
‘ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ ಸಿನಿಮಾದ ಬಗ್ಗೆ ಅಲ್ಲಲ್ಲಿ ಕೆಲವರು ನೆಗೆಟಿವ್ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ, ಆದರೆ ಅದಕ್ಕೂ ಹೆಚ್ಚಿನ ಜನ ಯಶ್ ಬೆಂಬಲಕ್ಕೆ ನಿಂತಿದ್ದು, ‘ನಿಮ್ಮ ಅಭಿಪ್ರಾಯ ನೀವಿಟ್ಟುಕೊಳ್ಳಿ, ಯಶ್ ಪ್ರಯತ್ನವನ್ನು ನಾವು ಬೆಂಬಲಿಸ್ತೀವಿ’ ಎಂದು ಸಿನಿಮಾಕ್ಕೆ ಹೋಗುತ್ತಿದ್ದಾರೆ. ಆದರೆ ಕನ್ನಡ ಚಿತ್ರರಂಗದ ಹಲವರು ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಬಹುತೇಕ ಮೌನವಾಗಿದ್ದಾರೆ. ಶಿವಣ್ಣ, ಟಾಕ್ಸಿಕ್ ಟ್ರೈಲರ್ ರಿಲೀಸ್ಗೆ ಬಂದು ಹರಸಿದ್ದರು. ಬಳಿಕ ಸಿನಿಮಾ ಬಿಡುಗಡೆ ಆದ ಮರುದಿನ ನಿರ್ದೇಶಕ ಆರ್ ಚಂದ್ರು ವಿಶ್ ಮಾಡಿದ್ದು ಬಿಟ್ಟರೆ ಬಹುತೇಕ ನಟ-ನಟಿಯರು ‘ಟಾಕ್ಸಿಕ್’ ಬಗ್ಗೆ ಮೌನವಾಗಿದ್ದಾರೆ. ಆದರೆ ಅದೇ ನೆರೆಯ ತೆಲುಗು ರಾಜ್ಯಗಳಲ್ಲಿ, ಅಲ್ಲಿನ ಸ್ಟಾರ್ ನಟ, ನಟಿಯರು ತಮ್ಮ ಭಾಷೆಯ ಸಿನಿಮಾ ಉಳಿಸಿಕೊಳ್ಳಲು ಒಟ್ಟಿಗೆ ಒಂದಾಗಿದ್ದಾರೆ. ಆ ಮೂಲಕ ‘ಟಾಕ್ಸಿಕ್’ ಹವಾ ತಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ.
ತೆಲುಗಿನ ಸಿನಿಮಾ ‘ಇರುಮುಡಿ’, ‘ಟಾಕ್ಸಿಕ್’ ರಿಲೀಸ್ ಆಗುವುದಕ್ಕೆ ಐದು ದಿನ ಮುಂಚಿತವಾಗಿ ರಿಲೀಸ್ ಆಗಿತ್ತು. ರವಿತೇಜ ನಟನೆಯ ಈ ಸಿನಿಮಾ ಬಹಳ ಒಳ್ಳೆಯ ಗಳಿಕೆಯನ್ನು ಆಂಧ್ರ ಮತ್ತು ತೆಲಂಗಾಣಗಳಲ್ಲಿ ಮಾಡುತ್ತಿದೆ. ಸಿನಿಮಾ ಬಿಡುಗಡೆ ಆದಾಗ, ಸಿನಿಮಾ ಎರಡೇ ದಿನಕ್ಕೆ ಸೂಪರ್ ಹಿಟ್ ಆದಾಗಲೂ ತೆಲುಗಿನ ಯಾವೊಬ್ಬ ನಟ-ನಟಿಯರು ಸಹ ಸಿನಿಮಾದ ಬಗ್ಗೆ ಒಂದೇ ಒಂದು ಪೋಸ್ಟ್ ಹಾಕಿರಲಿಲ್ಲ. ಆದರೆ ಯಾವಾಗ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಯ್ತೊ, ಹಠಾತ್ತನೆ, ತೆಲುಗು ನಟ-ನಟಿಯರು ‘ಇರುಮುಡಿ’ ಸಿನಿಮಾದ ಬಗ್ಗೆ ಪೋಸ್ಟ್ಗಳನ್ನು ಹಂಚಿಕೊಳ್ಳಲು ಆರಂಭಿಸಿದರು.
ಆಗಸ್ಟ್ 26ಕ್ಕೆ ‘ಟಾಕ್ಸಿಕ್’ ಸಿನಿಮಾ ಭಾರಿ ಅದ್ಧೂರಿಯಾಗಿ ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಆಯ್ತು. ತೆಲುಗು ಪ್ರೇಕ್ಷಕರು ಸಿನಿಮಾದ ಬಗ್ಗೆ ಬಹುತೇಕ ಧನಾತ್ಮಕ ಅಭಿಪ್ರಾಯಗಳನ್ನೇ ಹಂಚಿಕೊಂಡರು. ‘ಟಾಕ್ಸಿಕ್’ ದೆಸೆಯಿಂದ ‘ಇರುಮುಡಿ’ ಸಿನಿಮಾದ ಕಲೆಕ್ಷನ್ಗೆ ಹೊಡೆತ ಬಿತ್ತು, ಶೋಗಳು ಕಟ್ ಆದವು. ಕೂಡಲೇ ಎಚ್ಚೆತ್ತುಕೊಂಡ ತೆಲುಗು ಸ್ಟಾರ್ ನಟರುಗಳು ರಂಗಕ್ಕಿಳಿದರು. ಆಗಸ್ಟ್ 26ರಿಂದಲೇ ಇದ್ದಕ್ಕಿಂತೆ ‘ಇರುಮುಡಿ’ ಸಿನಿಮಾದ ಬಗ್ಗೆ ಒಬ್ಬರ ಹಿಂದೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಹಂಚಿಕೊಳ್ಳಲು ಆರಂಭಿಸಿದರು.
ಇದನ್ನೂ ಓದಿ:‘ಇರುಮುಡಿ’ಗೆ ತೆಲುಗು ನಟರ ಜೈಕಾರ; ‘ಟಾಕ್ಸಿಕ್’ ವಿಚಾರದಲ್ಲಿ ಕನ್ನಡ ಚಿತ್ರರಂಗದ ಮೌನ ಏತಕ್ಕೆ?
ರಾಮ್ ಚರಣ್, ತೆಲುಗು ಸಿನಿಮಾಗಳಲ್ಲಿ ಮಿಂಚುತ್ತಿರುವ ಕನ್ನಡದ ನಟಿ ರಶ್ಮಿಕಾ ಮಂದಣ್ಣ, ಮೆಗಾಸ್ಟಾರ್ ಚಿರಂಜೀವಿ, ವಿಜಯ್ ದೇವರಕೊಂಡ ಇನ್ನು ಕೆಲವರು ‘ಇರುಮುಡಿ’ ಸಿನಿಮಾದ ಬಗ್ಗೆ ಟ್ವೀಟ್ ಮಾಡಲು ಆರಂಭಿಸಿದರು. ಜೊತೆಗೆ ತೆಲುಗು ಸಾಮಾಜಿಕ ಜಾಲತಾಣಗಳಲ್ಲಿಯೂ, ‘ಟಾಕ್ಸಿಕ್’ ಪರಭಾಷೆ ಸಿನಿಮಾ, ನಮ್ಮ ಭಾಷೆಯ ಸಿನಿಮಾ ‘ಇರುಮುಡಿ’ಯನ್ನು ಗೆಲ್ಲಿಸಿ ಎಂಬ ನರೇಷನ್ ಹರಿದಾಡಲು ಆರಂಭವಾಯ್ತು’. ಒಟ್ಟಾರೆ ತಮ್ಮ ಭಾಷೆಯ ಸಿನಿಮಾ ಅನ್ನು ಉಳಿಸಿಕೊಳ್ಳಲು ಅಲ್ಲಿನ ಸ್ಟಾರ್ ನಟ-ನಟಿಯರು ಒಂದಾದರು.
ಆದರೆ ಕನ್ನಡದಲ್ಲಿ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆದಾಗಿನಿಂದ ಯಾವೊಬ್ಬ ಸ್ಟಾರ್ ನಟರೂ ಸಹ ಸಿನಿಮಾದ ಪರವಾಗಿ ಪೋಸ್ಟ್ ಹಂಚಿಕೊಂಡಿಲ್ಲ. ಆರ್ ಚಂದ್ರು ನಿನ್ನೆ (ಆಗಸ್ಟ್ 27) ಪೋಸ್ಟ್ ಹಂಚಿಕೊಂಡಿದ್ದರು. ಬಳಿಕ ಇಂದು (ಆಗಸ್ಟ್ 28) ನಟ ಉಪೇಂದ್ರ ‘ಟಾಕ್ಸಿಕ್’ಗೆ ಶುಭಾಶಯ ಕೋರಿದ್ದಾರೆ. ಇನ್ನುಳಿದಂತೆ ‘ಟಾಕ್ಸಿಕ್’ ಸಿನಿಮಾಕ್ಕೆ ಕೆಲ ಮಾಡಿರುವ ಯೋಗರಾಜ್ ಭಟ್ ಎಂದಿನಂತೆ ಶುಭಾಶಯಗಳನ್ನು ಕೋರಿದ್ದರು. ಏನೇ ಆಗಲಿ ತೆಲುಗು ಸಿನಿಮಾ ಸೆಲೆಬ್ರಿಟಿಗಳು ತಮ್ಮ ಭಾಷೆಯ ಸಿನಿಮಾಕ್ಕೆ ನೀಡಿದ ಬೆಂಬಲ ಕನ್ನಡದ ಸೆಲೆಬ್ರಿಟಿಗಳಿಗೆ ಮಾದರಿ ಆಗಬೇಕು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ