ಪ್ರತ್ಯೇಕ ಘಟನೆ: ಬೆಳಗಾವಿಯಲ್ಲಿ ಗಣೇಶ ವಿಸರ್ಜನೆ ವೇಳೆ ಇಬ್ಬರ ಸಾವು, ರಾಯಚೂರಿನಲ್ಲಿ ಕಲ್ಲು ತೂರಾಟ
ಬೆಳಗಾವಿ ಜಿಲ್ಲೆಯ ಎರಡು ಕಡೆ ಗಣೇಶ ವಿಸರ್ಜನೆ ವೇಳೆ ಇಬ್ಬರು ಯುವಕರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಇತ್ತ ರಾಯಚೂರಿನಲ್ಲಿ ಹಳೆ ದ್ವೇಷ ಹಿನ್ನೆಲೆ ಗಣೇಶ ಮೂರ್ತಿಯ ಅದ್ಧೂರಿ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಲಾಗಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ, ಸೆಪ್ಟೆಂಬರ್ 06: 11 ದಿನದ ಗಣಪತಿ ವಿಸರ್ಜನೆ (Ganesh Visarjan) ವೇಳೆ ಜಿಲ್ಲೆಯಲ್ಲಿ ದುರ್ಘಟನೆ ಸಂಭವಿಸಿವೆ. ಬೆಳಗಾವಿ ನಗರ ಮತ್ತು ಖಾನಾಪುರ ತಾಲೂಕಿನಲ್ಲಿ ಪ್ರತ್ಯೇಕ ಘಟನೆ ನಡೆದಿದ್ದು, ದುರಂತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ (death). ರಾಹುಲ್ ಬ್ಯಾಕವಾಡಕರ್(33) ಮತ್ತು ಶುಭಂ ಕುಪ್ಪಟಗೇರಿ(22) ಮೃತರು. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿವೆ.
ನಡೆದದ್ದೇನು?
ಬೆಳಗಾವಿ ನಗರದ ಜಕ್ಕೇರಿ ಹೊಂಡದಲ್ಲಿ ಗಣೇಶ ವಿಸರ್ಜನೆ ವೇಳೆ ಹೊಂಡದಲ್ಲಿ ಮುಳುಗುತ್ತಿದ್ದ ಬೆಳಗಾವಿಯ ವಡ್ಡರವಾಡಿ ನಿವಾಸಿ ರಾಹುಲ್ ಬ್ಯಾಕವಾಡಕರ್ನನ್ನು ರಕ್ಷಣೆ ಮಾಡಲಾಗಿದೆ. ಆದರೆ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಇಬ್ಬರು ಸಾವು
ಇನ್ನು ಮೂರ್ತಿ ವಿಸರ್ಜನೆ ಮಾಡಿ ಹಿಂದಿರುಗುವಾಗ ಕೈ ಸೋತು ಶುಭಂ ಕುಪ್ಪಟಗೇರಿ ಕೊಚ್ಚಿಕೊಂಡು ಹೋಗಿದ್ದಾನೆ. ಶುಭಂ, ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಯಡೋಗ ನಿವಾಸಿ. ಯಡೋಗ-ಚಾಪಗಾವಿ ನಡುವಿನ ಮಲಪ್ರಭಾ ನದಿ ಸೇತುವೆ ಬಳಿ ಘಟನೆ ನಡೆದಿದೆ. ಸದ್ಯ ಎಸ್ಡಿಆರ್ಎಫ್ ಸಿಬ್ಬಂದಿಯಿಂದ ಶುಭಂ ಕುಪ್ಪಟಗೇರಿಗಾಗಿ ಶೋಧ ನಡೆದಿದೆ. ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಗಣಪತಿ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ: ಇಬ್ಬರಿಗೆ ಗಾಯ, ಬಂಧನ
ರಾಯಚೂರಿನಲ್ಲಿ ಗಣೇಶ ಮೂರ್ತಿಯ ಅದ್ಧೂರಿ ಮೆರವಣಿಗೆ ವೇಳೆ ಇಬ್ಬರು ದುಷ್ಕರ್ಮಿಗಳು ದುಷ್ಟತನ ಮೆರೆದಿದ್ದಾರೆ. ಗಂಗಾ ನಿವಾಸ ರಸ್ತೆಯಲ್ಲಿ ಪಾರ್ವತಿ ಸುತನ ಮೆರವಣಿಗೆ ವೇಳೆ, ಇಬ್ಬರು ಮನೆ ಮೇಲೆ ನಿಂತು ರಾಜಾರೋಷವಾಗಿ ಕಲ್ಲು ತೂರಿದ್ದಾರೆ. ಈ ವೇಳೆ ವಿನಯ್, ಗಣೇಶ್ ಎಂಬುವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಅವಘಡ: ವಿದ್ಯುತ್ ತಂತಿ ಮೇಲೆತ್ತುವಾಗ ಶಾಕ್ ಬಡಿದು ಯುವಕ ಸಾವು
ಘಟನೆ ಬೆನ್ನಲ್ಲೇ ಕೆರಳಿದ ಸಾರ್ವಜನಿಕರು ಪುಂಡರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಳೆ ವೈಷಮ್ಯ ಮನಸ್ಸಿನಲ್ಲಿ ಇಟ್ಕೊಂಡು, ತಮ್ಮ ಏರಿಯಾದಲ್ಲಿ ಮೂರ್ತಿಯ ಶೋಭಯಾತ್ರೆ ಮಾಡಬಾರದು ಅಂತಾ ಈ ಕೃತ್ಯ ಎಸಗಿದ್ದಾಗಿ ಆರೋಪಿಗಳಾದ ಪ್ರಶಾಂತ್ ಹಾಗೂ ಪ್ರವೀಣ್, ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







