Dooradarshana Review: ‘ದೂರದರ್ಶನ’ ಪರದೆಯಲ್ಲಿ ಬಿತ್ತರಗೊಂಡ ಆ ದಿನಗಳ ನೆನಪು; ಬೇಕಿತ್ತು ಇನ್ನಷ್ಟು ಹೊಳಪು

Dooradarshana Kannada Movie: ‘ದೂರದರ್ಶನ’ ಎಂದರೆ ಇದು ಕೇವಲ ಟಿವಿ ಸುತ್ತಮುತ್ತ ಹೆಣೆದ ಕಥೆ ಎಂದು ಪ್ರೇಕ್ಷಕರು ಊಹಿಸುವುದು ಸಹಜ. ಆದರೆ ಇದು ಬರೀ ಟಿವಿ ವಿಷಯಕ್ಕೆ ಸೀಮಿತವಾದ ಕಥೆಯಲ್ಲ.

Dooradarshana Review: ‘ದೂರದರ್ಶನ’ ಪರದೆಯಲ್ಲಿ ಬಿತ್ತರಗೊಂಡ ಆ ದಿನಗಳ ನೆನಪು; ಬೇಕಿತ್ತು ಇನ್ನಷ್ಟು ಹೊಳಪು
‘ದೂರದರ್ಶನ’ ಸಿನಿಮಾ ಪೋಸ್ಟರ್​

Updated on: Mar 03, 2023 | 3:35 PM

ಚಿತ್ರ: ದೂರದರ್ಶನ

ನಿರ್ಮಾಣ: ರಾಜೇಶ್​ ಭಟ್​

ನಿರ್ದೇಶನ: ಸುಕೇಶ್​ ಶೆಟ್ಟಿ

ಇದನ್ನೂ ಓದಿ
Triple Riding Movie Review: ‘ತ್ರಿಬಲ್​ ರೈಡಿಂಗ್​’ ರೇಸ್​ನಲ್ಲಿ ಓವರ್​ಟೇಕ್​ ಮಾಡಿದ ಸಾಧುಕೋಕಿಲ, ರಂಗಾಯಣ ರಘು
Shubhamangala: ‘ಶುಭಮಂಗಳ’ ಸಿನಿಮಾ ವಿಮರ್ಶೆ; ಇದು ಆರು ಪ್ರೇಮಕಥೆಗಳ ಸುಂದರ ಸಂಕಲನ
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Guru Shishyaru Review: ರೋಚಕ ಖೊಖೊ ಪಂದ್ಯದ ಜೊತೆ ಹಿತ-ಮಿತವಾದ ಕಾಮಿಡಿ

ಪಾತ್ರವರ್ಗ: ಪೃಥ್ವಿ ಅಂಬಾರ್​, ಉಗ್ರಂ ಮಂಜು, ಅಯಾನಾ, ಸುಂದರ್​ ವೀಣಾ, ಹುಲಿ ಕಾರ್ತಿಕ್​ ಮುಂತಾದವರು.

ಸ್ಟಾರ್​: 3/5

‘ದೂರದರ್ಶನ’ ಎಂಬ ಶೀರ್ಷಿಕೆ ಕೇಳಿದರೆ ಥಟ್​ ಅಂತ ನೆನಪಾಗೋದು 80-90ರ ದಶಕ. ಭಾರತಕ್ಕೆ ಟಿವಿ ಕಾಲಿಟ್ಟ ಸಮಯದಲ್ಲಿ ಒಂದು ಸಂಚಲನವೇ ಸೃಷ್ಟಿ ಆಗಿತ್ತು. ಪ್ರತಿ ಊರಿನಲ್ಲಿ ಸಾಕಷ್ಟು ಬದಲಾವಣೆಗಳು ಆದವು. ಜಗತ್ತಿನ ಅನೇಕ ವಿಚಾರಗಳು ಮನೆ-ಮನೆಗೆ ತಲುಪುವಂತಾಯಿತು. ಮನರಂಜನೆಗೆ ಹೊಸ ಆಯಾಮ ಸಿಕ್ಕಿತು. ಅದರ ಜೊತೆಗೆ ಜನರ ನಡುವಿನ ಸಂಬಂಧಗಳು ಕೂಡ ಬದಲಾಗತೊಡಗಿದವು. ಈ ಎಲ್ಲ ಘಟನೆಗಳನ್ನು ಕೇಂದ್ರವಾಗಿ ಇಟ್ಟುಕೊಂಡು ‘ದೂರದರ್ಶನ’ ಸಿನಿಮಾ ಮಾಡಲಾಗಿದೆ. ಈ ಚಿತ್ರದಲ್ಲಿ ಪೃಥ್ವಿ ಅಂಬಾರ್​ ಮತ್ತು ಉಗ್ರಂ ಮಂಜು ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಸುಕೇಶ್​ ಶೆಟ್ಟಿ ನಿರ್ದೇಶನದ ಈ ಚಿತ್ರ ಒಟ್ಟಾರೆಯಾಗಿ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

ನೆನಪಿನ ಪುಟ ತೆರೆದಿಡುವ ಸಿನಿಮಾ:

ಮೊದಲ ಬಾರಿಗೆ ಟಿವಿ ಬಂದಾಗ ಆ ಫೀಲ್​ ಹೇಗಿತ್ತು ಎಂಬುದು ಇಂದಿನ ಹೊಸ ತಲೆಮಾರಿನ ಮಕ್ಕಳಿಗೆ ಅರ್ಥವಾಗೋದು ಕಷ್ಟ. ಆ ದಿನಗಳ ಅನುಭವವೇ ಭಿನ್ನ. ವಾರಕ್ಕೊಂದು ಸಿನಿಮಾ, ಪ್ರತಿ ವಾರ ಚಿತ್ರಮಂಜರಿ ನೋಡಿಕೊಂಡು ಬೆಳೆದವರಿಗೆ ಮಾತ್ರ ಅದರ ಮಜಾ ಏನೆಂಬುದು ಗೊತ್ತು. ಆ ನೆನಪುಗಳ ಪುಟ ತೆರೆಯುವ ರೀತಿಯಲ್ಲಿ ‘ದೂರದರ್ಶನ’ ಸಿನಿಮಾ ಮೂಡಿಬಂದಿದೆ.

ಇದು ಬರೀ ಟಿವಿಯ ಕಥೆಯಲ್ಲ:

ನಿರ್ದೇಶಕ ಸುಕೇಶ್​ ಶೆಟ್ಟಿ ಅವರು ‘ದೂರದರ್ಶನ’ ಎಂಬ ಶೀರ್ಷಿಕೆಯಲ್ಲಿ ಸಿನಿಮಾ ಮಾಡಿದಾಗ ಇದು ಕೇವಲ ಟಿವಿ ಸುತ್ತಮುತ್ತ ಹೆಣೆದ ಕಥೆ ಎಂದು ಪ್ರೇಕ್ಷಕರು ಊಹಿಸುವುದು ಸಹಜ. ಆದರೆ ಇದು ಕೇವಲ ಟಿವಿ ವಿಷಯಕ್ಕೆ ಸೀಮಿತವಾದ ಕಥೆಯಲ್ಲ. ಇದರಲ್ಲಿ ಒಂದು ಲವ್​ ಸ್ಟೋರಿ ಇದೆ. ದ್ವೇಷದ ಕಹಾನಿ ಇದೆ. ಪ್ರತಿಷ್ಠೆ ಮತ್ತು ದುರಾಸೆಗೆ ಒಳಗಾದ ವ್ಯಕ್ತಿಯ ಕಥೆಯೂ ಇದೆ. ಮನ ಪರಿವರ್ತನೆ ಆಗುವಂತಹ ಕ್ಷಣಗಳಿವೆ. ಹೀಗೆ ಹಲವು ಆಯಾಮದಲ್ಲಿ ಚಿತ್ರವನ್ನು ಕಟ್ಟಿಕೊಡಲಾಗಿದೆ.

ಇದನ್ನೂ ಓದಿ: ‘ವೀರ ಸಿಂಹ ರೆಡ್ಡಿ’ ಚಿತ್ರ ನೋಡಿ ವಿಮರ್ಶೆ ತಿಳಿಸಿದ ರಜನಿಕಾಂತ್​; ಬಾಲಯ್ಯನ ಚಿತ್ರ ಇಷ್ಟ ಆಯ್ತಾ?

ಉಗ್ರಂ ಮಂಜುಗೆ ಡಿಫರೆಂಟ್​ ಪಾತ್ರ:

ನಟ ಉಗ್ರಂ ಮಂಜು ಅವರು ವಿಲನ್​ ಪಾತ್ರಗಳ ಮೂಲಕ ಈಗಾಗಲೇ ಗಮನ ಸೆಳೆದಿದ್ದಾರೆ. ‘ದೂರದರ್ಶನ’ ಚಿತ್ರದಲ್ಲೂ ಅದು ಮುಂದುವರಿದಿದೆ. ಹಾಗಂತ ಇದು ಪ್ರೇಕ್ಷಕರು ಸುಲಭವಾಗಿ ಊಹಿಸಿ ಬಿಡುವಂತಹ ಕೆಟ್ಟ ಗುಣಗಳಿರುವ ವಿಲನ್​ ಪಾತ್ರ ಅಲ್ಲ. ಆತ ಕೆಟ್ಟವನಾಗಲು ಒಂದು ಕಾರಣ ಕೂಡ ಇದೆ. ಆತನ ಒಳಗೂ ಒಳ್ಳೆಯತನದ ಸಣ್ಣ ಒರತೆ ಇದೆ. ಇಂಥ ಒಂದು ಸಂಕೀರ್ಣವಾದ ಪಾತ್ರವನ್ನು ಅವರು ನಿಭಾಯಿಸಿದ್ದಾರೆ.

ಲವರ್​ ಬಾಯ್​ ಪೃಥ್ವಿ ಅಂಬಾರ್​:

‘ದಿಯಾ’ ಸಿನಿಮಾ ಸೂಪರ್ ಹಿಟ್​ ಆದ ಬಳಿಕ ಪೃಥ್ವಿ ಅಂಬಾರ್​ ಅವರ ಖ್ಯಾತಿ ಹೆಚ್ಚಿತು. ಲವರ್​ ಬಾಯ್​ ರೀತಿಯ ಪಾತ್ರಗಳಲ್ಲಿ ಅವರನ್ನು ನೋಡಲು ಪ್ರೇಕ್ಷಕರು ಇಷ್ಟಪಡುತ್ತಾರೆ. ಅಂತವರಿಗೆ ‘ದೂರದರ್ಶನ’ ಸಿನಿಮಾ ಇಷ್ಟ ಆಗುತ್ತದೆ. ಆದರೆ ಕೇವಲ ಪ್ರೀತಿ-ಪ್ರೇಮಕ್ಕೆ ಅವರ ಈ ಪಾತ್ರ ಸೀಮಿತವಾಗಿಲ್ಲ. ಅದರಾಚೆಗೂ ಹಲವು ಭಾವಗಳನ್ನು ವ್ಯಕ್ತಪಡಿಸಲು ಅವಕಾಶ ಇರುವಂತಹ ಪಾತ್ರ ಅವರಿಗೆ ಈ ಸಿನಿಮಾದಲ್ಲಿದೆ. ಅದನ್ನು ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿರುವ ಅಯಾನಾ ಅವರ ನಟನೆ ಮೆಚ್ಚುವಂತಿದೆ. ದೀಪಕ್​ ರೈ ಪಣಾಜೆ, ಹುಲಿ ಕಾರ್ತಿಕ್​, ಹರಿಣಿ ಶ್ರೀಕಾಂತ್​, ರಘು ರಾಮನಕೊಪ್ಪ ಮುಂತಾದವರು ಕೂಡ ಸಹಜಾಭಿನಯ ನೀಡಿದ್ದಾರೆ.

ಇದನ್ನೂ ಓದಿ: 19 20 21 Movie Review: ನಾಡಿನ ಜನ ನೋಡಲೇಬೇಕಾದ ಕಾಡಿನ ಮಕ್ಕಳ ಕಥೆ ಮತ್ತು ಘನತೆ

ರೆಟ್ರೋ ಕಾಲದ ಸನ್ನಿವೇಶಗಳನ್ನು ಕಟ್ಟಿಕೊಡಲು ಮಲೆನಾಡಿನ ಪರಿಸರವನ್ನು ನಿರ್ದೇಶಕರು ಆಯ್ದುಕೊಂಡಿದ್ದಾರೆ. ಆ ವಿಚಾರದಲ್ಲಿ ಅವರು ಬಹುಪಾಲು ಯಶಸ್ವಿ ಆಗಿದ್ದಾರೆ. ಆದರೆ ತಾಂತ್ರಿಕವಾಗಿ ಈ ಚಿತ್ರಕ್ಕೆ ಇನ್ನಷ್ಟು ಗುಣಮಟ್ಟ ಬೇಕಿತ್ತು. ಛಾಯಾಗ್ರಹಣವನ್ನು ಸ್ವಲ್ಪ ಉತ್ತಮಗೊಳಿಸಿದ್ದರೆ ಚಿತ್ರದ ಹೊಳಪು ಹೆಚ್ಚುತ್ತಿತ್ತು. ಹಾಡುಗಳಲ್ಲಿ ವಾಸುಕಿ ವೈಭವ್​ ಅವರು ಎಂದಿನಂತೆ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಟಿ.ಜಿ. ನಂದೀಶ್​ ಬರೆದಿರುವ ಪಂಚಿಂಗ್​ ಸಂಭಾಷಣೆಗಳು ಕಾಮಿಡಿ ಕಚಗುಳಿ ಇಡುತ್ತವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:32 pm, Fri, 3 March 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us