ರಿಷಬ್ ಶೆಟ್ಟಿ ನಿಜವಾದ ಹೆಸರೇನು? ಹೆಸರು ಬದಲಿಸಿದ ನಂತರ ಒಲಿಯಿತು ಅದೃಷ್ಟ
"ಕಾಂತಾರ" ಚಿತ್ರದ ಯಶಸ್ಸಿನ ನಂತರ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಮೂಲತಃ ಪ್ರಶಾಂತ್ ಶೆಟ್ಟಿ ಎಂಬ ಹೆಸರಿದ್ದ ಇವರು, ಜ್ಯೋತಿಷಿ ತಂದೆ ಹಾಗೂ ಗೆಳೆಯನ ಸಲಹೆಯಂತೆ ತಮ್ಮ ಹೆಸರನ್ನು 'ರಿಷಬ್' ಎಂದು ಬದಲಾಯಿಸಿಕೊಂಡರು. ಈ ಬದಲಾವಣೆಯೇ ತಮ್ಮ ಅದೃಷ್ಟವನ್ನು ತಂದಿತು ಎಂಬುದು ಅವರ ನಂಬಿಕೆ. ಕುಂದಾಪುರದ ಕಿರಾದಿಯಲ್ಲಿ ಹುಟ್ಟಿದ ಇವರು, ಹೆಸರು ಬದಲಾದ ಮೇಲೆ ಜೀವನದಲ್ಲಿ ಯಶಸ್ಸು ಕಂಡರು.

ರಿಷಬ್ ಶೆಟ್ಟಿ ಅವರು ‘ಕಾಂತಾರ’ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಗೆದ್ದರು. ಆ ಬಳಿಕ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ಮತ್ತೆ ಗೆದ್ದರು. ಈ ಚಿತ್ರದ ನಟನೆಗೆ, ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಗಬೇಕು ಎಂದು ಅನೇಕರು ಕೋರಿಕೆ ಇಡುತ್ತಿದ್ದಾರೆ. ಈ ಚಿತ್ರದ ಬಳಿಕ ರಿಷಬ್ ಶೆಟ್ಟಿ ಅವರ ಜೀವನ ಮತ್ತಷ್ಟು ಬದಲಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರನ್ನು ಗುರುತಿಸುವ ಕೆಲಸ ಆಗುತ್ತಿದೆ. ಅವರು ಹೆಸರು ಬದಲಿಸಿಕೊಂಡ ಮೇಲೆ ಎಲ್ಲವೂ ಸರಿ ಆಯಿತು ಎಂಬುದು ಅವರ ಅಭಿಪ್ರಾಯ. ಈ ಮೊದಲು ವಿಡಿಯೋ ಒಂದರಲ್ಲಿ ಇದನ್ನು ಹೇಳಿಕೊಂಡರು.
ರಿಷಬ್ ಶೆಟ್ಟಿ ಅವರ ಮೂಲ ಹೆಸರು ಪ್ರಶಾಂತ್. ಅವರು ಹುಟ್ಟಿದ್ದು ಕರಾವಳಿಯ ಸುಂದರ ನಾಡು ಕುಂದಾಪುರದ ಕೆರಾಡಿಯಲ್ಲಿ. ಓದಿನಲ್ಲಿ ಅವರು ಅಷ್ಟು ಮುಂದಿರಲಿಲ್ಲ. ಆದರೆ, ಸಣ್ಣ ವಯಸ್ಸಿನಲ್ಲೇ ಹೀರೋ ಆಗಬೇಕು ಎಂಬ ಕನಸು ಮಾತ್ರ ಹಾಗೆಯೇ ಇತ್ತು. ಅವರು ನಾಟಕಗಳ ಬಗ್ಗೆ ಆಸಕ್ತಿ ಹೊಂದಿದ್ದರು. ಉಪೇಂದ್ರ ಅವರ ಸಿನಿಮಾಗಳನ್ನು ನೋಡಿ ಚಿತ್ರರಂಗದ ಮೇಲಿನ ಆಸಕ್ತಿ ಹೆಚ್ಚಿತ್ತು. ರಿಷಬ್ ತಂದೆ ವೃತ್ತಿಯಲ್ಲಿ ಜ್ಯೋತಿಷಿ. ಅವರು ನೀಡಿದ ಒಂದು ಸಲಹೆ ಜೀವನ ಬದಲಿಸಿತು.
ರಿಷಬ್ ಶೆಟ್ಟಿ ಅವರು ಆರಂಭದಲ್ಲಿ ಹಲವು ಕೆಲಸಗಳನ್ನು ಮಾಡಿದ್ದರು. ಒಂದು ದಿನ ಯಾವುದೇ ಕೆಲಸ ಇರಲಿಲ್ಲ. ಆಗ ರಿಷಬ್ ಅವರ ಗೆಳೆಯ ಪ್ರಸಾದ್ ಎಂಬುವವರು ಒಂದು ಐಡಿಯಾ ಕೊಟ್ಟೇ ಬಿಟ್ಟರು. ಅದುವೇ ಹೆಸರು ಬದಲಿಸಿಕೊಳ್ಳುವುದು. ರಿಷಬ್ ಶೆಟ್ಟಿ ಹುಟ್ಟಿದ್ದು ಜುಲೈ 7ರಂದು. ಮುಂಜಾನೆ ಏಳು ಗಂಟೆಗೆ. ಇಲ್ಲಿ ಎಲ್ಲವೂ ಏಳೇ ಇದೆ. ಅದರ ಪ್ರಕಾರ ಹೆಸರು ಬದಲಿಸಿಕೊಳ್ಳುವಂತೆ ಗೆಳೆಯ ಸೂಚನೆ ನೀಡಿದ್ದ.
ರಿಷಬ್ ಶೆಟ್ಟಿ ತಡಮಾಡದೆ ತಂದೆಯ ಬಳಿ ತೆರಳಿ ಈ ಬಗ್ಗೆ ಹೇಳಿದ್ದರು. ಆಗ ರಿಷಬ್ ತಂದೆ R ಇಂದ ಬರುವ ಹೆಸರನ್ನು ಇಟ್ಟುಕೊಳ್ಳುವಂತೆ ಹೇಳಿದ್ದರು. ಆರ್ ಎಂದರೆ ರಾಜ್ಕುಮಾರ್, ರಜನಿಕಾಂತ್ ಎಂದೆಲ್ಲ ವಿವರಿಸಿದ್ದರು. ಇದು ಅವರಿಗೂ ಹೌದೆನ್ನಿಸಿತು. ಹೆಸರು ಬದಲಿಸಿಕೊಂಡ ಮಾತ್ರಕ್ಕೆ ಏನೂ ಬದಲಾಗುವುದಿಲ್ಲ ಎಂಬುದು ರಿಷಬ್ ಅಂದುಕೊಂಡಿದ್ದರು.
ರಿಷಬ್ ಶೆಟ್ಟಿ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಅವರು ನಿರ್ದೇಶನ ಮಾಡಿದ ಮೊದಲ ಸಿನಿಮಾ ‘ರಿಕ್ಕಿ’. ಈ ಚಿತ್ರ ಸಾಧಾರಣ ಗೆಲುವು ಕಂಡಿತು. 2016ರಲ್ಲಿ ಈ ಚಿತ್ರ ಬಿಡುಗಡೆ ಆಯಿತು. ‘ಕಿರಿಕ್ ಪಾರ್ಟಿ’ ಕೂಡ ಅದೇ ವರ್ಷ ರಿಲೀಸ್ ಆಗಿ ಭರ್ಜರಿ ಮೆಚ್ಚುಗೆ ಪಡೆಯಿತು.
ಇದನ್ನೂ ಓದಿ: ಯಶಸ್ಸು ಅಂದರೆ ಇದು; ರಿಷಬ್ ಶೆಟ್ಟಿಗೆ ಮುಂಬೈನಲ್ಲಿ ಸಿಕ್ತು ವಿಶೇಷ ಗೌರವ
2018ರಲ್ಲಿ ರಿಲೀಸ್ ಆದ ಅವರ ನಿರ್ದೇಶನದ ‘ಸಹಿಪ್ರಾ ಶಾಲೆ ಕಸಾರಗೋಡು’ ಸಿನಿಮಾ ಮೆಚ್ಚುಗೆ ಪಡೆಯಿತು. ನಾಲ್ಕು ವರ್ಷಗಳ ಬಳಿಕ ರಿಲೀಸ್ ಆದ ‘ಕಾಂತಾರ’ ಸಿನಿಮಾ ಭರ್ಜರಿ ಮೆಚ್ಚುಗೆ ಪಡೆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







