ಬಳ್ಳಾರಿ: ಗ್ರಾಮೀಣ ಭಾಗದಲ್ಲಿ ಹೆಚ್ಚಿದ ಕಳ್ಳರ ಹಾವಳಿ; ರಾತ್ರಿಯಲ್ಲ, ಹಗಲಿನಲ್ಲೇ ಕಳ್ಳನ ಕೈಚಳಕ

ಆ ಊರಿನ ಗ್ರಾಮಸ್ಥರೆಲ್ಲ ಬಡವರು, ಕೂಲಿ ಕಾರ್ಮಿಕರು. ನಿತ್ಯ ದುಡಿಮೆಗೆ ಹೋದರೆ ಮಾತ್ರ ಜೀವನ ಅವರದ್ದು. ಅಂತಹವರ ಮನೆಗಳೇ ಆ ಕಳ್ಳನಿಗೆ ಟಾರ್ಗೆಟ್. ರಾತ್ರಿಯಲ್ಲ ಹಗಲು ಹೊತ್ತಿನಲ್ಲೆ ಆ ಕಳ್ಳ ತನ್ನ ಕೈಚಳಕ ತೋರಿಸಿ ಸಿಕ್ಕಿಬಿದ್ದಿದ್ದ ಆತನನ್ನ ಕಂಬಕ್ಕೆ ಕಟ್ಟಿ ಊರಿನವರು ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ರು. ಆದರೆ ಸಿಕ್ಕ ಕಳ್ಳನನ್ನ ಪೊಲೀಸರು ಮಾತ್ರ ಕೇಸ್ ದಾಖಲಿಸದೇ ಕೈ ಬಿಟ್ಟಿದ್ದಾರೆ. ಎನಿದು ಕಥೆ ಅಂತೀರಾ, ಇಲ್ಲಿದೆ ನೋಡಿ.

ಬಳ್ಳಾರಿ: ಗ್ರಾಮೀಣ ಭಾಗದಲ್ಲಿ ಹೆಚ್ಚಿದ ಕಳ್ಳರ ಹಾವಳಿ; ರಾತ್ರಿಯಲ್ಲ, ಹಗಲಿನಲ್ಲೇ ಕಳ್ಳನ ಕೈಚಳಕ
ಸಿಕ್ಕಿಬಿದ್ದ ಕಳ್ಳನಿಗೆ ಧರ್ಮದೇಟು
Follow us
|

Updated on: Mar 11, 2023 | 10:59 AM

ಬಳ್ಳಾರಿ: ಹೀಗೆ ಕಂಬಕ್ಕೆ ಕಟ್ಟಿರುವ ಕಳ್ಳನಿಗೆ ನಾನೊಂದು ನೀನೊಂದು ಎಂದು ಏಟು ಹಾಕುತ್ತಿರುವ ಇವರೆಲ್ಲ ಕಳ್ಳರ ಕಾಟಕ್ಕೆ ಸುಸ್ತಾಗಿ ಹೋದವರು. ಜಿಲ್ಲೆಯ ಕುರಗೋಡ್ ತಾಲೂಕಿನ ಭಾಗ್ಯ ನಗರ, ವಿಜಯನಗರ, ಮಲ್ಲಾರೆಡ್ಡಿ ಕ್ಯಾಂಪ್​ನಲ್ಲಿ ಸತತವಾಗಿ ಕಳ್ಳನ ಕಾಟಕ್ಕೆ ಗ್ರಾಮಸ್ಥರು ರೋಸಿ ಹೋಗಿದ್ದರು. ಈ ಕಳ್ಳ, ನಿತ್ಯ ಕೂಲಿ ಮಾಡುವ ಕಾರ್ಮಿಕರು, ಬಡವರ ಮನೆಗಳಲ್ಲೆ ಕಳ್ಳತನ ಮಾಡುತ್ತಿದ್ದ. ಕಳೆದ ನಾಲ್ಕೈದು ದಿನಗಳ ಹಿಂದೆ ಕಳ್ಳ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದ. ಒಂದೇ ವಾರದಲ್ಲಿ ಕ್ಯಾಂಪ್​ನ ದೇವಸ್ಥಾನ. ಕೂಲಿ ಕಾರ್ಮಿಕರ 9 ಮನೆಗಳ ಬೀಗ ಮುರಿದು ಕಳ್ಳತನ ಮಾಡಿದ್ದ ಕಳ್ಳನನ್ನ ಹಿಡಿದು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿದ್ರು. ಸಿಕ್ಕಿಬಿದ್ದ ಕಳ್ಳನನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ರೆ, ಪೊಲೀಸರು ಮಾತ್ರ ವಶಕ್ಕೆ ಪಡೆದ ವ್ಯಕ್ತಿ ಕಳ್ಳನಲ್ಲ. ಅಮಾಯಕನೆಂದು ಬಿಟ್ಟು ಕಳುಹಿಸಿದ್ದಾರೆ. ಹೀಗಾಗಿ ರೊಚ್ಚಿಗೆದ್ದ ಗ್ರಾಮಸ್ಥರು ಕಳ್ಳನ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಹೋರಾಟಕ್ಕೆ ಇಳಿದಿದ್ದಾರೆ.

ಕ್ಯಾಂಪ್​ಗಳಲ್ಲಿನ ಕೂಲಿ ಕಾರ್ಮಿಕರು ಜಮೀನು ಕೆಲಸಕ್ಕೆ ತೆರಳಿದ ವೇಳೆಯೇ ಮನೆಗಳ್ಳತನ ನಡೆದಿವೆ. ಮನೆಯ ಬೀಗ ಮುರಿದು ಮನೆಯಲ್ಲಿನ ಚಿಕ್ಕಪುಟ್ಟ ಬಂಗಾರದ ವಸ್ತುಗಳು, ಹಣ ಕದ್ದಿರುವ 9 ಪ್ರಕರಣಗಳು ಕ್ಯಾಂಪ್​ನಲ್ಲಿ ಜರುಗಿವೆ. ಹೀಗಾಗಿ ಗ್ರಾಮಸ್ಥರೇ ಪಹರೆ ಕಾಯ್ದು, ಕಳ್ಳನನ್ನ ಹಿಡಿದುಕೊಟ್ರು ಪೊಲೀಸರು ಮಾತ್ರ ಕ್ರಮ ಕೈಗೊಳ್ಳದ ಪರಿಣಾಮ ಗ್ರಾಮಸ್ಥರು ರೊಚ್ಚಿಗೆದ್ದಿದ್ದರು. ಇದೇ ವೇಳೆ ಮಹಿಳೆಯರು ಬಳ್ಳಾರಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿ ಸೂಕ್ತ ರಕ್ಷಣೆ ನೀಡಬೇಕು. ಮನೆಗಳ್ಳರ ಹಾವಳಿ ತಡೆಯಬೇಕೆಂದು ದೂರು ಸಲ್ಲಿಸಿದರು. ಗ್ರಾಮಸ್ಥರ ಅಹವಾಲು ಆಲಿಸಿದ ಹೆಚ್ಚುವರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳು ಗ್ರಾಮದಲ್ಲಿ ಸೂಕ್ತ ಬಂದೋಬಸ್ತ್​ ವ್ಯವಸ್ಥೆ ಕೈಗೊಳ್ಳುವ ಭರವಸೆ ನೀಡಿ ದೂರು ಸ್ವೀಕರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಆದ್ರೆ ಕಳ್ಳನನ್ನ ಹಿಡಿದುಕೊಟ್ರು ಪೊಲೀಸರು ನಿರ್ಲಕ್ಷ್ಯವಹಿಸಿದ್ದಾರೆ. ಗ್ರಾಮದಲ್ಲಿ ಭಯದ ವಾತಾವರಣವಿದ್ದು ಸೂಕ್ತ ರಕ್ಷಣೆ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:9 ತಿಂಗಳು ಹೆತ್ತು ಹೊತ್ತು ಸಾಕಿದ ತಾಯಿಯ ಮಾಂಗಲ್ಯ ಸರವನ್ನೇ ಕಳ್ಳತನ ಮಾಡಿದ ಮಗಳು: ಬಳಿಕ ಆಗಿದ್ದೇನು?

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಳ್ಳರ ಹಾವಳಿ ಇತ್ತೀಚೆಗೆ ಹೆಚ್ಚುತ್ತಲೆ ಸಾಗಿದೆ. ಅದರಲ್ಲೂ ಬಡವರು ಕೂಲಿ ಕಾರ್ಮಿಕರ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳರು ತಮ್ಮ ಕೈಚಳಕ ತೊರಿಸುತ್ತಿದ್ದಾರೆ. ಹೀಗಾಗಿ ಚುನಾವಣೆಯ ಬ್ಯುಸಿಯಲ್ಲಿರುವ ಪೊಲೀಸರು ಕಳ್ಳರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಿ ಎನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ. ಇನ್ನಾದರೂ ಪೊಲೀಸರು ಎನ್ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ವರದಿ: ವಿರೇಶ್​ ದಾನಿ ಟಿವಿ9 ಬಳ್ಳಾರಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ