ಚಿಕನ್, ಮಟನ್ ತ್ಯಾಜ್ಯ ವಿಲೇವಾರಿಗೆ ಹೊಸ ರೂಲ್ಸ್, ಶುಲ್ಕವೂ ನಿಗದಿ
ಬೆಂಗಳೂರಿನಲ್ಲಿ ಚಿಕನ್ ಮತ್ತು ಮಟನ್ ಅಂಗಡಿಗಳಿಗೆ ಹೊಸ ನಿಯಮವೊಂದು ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಮಾಂಸದ ತ್ಯಾಜ್ಯ ವಿಲೇವಾರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಡಿಯಲ್ಲಿ ಕಾರ್ಯನಿರ್ವಹಿಸುವ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆ (BSWML) ಪ್ರತಿ ಕಿಲೋ ತ್ಯಾಜ್ಯಕ್ಕೆ 5 ರೂಪಾಯಿ ಶುಲ್ಕ ವಿಧಿಸಲು ಮುಂದಾಗಿದೆ. ಆದ್ರೆ, ಇದಕ್ಕೆ ವ್ಯಾಪಾರಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಮುಖ್ಯಾಂಶಗಳು
- ಬೆಂಗಳೂರಿನಲ್ಲಿ ಚಿಕನ್, ಮಟನ್ ತ್ಯಾಜ್ಯ ವಿಲೇವಾರಿಗೆ ಹೊಸ ನಿಯಮ ಜಾರಿಗೊಳಿಸಿದ ಜಿಬಿಎ
- ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆ(BSWML) ಮೂಲಕ ಹೊಸ ನಿಯಮಗಳ ಅನುಷ್ಠಾನ
- ಪ್ರತಿ ಕಿಲೋ ಗ್ರಾಂ ಮಾಂಸದ ತ್ಯಾಜ್ಯ ಸಂಗ್ರಹಕ್ಕೆ 5 ರೂಪಾಯಿ ಶುಲ್ಕ ನಿಗದಿಪಡಿಸಿದ BSWML
ಬೆಂಗಳೂರು, (ಜುಲೈ 23): ಬೆಂಗಳೂರು ನಗರದಲ್ಲಿ ಮಾಂಸದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಬೆಂಗಳೂರು (bengaluru) ಘನತ್ಯಾಜ್ಯ ನಿರ್ವಹಣೆ ಸಂಸ್ಥೆ ಹೊಸ ನಿಯಮ ಜಾರಿಗೆ ತಂದಿದೆ. ಪ್ರತಿ ಕಿಲೋಗ್ರಾಂ ಚಿಕನ್ ಹಾಗೂ ಮಟನ್ (chicken and mutton) ತ್ಯಾಜ್ಯ ಸಂಗ್ರಹಕ್ಕೆ 5 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದ್ದು, ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಮಾರತಹಳ್ಳಿ ಹಾಗೂ ದೊಡ್ಡ ನೆಕ್ಕುಂದಿ ವಾರ್ಡ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಈಗಾಗಲೇ ಶುಲ್ಕ ಸಂಗ್ರಹ ಆರಂಭವಾಗಿದೆ. ಆದರೆ ಹೊಸ ನಿಯಮದಿಂದ ಸಣ್ಣ ಮತ್ತು ಮಧ್ಯಮ ಮಾಂಸ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ದೊಡ್ಡಬೆಕ್ಕುಂದಿ ಚಿಕನ್ ಅಂಗಡಿ ಮಾಲೀಕ, ಮಾಂಸವನ್ನು ಸ್ವಚ್ಛಗೊಳಿಸಲು ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಸುವುದು ಅನಿವಾರ್ಯ. ಆದರೆ ತ್ಯಾಜ್ಯದ ಜೊತೆಗೆ ನೀರಿನ ತೂಕವನ್ನೂ ಸೇರಿಸಿ ಶುಲ್ಕ ಲೆಕ್ಕ ಹಾಕಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಇದರಿಂದ ನೈಜ ತ್ಯಾಜ್ಯಕ್ಕಿಂತ ಹಲವು ಪಟ್ಟು ಹೆಚ್ಚು ತೂಕ ದಾಖಲಾಗುತ್ತಿದ್ದು, ಒಂದು ಅಂಗಡಿಗೆ ತಿಂಗಳಿಗೆ ಕನಿಷ್ಠ 10 ಸಾವಿರ ರೂಪಾಯಿ ಶುಲ್ಕ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತ್ಯಾಜ್ಯ ವಿಲೇವಾರಿಗೆ ಶುಲ್ಕ ಕಟ್ಟಲು ಯಾವುದೇ ವಿರೋಧ ಇಲ್ಲ, ಆದರೆ ನೀರಿನ ತೂಕದ ಆಧಾರದ ಮೇಲೆ ಹಣ ವಸೂಲಿ ಮಾಡುವುದು ಅನ್ಯಾಯ ಎಂದು ಅವರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕರಿಗೆ ಮತ್ತೊಂದು ದರ ಏರಿಕೆಯ ಬಿಸಿ: KMF ನಂದಿನಿ ತುಪ್ಪ, ಬೆಣ್ಣೆ ದರ ಹೆಚ್ಚಳ
ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆ ಈ ಶುಲ್ಕ ವ್ಯವಸ್ಥೆಯನ್ನು ಮರುಪರಿಶೀಲಿಸಬೇಕು ಎಂದು ಚಿಲ್ಲರೆ ಮಾಂಸ ಮಾರಾಟಗಾರರು ಒತ್ತಾಯಿಸಿದ್ದಾರೆ. ಕೇವಲ ನೈಜ ತ್ಯಾಜ್ಯದ ಪ್ರಮಾಣಕ್ಕೆ ಅನುಗುಣವಾಗಿ ಶುಲ್ಕ ನಿಗದಿಪಡಿಸಬೇಕು ಅಥವಾ ಈಗಿನ ದರವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದರೆ ಈ ಹೆಚ್ಚುವರಿ ವೆಚ್ಚವನ್ನು ಗ್ರಾಹಕರ ಮೇಲೆಯೇ ಹೊರಿಸಬೇಕಾಗುತ್ತದೆ ಎಂದು ವ್ಯಾಪಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ವ್ಯಾಪಾರಿಗಳ ಆಕ್ಷೇಪಣೆ ಕುರಿತು ಬಿಎಸ್ಡಬ್ಲ್ಯುಎಂಎಲ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:58 pm, Thu, 23 July 26




