ಶಾಲಾ​ ಮತ್ತು ಸಾರಿಗೆ ಬಸ್​ ನಡುವೆ ಅಪಘಾತ: ಸರ್ಕಾರ, ಕೆಎಸ್​ಆರ್​ಟಿಸಿಯಿಂದ 15 ಮಕ್ಕಳಿಗೆ ಚೆಕ್​ ಹಸ್ತಾಂತರ

ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಕಪಗಲ್ ಬಳಿ ಸಾರಿಗೆ ಬಸ್ ಹಾಗೂ ಶಾಲಾ ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಇಬ್ಬರು ಶಾಲಾ ಮಕ್ಕಳು ಮೃತಪಟ್ಟಿದ್ದರು. 29 ಮಕ್ಕಳು ಗಾಯಗೊಂಡಿದ್ದರು. ಸಿಎಂ ಸಿದ್ದರಾಮಯ್ಯ ಸೂಚನೆ ಬೆನ್ನಲ್ಲೇ ಇಂದು ಸರ್ಕಾರದಿಂದ ಕೊಡಲಾದ ಐದು ಲಕ್ಷ ರೂ ಮತ್ತು ಕೆಎಸ್​ಆರ್​ಟಿಸಿ ಸಂಸ್ಥೆ ನೀಡಿದ್ದ ಚೆಕ್​ ಅನ್ನು ವಿತರಿಸಲಾಗಿದೆ.

ಶಾಲಾ​ ಮತ್ತು ಸಾರಿಗೆ ಬಸ್​ ನಡುವೆ ಅಪಘಾತ: ಸರ್ಕಾರ, ಕೆಎಸ್​ಆರ್​ಟಿಸಿಯಿಂದ 15 ಮಕ್ಕಳಿಗೆ ಚೆಕ್​ ಹಸ್ತಾಂತರ
ಶಾಲಾ​ ಮತ್ತು ಸಾರಿಗೆ ಬಸ್​ ನಡುವೆ ಅಪಘಾತ: ಸರ್ಕಾರ, ಕೆಎಸ್​ಆರ್​ಟಿಸಿಯಿಂದ 15 ಮಕ್ಕಳಿಗೆ ಚೆಕ್​ ಹಸ್ತಾಂತರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 07, 2024 | 6:00 PM

ರಾಯಚೂರು, ಸೆಪ್ಟೆಂಬರ್​ 07: ಸಾರಿಗೆ ಬಸ್ ಹಾಗೂ ಶಾಲಾ ಬಸ್ ನಡುವೆ ನಡೆದ ಭೀಕರ ರಸ್ತೆ ಅಪಘಾತ (accident) ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಗೆ ರಸ್ತೆ ಗುಂಡಿಯೇ ಅಂತ ಟಿವಿ9 ವರದಿ ಮಾಡಿತ್ತು. ರಿಯಾಲಿಟಿ ಚೆಕ್ ಮೂಲಕ ರಸ್ತೆ ಗುಂಡಿಗಳ ಸತ್ಯ ದರ್ಶನ ಮಾಡಿದ್ದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ತಂಡ ಘಟನಾ ಸ್ಥಳ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಅಷ್ಟೇ ಅಲ್ಲ ಮೃತ ಮಕ್ಕಳ ಕುಟುಂಬಕ್ಕೆ ರಾಜ್ಯ ಸರ್ಕಾರ ಮತ್ತು ಕೆಎಸ್​ಆರ್​ಟಿಸಿ ಸಂಸ್ಥೆಯಿಂದ ಪರಿಹಾರದ ಚೆಕ್ ಹಸ್ತಾಂತರಿಸಲಾಗಿದೆ.

ಕೆಎಸ್​ಆರ್​ಟಿಸಿ ಸಂಸ್ಥೆ ನೀಡಿದ್ದ ಚೆಕ್ ಹಸ್ತಾಂತರಿಸದ ಶಾಸಕ ಬಸನಗೌಡ ದದ್ದಲ್​ 

ರಾಯಚೂರಿನ ರಿಮ್ಸ್​ ಆಸ್ಪತ್ರೆಯಲ್ಲಿರುವ ಅಪಘಾತದಲ್ಲಿ ಗಾಯಗೊಂಡಿದ್ದ 15 ಮಕ್ಕಳಿಗೆ ಕೆಎಸ್​ಆರ್​ಟಿಸಿ ಸಂಸ್ಥೆ ನೀಡಿದ್ದ ಚೆಕ್​ ಅನ್ನು ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್​ ವಿತರಿಸಿದ್ದಾರೆ. ಗಂಭೀರ ಗಾಯಗೊಂಡಿರುವ ಮೂವರು ಮಕ್ಕಳಿಗೆ ತಲಾ 3 ಲಕ್ಷ ರೂ., ಕೈ, ಕಾಲುಗಳಿಗೆ ಗಾಯವಾಗಿರುವ 10 ಮಕ್ಕಳಿಗೆ ತಲಾ 1 ಲಕ್ಷ ರೂ., ಸಣ್ಣಪುಟ್ಟ ಗಾಯಗೊಂಡ ಇಬ್ಬರು ಮಕ್ಕಳಿಗೆ ತಲಾ 50 ಸಾವಿರ ರೂ. ನೀಡಲಾಗಿದೆ. ಗಾಯಗೊಂಡ ಎಲ್ಲಾ ಮಕ್ಕಳ ಆಸ್ಪತ್ರೆ ವೆಚ್ಚ ಸರ್ಕಾರವೇ ಭರಿಸಲಿದೆ ಎಂದು ಶಾಸಕ ಬಸನಗೌಡ ದದ್ದಲ್ ತಿಳಿಸಿದ್ದಾರೆ.

ಇದನ್ನೂ ಓದಿ: Black Day Of Raichur: ಮಾನ್ವಿ ಸ್ಕೂಲ್ ಬಸ್​ ಅಪಘಾತಕ್ಕೆ ರಸ್ತೆ ಗುಂಡಿಯೇ ವಿಲನ್

ಇದಷ್ಟೇ ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಮತ್ತು ಟೀಂ ನಿನ್ನೆ ರಿಮ್ಸ್ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿ ಘಟನೆಯಲ್ಲಿ ಗಾಯಗೊಂಡಿರುವ ಮಕ್ಕಳ ಆರೋಗ್ಯ ಸ್ಥಿತಿ ವಿಚಾರಿಸಿದ್ದಾರೆ. ಬಳಿಕ ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮಕ್ಕೆ ಭೇಟಿ ನೀಡಿ, ಮೃತ ಮಕ್ಕಳ ಪೋಷಕರನ್ನ ಸಂತೈಸಿದ್ದಾರೆ.

ಸರ್ಕಾರದಿಂದ ಕೊಡಲಾದ ಐದು ಲಕ್ಷ ರೂ. ಚೆಕ್ ಹಸ್ತಾಂತರ

ಮೃತ ಶ್ರೀಕಾಂತ್ ಹಾಗೂ ಸಮರ್ಥ ಪೋಷಕರನ್ನ ಭೇಟಿ ಮಾಡಿ ಸಾಂತ್ವನ ಹೇಳಿದ್ದು, ಸರ್ಕಾರದಿಂದ ಕೊಡಲಾದ ಐದು ಲಕ್ಷ ರೂ. ಚೆಕ್ ಅನ್ನ ಎರಡು ಕುಟುಂಬಕ್ಕೆ ವಿತರಿಸಿದ್ದಾರೆ. ಇದೇ ವೇಳೆ ಬೋಸರಾಜ್​​ ಫೌಂಡೇಶನ್​ನಿಂದ ಎರಡು ಕುಟುಂಬಕ್ಕೆ ತಲಾ ಒಂದೊಂದು ಲಕ್ಷ ರೂ. ನಗದು ನೀಡಲಾಗಿದೆ.

ಇದೇ ವೇಳೆ ಮಾತನಾಡಿದ ಸಚಿವ ಶರಣಪ್ರಕಾಶ್ ಪಾಟೀಲ್, ಮೃತ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ, ಗಂಭೀರವಾಗಿ ಗಾಯಗೊಂಡಿರೊ ಮಕ್ಕಳಿಗೆ ತಲಾ ಮೂರು ಲಕ್ಷ ರೂ. ಹಾಗೂ ಉಳಿದ ಗಾಯಾಳುಗಳಿಗೆ ತಲಾ ಒಂದು ಲಕ್ಷ ರೂ ನೀಡಲಾಗಿದೆ ಎಂದಿದ್ದಾರೆ. ಅಷ್ಟೇ ಅಲ್ಲದೇ ಗಂಭೀರವಾಗಿ ಗಾಯಗೊಂಡಿರುವ ಮಕ್ಕಳಿಗೆ ಸರ್ಕಾರಿಂದ ಉಚಿತವಾಗಿ ಶಿಕ್ಷಣ ಕೊಡುವ ವ್ಯವಸ್ಥೆ ಮಾಡಲಾಗುತ್ತೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ರಾಯಚೂರು: ಭೀಕರ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವು, ಕೈಕಾಲು ಛಿದ್ರಗೊಂಡ ಮಕ್ಕಳ ನೋಡಿ ಬಿಕ್ಕಿ ಬಿಕ್ಕಿ ಅತ್ತ ಪೋಷಕರು

ಸೆ.5ರಂದು ಶಾಲಾ ಬಸ್​​ ಮತ್ತು ಕೆಎಸ್​ಆರ್​ಟಿಸಿ ಬಸ್​ ನಡುವೆ ಭೀಕರ ಅಪಘಾತ ನಡೆದಿತ್ತು. ಅಪಘಾತದಲ್ಲಿ ಇಬ್ಬರು ಶಾಲಾ ಮಕ್ಕಳು ಮೃತಪಟ್ಟಿದ್ದರು. ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಸಮೀಪ ಅಪಘಾತ ಸಂಭವಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.