ಮನಸ್ಸು ಬದಲಿಸಿ ಟಿವಿ ಬೇಕು ಎಂದ ದರ್ಶನ್; ಹೆಚ್ಚಿತು ಚಾರ್ಜ್​ಶೀಟ್ ಆತಂಕ

ಚಾರ್ಜ್​ಶೀಟ್​ ಬಗ್ಗೆ ದರ್ಶನ್​ ಪದೇಪದೇ ಜೈಲಿನ ಸಿಬ್ಬಂದಿ ಬಳಿ ಕೇಳಿದ್ದಾರೆ. ಆದರೆ ಸೂಕ್ತ ಮಾಹಿತಿ ಸಿಕ್ಕಿಲ್ಲದ ಕಾರಣ ಟಿವಿ ಮೂಲಕ ತಿಳಿಯಲು ನಿರ್ಧರಿಸಿದ್ದಾರೆ. ಆದ್ದರಿಂದ ಇಷ್ಟು ದಿನ ಟಿವಿಯೇ ಬೇಡ ಎಂಬಂತೆ ಇದ್ದ ಅವರು ಈಗ ಮೇಲಧಿಕಾರಿಗಳ ಬಳಿ ಟಿವಿ ಬೇಕು ಎಂದು ಮನವಿ ಸಲ್ಲಿಸಿದ್ದಾರೆ. ದರ್ಶನ್​ ಇರುವ ಸೆಲ್​ಗೆ ಟಿವಿ ನೀಡಲು ಬಳ್ಳಾರಿ ಜೈಲಿನ ಅಧಿಕಾರಿಗಳು ಯೋಚಿಸುತ್ತಿದ್ದಾರೆ.

ಮನಸ್ಸು ಬದಲಿಸಿ ಟಿವಿ ಬೇಕು ಎಂದ ದರ್ಶನ್; ಹೆಚ್ಚಿತು ಚಾರ್ಜ್​ಶೀಟ್ ಆತಂಕ
ದರ್ಶನ್
Edited By:

Updated on: Sep 03, 2024 | 4:10 PM

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಎ2 ಆಗಿರುವ ದರ್ಶನ್​ ಈಗ ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಈ ಕೇಸ್​ನ ತನಿಖೆ ಕೊನೇ ಹಂತಕ್ಕೆ ಬಂದಿದೆ. ಬೆಂಗಳೂರು ಪೊಲೀಸರು ಇನ್ನು ಎರಡೇ ದಿನದಲ್ಲಿ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಕೆ ಮಾಡಲಿದ್ದಾರೆ. ಈ ಹಂತದಲ್ಲಿ ನಟ ದರ್ಶನ್​ಗೆ ಆತಂಕ ಶುರುವಾಗಿದೆ. ಚಾರ್ಜ್​​ಶೀಟ್​ ಬಗ್ಗೆ ತಿಳಿದುಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ, ಬಳ್ಳಾರಿ ಜೈಲಿನಲ್ಲಿ ತಮಗೆ ಟಿವಿ ಬೇಕು ಎಂದು ಮೇಲಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಅಚ್ಚರಿ ಏನೆಂದರೆ, ಇಷ್ಟು ದಿನಗಳ ಕಾಲ ದರ್ಶನ್​ ಅವರು ಟಿವಿ ಬೇಕು ಎಂದು ಕೇಳಿರಲಿಲ್ಲ. ಆದರೆ ಚಾರ್ಜ್​ಶೀಟ್​ ಬಗ್ಗೆ ಪದೇಪದೇ ಜೈಲಿನ ಸಿಬ್ಬಂದಿಯ ಬಳಿ ವಿಚಾರಿಸಿದ್ದರು. ಈ ಹಿನ್ನೆಲೆಯಲ್ಲಿ ಟಿವಿ ಬೇಕಿದ್ದರೆ ಜೈಲಧಿಕಾರಿಗೆ ಮನವಿ ಮಾಡಿ ಎಂದು ಸಿಬ್ಬಂದಿ ಕೂಡ ಸಲಹೆ ನೀಡಿದ್ದರು. ಆದರೆ ಆಗ ದರ್ಶನ್​ ಅವರು ಟಿವಿ ಸಹವಾಸ ಬೇಡ ಎಂಬ ರೀತಿ ಮೌನವಾಗಿದ್ದರು. ಆದರೆ ಇಂದು (ಸೆಪ್ಟೆಂಬರ್​ 3) ಮನಸ್ಸು ಬದಲಾಯಿಸಿದ್ದಾರೆ.

ಇದನ್ನೂ ಓದಿ: ಆರೋಪಿ ದರ್ಶನ್​ ಕೇಳಿದ್ದ ಸರ್ಜಿಕಲ್​ ಚೇರ್​ ತಂದುಕೊಟ್ಟ ಬಳ್ಳಾರಿ ಜೈಲಿನ ಅಧಿಕಾರಿಗಳು

ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಸದ್ಯಕ್ಕೆ ದರ್ಶನ್​ ಇರುವ ಸೆಲ್​ನಲ್ಲಿ ಟಿವಿ ಇಲ್ಲ. ದರ್ಶನ್​ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಸೆಲ್​ಗೆ ಟಿವಿ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಯೋಚಿಸುತ್ತಿದ್ದಾರೆ. ಜಾರ್ಜ್​​ಶೀಟ್ ಬಗ್ಗೆ ಯಾರಿಂದಲೂ ನಿಖರವಾದ ಮಾಹಿತಿ ಸಿಗದ ಹಿನ್ನೆಲೆ ದರ್ಶನ್​ ಅವರು ಟಿವಿ ಬೇಕು ಎಂದು ಕೇಳಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆಯು ಮುಕ್ತಾಯದ ಹಂತದಲ್ಲಿದೆ.

ಶೀಘ್ರವೇ ಚಾರ್ಜ್​ಶೀಟ್​:

ಶೀಘ್ರದಲ್ಲೇ ಚಾರ್ಜ್​ಶೀಟ್​ ಸಲ್ಲಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಕಮಿಷನರ್​ ಬಿ. ದಯಾನಂದ ಅವರು ಮಾಹಿತಿ ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪವಿತ್ರಾ ಗೌಡ, ದರ್ಶನ್​ ಮುಂತಾದವರು ಪ್ರಮುಖ ಆರೋಪಿಗಳಾಗಿದ್ದು, 100ಕ್ಕೂ ಅಧಿಕ ಬಗೆಯ ಸಾಕ್ಷಿಗಳನ್ನು ಪೊಲೀಸರು ಕಲೆಹಾಕಿದ್ದಾರೆ. ವಿಧಿ ವಿಜ್ಣಾನ ಪ್ರಯೋಗಾಲದ ವರದಿಗಳು ಕೂಡ ಪೊಲೀಸರ ಕೈ ಸೇರಿವೆ. ಕೆಲವು ವರದಿಗಳು ಬರುವುದು ಬಾಕಿ ಇವೆ. ಹಾಕಿದ್ದರೂ ಕೂಡ ಆದಷ್ಟು ಬೇಗ ಅಂದರೆ, ಎರಡು ದಿನಗಳ ಒಳಗೆ ಚಾರ್ಜ್​ಶೀಟ್​ ಸಲ್ಲಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.