AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಏಕವಚನದಲ್ಲಿ ಮಾತನಾಡುವ ಸಂಸ್ಕೃತಿ ನಮ್ಮದಲ್ಲ’; ಕಿರಿಯ ನಟನಿಗೆ ‘ಸರ್’ ಎಂದ ವಿವಾದಕ್ಕೆ ಶಿವಣ್ಣ ಸ್ಪಷ್ಟನೆ

ತಮಿಳುನಾಡಿನ ಕಾರ್ಯಕ್ರಮದಲ್ಲಿ ಕಿರಿಯ ನಟ ಶಿವಕಾರ್ತಿಕೇಯನ್‌ಗೆ 'ಸರ್' ಎಂದು ಕರೆದು ಟೀಕೆಗೆ ಒಳಗಾಗಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ವಿವಾದಕ್ಕೆ ಖಡಕ್ ಸ್ಪಷ್ಟನೆ ನೀಡಿದ್ದಾರೆ. ಕಿರಿಯರಿಗೂ ಗೌರವ ಕೊಡುವುದು ಡಾ. ರಾಜ್‌ಕುಮಾರ್ ಕುಟುಂಬದಿಂದ ಬಂದ ಸಂಸ್ಕಾರ, ಟೀಕೆ ಮಾಡುವವರ ಸಂತೋಷಕ್ಕೆ ನನ್ನ ಅಭ್ಯಂತರವಿಲ್ಲ ಎಂದು ಶಿವಣ್ಣ ತಿರುಗೇಟು ನೀಡಿದ್ದಾರೆ.

‘ಏಕವಚನದಲ್ಲಿ ಮಾತನಾಡುವ ಸಂಸ್ಕೃತಿ ನಮ್ಮದಲ್ಲ’; ಕಿರಿಯ ನಟನಿಗೆ 'ಸರ್' ಎಂದ ವಿವಾದಕ್ಕೆ ಶಿವಣ್ಣ ಸ್ಪಷ್ಟನೆ
ಶಿವಣ್ಣ-ಶಿವಕಾರ್ತಿಕೇಯ
ರಾಜೇಶ್ ದುಗ್ಗುಮನೆ
|

Updated on: Aug 25, 2026 | 7:41 AM

Share

ಮುಖ್ಯಾಂಶಗಳು

  • ಕಿರಿಯರಿಗೂ ಗೌರವ ಕೊಡುವುದು ನಮ್ಮ ಸಂಸ್ಕೃತಿ
  • ಅಪ್ಪಾಜಿ ಕುಟುಂಬದಲ್ಲಿ ಏಕವಚನದ ಮಾತೇ ಇಲ್ಲ
  • ಟೀಕಾಕಾರರಿಗೆ ಶಿವಣ್ಣ ನೀಡಿದ ಖಡಕ್ ಉತ್ತರ

ತಮಿಳುನಾಡಿನ ಕಾರ್ಯಕ್ರಮವೊಂದರಲ್ಲಿ ಯುವ ಹಾಗೂ ಕಿರಿಯ ನಟ ಶಿವಕಾರ್ತಿಕೇಯನ್ ಅವರಿಗೆ ‘ಸರ್’ ಎಂದು ಸಂಬೋಧಿಸಿ ಗೌರವ ನೀಡಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ನಡೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಕನ್ನಡಿಗರ ಹೆಮ್ಮೆಯ ನಟ, ಹಿರಿಯ ಶ್ರೇಷ್ಠ ಕಲಾವಿದರಾಗಿರುವ ಶಿವಣ್ಣ, ಕಿರಿಯರಿಗೆ ಹೀಗೆ ಗೌರವ ಕೊಡುವ ಅಗತ್ಯವಿತ್ತೇ ಎಂದು ಕೆಲವು ನೆಟ್ಟಿಗರು ಹಾಗೂ ಅಭಿಮಾನಿಗಳು ಟೀಕೆ ವ್ಯಕ್ತಪಡಿಸಿದ್ದರು. ಈ ‘ಸರ್’ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮುಂದೆ ಶಿವರಾಜ್‌ಕುಮಾರ್ ಅವರು ಅತ್ಯಂತ ಖಡಕ್ ಹಾಗೂ ಮಾರ್ಮಿಕವಾಗಿ ಸ್ಪಷ್ಟನೆ ನೀಡಿದ್ದಾರೆ.

ಕಿರಿಯರಿಗೂ ಗೌರವ ನೀಡುವುದು ನಮ್ಮ ಸಂಸ್ಕಾರ

ತಮ್ಮ ಮೇಲಾದ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಶಿವಣ್ಣ, ‘ನಮಗೆ ಸಣ್ಣ ವಯಸ್ಸಿನಿಂದಲೂ ಪ್ರತಿಯೊಬ್ಬರಿಗೂ ಮರ್ಯಾದೆ ಕೊಟ್ಟು ಅಭ್ಯಾಸ. ಎದುರಿಗಿರುವವರು ನನಗಿಂತ ವಯಸ್ಸಿನಲ್ಲಿ ಚಿಕ್ಕವರಾಗಲಿ ಅಥವಾ ದೊಡ್ಡವರಾಗಲಿ, ಅವರಿಗೆ ಗೌರವ ಕೊಡುವುದರಲ್ಲಿ ಯಾವುದೇ ತಪ್ಪಿಲ್ಲ. ಹೆಣ್ಣುಮಕ್ಕಳಾದರೆ ‘ಮೇಡಂ’ ಎನ್ನುತ್ತೇವೆ. ನನಗಿಂತ ಚಿಕ್ಕವರಿಗೆ ‘ಮೇಡಂ’ ಅಥವಾ ‘ಸರ್’ ಎಂದು ಕರೆಯಬಾರದು ಎಂದು ಎಲ್ಲಾದರೂ ನಿಯಮ ಇದೆಯಾ? ನಾವು ಪ್ರೀತಿಯಿಂದ, ಗೌರವದಿಂದ ಕರೆದಾಗ ಅದನ್ನೇ ದೊಡ್ಡ ವಿವಾದ ಮಾಡುವುದು ಸರಿಯಲ್ಲ’ ಎಂದು ತಿಳಿಸಿದರು.

ಅಪ್ಪಾಜಿ ಕುಟುಂಬದಲ್ಲಿ ಏಕವಚನದ ಸಂಸ್ಕೃತಿಯೇ ಇಲ್ಲ

ತಮ್ಮ ಮಾತಿನ ವೈಖರಿ ಹಾಗೂ ಸಂಸ್ಕಾರದ ಹಿನ್ನೆಲೆಯನ್ನು ನೆನಪಿಸಿಕೊಂಡ ಶಿವಣ್ಣ, ‘ನನಗೆ ಹಾಗೂ ನಮ್ಮ ಕುಟುಂಬಕ್ಕೆ ಮೊದಲಿನಿಂದಲೂ ಹೆಣ್ಣುಮಕ್ಕಳಿಗೆ ಬನ್ನಿ, ಹೋಗಿ ಎಂದು ಗೌರವದಿಂದ ಮಾತಾಡಿಸಿಯೇ ಅಭ್ಯಾಸ. ಬಾರೇ, ಹೋಗೇ ಎಂದು ಏಕವಚನದಲ್ಲಿ ಮಾತನಾಡುವ ಸಂಸ್ಕೃತಿ ನಮ್ಮದಲ್ಲ, ಅಂತಹ ಅಭ್ಯಾಸ ನಮಗೆ ಜೀವನದಲ್ಲೇ ಬಂದಿಲ್ಲ. ನಮ್ಮ ತಂದೆ ಡಾ. ರಾಜ್‌ಕುಮಾರ್ ಅವರ ಕುಟುಂಬದಲ್ಲಿ ಬೆಳೆದ ಯಾರಿಗೂ ಯಾರನ್ನೂ ಏಕವಚನದಲ್ಲಿ ಕರೆಯುವ ಅಥವಾ ಹಗುರವಾಗಿ ಕಾಣುವ ಅಭ್ಯಾಸವೇ ಇಲ್ಲ. ಪ್ರತಿಯೊಬ್ಬರನ್ನೂ ಗೌರವಿಸುವುದು ಅಪ್ಪಾಜಿ ನಮಗೆ ಕಲಿಸಿಕೊಟ್ಟಿರುವ ಹಾದಿ’ ಎಂದು ಹೆಮ್ಮೆಯಿಂದ ಹೇಳಿದರು.

ಇದನ್ನೂ ಓದಿ: ತಾಯಿ ಕಿಳವಿ ಚಿತ್ರದ ಯಶಸ್ಸು: ನಿರ್ದೇಶಕನಿಗೆ ದುಬಾರಿ ಕಾರು ಗಿಫ್ಟ್ ನೀಡಿದ ನಟ ಶಿವಕಾರ್ತಿಕೇಯನ್

ಟೀಕೆ ಮಾಡುವವರ ಸಂತೋಷಕ್ಕೆ ನನ್ನ ಅಭ್ಯಂತರವಿಲ್ಲ

ತಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ ಅವರು, ‘ನಾನು ಎಲ್ಲರಿಗೂ ನನ್ನ ಮನಸ್ಸಿನಿಂದ ಗೌರವ ನೀಡುತ್ತೇನೆ. ಇದರಲ್ಲಿ ಯಾವುದೇ ತಪ್ಪು ಅಥವಾ ಕೀಳರಿಮೆ ನನಗೆ ಕಾಣಿಸುತ್ತಿಲ್ಲ. ಆದರೂ ಕೆಲವರು ಇದನ್ನು ಇಟ್ಟುಕೊಂಡು ಟೀಕೆ ಮಾಡುತ್ತಿದ್ದಾರೆ ಎಂದರೆ ಮಾಡಲಿ. ನನ್ನನ್ನು ಟೀಕೆ ಮಾಡುವುದರಿಂದ ಅವರಿಗೆ ಸಂತೋಷ ಸಿಗುತ್ತದೆ ಎಂದರೆ ಮಾಡಲಿ, ಅವರ ಸಂತೋಷದಲ್ಲಿ ನಾನೂ ಭಾಗಿಯಾಗುತ್ತೇನೆ, ನನಗಂತೂ ಇದರಿಂದ ಯಾವುದೇ ಬೇಸರವಿಲ್ಲ’ ಎಂದು ಹಗುರವಾದ ನಗೆಯೊಂದಿಗೆ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us