ನಿಂತು ಹೋಗಿದ್ದ ಬಿಗ್ ಬಜೆಟ್ ಚಿತ್ರ ಕೈಗೆತ್ತಿಕೊಂಡ ರಿಷಬ್? ನಟನೆಯ ಜೊತೆಗೆ ನಿರ್ದೇಶನ
ಕಾಂತಾರ ಗೆಲುವಿನ ಬಳಿಕ ರಿಷಬ್ ಶೆಟ್ಟಿ ಅವರು ವಿಶ್ರಾಂತಿ ಪಡೆಯುತ್ತಿದ್ದು, ಈಗ ನಿಂತುಹೋಗಿದ್ದ ದೊಡ್ಡ ಬಜೆಟ್ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ ಎಂಬ ಸುದ್ದಿ ಇದೆ. ಎಂ.ಟಿ. ವಾಸುದೇವನ್ ನಾಯರ್ ಅವರ 'ರಂಡಮೂಳಂ' ಕಾದಂಬರಿ ಆಧರಿಸಿದ ಈ ಸಿನಿಮಾವನ್ನು ರಿಷಬ್ ಅವರೇ ನಿರ್ದೇಶಿಸಿ, ನಟಿಸಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಹಲವಾರು ಪ್ರಯತ್ನಗಳು ವಿಫಲವಾಗಿದ್ದ ಈ ಮಹತ್ವಾಕಾಂಕ್ಷಿ ಯೋಜನೆಗೆ ರಿಷಬ್ ಮರುಜೀವ ನೀಡಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.

ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಗೆಲುವಿನ ಬಳಿಕ ಬ್ರೇಕ್ ಪಡೆದಿದ್ದಾರೆ. ಕುಟುಂಬದ ಜೊತೆ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ. ಈಗ ರಿಷಬ್ ಶೆಟ್ಟಿ ಅವರು ನಟನೆಯ ಕಡೆ ಗಮನ ಹರಿಸುತ್ತಿದ್ದಾರೆ. ಒಪ್ಪಿಕೊಂಡ ಸಿನಿಮಾಗಳ ಶೂಟ್ನ ಅವರು ಪೂರ್ಣಗೊಳಿಸಬೇಕಿದೆ. ಈ ಮಧ್ಯೆ ಅವರು ಹೊಸ ಸಿನಿಮಾ ಕೈಗೆತ್ತಿಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ. ಅದು ಕೂಡ ನಿಂತು ಹೋದ ಬಿಗ್ ಬಜೆಟ್ ಚಿತ್ರ ಎಂಬ ವದಂತಿ ಹರಿದಾಡಿದೆ.
ಮಲಯಾಳಂ ಚಿತ್ರರಂಗದಲ್ಲಿ ‘ರಂಡಮೂಳಂ’ ಎಂಬ ಸಿನಿಮಾ ಸೆಟ್ಟೇರಬೇಕಿತ್ತು. ಎಂಟಿ ವಾಸುದೇವ್ ನಾಯರ್ ಬರೆದ ‘ರಂಡಮೂಳಂ’ ಕಾದಂಬರಿಯನ್ನು ಆಧರಿಸಿ ಸಿನಿಮಾ ಸಿದ್ಧಗೊಳ್ಳಬೇಕಿತ್ತು. ಆದರೆ, ಸಿನಿಮಾ ಸೆಟ್ಟೇರಿರಲಿಲ್ಲ. ಈಗ ಇದಕ್ಕೆ ರಿಷಬ್ ಶೆಟ್ಟಿ ಅವರು ಮರುಜೀವ ತುಂಬಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ಅವರೇ ನಿರ್ದೇಶನ ಮಾಡಲಿದ್ದು, ನಟನೆ ಕೂಡ ಅವರದ್ದೇ ಎಂದು ಮಲಯಾಳಂನ ‘ಮಾತೃಭೂಮಿ’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಮೊದಲು ‘ರಂಡಮೂಳನ್’ ಕಥೆಯನ್ನು ಸಿನಿಮಾ ಮಾಡುವ ಸಾಕಷ್ಟು ಪ್ರಯತ್ನಗಳು ನಡೆದವು. ಸಾಕಷ್ಟು ದೊಡ್ಡ ನಿರ್ಮಾಣ ಸಂಸ್ಥೆಗಳು ಇದನ್ನು ಮಾಡಲು ಆಸಕ್ತಿ ತೋರಿಸಿ ಸುಮ್ಮನಾದರು. ನಿರ್ದೇಶಕ ಶ್ರೀಕುಮಾರ್ ಮೆನನ್ ಕಾಂಟ್ರ್ಯಾಕ್ಟ್ ಕೂಡ ಸಹಿ ಮಾಡಿದ್ದರು. ಆದರೆ, ಅವರು ಸಿನಿಮಾದಿಂದ ಹಿಂದೆ ಸರಿದಿದ್ದಾರೆ.
ಇದನ್ನೂ ಓದಿ: ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಪ್ರೀತಿಯಿಂದ ವಿಶ್ ಮಾಡಿದ ರಿಷಬ್ ಶೆಟ್ಟಿ
ಎಂ.ಟಿ. ವಾಸುದೇವನ್ ನಾಯರ್ ಅವರ ಪುತ್ರಿ ಅಶ್ವತಿ ಇತ್ತೀಚೆಗೆ ಒಂದು ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದರು. ‘ಕಳೆದ ಎರಡು ವರ್ಷಗಳ ಹಿಂದೆ ನಾನು ಈ ಪ್ರಾಜೆಕ್ಟ್ನ ಕೈಗೆತ್ತಿಕೊಂಡಿದ್ದೇನೆ ಮತ್ತು ಸಂಪೂರ್ಣವಾಗಿ ನನ್ನನ್ನು ನಾಉ ತೊಡಗಿಸಿಕೊಂಡಿದ್ದೇನೆ. ಇದು ಒಂದು ದೊಡ್ಡ ತಂಡ. ತಂಡ ಕಟ್ಟುವ ಕೆಲಸ ಬಹುತೇಕ ಪೂರ್ಣಗೊಂಡಿದೆ’ ಎಂದು ಹೇಳಿದ್ದರು. ‘ಒಂದು ದೊಡ್ಡ ನಿರ್ಮಾಣ ಸಂಸ್ಥೆ ಮತ್ತು ಈ ಚಿತ್ರವನ್ನು ಚೆನ್ನಾಗಿ ನಿರ್ಮಿಸುವ ಸಾಮರ್ಥ್ಯವಿರುವ ತಂಡವಿದೆ’ ಎಂದಿದ್ದರು ಅವರು. ಈ ತಂಡದ ಕ್ಯಾಪ್ಟನ್ ರಿಷಬ್ ಆಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




