Hindalga Jail: ಹಿಂಡಲಗಾ ಜೈಲ್​: ದರ್ಶನ್​ ಶಿಫ್ಟ್ ಆಗಲಿರುವ 101 ವರ್ಷ ಇತಿಹಾಸದ ಕಾರಾಗೃಹದ ಬಗ್ಗೆ ನಿಮಗೆಷ್ಟು ಗೊತ್ತು?

ಪರಪ್ಪನ‌ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ವಿಚಾರ ಹಿನ್ನೆಲೆಯಲ್ಲಿ ಬೇರೆ ಜೈಲಿಗೆ ಶಿಫ್ಟ್​ ಮಾಡುವಂತೆ ಖುದ್ದು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಹೀಗಾಗಿ ದರ್ಶನ್​ರನ್ನ ಬೆಂಗಳೂರು ಸೆಂಟ್ರಲ್​ ಜೈಲಿನಿಂದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ದರ್ಶನ್​ ಶಿಫ್ಟ್ ಆಗಲಿರುವ 101 ವರ್ಷ ಇತಿಹಾಸದ ಕಾರಾಗೃಹದ ಬಗ್ಗೆ ನಿಮಗೆಷ್ಟು ಗೊತ್ತು?

Hindalga Jail: ಹಿಂಡಲಗಾ ಜೈಲ್​: ದರ್ಶನ್​ ಶಿಫ್ಟ್ ಆಗಲಿರುವ 101 ವರ್ಷ ಇತಿಹಾಸದ ಕಾರಾಗೃಹದ ಬಗ್ಗೆ ನಿಮಗೆಷ್ಟು ಗೊತ್ತು?
ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹ
Follow us
|

Updated on:Aug 26, 2024 | 5:58 PM

ಬೆಳಗಾವಿ/ಬೆಂಗಳೂರು, (ಆಗಸ್ಟ್ 26): ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಐಷಾರಾಮಿಯಾಗಿ ಬದುಕುತ್ತಿದ್ದ ನಟ ದರ್ಶನ್‌ (Actor Darshan) ಹಾಗೂ ಗ್ಯಾಂಗ್‌ಗೆ ಸಂಕಷ್ಟ ಫಿಕ್ಸ್‌ ಆಗಿದೆ. ಹಿಂಡಲಗಾ ಜೈಲಿನ (Hindalaga Jail) ʼಅಂದೇರಿʼ ಸೆಲ್‌ಗಳಿಗೆ ಈ ಹಿಂಡು ಶಿಫ್ಟ್‌ ಆಗುವುದು ಬಹುತೇಕ ಖಚಿತವಾಗಿದೆ. ಇದಕ್ಕಾಗಿ ಕಾನೂನು ಸಂಬಂಧಿತ ಸಂಗತಿಗಳನ್ನು ಜೈಲು ಆಧಿಕಾರಿಗಳು ಚರ್ಚೆ ಮಾಡುತ್ತಿದ್ದಾರೆ. ಶಿಫ್ಟ್‌ ಮಾಡಲು ನ್ಯಾಯಾಲಯದ ಅನುಮತಿ ಬೇಕೇ ಅಥವಾ ಜೈಲು ಆಡಳಿತವೇ ನಿರ್ಧರಿಸಬಹುದಾ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನು ಸ್ವಾತಂತ್ರ್ಯ ಹೋರಾಟಗಾರರನ್ನು ಇರಿಸಲು 1923 ರಲ್ಲಿ ಬ್ರಿಟಿಷರು ನಿರ್ಮಿಸಿದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹವು ದೇಶದ ಅತಿದೊಡ್ಡ ಜೈಲುಗಳಲ್ಲಿ ಒಂದಾಗಿದೆ. 100 ವರ್ಷಗಳ ಹಳೆಯದಾದ ಈ ಜೈಲು ನಮ್ಮ ರಾಷ್ಟ್ರದ ಇತಿಹಾಸದ ಭಾಗವಾಗಿದೆ.

ಹಿಂಡಲಗಾ ಜೈಲಿನ ಇತಿಹಾಸ

ಸ್ವಾತಂತ್ರ್ಯ ಹೋರಾಟಗಾರರನ್ನು ಇರಿಸಲು 1923 ರಲ್ಲಿ ಬ್ರಿಟಿಷರು ನಿರ್ಮಿಸಿದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹವು ದೇಶದ ಅತಿದೊಡ್ಡ ಜೈಲುಗಳಲ್ಲಿ ಒಂದಾಗಿದೆ. 100 ವರ್ಷಗಳ ಹಳೆಯದಾದ ಈ ಜೈಲು ನಮ್ಮ ರಾಷ್ಟ್ರದ ಇತಿಹಾಸದ ಭಾಗವಾಗಿದೆ. ಬೆಳಗಾವಿಯಿಂದ 6 ಕಿಮೀ ದೂರದಲ್ಲಿ. ಹಿಂಡಲಗಾ ಜೈಲನ್ನು ಸುಮಾರು 99 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. 99 ಎಕರೆಯಲ್ಲಿ 30 ಎಕರೆಯಷ್ಟು ಭೂಮಿಯನ್ನು ಕೃಷಿ ಮತ್ತು ಜಾನುವಾರುಗಳಿಗೆ ಮೇಯಿಸಲು ಮೀಸಲಿಡಲಾಗಿದೆ. ಇದು ಹಸಿರು ಸೆರೆಮನೆಯಾಗಿದ್ದು, ವಿಭಾಗಗಳ ನಡುವಿನ ತೆರೆದ ಸ್ಥಳಗಳಲ್ಲಿ ಹೇರಳವಾದ ಮರಗಳು ಮತ್ತು ಸಸ್ಯವರ್ಗವನ್ನು ಹೊಂದಿದೆ.

ಇದನ್ನೂ ಓದಿ: TV9 Big Impact | ಟಿವಿ9 ರಹಸ್ಯ ಕಾರ್ಯಾಚರಣೆ ವರದಿ ಫಲಶ್ರುತಿ: ಬೆಂಗಳೂರು-ಬೆಳಗಾವಿ ಸೇರಿದಂತೆ ಜೈಲು ಅಕ್ರಮದಲ್ಲಿದ್ದ 6 ಅಧಿಕಾರಿಗಳು ಸಸ್ಪೆಂಡ್​!

ಇನ್ನು ಈ ಜೈಲಿನಲ್ಲಿ ಸ್ವಾತಂತ್ರ್ಯ ವೀರ್​ ವಿನಾಯಕ ದಾಮೋದರ್ ಸಾವರ್ಕರ್​ನನ್ನು ಸಹ ಏಪ್ರಿಲ್ 4, 1950 ರಿಂದ ಜುಲೈ 13, 1950 ರವರೆಗೆ ಒಟ್ಟು 100 ದಿನಗಳ ಕಾಲ ಇರಿಸಲಾಗಿತ್ತು. ಹೀಗಾಗಿ ಅನೇಕ ಸ್ಥಳೀಯರು ಜೈಲಿನ ಮುಂದೆ ಸಾವರ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ಒತ್ತಾಯಿಸುತ್ತಿದ್ದಾರೆ.

ಜೈಲಿನ ಮೂರು ಸ್ಥಳಗಳಲ್ಲಿ ಗಲ್ಲುಶಿಕ್ಷೆ ವಿಧಿಸಬಹುದಾಗಿದೆ. ಜೈಲಿನಲ್ಲಿ ಗಲ್ಲಿಗೇರಿದ ಕೊನೆಯ ವ್ಯಕ್ತಿ ಗೋಕಾಕ್‌ನ ಹನುಮಪ್ಪ ಮರಿಯಾಲ್ – ನವೆಂಬರ್ 9, 1983. ಅದಕ್ಕೂ ಮೊದಲು, ಆರು ಜನರನ್ನು 1976 ರಲ್ಲಿ ಮತ್ತು ಐವರನ್ನು 1978 ರಲ್ಲಿ ಗಲ್ಲಿಗೇರಿಸಲಾಯಿತು. ಹಿಂಡಲಗಾ ಜೈಲಿನಲ್ಲಿ ನಾಲ್ವರು ವೀರಪ್ಪನ್ ಗ್ಯಾಂಗ್ ಸದಸ್ಯರು ಸೇರಿದಂತೆ ಮರಣದಂಡನೆ ಶಿಕ್ಷೆಗೆ ಒಳಗಾದ ಹಲವಾರು ಅಪರಾಧಿಗಳು ಇದ್ದಾರೆ. ಸರಣಿ ಅತ್ಯಾಚಾರಿ ಮತ್ತು ಹಂತಕ ಉಮೇಶ್ ರೆಡ್ಡಿ ಸೇರಿದಂತೆ ಕುಖ್ಯಾತ ರೌಡಿಗಳು ಮತ್ತು ಶಂಕಿತ ಸಿಮಿ ಕಾರ್ಯಕರ್ತರು ಸಹ ಇದೇ ಜೈಲಿನಲ್ಲಿದ್ದಾರೆ.

ಹಿಂಡಲಗಾ ಜೈಲಿನಲ್ಲಿ ಏನೇನು ಇದೆ?

ಜೈಲು ಎರಡು ದೊಡ್ಡ ಸಂಕೀರ್ಣಗಳನ್ನು ಒಳಗೊಂಡಿದೆ. ಒಂದು ಸಂಕೀರ್ಣವು ಪುರುಷ ಅಪರಾಧಿಗಳಿಗೆ ಬ್ಯಾರಕ್‌ಗಳನ್ನು ಹೊಂದಿದೆ. ಇನ್ನೊಂದು ವಿಚಾರಣಾಧೀನ ಕೈದಿಗಳಿಗೆ. ಅಪರಾಧಿಗಳ ಕೆಲಸಕ್ಕೆ ನೇಕಾರಿಕೆ, ಮತ್ತು ಟೈಲರಿಂಗ್ ಸೌಲಭ್ಯವಿದೆ. ಅಂಡರ್ ಟ್ರಯಲ್ ವಿಭಾಗದಲ್ಲಿ ಸೆಲ್‌ಗಳು ಮತ್ತು ಬ್ಯಾರಕ್‌ಗಳಿವೆ. ಇಲ್ಲಿ ಗ್ರಂಥಾಲಯ, ಮರಗೆಲಸ ವಿಭಾಗ, ಟೈಲರಿಂಗ್ ಇದೆ. ಹೆಚ್ಚಿನ ಭದ್ರತೆಯ ಕೈದಿಗಳಿಗಾಗಿ ಕೆಲವು ವಿಶೇಷ ಕೋಣೆಗಳು ಸಹ ಇವೆ. ಒಟ್ಟು ಈ ಜೈಲಿನಲ್ಲಿ ಸುಮಾರು 1,200 ಕೈದಿಗಳನ್ನು ಇರಿಸಬಹುದಾಗಿದೆ. ಇದಲ್ಲದೆ, ಮರಣದಂಡನೆ ಶಿಕ್ಷೆಗೊಳಗಾದ ಅಪರಾಧಿಗಳಿಗೆ ಮರಣದಂಡನೆ ವಿಧಿಸುವ ಕರ್ನಾಟಕದ ಏಕೈಕ ಜೈಲು ಇದಾಗಿದೆ. ಆದರೆ, ಕಳೆದ ನಾಲ್ಕು ದಶಕಗಳಲ್ಲಿ ಈ ಜೈಲಿನಲ್ಲಿ ಯಾರಿಗೂ ಸಹ ಮರಣದಂಡನೆ ವಿಧಿಸಿಲ್ಲ.

ಈ ಜೈಲಿನಲ್ಲಿ ಸಿನಿಮಾ ಶೂಟಿಂಗ್

ಜೈಲಿನಲ್ಲಿದ್ದವರ ಪೈಕಿ ಒಟ್ಟು 27 ಕೈದಿಗಳು ಮರಣದಂಡನೆಗೆ ಗುರಿಯಾಗಿದ್ದಾರೆ ಎಂದು ಜೈಲು ಮೂಲಗಳು ತಿಳಿಸಿವೆ. ಇವರ ಕ್ಷಮಾಪಣಾ ಅರ್ಜಿಗಳು ಇನ್ನೂ ನ್ಯಾಯಾಲಯದ ಮುಂದೆ ಮತ್ತು ಕೆಲವು ರಾಷ್ಟ್ರಪತಿಗಳ ಮುಂದೆ ಇವೆ. ಕನ್ನಡ ಚಲನಚಿತ್ರ ‘ಮಿಂಚಿನ ಓಟ’ ಮತ್ತು ಹಿಂದಿ ಚಲನಚಿತ್ರ ‘ಮೊಹ್ರಾ’ ಸೇರಿದಂತೆ ಹಲವಾರು ಚಲನಚಿತ್ರಗಳನ್ನು ಹಿಂಡಲಗಾ ಜೈಲಿನಲ್ಲಿ ಚಿತ್ರೀಕರಿಸಲಾಗಿದೆ.

ಮಂಗಳೂರಿನ ಡಬಲ್ ಮರ್ಡರ್ ಆರೋಪಿ ಹಾಗೂ ವಿವಿಧ ಪ್ರಕರಣಗಳ ಪ್ರಮುಖ ಆರೋಪಿ ಜಯೇಶ್ ಪೂಜಾರಿ ಅಲಿಯಾಸ್ ಜಯೇಶ್ ಕಾಂತ ಹಿಂಡಲಗಾ ಜೈಲಿನಲ್ಲಿದ್ದ. ಆತ ಜನವರಿ 14 ಮತ್ತು ಮಾರ್ಚ್ 21 ರಂದು ಹಿಂಡಲಗಾ ಜೈಲಿನಿಂದ ಸೆಲ್ ಫೋನ್ ಬಳಸಿ ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರಿಗೆ ಬೆದರಿಕೆ ಕರೆಗಳನ್ನು ಮಾಡಿದ್ದ. 10 ಕೋಟಿ ನೀಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಇದೀಗ ಸ್ಯಾಂಡಲ್​ವುಡ್ ಸ್ಟಾರ್​ ದರ್ಶನ್​ ಸಹ ಇದೇ ಜೈಲು ಪಾಲಾಗುವ ಎಲ್ಲಾ ಸಾಧ್ಯತೆಗಳಿವೆ.

ಹಿಂಡಲಗಾದಲ್ಲೂ ಎಲ್ಲಾ ವ್ಯವಸ್ಥೆ ಉಂಟು

ಹೌದು…ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್​ ಟೀ, ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್​ ಆಗಿದೆ. ಅಲ್ಲದೇ ವಿಡಿಯೋ ಕಾಲ್​ನಲ್ಲಿ ಮಾತನಾಡಿರುವ ವಿಡಿಯೋ ತುಣುಕು ಸಹ ಬೆಳಕಿಗೆ ಬಂದಿದೆ. ಇದರೊಂದಿಗೆ ಜೈಲಿನಲ್ಲಿ ಏನೆಲ್ಲಾ ವ್ಯವಸ್ಥೆ ಎನ್ನುವುದು ಜಗಜ್ಜಾಹೀರಾಗಿದೆ. ದುಡ್ಡು ಇದ್ದರೆ ಪರಪ್ಪನ ಅಗ್ರಹಾರದಲ್ಲಿ ಕೇಳಿದ್ದು ಸಿಗುತ್ತದೆ. ಇದು ಕೇವಲ ಇದೊಂದೇ ಜೈಲಿನ ಕಥೆಯಲ್ಲ. ಇನ್ನುಳಿದ ಕರ್ನಾಟಕದ ಎಲ್ಲಾ ಜೈಲುಗಳ ಕಥೆ ಇದೆ ಆಗಿದೆ.

ಇದಕ್ಕೆ ಪೂರಕವೆಂಬಂತೆ ಮಂಗಳೂರು, ಬಳ್ಳಾರಿ ಸೆಂಟ್ರಲ್​ ಜೈಲುಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ ಮೊಬೈಲ್, ಗುಟ್ಕಾ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿರುವುದು ಉಂಟು. ಅಷ್ಟೇ ಅಲ್ಲ ಈಗ ದರ್ಶನ್​ ಪರಪ್ಪನ ಅಗ್ರಹಾರ ಜೈಲಿನಿಂದ ಶಿಫ್ಟ್ ಆಗುತ್ತಿರುವ ಬೆಳಗಾವಿಯ ಹಿಂಡಲಗಾ ಜೈಲಿನಲ್ಲೂ ಕೇಳಿದ್ದು, ಬೆಡಿದ್ದು ಸಿಗುತ್ತದೆ.  ಜೈಲಿನ ಸಿಬ್ಬಂದಿ,  ಕೈದಿಗಳ ಬಳಿ ಹಣ ಪಡೆದು ಬೇಕಾದ ವ್ಯವಸ್ಥೆ ಮಾಡಿ ಕೊಡುತ್ತಾರೆ. ಈ ಸಂಬಂಧ 2021ರಲ್ಲಿ ಬರೋಬ್ಬರಿ 6 ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:56 pm, Mon, 26 August 24