‘ಕರಾವಳಿ’ ಸಿನಿಮಾ ವಿವಾದ: ಪ್ರಜ್ವಲ್ ದೇವರಾಜ್ ಪರ ನಿಂತ ಮೇಘನಾ ರಾಜ್
‘ಕರಾವಳಿ’ ಸಿನಿಮಾದ ನಟ ಪ್ರಜ್ವಲ್ ದೇವರಾಜ್ ಹಾಗೂ ನಿರ್ದೇಶಕ ಗುರುದತ್ ಗಾಣಿಗ ಅವರ ನಡುವೆ ಮನಸ್ತಾಪ ಉಂಟಾಗಿದೆ. ಈ ವಿವಾದದಲ್ಲಿ ಅನೇಕರು ಪ್ರಜ್ವಲ್ ದೇವರಾಜ್ ಅವರ ಪರವಾಗಿ ಮಾತನಾಡುತ್ತಿದ್ದಾರೆ. ಪನ್ನಗಾಭರಣ ಬಳಿಕ ಮೇಘನಾ ರಾಜ್ ಸರ್ಜಾ ಕೂಡ ಪ್ರಜ್ವಲ್ ಪರವಾಗಿ ಬ್ಯಾಟ್ ಬೀಸಿದ್ದಾರೆ.

ಮುಖ್ಯಾಂಶಗಳು
- ಬಿಡುಗಡೆಗೆ ಸಿದ್ಧವಾಗಿರುವ ‘ಕರಾವಳಿ’ ಸಿನಿಮಾದ ವಿವಾದದ ಬಗ್ಗೆ ಮೇಘನಾ ರಾಜ್ ಮಾತು.
- ಪ್ರಜ್ವಲ್ ದೇವರಾಜ್ ಬಹಳ ಪ್ರೊಫೆಷನಲ್ ವ್ಯಕ್ತಿ ಎಂದು ಮೇಘನಾ ರಾಜ್ ಸರ್ಜಾ ಹೇಳಿದ್ದಾರೆ.
- ‘ಕರಾವಳಿ’ ಸಿನಿಮಾದ ಬಗ್ಗೆ ಪ್ರಜ್ವಲ್ ದೇವರಾಜ್ ಅವರಿಗೆ ಹೆಮ್ಮೆ ಇದೆ ಎಂದಿರುವ ನಟಿ.
ಗುರುದತ್ ಗಾಣಿಗ ಅವರು ನಿರ್ದೇಶನ ಮಾಡಿರುವ ‘ಕರಾವಳಿ’ ಸಿನಿಮಾ (Karavali Movie) ಬಿಡುಗಡೆ ಸಮಯದಲ್ಲಿ ವಿವಾದ ಆಗಿದೆ. ಈ ಚಿತ್ರದ ನಟ ಪ್ರಜ್ವಲ್ ದೇವರಾಜ್ (Prajwal Devaraj) ಅವರು ಸಂಭಾವನೆ ಕಿರಿಕ್ ಕಾರಣದಿಂದ ಡಬ್ಬಿಂಗ್ ಮಾಡಿಲ್ಲ ಎಂದು ಚಿತ್ರತಂಡ ಆರೋಪಿಸಿದೆ. ಪ್ರಜ್ವಲ್ ಅವರ ಅಭಿಮಾನಿಗಳು ಟ್ರೇಲರ್ ಬಿಡುಗಡೆ ವೇಳೆ ಗಲಾಟೆ ಮಾಡಿದ್ದರಿಂದ ವಿವಾದ ಶುರುವಾಯಿತು. ನಿರ್ದೇಶಕ ಗುರುದತ್ ಮತ್ತು ನಟ ಪ್ರಜ್ವಲ್ ಅವರು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಪ್ರಜ್ವಲ್ ಅವರ ಸ್ನೇಹಿತೆ, ನಟಿ ಮೇಘನಾ ರಾಜ್ (Meghana Raj Sarja) ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಪ್ರಜ್ವಲ್ ಅನಗತ್ಯ ಕಿರಿಕ್ ಮಾಡಲ್ಲ’
ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿರುವ ನಟಿ ಮೇಘನಾ ರಾಜ್ ಅವರು ಪ್ರಜ್ವಲ್ ದೇವರಾಜ್ ಬಗ್ಗೆ ಮಾತನಾಡಿದ್ದಾರೆ. ‘ಪ್ರಜ್ವಲ್ ದೇವರಾಜ್ ನನ್ನ ಬಾಲ್ಯದ ಗೆಳೆಯ. ಪ್ರಜ್ವಲ್ನ ನಾನು ಈಗ ನೋಡಿರುವುದಲ್ಲ. ನಾನು 4-5 ವರ್ಷದವಳಾಗಿದ್ದಾಗಿನಿಂದಲೇ ನೋಡಿದ್ದೇನೆ. ಅಂದಿನಿಂದ ಇಂದಿನ ತನಕ ಅವರಲ್ಲಿ ನಾನು ನೋಡಿದ ಒಂದು ವಿಷಯ ಏನೆಂದರೆ, ಅವರು ಸಭ್ಯವಾದ ವ್ಯಕ್ತಿ. ಯಾವುದೇ ವಿವಾದಕ್ಕೆ ಅವರು ತಲೆ ಹಾಕಿಲ್ಲ. ಅನಗತ್ಯವಾದ ಯಾವುದೇ ಕಿರಿಕ್ ಮಾಡಿಲ್ಲ. ಪ್ರತಿ ಬಾರಿ ಯಾರಿಗಾದರೂ ಅವರಿಂದ ಸಹಾಯ ಆಗಬೇಕಿದ್ದರೆ ಅವರು ಮುಂದೆ ಬರುತ್ತಾರೆ’ ಎಂದಿದ್ದಾರೆ ಮೇಘನಾ.
‘ಅಂಥ ಮಾತು ಕೇಳಿದ್ರೆ ಬೇಜಾರಾಗುತ್ತೆ’
‘ಅಂತಹ ವ್ಯಕ್ತಿ ಒಂದು ಚಿತ್ರದಲ್ಲಿ ನಟಿಸುವಾಗ ಯಾವ ರೀತಿ ಬದ್ಧತೆ ತೋರಿಸಬಹುದು ಎಂಬುದು ನಿಮಗೇ ಗೊತ್ತಾಗುತ್ತದೆ. ನನಗೆ ಪ್ರಜ್ವಲ್ ಅವರು ವೈಯಕ್ತಿಕವಾಗಿ ಮಾತ್ರವಲ್ಲ, ವೃತ್ತಿಪರವಾಗಿ ಕೂಡ ಗೊತ್ತು. ಅವರ ಜೊತೆ ನಾನು ಎರಡು ಸಿನಿಮಾ ಮಾಡಿದ್ದೇನೆ. ಆ ಎರಡು ಸಿನಿಮಾದಲ್ಲೂ ನಾನು ಅವರ ಬದ್ಧತೆ, ಶಿಸ್ತು ನೋಡಿದ್ದೇನೆ. ಪ್ರತಿ ಬಾರಿ ಅವರು ನನ್ನ ಬಳಿ ತಮ್ಮ ಸಿನಿಮಾ ಜರ್ನಿ ಬಗ್ಗೆ ಮಾತನಾಡಬೇಕಾದರೆ ಪ್ರೀತಿಯಿಂದ, ಪ್ರೊಫೆಷನಲ್ ಆಗಿ ಮಾತನಾಡಿದ್ದಾರೆ. ಅವರು ಫಿಲ್ಮಿ ಫ್ಯಾಮಿಲಿಯಿಂದ ಬಂದವರು. ಸಿನಿಮಾರಂಗದ ಎಲ್ಲ ಕಷ್ಟಗಳನ್ನು ಅವರು ಬಹಳ ಹತ್ತಿರದಿಂದ ನೋಡಿದ್ದಾರೆ. ಅವರು ಕೂಡ ಒಬ್ಬ ನಿರ್ಮಾಪಕರು. ಅಂತಹ ವ್ಯಕ್ತಿ ಬಗ್ಗೆ ಕೆಲವು ಮಾತುಗಳು ಕೇಳ್ಪಟ್ಟಾಗ ಬಹಳ ಬೇಜಾರು ಆಗುತ್ತದೆ’ ಎಂದು ಮೇಘನಾ ರಾಜ್ ಹೇಳಿದ್ದಾರೆ.
View this post on Instagram
‘ಯಾವುದೇ ಕಪ್ಪು ಚುಕ್ಕಿ ಇಲ್ಲ’
‘ಪ್ರಜ್ವಲ್ನ ಕೆಲವರು ಈಗ ನೋಡಿರಬಹುದು. ಆದರೆ ವೈಯಕ್ತಿಕವಾಗಿ ಬಹಳಷ್ಟು ವರ್ಷಗಳಿಂದ ನಾವು ನೋಡುತ್ತಾ ಬಂದಿದ್ದೇವೆ. ಇಷ್ಟು ವರ್ಷ ಅವರ ಬಗ್ಗೆ ಇಲ್ಲದೇ ಇರುವ ಕಪ್ಪು ಚುಕ್ಕೆ ಈಗ ಯಾಕೆ ಬರಬೇಕು? ಈ ಪ್ರಶ್ನೆ ನಮಗೆಲ್ಲರಿಗೂ ಕಾಡುತ್ತದೆ. ಅವರ ಸ್ನೇಹಿತೆಯಾಗಿ ನಾನು ನಿಮ್ಮೆಲ್ಲರಲ್ಲಿ ಕೇಳಿಕೊಳ್ಳುವುದು ಇಷ್ಟೇ. ಪ್ರಜ್ವಲ್ ಬಗ್ಗೆ ಯಾರೂ ನಿಮಗೆ ಹೇಳಬೇಕಾದ ಅವಶ್ಯಕತೆ ಇಲ್ಲ. ಅವರ ಸಿನಿಜರ್ನಿಯನ್ನು ನೀವೆಲ್ಲರೂ ನೋಡಿದ್ದೀರಿ. ಎಷ್ಟೋ ಅಭಿಮಾನಿಗಳು ಖುದ್ದಾಗಿ ಭೇಟಿ ಮಾಡಿ ಅವರ ವ್ಯಕ್ತಿತ್ವದ ಬಗ್ಗೆ ತಿಳಿದುಕೊಂಡಿದ್ದೀರಿ. ಯಾರು ಏನೇ ಹೇಳಿದರೂ ಅವರಲ್ಲಿ ನೀವು ನಂಬಿಕೆ ಇಡಬೇಕು ಅಂತ ನಾನು ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ ಮೇಘನಾ.
ಇದನ್ನೂ ಓದಿ: ಪ್ರಜ್ವಲ್ ದೇವರಾಜ್ ವಾಯ್ಸ್ ಇಲ್ಲದೇ ಬಿಡುಗಡೆ ಆದ ‘ಕರಾವಳಿ’ ಟ್ರೇಲರ್ ಹೇಗಿದೆ ನೋಡಿ..
‘ನನಗೆ ಕರಾವಳಿ ಸಿನಿಮಾ ಬಗ್ಗೆ ಹೆಮ್ಮೆ ಇದೆ. ಈ ಸಿನಿಮಾದ ಕಥೆ ಕೇಳಲು ನೀವೂ ಬನ್ನಿ ಅಂತ ನನ್ನನ್ನು ಮತ್ತು ಪನ್ನಗಾಭರಣ ಅವರನ್ನು ಪ್ರಜ್ವಲ್ ಕರೆದಿದ್ದರು. ಆದರೆ ಬೇರೆ ಕೆಲಸ ಇದ್ದ ಕಾರಣ ನಮಗೆ ಹೋಗಲು ಆಗಿರಲಿಲ್ಲ. ಅವರು ಈ ಕಥೆ ಕೇಳಿದ ತಕ್ಷಣ ಎಗ್ಸೈಟೆಡ್ ಆಗಿದ್ದರು. ತಮ್ಮ ವೃತ್ತಿಜೀವನಕ್ಕೆ ಇದು ಬಹಳ ಮುಖ್ಯವಾದ ಪಾತ್ರ ಅಂತ ಅವರು ಹೇಳಿದ್ದರು. ಅಂದು ಅವರು ಈ ಸಿನಿಮಾ ಬಗ್ಗೆ ಎಷ್ಟು ಅಭಿಮಾನ ಇಟ್ಟುಕೊಂಡಿದ್ದರೋ ಇಂದು ಕೂಡ ಅಷ್ಟೇ ಅಭಿಮಾನ ಹೊಂದಿದ್ದಾರೆ. ಇಂದಿಗೂ ಅವರು ಈ ಚಿತ್ರಕ್ಕೆ ಬೆಂಬಲ ನೀಡುತ್ತಾರೆ. ಇದು ಪ್ರಜ್ವಲ್ ದೇವರಾಜ್ ಅವರ ಸಿನಿಮಾ. ಅವರ ಬಗ್ಗೆ ಯಾರು ಏನೇ ಅಂದರೂ ಕನ್ನಡ ಕಲಾಭಿಮಾನಿಗಳು ಅವರಿಗೆ ಬೆಂಬಲ ನೀಡುತ್ತಾ ಬಂದಿದ್ದೀರಿ. ಅದೇ ಬೆಂಬಲ ಮುಂದುವರಿಯಲಿ’ ಎಂದು ಮೇಘನಾ ರಾಜ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




