ಬೆಂಗಳೂರು: 67 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಅಪರಾಧಿಯ ಹೆಡೆಮುರಿ ಕಟ್ಟಿದ ಪೊಲೀಸ್
Bangaluru News: ಬೆಂಗಳೂರಿನ ಬಾಣಸವಾಡಿ ಪೊಲೀಸರು ಕುಖ್ಯಾತ ಅಪರಾಧಿಯನ್ನ ಕೊನೆಗೂ ಬಂಧಿಸಿದ್ದಾರೆ. 67 ಪ್ರಕರಣಗಳಲ್ಲಿ ಭಾಗಿಯಾಗಿದ್ದ, 30 ಜಾಮೀನುರಹಿತ ವಾರಂಟ್ಗಳಿದ್ದ ಈತ ಕೊಲೆ, ಕೊಲೆಯತ್ನ, ಡಕಾಯಿತಿ ಮತ್ತು ಮನೆಗಳ್ಳತನದಂತಹ ಗಂಭೀರ ಅಪರಾಧಗಳನ್ನು ಬೆಂಗಳೂರು, ಕೋಲಾರ, ಯಾದಗಿರಿಯಲ್ಲಿ ಎಸಗಿದ್ದ. ಬೆಂಗಳೂರು ಸಿಸಿಬಿ ಪೊಲೀಸರು ರೌಡಿಗಳ ಅಡ್ಡೆಗಳು, ಮನೆಗಳ ಮೇಲೆ ದಾಳಿ ಮಾಡಿದ್ದಾರೆ.

ಮುಖ್ಯಾಂಶಗಳು
- ಕುಖ್ಯಾತ ಅಪರಾಧಿ ಅರೆಸ್ಟ್
- 5 ಪ್ರೊಕ್ಲಮೇಷನ್ಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ
- ಬೆಂಗಳೂರು ಸಿಸಿಬಿ ಪೊಲೀಸರಿಂದ ರೌಡಿಶೀಟರ್ಗಳಿಗೆ ಶಾಕ್
ಬೆಂಗಳೂರು, ಜೂನ್ 24: ಡಿಕೆ ಶಿವಕುಮಾರ್ (DK Shivakumar) ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಹಿರಿಯ ಅಧಿಕಾರಿಗಳ ಸಭೆ ಮಾಡಿ ಪ್ರತಿ ಠಾಣೆ ವ್ಯಾಪ್ತಿಯಲ್ಲೂ ಆ್ಯಂಟಿ ರೌಡಿ ಸ್ಕ್ವಾಡ್ ರಚನೆಗೆ ಸೂಚಿಸಿದ್ದರು. ಆ ಮೂಲಕ ರೌಡಿಗಳನ್ನ ಮಟ್ಟಹಾಕಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಹೀಗಾಗಿ 67 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಅಪರಾಧಿ (Notorious criminal) ಸೈಯದ್ ಅಬ್ರಾರ್ನನ್ನು ಬಾಣಸವಾಡಿ ಠಾಣೆಯ ಪೊಲೀಸರು ಇದೀಗ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ವಿಚಾರಣೆ ವೇಳೆ ಕುಖ್ಯಾತ ಅಪರಾಧಿಯ ಹಿನ್ನೆಲೆ ಬೆಳಕಿಗೆ
ಪೊಲೀಸರು ಮನೆಗಳ್ಳತನ ಪ್ರಕರಣವೊಂದರ ತನಿಖೆ ನಡೆಸಿದ್ದರು. ಆಗ ಆರೋಪಿ ಸೈಯದ್ ಬಂಧಿಸಿ ವಿಚಾರಣೆ ನಡೆಸಿದಾಗ ಆತನ ಕರಾಳ ಹಿನ್ನೆಲೆ ಬೆಳಕಿಗೆ ಬಂದಿದೆ. ಕೊಲೆ, ಕೊಲೆಯತ್ನ, ಡಕಾಯಿತಿ ಕೇಸ್ನಲ್ಲಿ ಭಾಗಿಯಾಗಿದ್ದ ಅಬ್ರಾರ್ ವಿರುದ್ಧ 30 ಜಾಮೀನುರಹಿತ ವಾರಂಟ್ ಜಾರಿಯಾಗಿದ್ದವು.
ಇದನ್ನೂ ಓದಿ: ರೌಡಿ ನಿಗ್ರಹ ಪಡೆ ಮಧ್ಯೆಯೂ 66 ರೌಡಿಗಳಿಗೆ ಮುಕ್ತಿ: ಪೊಲೀಸ್ ಇಲಾಖೆ ಮಾಡಿದ ಎಡವಟ್ಟು ಏನು?
ಬೆಂಗಳೂರು, ಕೋಲಾರ ಹಾಗೂ ಯಾದಗಿರಿಯಲ್ಲೂ ಅಪರಾಧವೆಸಗಿದ್ದ ಸೈಯದ್ ಅಬ್ರಾರ್, 5 ಪ್ರೊಕ್ಲಮೇಷನ್ಗಳಲ್ಲಿ ತಲೆಮರೆಸಿಕೊಂಡಿದ್ದ. ಸದ್ಯ ಆರೋಪಿಯನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.
ರೌಡಿಶೀಟರ್ಗಳಿಗೆ ಸಿಸಿಬಿ ಪೊಲೀಸರು ಶಾಕ್: ಡ್ಡೆಗಳು, ಮನೆಗಳ ಮೇಲೆ ದಾಳಿ
ಇನ್ನು ಬೆಂಗಳೂರು ಸಿಸಿಬಿ ಪೊಲೀಸರಿಂದ ರೌಡಿಶೀಟರ್ಗಳಿಗೆ ಶಾಕ್ ನೀಡಿದ್ದಾರೆ. ರೌಡಿ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದು, ರೌಡಿಗಳ ಅಡ್ಡೆಗಳು ಮತ್ತು ಮನೆಗಳ ಮೇಲೆ ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಅಕ್ರಮ ಬಡ್ಡಿ ದಂಧೆಕೋರರ ವಿರುದ್ಧ ಖಾಕಿ ಸಮರ: ಕಂತೆ ಕಂತೆ ಹಣ, ಚಿನ್ನಾಭರಣ ಕಂಡು ಶಾಕ್!
ಬೆಂಗಳೂರಿನ ವಿವಿಧ ಭಾಗದಲ್ಲಿ ಸಕ್ರಿಯರಾಗಿರುವ 30ಕ್ಕೂ ಹೆಚ್ಚು ರೌಡಿಶೀಟರ್ಗಳ ತಪಾಸಣೆ ಮಾಡಲಾಗಿದೆ. ರೌಡಿಗಳು ಸಂಚರಿಸುತ್ತಿದ್ದ ವಾಹನ ರಸ್ತೆಯಲ್ಲೇ ತಡೆದು ಪರಿಶೀಲನೆ ಮಾಡಲಾಗಿದೆ ರೌಡಿಶೀಟರ್ಗಳಾದ ಇಟ್ಟಮಡು ಸಾಗರ್, ಹುಸ್ಕೂರು ಶಿವ, ವಿವೇಕನಗರ ದಿನೇಶ್, ಶೇಷಾದ್ರಿಪುರದ ರೌಡಿಶೀಟರ್ ರಂಜಿತ್ ಸೇರಿದಂತೆ ಹಲವು ರೌಡಿಶೀಟರ್ಗಳ ವಾಹನ ತಡೆದು ಪೊಲೀಸರು ಪರಿಶೀಲಿಸಿದ್ದಾರೆ. ಇನ್ನು ಈ ವೇಳೆ ರೌಡಿಶೀಟರ್ ಪಿ.ಮೂರ್ತಿ ಬಳಿ ಪರವಾನಗಿ ರದ್ದು ಆಗಿದ್ದ ಗನ್ ಪತ್ತೆ ಆಗಿದ್ದು, ಪರವಾನಗಿ ನವೀಕರಣಗೊಳ್ಳುವವರೆಗೆ ಗನ್ ಪೊಲೀಸ್ ಠಾಣೆಯಲ್ಲಿ ಜಮೆ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




