
ಪುನೀತ್ ರಾಜ್ಕುಮಾರ್ (Puneeth Rajkumar) ಅವರು ಕನ್ನಡ ಚಿತ್ರರಂಗಕ್ಕೆ ಹಾಗೂ ನಮ್ಮ ಸಮಾಜಕ್ಕೆ ನೀಡಿದ ಕೊಡುಗೆ ದೊಡ್ಡದು. ಪುನೀತ್ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ (Karnataka Ratna Award) ನೀಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಕಳೆದ ವರ್ಷ ಘೋಷಣೆ ಮಾಡಿದ್ದರು. ಆದರೆ, ಈ ಪ್ರಶಸ್ತಿಯನ್ನು ಯಾವಾಗ ನೀಡಲಾಗುತ್ತದೆ ಎನ್ನುವ ಬಗ್ಗೆ ಸರ್ಕಾರ ಘೋಷಣೆ ಮಾಡಿಲ್ಲ. ಇಂದು (ಮಾರ್ಚ್ 17) ಪುನೀತ್ ಜನ್ಮದಿನ. ಈ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ, ‘ಸದ್ಯದಲ್ಲೇ ನಟ ಪುನೀತ್ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುತ್ತೇವೆ. ಕುಟುಂಬಸ್ಥರ ಜತೆ ಚರ್ಚಿಸಿ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತೇವೆ’ ಎಂದರು.
ಪುನೀತ್ ಅವರನ್ನು ಕಂಡರೆ ಬೊಮ್ಮಾಯಿಗೆ ಅಚ್ಚುಮೆಚ್ಚು. ಪುನೀತ್ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನು ಅವರು ಆಡಿದರು. ‘ಪುನೀತ್ ರಾಜ್ಕುಮಾರ್ ಅವರಿಗೆ 47ನೇ ಜನ್ಮದಿನ. ಇಂದು ಅವರಿಲ್ಲದೇ ನಾವೆಲ್ಲ ದುಃಖದಲ್ಲಿದ್ದೇವೆ. ಅವರ ಬದುಕು ನಮ್ಮೆಲ್ಲರಿಗೂ ಸ್ಫೂರ್ತಿ. ಅವರ ಸಿನಿಮಾ ‘ಜೇಮ್ಸ್’ ಕೂಡ ಬಿಡುಗಡೆಯಾಗಿದೆ. ಸಿನಿಮಾ ಯಶಸ್ವಿಯಾಗಲಿ ಎಂಬುದಾಗಿ ಶುಭಹಾರೈಸುತ್ತೇನೆ’ ಎಂದು ಅವರು ಹೇಳಿದರು.
‘ಪುನೀತ್ ಅವರದ್ದು ಆದರ್ಶದ ಬದುಕು. ಅಂಗಾಂಗಗಳನ್ನು ಅವರು ದಾನ ಮಾಡಿರುವುದು ನಮ್ಮೆಲ್ಲರಿಗೂ ಆದರ್ಶ. ಅವರು ಮಾಡಿದ ಒಳ್ಳೆಯ ಕೆಲಸಗಳನ್ನು ನೆನೆಯೋಣ. ಪುನೀತ್ ಅವರಿಗೆ ಈಗಾಗಲೇ ‘ಕರ್ನಾಟಕ ರತ್ನ’ ಕೊಡೋದಕ್ಕೆ ತೀರ್ಮಾನ ಮಾಡಿದ್ದೇವೆ. ಶೀಘ್ರವೇ ಕುಟುಂಬ ಸದಸ್ಯರು ಜೊತೆ ಮಾತನಾಡಿ ಒಂದು ದಿನಾಂಕ ನಿಗದಿ ಮಾಡುತ್ತೇವೆ’ ಎಂದು ಬಸವರಾಜ ಬೊಮ್ಮಾಯಿ ಮಾಹಿತಿ ಹಂಚಿಕೊಂಡರು.
ಅಂಬರೀಷ್ ಅವರ ಸ್ಮಾರಕ ನಿರ್ಮಾಣ ಕಾರ್ಯಕ್ರಮದಲ್ಲೂ ಈ ಬಗ್ಗೆ ಬಸವರಾಜ ಬೊಮ್ಮಾಯಿ ಮಾತನಾಡಿದ್ದರು. ‘ಪುನೀತ್ ರಾಜ್ಕುಮಾರ್ ಅಗಲಿದ ನಂತರ ಅವರ ಅಭಿಮಾನಿಗಳನ್ನು ನೋಡುತ್ತಿದ್ದೇವೆ. ಪುನೀತ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡುವ ದಿನವನ್ನು ಆದಷ್ಟು ಬೇಗ ಪ್ರಕಟಿಸುತ್ತೇನೆ. ಪುನಿತ್ ಸ್ಮಾರಕದ ನಿರ್ಮಾಣವನ್ನೂ ಆದಷ್ಟು ಬೇಗ ಆರಂಭಿಸುತ್ತೇವೆ’ ಎಂದು ಭರವಸೆ ನೀಡಿದ್ದರು.
ಇದನ್ನೂ ಓದಿ: James Movie Review: ಜೇಮ್ಸ್ ವಿಮರ್ಶೆ: ಗೆಳೆತನದ ಕಥೆ ಹೇಳುವ ಒಂದು ‘ಪವರ್ಫುಲ್’ ಶೋ
‘ಕೈ ನಡುಕ ಬರುತ್ತಿತ್ತು’; ‘ಜೇಮ್ಸ್’ ಡಬ್ಬಿಂಗ್ ವೇಳೆ ಸಾಧು ಕೋಕಿಲಗೆ ಆದ ಅನುಭವ ಎಂಥದ್ದು?