ಪ್ರಶಾಂತ್ ನೀಲ್ ಹಾರರ್ ಸಿನಿಮಾಗೆ ಸೆನ್ಸಾರ್ ಕಿರಿಕ್? ಭಯಾನಕವಾಗಿದೆ ‘418’ ಸಿನಿಮಾ?
ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಪ್ರಸ್ತುತಪಡಿಸುತ್ತಿರುವ '418' ಹಾರರ್ ಸಿನಿಮಾ ಸೆನ್ಸಾರ್ ಮಂಡಳಿಯ ಅಡ್ಡಿಯಿಂದಾಗಿ ಸಿಲುಕಿಕೊಂಡಿದೆ. ಚಿತ್ರದಲ್ಲಿ ಅತಿಯಾದ ಭಯಾನಕ ದೃಶ್ಯಗಳಿವೆ ಎಂದು ಸಿಬಿಐಸಿ ಆಕ್ಷೇಪ ಎತ್ತಿದ್ದು, ಚಿತ್ರತಂಡ ಈಗ ಪರಿಶೀಲನಾ ಸಮಿತಿಯನ್ನು ಸಂಪರ್ಕಿಸಿದೆ. ಸೆನ್ಸಾರ್ ಸಮಸ್ಯೆ ಮುಗಿದ ಬಳಿಕ ಹೊಸ ರಿಲೀಸ್ ಡೇಟ್ ಘೋಷಣೆಯಾಗಲಿದೆ.

ಮುಖ್ಯಾಂಶಗಳು
- ಸೆನ್ಸಾರ್ ಮಂಡಳಿಯ ಬಿಗ್ ಶಾಕ್
- '418' ಸಿನಿಮಾಗೆ ಸಿಗಲಿಲ್ಲ ಪ್ರಮಾಣಪತ್ರ
- ರಿವೈಸಿಂಗ್ ಕಮಿಟಿ ಬಾಗಿಲು ತಟ್ಟಿದ ಚಿತ್ರತಂಡ
ಎಲ್ಲಾ ಹಾರರ್ ಸಿನಿಮಾಗಳನ್ನು ಎಲ್ಲರೂ ವೀಕ್ಷಿಸಲೂ ಸಾಧ್ಯವಿಲ್ಲ. ಅತಿಯಾದ ಭಯಾನಕತೆ ಇದ್ದರೆ ನೋಡೋಕೆ ಎರಡು ಗುಂಡಿಗೆ ಬೇಕಾಗುತ್ತದೆ. ಆಗ ಸೆನ್ಸಾರ್ ಮಂಡಳಿ ಮಧ್ಯ ಪ್ರವೇಶಿಸುತ್ತದೆ. ಅತಿಯಾದ ಭಯಾನಕತೆ ಇದ್ದರೆ ಆ ದೃಶ್ಯಕ್ಕೆ ಕತ್ತರಿ ಹಾಕುತ್ತದೆ. ಈಗ ‘ಕೆಜಿಎಫ್’ ಮತ್ತು ‘ಸಲಾರ್’ (Salaar) ಚಿತ್ರಗಳ ಮೂಲಕ ದೇಶಾದ್ಯಂತ ಹೆಸರು ಮಾಡಿರುವ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಪ್ರಸ್ತುತಪಡಿಸುತ್ತಿರುವ ‘418’ ಸಿನಿಮಾ ಕಷ್ಟಕ್ಕೆ ಸಿಲುಕಿದೆ. ಜುಲೈ 31ರಂದು ತೆರೆಗೆ ಬರಬೇಕಿದ್ದ ಈ ಹಾರರ್ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಇನ್ನೂ ಹಸಿರು ನಿಶಾನೆ ಸಿಕ್ಕಿಲ್ಲ. ಚಿತ್ರದಲ್ಲಿ ಅತಿಯಾದ ಭಯಾನಕ ದೃಶ್ಯಗಳಿವೆ ಎಂಬ ಕಾರಣಕ್ಕೆ ಸೆನ್ಸಾರ್ ಮಂಡಳಿ ಅಡ್ಡಿಪಡಿಸಿದೆ.
ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ‘418’ ಸಿನಿಮಾವನ್ನು ನಿರ್ಮಿಸಿದೆ. ಚಿತ್ರದಲ್ಲಿ ಹಾರರ್ ಅಂಶಗಳು ಹೆಚ್ಚಾಗಿವೆ ಎಂದು ಸಿಬಿಐಸಿ ಆಕ್ಷೇಪ ಎತ್ತಿದೆ. ಇದರಿಂದಾಗಿ ಚಿತ್ರತಂಡವು ಈಗ ಪರಿಶೀಲನಾ ಸಮಿತಿಯ ಬಾಗಿಲು ತಟ್ಟಿದೆ. ಸೆನ್ಸಾರ್ ಸಮಸ್ಯೆ ಬಗೆಹರಿದ ನಂತರವಷ್ಟೇ ಹೊಸ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಲಿದೆ.
ಇತ್ತೀಚಿನ ದಿನಗಳಲ್ಲಿ ಅನೇಕ ಸಿನಿಮಾಗಳು ಸೆನ್ಸಾರ್ ಮಂಡಳಿಯಿಂದ ಇಂತಹ ತೊಡಕುಗಳನ್ನು ಎದುರಿಸುತ್ತಿವೆ. ‘ಜನ ನಾಯಗನ್’ ಸಿನಿಮಾಗೆ ಆರು ತಿಂಗಳ ಬಳಿಕ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿತ್ತು. ‘ರಂಭಾ ಊರ್ವಶಿ ಮೇನಕಾ’, ‘ಕೊರಿಯನ್ ಕನಕರಾಜು’ ಚಿತ್ರಕ್ಕೂ ಸೆನ್ಸಾರ್ ತೊಂದರೆ ಉಂಟಾಗಿತ್ತು.
Excessive Horror Elements In A Horror Film pic.twitter.com/BuznVQWF3y
— Aakashavaani (@TheAakashavaani) September 1, 2026
ಮೊದಲೇ ಸೂಚನೆ ನೀಡಿರುವಂತೆ ಇದೊಂದು ಹಾರರ್ ಸಿನಿಮಾ. ಇದರಲ್ಲಿ ಹಾರರ್ ದೃಶ್ಯಗಳಿವೆ ಎಂದು ಸೆನ್ಸಾರ್ ತಡೆದಿರುವುದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ. ‘ಎ’ ಪ್ರಮಾಣಪತ್ರ ನೀಡಿ ಸಿನಿಮಾ ಬಿಡುಗಡೆ ಮಾಡಲು ಅವಕಾಶ ಕೊಡಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ‘ಭಯ ಹುಟ್ಟಿಸುವ ಸಿನಿಮಾಗಾಗಿ ಕಾಯುತ್ತಿದ್ದ ನಮಗೆ ಈ ನಿರ್ಧಾರ ಬೇಸರ ತಂದಿದೆ’ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ‘ಡ್ರ್ಯಾಗನ್ಗೂ ಮುನ್ನ ಪ್ರಶಾಂತ್ ನೀಲ್ ಹೊಸ ಸಾಹಸ; ಹಾರರ್ ಸಿನಿಮಾ ಪ್ರೆಸೆಂಟರ್ ಆದ ನಿರ್ದೇಶಕ
‘418’ ಸಿನಿಮಾದಲ್ಲಿ ಸೂರ್ಯ ರಾಜ್, ಚರಣ್ ಲಕ್ಕರಾಜು ಮತ್ತು ಪ್ರೀತಿ ಪಗಡಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಶಾಂತ್ ನೀಲ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಕೀರ್ತನ್ ನಡಗೌಡ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕೀರ್ತನ್ ಅವರಿಗೆ ನಿರ್ದೇಶಕನಾಗಿ ಇದು ಚೊಚ್ಚಲ ಅನುಭವ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




