‘ಮನಸ್ಸು ಸರಿ ಇಲ್ಲ, ವೈಯಕ್ತಿಕ ಸಮಸ್ಯೆಗಳ ಜೊತೆ ಹೋರಾಡುತ್ತಿದ್ದೇನೆ’; ನಜ್ರಿಯಾ ನಜೀಮ್
ಮಲಯಾಳಂ ನಟಿ ನಜ್ರಿಯಾ ನಜೀಮ್ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಿಂದ ದೂರ ಉಳಿದಿದ್ದರು. ಅವರ ಅನುಪಸ್ಥಿತಿಯ ಬಗ್ಗೆ ಅಭಿಮಾನಿಗಳು ಮತ್ತು ಮಾಧ್ಯಮಗಳಲ್ಲಿ ಕುತೂಹಲ ಮೂಡಿಸಿತ್ತು. ಈಗ ಅವರು ಒಂದು ಪತ್ರ ಬರೆದು ತಮ್ಮ ವೈಯಕ್ತಿಕ ಸಮಸ್ಯೆಗಳಿಂದಾಗಿ ಕೆಲಕಾಲ ದೂರ ಉಳಿದಿದ್ದೆಂದು ವಿವರಿಸಿದ್ದಾರೆ.

ಮಲಯಾಳಂ ನಟಿ ನಜ್ರಿಯಾ ನಜೀಮ್ (Nazriya Nazim) ಅವರು ಸಾಕಷ್ಟು ಪ್ರತಿಭಾನ್ವಿತ ನಟಿ. ಸತತ ಚಿತ್ರಗಳನ್ನು ಮಾಡುವ ಮೂಲಕ ಮಲಯಾಳಂನಲ್ಲಿ ಸದ್ದು ಮಾಡುತ್ತಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲೂ ತುಂಬಾ ಸಕ್ರಿಯರಾಗಿದ್ದಾರೆ. ‘ರಾಜಾ ರಾಣಿ’ ಚಿತ್ರದ ಮೂಲಕ ನಜ್ರಿಯಾ ಪ್ರೇಕ್ಷಕರಿಗೆ ಹತ್ತಿರವಾದರು. 2014ರಲ್ಲಿ ಬಂದ ‘ಬೆಂಗಳೂರು ಡೇಸ್’ ಕೂಡ ಗಮನ ಸೆಳೆಯಿತು. ಇದರಲ್ಲಿ ನಜ್ರಿಯಾ ಪತಿಯ ಪಾತ್ರವನ್ನು ಫಹಾದ್ ಫಾಜಿಲ್ ನಿರ್ವಹಿಸಿದ್ದಾರೆ. ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತು. ಅದಾದ ನಂತರ, ಅವರು ನಿಜ ಜೀವನದಲ್ಲಿ ಗಂಡ ಹೆಂಡತಿಯಾದರು. ಮದುವೆಯ ನಂತರ, ದಂಪತಿಗಳು ತಮ್ಮ ಚಲನಚಿತ್ರಗಳಲ್ಲಿ ನಿರತರಾಗಿದ್ದಾರೆ. ಈಗ ಅವರ ಕಡೆಯಿಂದ ಒಂದು ಪೋಸ್ಟ್ ಬಂದಿದೆ.
ನಜ್ರಿಯಾ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಆ್ಯಕ್ಟೀವ್ ಆಗಿಲ್ಲ. ಅವರ ನಟನೆಯ ‘ಸೂಕ್ಷ್ಮದರ್ಶಿನಿ’ ಚಿತ್ರ ಹಿಟ್ ಆಯಿತು. ಆದರೆ, ನಜ್ರಿಯಾ ಮಾತ್ರ ಯಾರ ಸಂಪರ್ಕದಲ್ಲೂ ಇಲ್ಲ ಎಂದು ತಿಳಿದುಬಂದಿದೆ. ಸ್ನೇಹಿತರು, ಕುಟುಂಬದವರು ಮತ್ತು ಚಿತ್ರರಂಗದವರು ಕರೆ ಮಾಡಿದರೂ ಯಾರೂ ಪ್ರತಿಕ್ರಿಯಿಸಲಿಲ್ಲ. ಇದರಿಂದಾಗಿ ನಜ್ರಿಯಾ ತನ್ನ ಪತಿ ಫಹಾದ್ ನಿಂದ ಬೇರ್ಪಡುತ್ತಿದ್ದಾರೆ ಎಂಬ ಸುದ್ದಿ ಹರಡಿತು. ಈ ಬಗ್ಗೆ ನಜ್ರಿಯಾ ಪತ್ರ ಬರೆದಿದ್ದಾರೆ.
‘ನೀವೆಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ನಾನು ಸ್ವಲ್ಪ ಸಮಯದಿಂದ ಎಲ್ಲರಿಂದ ದೂರ ಇದ್ದೆ. ನನಗೆ ಸ್ವಲ್ಪ ಸಮಯ ಬೇಕಿತ್ತು. ನಿಮ್ಮಲ್ಲಿ ಹಲವರಿಗೆ ತಿಳಿದಿರುವಂತೆ, ನಾನು ಯಾವಾಗಲೂ ತುಂಬಾ ಸಕ್ರಿಯನಾಗಿರುತ್ತೇನೆ. ಕಳೆದ ಕೆಲವು ತಿಂಗಳುಗಳಿಂದ ನಾನು ನನ್ನ ವೈಯಕ್ತಿಕ ಸವಾಲುಗಳೊಂದಿಗೆ ಹೋರಾಡುತ್ತಿದ್ದೇನೆ. ನನ್ನ ಮನಸ್ಸು ಸರಿ ಇಲ್ಲ’ ಎಂದಿದ್ದಾರೆ ಅವರು.
‘ಕಳೆದ ಕೆಲವು ತಿಂಗಳುಗಳಲ್ಲಿ ನಾನು ಅನೇಕ ಪ್ರಮುಖ ಘಟನೆಗಳನ್ನು ಮಿಸ್ ಮಾಡಿಕೊಂಡೆ.. ನನ್ನ 30 ನೇ ಹುಟ್ಟುಹಬ್ಬ, ಹೊಸ ವರ್ಷದ ಆಚರಣೆ, ನನ್ನ ಸೂಕ್ಷ್ಮದರ್ಶಿನಿ ಚಿತ್ರದ ಯಶಸ್ಸು ಮತ್ತು ಇತರ ಹಲವು ಪ್ರಮುಖ ಕ್ಷಣಗಳು ಮಿಸ್ ಆದವು, ಕ್ಷಮಿಸಿ’ ಎಂದಿದ್ದಾರೆ ನಜ್ರಿಯಾ.
ಇದನ್ನೂ ಓದಿ: ನಜ್ರಿಯಾ-ಫಹಾದ್ ಫಾಸಿಲ್ ದಾಂಪತ್ಯಕ್ಕೆ 10 ವರ್ಷ; ಹೇಗಿತ್ತು ನೋಡಿ ಸೆಲೆಬ್ರೇಷನ್
‘ನಾನು ಏಕೆ ಮೌನವಾಗಿದ್ದೆನೆಂದು ವಿವರಿಸದಿದ್ದಕ್ಕಾಗಿ, ಫೋನ್ ಕರೆಗಳನ್ನು ಸ್ವೀಕರಿಸದಿದ್ದಕ್ಕಾಗಿ ಅಥವಾ ಸಂದೇಶಗಳಿಗೆ ಉತ್ತರಿಸದಿದ್ದಕ್ಕಾಗಿ ನನ್ನ ಎಲ್ಲಾ ಸ್ನೇಹಿತರಲ್ಲಿ ಕ್ಷಮೆಯಾಚಿಸುತ್ತೇನೆ. ನಾನು ಉಂಟುಮಾಡಿದ ಅನಾನುಕೂಲತೆಗಾಗಿ ನಾನು ನಿಜವಾಗಿಯೂ ವಿಷಾದಿಸುತ್ತೇನೆ. ಕೆಲಸಕ್ಕಾಗಿ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರುವ ನನ್ನ ಎಲ್ಲಾ ಸಹನಟರು, ನಿರ್ದೇಶಕರು ಮತ್ತು ನಿರ್ಮಾಪಕರಿಗೆ ನಾನು ಕ್ಷಮೆಯಾಚಿಸುತ್ತೇನೆ’ ಎಂದಿದ್ದಾರೆ.
View this post on Instagram
‘ಇದು ಕಠಿಣ ಪ್ರಯಾಣವಾಗಿತ್ತು. ಆದರೆ ನಾನು ಪ್ರತಿದಿನ ಚೇತರಿಸಿಕೊಳ್ಳಲು ಮತ್ತು ಸುಧಾರಿಸಲು ಶ್ರಮಿಸುತ್ತಿದ್ದೇನೆ. ಈ ಸಮಯದಲ್ಲಿ ನಿಮ್ಮ ತಿಳುವಳಿಕೆ ಮತ್ತು ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ನನಗೆ ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು, ಆದರೆ ನಾನು ಚೇತರಿಕೆಯ ಹಾದಿಯಲ್ಲಿದ್ದೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಾನು ಇದ್ದಕ್ಕಿದ್ದಂತೆ ಏಕೆ ಕಣ್ಮರೆಯಾದೆ ಎಂಬುದನ್ನು ನನ್ನ ಎಲ್ಲಾ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ವಿವರಿಸಬೇಕೆಂದು ಅನಿಸಿದ್ದರಿಂದ ಇಂದು ಇದನ್ನು ಬರೆದಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.