ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಕೆಲವರಿಗೆ ಮಾತ್ರ ಬಯ್ಯೋದೇಕೆ? ಕಿಚ್ಚನೇ ಕೊಟ್ಟರು ಉತ್ತರ
ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ವೇದಿಕೆಯಲ್ಲಿ ಸ್ಪರ್ಧಿಗಳನ್ನು ಏಕೆ ಬಯ್ಯುತ್ತಾರೆ ಎಂಬುದನ್ನು ವಿವರಿಸಿದ್ದಾರೆ. ಉತ್ತಮವಾಗಿ ಆಡುವವರು ಸಣ್ಣ ತಪ್ಪುಗಳಿಂದ ಹಾಳಾಗಬಾರದೆಂಬ ಕಾರಣಕ್ಕೆ ಅವರನ್ನು ತಿದ್ದುತ್ತಾರೆ. ದುರ್ಬಲ ಸ್ಪರ್ಧಿಗಳ ಮೇಲೆ ಶಕ್ತಿ ವ್ಯಯಿಸುವುದಿಲ್ಲ. ಪ್ರತೀ ಶನಿವಾರದ ಸಂಚಿಕೆಗೂ ಮುನ್ನ, ಸೂಕ್ತ ಮಾಹಿತಿ ಪಡೆಯಲು ಇಡೀ ವಾರದ ಎಪಿಸೋಡ್ಗಳನ್ನು ವೀಕ್ಷಿಸಿ ಸಿದ್ಧರಾಗುತ್ತಾರೆ ಎಂದು ಸುದೀಪ್ ತಿಳಿಸಿದ್ದಾರೆ.

ಕಿಚ್ಚ ಸುದೀಪ್ (Sudeep) ಅವರು ‘ಬಿಗ್ ಬಾಸ್’ನ ಕಳೆದ 11 ಸೀಸನ್ಗಳನ್ನಿಂದ ನಡೆಸುಕೊಂಡು ಬರುತ್ತಿದ್ದಾರೆ ಮತ್ತು ಇದು ಅವರಿಗೆ 12ನೇ ಸೀಸನ್. ಈ ಸೀಸನ್ ಕೂಡ ಇನ್ನೊಂದು ತಿಂಗಳಲ್ಲಿ ಫಿನಾಲೆ ಹಂತವನ್ನು ತಲುಪಲಿದೆ. ಕೆಲವು ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದು, ಇವರಲ್ಲಿ ಮನೆಯಿಂದ ಹೊರ ಹೋಗೋದು ಯಾರು ಎಂಬ ಕುತೂಹಲ ಮೂಡಿದೆ. ಈಗ ಸುದೀಪ್ ಅವರು ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ‘ಮಾರ್ಕ್’ ಚಿತ್ರದ ಪ್ರಚಾರಕ್ಕಾಗಿ ವಿವಿಧ ಮಾಧ್ಯಮಗಳಿಗೆ ಸಂದರ್ಶನ ನೀಡಿದರು. ಟಿವಿ9 ಕನ್ನಡದ ಜೊತೆ ಮಾತನಾಡುವಾಗ ಕೆಲವು ವಿಷಯಗಳನ್ನು ಅವರು ಹಂಚಿಕೊಂಡರು.
ಸುದೀಪ್ ಅವರು ಬಿಗ್ ಬಾಸ್ ವೇದಿಕೆ ಏರಿದಾಗ ಶನಿವಾರ ಕೆಲವು ಬಾರಿ ಕಠಿಣವಾಗಿ ಪಾಠ ತೆಗೆದುಕೊಳ್ಳುತ್ತಾರೆ. ಇದರಿಂದ ಅವರ ಅಭಿಮಾನಿಗಳಿಗೆ ಬೇಸರ ಆಗುತ್ತದೆ ಮತ್ತು ಅವರು ಸುದೀಪ್ನ ಟ್ರೋಲ್ ಮಾಡುತ್ತಾರೆ. ಈ ಬಾರಿ ಅಶ್ವಿನಿ ಗೌಡ ಅವರಿಗೆ ಅವರು ಬಯ್ಯೋದಿಲ್ಲ ಎಂಬ ಮಾತು ಕೇಳಿ ಬಂದಿತ್ತು. ಇದನ್ನು ವೇದಿಕೆ ಮೇಲೆಯೇ ಸುದೀಪ್ ಅಲ್ಲಗಳೆದರು. ಈಗ ಅವರು ಒಂದು ವಿಷಯದ ಬಗ್ಗೆ ಮಾತನಾಡಿದ್ದಾರೆ. ಕೆಲವರಿಗೆ ಮಾತ್ರ ಪಾಠ ಹೇಳೋದು ಏಕೆ ಎಂದು ಹೇಳಿದ್ದಾರೆ.
‘ನಾನು ಯಾರಿಗಾದರೂ ಬೈದರೆ ಅವರನ್ನು ಇಷ್ಟಪಡುವವರು ನನ್ನ ಇಷ್ಟಪಡಲ್ಲ. ತಂದೆ ಮನೆಯಲ್ಲಿ ಮಾಡಿದ್ದೂ ಇದನ್ನೇ. ತಂದೆ ಮಾತನಾಡದೇ ಸುಮ್ಮನೆ ಇದ್ದರೆ ಮನೆ ನಡೆಯಲ್ಲ. ನಾನು ಮಾಡೋದು ಅದನ್ನೇ. ನಾನು ಏನಾದರೂ ಹೇಳಿದರೆ ಸ್ಪರ್ಧಿಗಳು ತಿದ್ದುಕೊಳ್ಳುತ್ತಾರೆ. ನಾನು ಅದನ್ನು ಮರೆತು ಮುಂದೆ ಹೊಗುತ್ತೇನೆ’ ಎಂದಿದ್ದಾರೆ ಸುದೀಪ್.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಬಗ್ಗೆ ಸುದೀಪ್ ಕೊಟ್ಟರು ಮಾಹಿತಿ
‘ನಾನು ಎಪಿಸೋಡ್ ನೋಡಿಕೊಂಡು ಬರಬೇಕು. ಇಲ್ಲವಾದಲ್ಲಿ ಆ ಕ್ಷಣದಲ್ಲಿ ಮಾತನಾಡಲು ಸಾಧ್ಯವಾಗೋದಿಲ್ಲ. ಸ್ಪರ್ಧಿಗಳು ಏನು ಮಾತನಾಡುತ್ತಾರೆ ಎಂಬುದು ನಮಗೆ ಗೊತ್ತಿರುವುದಿಲ್ಲ’ ಎಂದು ಕಿಚ್ಚ ಸುದೀಪ್ ಅವರು ಹೇಳಿದರು.
‘ಸುದೀಪ್ ಅವರು ತುಂಬಾ ಬೈದರು ಎನ್ನುತ್ತಾರೆ. ಚೆನ್ನಾಗಿ ಆಡುವ ಕಾರಣಕ್ಕೆ ನಾನು ಬೈತೀನಿ. ನೀವು ತುಂಬಾ ಮುಂದೆ ಹೋಗಬೇಕು, ಹಾಳಾಗಬೇಡಿ ಎಂದು ತಿದ್ದೋದು ನಾನು. ಕೆಲವರು ಮಧ್ಯದಲ್ಲೇ ಹೊರಹೋಗ್ತಾರೆ ಅನ್ನೋದು ಗೊತ್ತಿರುತ್ತದೆ. ಅವರ ಮೇಲೆ ನಾವು ಎನರ್ಜಿ ಹಾಕುವುದಿಲ್ಲ. ಅವರಿಗೆ ಬೈಯಲ್ಲ. ಆದರೆ, ಉತ್ತಮವಾಗಿ ಆಡುವವರು ಸಣ್ಣ ತಪ್ಪಿನಿಂದ ಹಾಳಾಗುವ ಸಾಧ್ಯತೆ ಇರುತ್ತದೆ. ಅದನ್ನು ತಿದ್ದಬೇಕು. ಬೇಸರ ಮಾಡಿಕೊಂಡರೂ ತೊಂದರೆ ಇಲ್ಲ’ ಎಂದರು ಸುದೀಪ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



