ದರ್ಶನ್ ಅಭಿಮಾನಿಯಾಗಿ ಡಿ ಬಾಸ್ ಕಟೌಟ್ ಮುಂದೆ ‘ದೇವಿ’ ಹೀರೋ ಚೇತನ್ ಸಾಹಸ
‘ದೇವಿ’ ಚಿತ್ರದಲ್ಲಿ ಚೇತನ್ ಗೌಡ ಅವರು ದರ್ಶನ್ ಅಭಿಮಾನಿಯಾಗಿ ನಟಿಸುತ್ತಿದ್ದಾರೆ. ಯಶ್ ಶೆಟ್ಟಿ, ಹುಲಿ ಕಾರ್ತಿಕ್, ಜಗ್ಗ ಮಮ್ಮಿ, ಕಾಕ್ರೋಚ್ ಸುಧಿ, ಶ್ರೇಯಾ, ಶರತ್ ಬಾಬು ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಅಜಿತ್ ಕುಮಾರ್ ಅವರ ಛಾಯಾಗ್ರಹಣ, ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ ನಿರ್ದೇಶನ, ಮಾಸ್ತಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ.

ಅನೇಕ ಹೊಸ ಹೀರೋಗಳಿಗೆ ನಟ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ (Darshan) ಅವರೇ ಸ್ಫೂರ್ತಿ. ಮಂಡ್ಯದ ಯುವ ರೈತ ಚೇತನ್ ಗೌಡ ಅವರು ಕೂಡ ಇದಕ್ಕೆ ಹೊರತಲ್ಲ. ಅವರು ಹೀರೋ ಆಗಿ ‘ದೇವಿ’ (Devi) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ನಿಜ ಜೀವನದಲ್ಲಿ ದರ್ಶನ್ ಅಭಿಮಾನಿ ಆಗಿರುವ ಅವರು ‘ದೇವಿ’ ಸಿನಿಮಾದಲ್ಲೂ ಡಿ ಬಾಸ್ (D Boss) ಫ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ನಡೆಯುತ್ತಿದೆ.
‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋ ಖ್ಯಾತಿಯ ಭವ್ಯ ಗೌಡ ಅವರು ‘ದೇವಿ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ದೇವಿ’ ಶೀರ್ಷಿಕೆಗೆ ‘ಅಮ್ಮ ಅಂದ್ರೆ ತುಪ್ಪ, ಅಮ್ಮನ್ ಅಂದ್ರೆ ಹಾಲು ತುಪ್ಪ’ ಎಂಬ ಅಡಿ ಬರಹವಿದೆ. ಸಿನಿಮಾದ ಕಥೆ ಹೇಗಿರಬಹುದು ಎಂಬುದನ್ನು ಈ ಟ್ಯಾಗ್ ಲೈನ್ ಸೂಚಿಸುತ್ತಿದೆ. ಈ ಚಿತ್ರಕ್ಕೆ ಚೇತನ್ ಗೌಡ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಪ್ರಕಾಶ್ ಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ.
‘ದೇವಿ’ ಸಿನಿಮಾಗೆ ಲಗ್ಗೆರೆಯ ‘ಆಕಾಶ್’ ಚಿತ್ರಮಂದಿರದ ಮುಂದೆ ನಿಲ್ಲಿಸಿದ್ದ ದರ್ಶನ್ ಅವರ 50 ಅಡಿ ಎತ್ತರದ ಕಟೌಟ್ ಮುಂದೆ ಸಾಹಸ ದೃಶ್ಯದ ಶೂಟಿಂಗ್ ಮಾಡಲಾಗಿದೆ. ದಿಲೀಪ್ ಅವರು ಸಾಹಸ ದೃಶ್ಯವನ್ನು ಸಂಯೋಜನೆ ಮಾಡುತ್ತಿದ್ದಾರೆ. ಚೇತನ್ ಗೌಡ ಹಾಗೂ ನೂರಾರು ಸಹ ಕಲಾವಿದರ ಜೊತೆ ಹುಲಿ ಕಾರ್ತಿಕ್, ಜಗ್ಗ, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ ಮುಂತಾದವರು ಈ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
ಶೂಟಿಂಗ್ ಬಿಡುವಿನ ನಡುವೆಯೇ ‘ದೇವಿ’ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ಚೇತನ್ ಗೌಡ ಅವರು ಕಥೆ ಬಗ್ಗೆ ಮಾಹಿತಿ ನೀಡಿದರು. ‘ಸಾಧನೆ ಮಾಡಲು ಹಳ್ಳಿಯಿಂದ ನಗರಕ್ಕೆ ಬಂದ ಹುಡುಗನೊಬ್ಬ ಸಂದರ್ಭದ ಸುಳಿಗೆ ಸಿಕ್ಕು ರೌಡಿಸಂಗೆ ಇಳಿಯುವ ಕಥೆ ಈ ಚಿತ್ರದಲ್ಲಿ ಇದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ನಾನು ದರ್ಶನ್ ಅವರ ಅಭಿಮಾನಿ. ಈ ಸಿನಿಮಾದಲ್ಲೂ ದರ್ಶನ್ ಫ್ಯಾನ್ ಆಗಿಯೇ ನಟಿಸಿದ್ದೇನೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ಈ ಚಿತ್ರದಲ್ಲಿ ಶರತ್ ಬಾಬು ಅವರು ಮುಖ್ಯ ವಿಲನ್ ಆಗಿ ನಟಿಸುತ್ತಿದ್ದಾರೆ. ಶಿವಮೊಗ್ಗ ಜೈಲಿನಲ್ಲೂ ಒಂದು ಫೈಟ್ ಸೀನ್ ಶೂಟಿಂಗ್ ಮಾಡಲಾಗಿದೆ. ‘ಶಾಸ್ತ್ರಿ’ ಸಿನಿಮಾದ ನಿರ್ಮಾಪಕರಾದ ಅಣಜಿ ನಾಗರಾಜ್ ಅವರು ಚಿತ್ರತಂಡಕ್ಕೆ ಸಾಕಷ್ಟು ಬೆಂಬಲ ನೀಡುತ್ತಿದ್ದಾರೆ ಎಂದು ಚೇತನ್ ಗೌಡ ಹೇಳಿದ್ದಾರೆ. ಸಿನಿಮಾಗೆ ಇನ್ನೂ 45 ದಿನಗಳ ಶೂಟಿಂಗ್ ಬಾಕಿ ಇದೆ ಎಂದು ನಿರ್ದೇಶಕ ಪ್ರಕಾಶ್ ಕುಮಾರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




