ಕಥೆ ಕೊಡಿ ಅಂತ ರಾಜಮೌಳಿ ತಂದೆ ಎದುರು ಬೇಡಿಕೆ ಇಟ್ಟ ಭನ್ಸಾಲಿ
ಬಾಹುಬಲಿ ಖ್ಯಾತಿಯ ಕಥೆಗಾರ ವಿಜಯೇಂದ್ರ ಪ್ರಸಾದ್ ಈಗ ಸಂಜಯ್ ಲೀಲಾ ಭನ್ಸಾಲಿ ನಿರ್ಮಾಣದ ಹೊಸ ಸಿನಿಮಾಗೆ ಬರಹಗಾರರಾಗಿದ್ದಾರೆ. ಧನುಷ್ ನಟನೆಯ, ಪಿ. ಎಸ್. ಮಿತ್ರನ್ ನಿರ್ದೇಶನದ ಈ ಪೌರಾಣಿಕ ಕಾಡಿನ ಸಾಹಸಗಾಥೆ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ .

ಮುಖ್ಯಾಂಶಗಳು
- ದೊಡ್ಡ ಪರದೆಯಲ್ಲಿ 'ಧನುಷ್-ಭನ್ಸಾಲಿ' ಜುಗಲ್ಬಂದಿ
- ಜೊತೆಯಾದ ದಿಗ್ಗಜ ಕಥೆಗಾರ
- 'ಬಾಹುಬಲಿ' ಲೇಖಕನ ಹೊಸ ಸಾಹಸ
ಭಾರತೀಯ ಚಿತ್ರರಂಗದ ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್ ಮತ್ತೊಂದು ಬೃಹತ್ ಯೋಜನೆಗೆ ಕೈಜೋಡಿಸಿದ್ದಾರೆ. ‘ಬಾಹುಬಲಿ’, ‘ಆರ್ಆರ್ಆರ್’ ಸೇರಿದಂತೆ ಅನೇಕ ಬ್ಲಾಕ್ಬಸ್ಟರ್ ಸಿನಿಮಾಗಳಿಗೆ ಕಥೆ ಹೆಣೆದ ಇವರು, ಈಗ ಸಂಜಯ್ ಲೀಲಾ ಭನ್ಸಾಲಿ ನಿರ್ಮಿಸಲಿರುವ ಹೊಸ ದೃಶ್ಯಕಾವ್ಯಕ್ಕೆ ಕಥೆ ಬರೆಯುತ್ತಿದ್ದಾರೆ. ನಟ ಧನುಷ್ ನಾಯಕರಾಗಿ ಕಾಣಿಸಿಕೊಳ್ಳಲಿರುವ ಈ ಪೌರಾಣಿಕ ಹಿನ್ನೆಲೆಯ ಸಿನಿಮಾ ಹೊಸ ಸಂಚಲನ ಮೂಡಿಸಲು ರೆಡಿ ಆಗಿದೆ.
ಈ ಬಹುನಿರೀಕ್ಷಿತ ಚಿತ್ರವನ್ನು ಖ್ಯಾತ ತಮಿಳು ನಿರ್ದೇಶಕ ಪಿ. ಎಸ್. ಮಿತ್ರನ್ ನಿರ್ದೇಶಿಸಲಿದ್ದಾರೆ. ಸ್ವತಃ ಮಿತ್ರನ್ ಅವರೇ ವಿಜಯೇಂದ್ರ ಪ್ರಸಾದ್ ಹೆಸರನ್ನು ಅಧಿಕೃತ ಮಾಡಿದ್ದಾರೆ. ಇದೊಂದು ಬೃಹತ್ ಪ್ರಮಾಣದಲ್ಲಿ ಮೂಡಿಬರಲಿರುವ ಮೈಥಾಲಜಿಕಲ್ ಜಂಗಲ್ ಅಡ್ವೆಂಚರ್ ಸಿನಿಮಾ ಇದಾಗಿದೆ. ಭನ್ಸಾಲಿ ನಿರ್ಮಾಣ ಮತ್ತು ಧನುಷ್ ನಟನೆಯ ಜೊತೆಗೆ ವಿಜಯೇಂದ್ರ ಪ್ರಸಾದ್ ಅವರ ಕಥೆ ಸೇರಿರುವುದರಿಂದ ಪ್ರೇಕ್ಷಕರ ನಿರೀಕ್ಷೆ ಮುಗಿಲು ಮುಟ್ಟಿದೆ.
ವಿಜಯೇಂದ್ರ ಪ್ರಸಾದ್ ಅವರು ತಮ್ಮ ಮಗ ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು ನಟನೆಯ ‘ವಾರಾಣಸಿ’ ಸಿನಿಮಾಗೆ ಕಥೆ ಬರೆದಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆಯುವ ರೀತಿಯಲ್ಲಿ ಕಥೆಗಳನ್ನು ಹೆಣೆಯುವಲ್ಲಿ ಅವರು ಎತ್ತಿದ ಕೈ. ಪ್ರಾದೇಶಿಕ ಗಡಿಗಳನ್ನು ಮೀರಿ ಜನರನ್ನು ಚಿತ್ರಮಂದಿರಕ್ಕೆ ಸೆಳೆಯುವ ಅದ್ಭುತ ಕಲಾತ್ಮಕ ಶಕ್ತಿ ಅವರ ಬರಹಕ್ಕಿದೆ.
ನಿರ್ದೇಶಕ ಪಿ. ಎಸ್. ಮಿತ್ರನ್ ಅವರಿಗೆ ಈ ಸಿನಿಮಾ ಅತ್ಯಂತ ಪ್ರಮುಖವಾಗಿದೆ. ‘ಇರುಂಬು ತಿರೈ’ ಮತ್ತು ‘ಸರ್ದಾರ್’ ಮುಂತಾದ ಯಶಸ್ವಿ ಚಿತ್ರಗಳನ್ನು ನೀಡಿದ್ದ ಮಿತ್ರನ್, ಈ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಪ್ರಥಮ ಬಾರಿಗೆ ಇಂತಹ ಬೃಹತ್ ಕ್ಯಾನ್ವಾಸ್ನಲ್ಲಿ ಕೆಲಸ ಮಾಡಲು ಅವರಿಗೆ ದೊಡ್ಡ ವೇದಿಕೆ ಸಿಕ್ಕಂತಾಗಿದೆ.
ಇದನ್ನೂ ಓದಿ: ‘ಬಾಹುಬಲಿ’ ಮಾಡಲು ರಾಜಮೌಳಿ ಎದುರು ಹಲವು ಬೇಡಿಕೆ ಇಟ್ಟಿದ್ದ ಶ್ರೀದೇವಿ; ಆಮೇಲೆ ಆಗಿದ್ದೇನು?
ಉತ್ತರ ಹಾಗೂ ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ದಿಗ್ಗಜರು ಈ ಯೋಜನೆಗಾಗಿ ಒಂದಾಗಿದ್ದಾರೆ. ಧನುಷ್ ನಟನೆ, ಭನ್ಸಾಲಿ ನಿರ್ಮಾಣ ಮತ್ತು ವಿಜಯೇಂದ್ರ ಪ್ರಸಾದ್ ಅವರ ಕಥೆ ಈ ಸಿನಿಮಾದಲ್ಲಿದೆ. ಹೀಗಾಗಿ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆಯುವುದು ಖಚಿತ ಎನ್ನಲಾಗುತ್ತಿದೆ. ಸಿನಿಮಾ ಕುರಿತಾದ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಹೊರಬೀಳಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




