Raksha Bandhan: ‘ಡಾಲಿ’ ಧನಂಜಯ ಜೊತೆ ಮಂಗಳಮುಖಿಯರ ರಕ್ಷಾ ಬಂಧನ ಹಬ್ಬದ ಸಂಭ್ರಮ

| Updated By: ಮದನ್​ ಕುಮಾರ್​

Updated on: Aug 21, 2021 | 2:33 PM

Daali Dhananjay | Akkai Padmashali ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಹೋರಾಟಗಾರ್ತಿ ಅಕ್ಕೈ​ ಪದ್ಮಶಾಲಿ ಮತ್ತು ಕೆಲವು ಮಂಗಳಮುಖಿಯರು ಧನಂಜಯ ಅವರ ನಿವಾಸಕ್ಕೆ ತೆರಳಿದ್ದಾರೆ. ಡಾಲಿಗೆ ರಾಖಿ ಕಟ್ಟಿ ಖುಷಿಪಟ್ಟಿದ್ದಾರೆ. ಅವರಿಗೆಲ್ಲ ಧನಂಜಯ ಉಡುಗೊರೆ ನೀಡಿದ್ದಾರೆ.

Raksha Bandhan: ‘ಡಾಲಿ’ ಧನಂಜಯ ಜೊತೆ ಮಂಗಳಮುಖಿಯರ ರಕ್ಷಾ ಬಂಧನ ಹಬ್ಬದ ಸಂಭ್ರಮ
ಅಕ್ಕೈ ಪದ್ಮಶಾಲಿ - ‘ಡಾಲಿ’ ಧನಂಜಯ
Follow us on

ಇದು ಹಬ್ಬಗಳ ಸೀಸನ್​. ವರಮಹಾಲಕ್ಷ್ಮೀ ಹಬ್ಬದ ಬೆನ್ನಲೇ ಈಗ ರಕ್ಷಾ ಬಂಧನ (Raksha Bandhan) ಹಬ್ಬ ಬಂದಿದೆ. ಭಾನುವಾರ (ಆ.22) ಸಹೋದರರಿಗೆ ರಾಖಿ ಕಟ್ಟಿ ಸಂಭ್ರಮಿಸಲಾಗುತ್ತದೆ. ಒಂದೆರಡು ದಿನ ಮುಂಚಿತವಾಗಿಯೂ ಇದನ್ನು ಆಚರಿಸುವವರು ಇದ್ದಾರೆ. ವಿಶೇಷ ಏನೆಂದರೆ, ನಟ ಡಾಲಿ ಧನಂಜಯ (Daali Dhananjay) ಅವರಿಗೆ ಮಂಗಳಮುಖಿಯರು ರಾಖಿ ಕಟ್ಟಿದ್ದಾರೆ. ಆ ಮೂಲಕ ತಮ್ಮ ಅಭಿಮಾನ ಮತ್ತು ಆತ್ಮೀಯತೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದ ಫೋಟೋ ಮತ್ತು ವಿಡಿಯೋಗಳು ಕೂಡ ಲಭ್ಯವಾಗಿವೆ.

ಧನಂಜಯ ನಟಿಸಿದ್ದ ‘ಜಯನಗರ 4ನೇ ಬ್ಲಾಕ್​’ ಕಿರುಚಿತ್ರದಲ್ಲಿ ಮಂಗಳಮುಖಿಯ ಒಂದು ಪಾತ್ರ ಹೈಲೈಟ್​ ಆಗಿತ್ತು. ಅವರ ಬಗ್ಗೆ ಧನಂಜಯ ಅವರು ಗೌರವ ಭಾವನೆ ಹೊಂದಿದ್ದಾರೆ. ಮಂಗಳಮುಖಿಯರ ಕುರಿತು ಅನೇಕ ಬಾರಿ ಅವರು ಕಾಳಜಿಯ ಮಾತುಗಳನ್ನು ಆಡಿದ್ದುಂಟು. ‘ರತ್ನನ್​ ಪ್ರಪಂಚ ಚಿತ್ರದಲ್ಲಿ ಮಂಗಳಮುಖಿ ಅಕ್ಕೈ​ ಪದ್ಮಶಾಲಿ ನಟಿಸಿದ್ದಾರೆ. ಹಾಗಾಗಿ ಧನಂಜಯ ಜೊತೆ ಅವರಿಗೆ ಆತ್ಮೀಯತೆ ಬೆಳೆದಿದೆ. ಈಗ ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ತೆರಳಿರುವ ಅಕ್ಕೈ​ ಪದ್ಮಶಾಲಿ ಮತ್ತು ಕೆಲವು ಮಂಗಳಮುಖಿಯರು ಧನಂಜಯಗೆ ರಾಖಿ ಕಟ್ಟಿದ್ದಾರೆ. ಅವರಿಗೆಲ್ಲ ಧನಂಜಯ ಉಡುಗೊರೆ ನೀಡಿದ್ದಾರೆ.

ಸದ್ಯ ಧನಂಜಯ ಬಹುಭಾಷಾ ನಟನಾಗಿ ಮಿಂಚುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಅವರಿಗೆ ಬೇಡಿಕೆ ಹೆಚ್ಚಿದೆ. ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಚಿತ್ರದಲ್ಲಿ ಅವರಿಗೊಂದು ಪ್ರಮುಖ ಪಾತ್ರವಿದೆ. ಈ ವರ್ಷ ಡಿಸೆಂಬರ್​ಗೆ ಆ ಸಿನಿಮಾ ಬಿಡುಗಡೆ ಆಗಲಿದೆ. ಕನ್ನಡದಲ್ಲಿ ‘ಮಾನ್ಸೂನ್​ ರಾಗ’, ‘ಬಡವ ರಾಸ್ಕಲ್​’, ‘ಡಾಲಿ’, ‘ಹೆಡ್​ ಬುಶ್​’, ‘ರತ್ನನ್​ ಪ್ರಪಂಚ’ ಸೇರಿದಂತೆ ಅನೇಕ ಸಿನಿಮಾ ಕೆಲಸಗಳಲ್ಲಿ ಧನಂಜಯ ಬ್ಯುಸಿ ಆಗಿದ್ದಾರೆ.

ಇತ್ತೀಚೆಗೆ ಬಿಡುಗಡೆ ಆಗಿದ್ದ ‘ಮಾನ್ಸೂನ್​ ರಾಗ’ ಚಿತ್ರದ ಟೀಸರ್​ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ರತ್ನನ್​ ಪ್ರಪಂಚ’ ಟ್ರೇಲರ್​ ಕೂಡ ಧೂಳೆಬ್ಬಿಸುತ್ತಿದೆ. ಈ ಸಿನಿಮಾದಲ್ಲಿ ತಾರಾಗಣ ದೊಡ್ಡದಾಗಿದೆ. ರೆಬಾ ಜಾನ್, ಅನು ಪ್ರಭಾಕರ್​, ಹಿರಿಯ ನಟಿ ಶ್ರುತಿ, ರವಿ ಶಂಕರ್ ಗೌಡ​, ಅಚ್ಯುತ್​ ಕುಮಾರ್​ ಮುಂತಾದ ಅನುಭವಿ ಕಲಾವಿದರು ನಟಿಸಿದ್ದಾರೆ. ರೋಹಿತ್​ ಪದಕಿ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಅಜನೀಶ್​ ಲೋಕನಾಥ್​ ಸಂಗೀತ ಇದೆ. ಕೆಆರ್​ಜಿ ಸ್ಟುಡಿಯೋಸ್​ ಅಡಿಯಲ್ಲಿ ಕಾರ್ತಿಕ್​ ಮತ್ತು ಯೋಗಿ ಜಿ. ರಾಜ್​ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಕಿಚ್ಚ ಸುದೀಪ್, ನಿರ್ದೇಶಕ ಪವನ್​ಕುಮಾರ್​ ವಿಜಯ್​ ಮಿಲ್ಟನ್, ಮಾಲಿವುಡ್​​ ನಟ ದುಲ್ಖರ್​ ಸಲ್ಮಾನ್​​ ಸೇರಿದಂತೆ ಅನೇಕರು ಈ ಟ್ರೇಲರ್​ ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ:

Dhananjay: ಇದು ಡಾಲಿ ಅಲ್ಲ ರತ್ನಾಕರ; ಹೊಸ ಪ್ರಪಂಚದ ಸ್ಯಾಂಪಲ್​ ತೋರಿಸಿದ ಧನಂಜಯ್​

‘ಅವರು ಪರ್ಫೆಕ್ಷನಿಸ್ಟ್​’; ಅಲ್ಲು ಅರ್ಜುನ್​ ಬಗ್ಗೆ ಡಾಲಿ ಧನಂಜಯ ಮನಸ್ಸಿನ ಮಾತು