾದ ಆರೋಪಿಗಳನ್ನು ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಈಗ ಈ ಆರೋಪಿಗಳ ನಡುವೆ ವೈಮನಸ್ಸು ಉಂಟಾಗಿದೆ. ತಮನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ಇಬ್ಬರು ಆರೋಪಿಗಳು ಮನವಿ ಮಾಡಿದ್ದಾರೆ. ಹೌದು, ಅನುಕುಮಾರ್ ಮತ್ತು ಜಗದೀಶ್ ಈಗ ಬೇರೆ ಜೈಲಿಗೆ ಹೋಗಲು ಬಯಸಿದ್ದಾರೆ.
ಅನುಕುಮಾರ್ ಹಾಗೂ ಜಗದೀಶ್ ಚಿತ್ರದುರ್ಗ ಮೂಲದವರು. ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕೊಲೆಗೆ ಸಹಕರಿಸಿದ ಆರೋಪ ಇವರ ಮೇಲಿದೆ. ಭರವಸೆ ಕೊಟ್ಟವರೇ ಈಗ ಕೈ ಬಿಟ್ಟರು ಎಂದು ಅವರಿಬ್ಬರು ಈಗ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ‘ಭರವಸೆ ನೀಡಿದ ಯಾರೂ ಸಹ ಸಹಾಯ ಮಾಡ್ತಿಲ್ಲ. ವಕೀಲರ ಶುಲ್ಕವನ್ನು ನಮ್ಮ ಕುಟುಂಬಸ್ಥರೇ ನೋಡಿಕೊಳ್ಳುತ್ತಿದ್ದಾರೆ’ ಎಂದು ಅವರು ಬೇಸರಗೊಂಡಿದ್ದಾರೆ.
ಈ ಕಾರಣದಿಂದ ಚಿತ್ರದುರ್ಗ ಅಥವಾ ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಿ ಎಂದು ಅನುಕುಮಾರ್ ಮತ್ತು ಜಗದೀಶ್ ಜೈಲು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಆದರೆ ದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಬೇಕೆಂಬ ಆಸೆ ಇದೆ. ಹಾಗಾಗಿ ಅನುಕುಮಾರ್ ಮತ್ತು ಜಗದೀಶ್ ಅವರನ್ನು ಪ್ರದೋಶ್ ಸಮಾಧಾನಪಡಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಜೈಲಿನಲ್ಲಿ ಇರುವ ಆರೋಪಿಗಳ ನಡುವೆ ಬಿರುಕು ಉಂಟಾದ ಕಾರಣದಿಂದ ಎಲ್ಲರ ಮೇಲೆ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಗಾ ಇಟ್ಟಿದ್ದಾರೆ. ಖರ್ಚು ವೆಚ್ಚ, ಮನೆ ಪರಿಸ್ಥಿತಿಗಳ ಬಗ್ಗೆ ಅನುಕುಮಾರ್ ಮತ್ತು ಜಗದೀಶ್ಗೆ ಚಿಂತೆ ಆಗಿದೆ. ಏನೋ ಮಾಡಲು ಹೋಗಿ ಇನ್ನೇನೊ ಆಯ್ತು ಎಂಬ ಪಶ್ಚಾತ್ತಾಪ ಅವರನ್ನು ಕಾಡುತ್ತಿದೆ. ಅಂದು ದರ್ಶನ್ ಸಲುವಾಗಿ ಕಿಡ್ನಾಪ್ ಮಾಡಿ ಕೊಲೆ ಕೇಸಲ್ಲಿ ಭಾಗಿಯಾಗಿದ್ದ ಅವರಿಬ್ಬರು ಈಗ ದರ್ಶನ್ ಮುಖ ನೋಡಿ ಮಾತಾಡಲು ಕೂಡ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಅಶ್ಲೀಲ ಕಮೆಂಟ್, ಅತ್ಯಾಚಾರ ಬೆದರಿಕೆ: 12 ಮಂದಿ ದರ್ಶನ್ ಫ್ಯಾನ್ಸ್ ವಿರುದ್ಧ ಮತ್ತೆ ಕೇಸ್
ಜಾಮೀನು ಸಿಗುವುದಕ್ಕೂ ಮುನ್ನ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಕಳಿಸಲಾಗಿತ್ತು. ಅದರಿಂದಾಗಿ ಅವರಿಗೆ ಭಾರಿ ಸಂಕಷ್ಟ ಆಗಿತ್ತು. ಜಾಮೀನು ರದ್ದಾಗಿ ಮತ್ತೆ ಜೈಲಿಗೆ ಬಂದಾಗ ಅವರನ್ನು ಪರಪ್ಪನ ಅಗ್ರಹಾರಕ್ಕೆ ಕಳಿಸಲಾಯಿತು. ಒಂದು ವೇಳೆ ಪುನಃ ಬಳ್ಳಾರಿ ಜೈಲಿಗೆ ಕಳಿಸಿದರೆ ದರ್ಶನ್ಗೆ ಮತ್ತೆ ಸಂಕಷ್ಟ ಹೆಚ್ಚಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.