AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶಾಂತಿ ಕ್ರಾಂತಿ’ ಮರುಬಿಡುಗಡೆ ಮಾಡಲು ಹತ್ತು ಹಲವು ವಿಘ್ನ; ವಿವರಿಸಿದ ಬಾಲಾಜಿ

ರವಿಚಂದ್ರನ್ ಅವರು ನಟಿಸಿ, ನಿರ್ದೇಶಿಸಿ, ನಿರ್ಮಾಣ ಮಾಡಿದ ‘ಶಾಂತಿ ಕ್ರಾಂತಿ’ ಸಿನಿಮಾವನ್ನು ಮರು ಬಿಡುಗಡೆ ಮಾಡಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಆದರೆ ಮರು ಬಿಡುಗಡೆ ಮಾಡಲು ತಾಂತ್ರಿಕವಾಗಿ ಸಾಕಷ್ಟು ಅಡೆತಡೆಗಳಿವೆ. ಆ ಬಗ್ಗೆ ರವಿಚಂದ್ರನ್ ಅವರ ಸಹೋದರ ಬಾಲಾಜಿ ಸ್ಪಷ್ಟನೆ ನೀಡಿದ್ದಾರೆ.

‘ಶಾಂತಿ ಕ್ರಾಂತಿ’ ಮರುಬಿಡುಗಡೆ ಮಾಡಲು ಹತ್ತು ಹಲವು ವಿಘ್ನ; ವಿವರಿಸಿದ ಬಾಲಾಜಿ
Ravichandran Brother Balaji
ಮದನ್​ ಕುಮಾರ್​
|

Updated on: Aug 13, 2026 | 9:36 PM

Share

ಮುಖ್ಯಾಂಶಗಳು

  • ‘ಶಾಂತಿ ಕ್ರಾಂತಿ’ ನೆಗೆಟಿವ್ ಕರಗಿಹೋಗಿರುವುದರಿಂದ ತಕ್ಷಣಕ್ಕೆ ಮರುಬಿಡುಗಡೆ ಮಾಡಲು ತಾಂತ್ರಿಕ ಅಡೆತಡೆಗಳು ಎದುರಾಗಿವೆ.
  • ಬೇರೆ ಮೂಲ ಸಿಕ್ಕರೂ ಕಲರಿಂಗ್, ರೀರೆಕಾರ್ಡಿಂಗ್, ಡಾಲ್ಬಿ ಸೌಂಡ್ ಕೆಲಸಗಳಿಗೆ 8 ತಿಂಗಳಿಂದ 1 ವರ್ಷಕ್ಕೂ ಹೆಚ್ಚು ಸಮಯ ಬೇಕು.
  • ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂಬುದು ಕೇವಲ ವದಂತಿ ಎಂದು ಬಾಲಾಜಿ ಸ್ಪಷ್ಟಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ‘ಶಾಂತಿ ಕ್ರಾಂತಿ’ (Shanti Kranti) ಸಿನಿಮಾದ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ. ಈ ಸಿನಿಮಾವನ್ನು ಮರುಬಿಡುಗಡೆ ಮಾಡಿ ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಆ ಬಗ್ಗೆ ರವಿಚಂದ್ರನ್ (Ravichandran) ಅವರ ಸಹೋದರ ಬಾಲಾಜಿ ಪ್ರತಿಕ್ರಿಯೆ ನೀಡಿದ್ದಾರೆ. ‘ಶಾಂತಿ ಕ್ರಾಂತಿ’ ಚಿತ್ರವನ್ನು ಮರು ಬಿಡುಗಡೆ (Shanti Kranti Rerelease) ಮಾಡಲು ಇರುವ ತಾಂತ್ರಿಕ ಅಡೆತಡೆಗಳು ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಬಾಲಾಜಿ ಅವರು ಮುಖ್ಯವಾದ ಮಾಹಿತಿ ನೀಡಿದ್ದಾರೆ.

‘ನೀವೆಲ್ಲರೂ ಶಾಂತಿ ಕ್ರಾಂತಿ ಸಿನಿಮಾಗೆ, ನಮ್ಮ ಅಣ್ಣನಿಗೆ ಹಾಗೂ ನಮಗೆ ತೋರಿಸಿರುವ ಪ್ರೀತಿ ಅಪಾರವಾದದ್ದು. ಅದಕ್ಕೆ ನಾವು ಯಾವಾಗಲೂ ಚಿರಋಣಿ ಆಗಿರುತ್ತೇವೆ. ನಿಮ್ಮ ಈ ಪ್ರೀತಿ ಶುರುವಾದ ಎರಡೇ ದಿನಗಳಲ್ಲಿ ನಾನು ಹಾಗೂ ನಮ್ಮ ಅಣ್ಣ ಶಾಂತಿ ಕ್ರಾಂತಿ ಮರುಬಿಡುಗಡೆ ಬಗ್ಗೆ ಮಾತುಕಥೆ ಮಾಡಿದೆವು. ಅಂದೇ ನಮ್ಮ ಪ್ರಯತ್ನ ಶುರು ಆಗಿದೆ. ಆದರೆ ನಿಮಗೆ ಒಂದು ಸ್ಪಷ್ಟನೆ ಕೊಡೋಕೆ ನಾನು ಬಂದಿದ್ದೇನೆ’ ಎಂದು ಬಾಲಾಜಿ ಅವರು ಮಾತು ಆರಂಭಿಸಿದ್ದಾರೆ.

ಮೆಲ್ಟ್ ಆಗಿದೆ ‘ಶಾಂತಿ ಕ್ರಾಂತಿ’ ನೆಗೆಟಿವ್:

‘ಶಾಂತಿ ಕ್ರಾಂತಿ ನೆಗೆಟಿವ್ಸ್ ಮೆಲ್ಟ್ ಆಗಿ ಹೋಗಿದೆ. ಅದನ್ನು ನಾವು ಇಂದಿನ ತಂತ್ರಜ್ಞಾನಕ್ಕೆ ತಂದು ಬಿಡುಗಡೆ ಮಾಡುವುದು ತುಂಬಾ ಕಷ್ಟ. ಬೇರೆ ಮೂಲಗಳನ್ನು ನಾವು ಇನ್ನೂ ಹುಡುಕುತ್ತಿದ್ದೇವೆ. ಒಂದು ವೇಳೆ ಸಿಕ್ಕರೆ ಆ ಚಿತ್ರವನ್ನು ಮರು ಬಿಡುಗಡೆ ಮಾಡುವ ಆಸೆ ನಮ್ಮೆಲ್ಲರಿಗೂ ಇದೆ. ಒಂದು ವೇಳೆ ಯಾವುದೇ ಮೂಲ ಸಿಕ್ಕಿದರೂ ಕೂಡ, ನಾಳೆಯೇ ಆ ಕೆಲಸ ಶುರು ಮಾಡಿದರೂ ಅದಕ್ಕೆ ಬಹಳ ಸಮಯ ಹಿಡಿಯುತ್ತದೆ’ ಎಂದಿದ್ದಾರೆ ಬಾಲಾಜಿ.

ಶಾಂತಿ ಕ್ರಾಂತಿ ಮರುಬಿಡುಗಡೆಗೆ ಹಲವು ಸವಾಲು:

‘8 ತಿಂಗಳು, 1 ವರ್ಷ ಅಥವಾ ಅದಕ್ಕೂ ಹೆಚ್ಚು ಸಮಯ ಹಿಡಿಯಬಹುದು. ಯಾಕೆಂದರೆ, ಮತ್ತೆ ನಾವು ಕಲರಿಂಗ್ ಮಾಡಬೇಕು. ಮತ್ತೆ ಮ್ಯೂಸಿಕ್ ಹಾಗೂ ರೀರೆಕಾರ್ಡಿಂಗ್ ಮಾಡಿಸಬೇಕು. ಎಫೆಕ್ಟ್ಸ್, ಡಿಐ, ಸೆನ್ಸಾರ್ ಮಾಡಿಸಬೇಕು. ಈ ರೀತಿಯ ತುಂಬ ವಿಷಯಗಳಿವೆ. ನಮ್ಮ ಅಣ್ಣ ಆ ದಿನಗಳಲ್ಲೇ ಅದ್ಭುತ ಗುಣಮಟ್ಟದಲ್ಲಿ ಕೊಟ್ಟ ಸಿನಿಮಾ ಅದು. ಇವತ್ತು ನಿಮ್ಮ ಆಸೆಯಂತೆ ನಾವು ಸಿನಿಮಾವನ್ನು ನಿಮ್ಮ ಬಳಿ ತೆಗೆದುಕೊಂಡ ಬಂದಾಗ ಅದು ಅಷ್ಟೇ ಚೆನ್ನಾಗಿ ಇರಬೇಕು. ನಿಮಗೆ ಖುಷಿಕೊಡುವ ರೀತಿಯಲ್ಲಿ ಡಾಲ್ಬಿ, ಅಟ್ಮಾಸ್, ಡಿಟಿಎಸ್ ಮಾಡಿಸಬೇಕು’ ಎಂದು ಬಾಲಾಜಿ ವಿವರಿಸಿದ್ದಾರೆ.

‘ಶಾಂತಿ ಕ್ರಾಂತಿ’ ಸಿನಿಮಾದಿಂದ ಆದ ಸಾಲ ತೀರಿಸಲು ರವಿಚಂದ್ರನ್​​ಗೆ ಹಿಡಿದಿತ್ತು 15 ವರ್ಷ

ಸದ್ಯಕ್ಕಂತೂ ಶಾಂತಿ ಕ್ರಾಂತಿ ರಿಲೀಸ್ ಆಗಲ್ಲ:

‘ಇನ್ನೊಂದು ಸ್ಪಷ್ಟನೆ ಕೊಡುತ್ತೇನೆ. ಮಾಧ್ಯಮದವರು, ಕಲಾರಸಿಕರು, ಅಭಿಮಾನಿಗಳು, ಸ್ನೇಹಿತರು ನಮಗೆ ಕರೆ ಮಾಡುತ್ತಿದ್ದಾರೆ. ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತೀರಾ ಅಂತ ಕೇಳುತ್ತಿದ್ದಾರೆ. ಅದು ಸುಳ್ಳು. ಸದ್ಯಕ್ಕಂತೂ ನಮ್ಮ ಕೈಯಲ್ಲಿ ರಿಲೀಸ್ ಮಾಡೋಕೆ ಆಗಲ್ಲ. ಸೋರ್ಸ್ ಸಲುವಾಗಿ ನಾವು ಹುಡುಕಾಟ ಮಾಡುತ್ತಿದ್ದೇವೆ. ಅದು ಸಿಕ್ಕ ಕೂಡಲೇ ನಿಮಗೆ ಹೇಳಿಯೇ ಅದಕ್ಕೆ ಓಂಕಾರ ಹಾಕುತ್ತೇವೆ’ ಎಂದು ಬಾಲಾಜಿ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us