AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯಮಿಗಳಿಂದ ಲಕ್ಷ ಲಕ್ಷ ಹಣ ಪಡೆದು ಟೋಪಿ ಹಾಕುತ್ತಿದ್ದ ಪೀಟರ್ ಡ್ಯಾಡಿ ಮನೆ ಮೇಲೆ ಸಿಐಡಿ ದಾಳಿ!

ಬೆಂಗಳೂರಿನಲ್ಲಿ ಉದ್ಯಮಿಗಳಿಂದ ಕೋಟ್ಯಾಂತರ ರೂಪಾಯಿ ವಂಚಿಸಿದ ಆರೋಪದಡಿ ಪೀಟರ್ ಡ್ಯಾಡಿ ಮನೆ ಮೇಲೆ ಸಿಐಡಿ ದಾಳಿ ನಡೆದಿದೆ. ಜಮೀನು ವ್ಯವಹಾರದ ಹೆಸರಿನಲ್ಲಿ ಲಕ್ಷಾಂತರ ಹಣ ಪಡೆದು, ಸುಳ್ಳು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದ ಡ್ಯಾಡಿ ವಿರುದ್ಧ ಅನೇಕ ವಂಚನೆ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ಸಿಐಡಿ ಆರ್ಥಿಕ ಅಪರಾಧ ವಿಭಾಗದ ತನಿಖೆ ಮುಂದುವರಿದಿದೆ.

ಉದ್ಯಮಿಗಳಿಂದ ಲಕ್ಷ ಲಕ್ಷ ಹಣ ಪಡೆದು ಟೋಪಿ ಹಾಕುತ್ತಿದ್ದ ಪೀಟರ್ ಡ್ಯಾಡಿ ಮನೆ ಮೇಲೆ ಸಿಐಡಿ ದಾಳಿ!
ಉದ್ಯಮಿಗಳಿಂದ ಲಕ್ಷ ಲಕ್ಷ ಹಣ ಪಡೆದು ಟೋಪಿ ಹಾಕುತ್ತಿದ್ದ ಪೀಟರ್ ಡ್ಯಾಡಿ ಮನೆ ಮೇಲೆ ಸಿಐಡಿ ದಾಳಿ!
ಭಾವನಾ ಹೆಗಡೆ
|

Updated on: Feb 11, 2026 | 8:44 AM

Share

ಬೆಂಗಳೂರು, ಫೆಬ್ರವರಿ 11: ಉದ್ಯಮಿಗೆ ಕೋಟ್ಯಾಂತರ ಮೌಲ್ಯದ ಜಮೀನು ವ್ಯವಹಾರದಲ್ಲಿ ವಂಚನೆ ನಡೆಸಿದ ಆರೋಪದಡಿ ಪೀಟರ್ ಡ್ಯಾಡಿ (Peter Daddy) ಎಂಬಾತನ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ನಿನ್ನೆ (ಫೆ.10) ದಾಳಿ (CID raid) ನಡೆಸಿದ್ದಾರೆ. ಪುಲಿಕೇಶಿನಗರದಲ್ಲಿರುವ ಮನೆ ಮೇಲೆ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಕಮಿಷನ್ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ

ಕಳೆದ ವರ್ಷದ ಆಗಸ್ಟ್‌ನಲ್ಲಿ ಸುಬ್ಬರಾವ್ ಎಂಬ ಉದ್ಯಮಿಯು ಪುಲಿಕೇಶಿನಗರ ಠಾಣೆಯಲ್ಲಿ ಪೀಟರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ದೂರಿನಲ್ಲಿ ಹೇಳಿರುವಂತೆ, ಸುಮಾರು 300 ಎಕರೆ ಜಮೀನಿನ ದಾಖಲಾತಿಗಳನ್ನು ಸರಿಪಡಿಸಿ ಖಾತೆ ಬದಲಾವಣೆ ಮಾಡಿಸಿ, ಬಳಿಕ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಿಕೊಡುವುದಾಗಿ ಪೀಟರ್ ಭರವಸೆ ನೀಡಿದ್ದರು. ಈ ಹಿನ್ನೆಲೆ ಪ್ರೊಸೆಸಿಂಗ್ ಫೀ, ಲ್ಯಾಂಡ್ ಡೀಲ್ ಹಾಗೂ ಕಮಿಷನ್ ಹೆಸರಿನಲ್ಲಿ 96 ಲಕ್ಷ 50 ಸಾವಿರ ರೂ. ಹಣವನ್ನು ಪಡೆದುಕೊಂಡಿದ್ದರೂ, ಯಾವುದೇ ಕೆಲಸ ಮಾಡಿಕೊಡದೆ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತಾನೇ ಚೆಕ್ ಬೌನ್ಸ್ ಕೇಸ್ ಹಾಕಿದ್ದ ಪೀಟರ್!

ಇದಲ್ಲದೆ, ಕಮಿಷನ್ ಖಾತ್ರಿಗಾಗಿ ಸುಬ್ಬರಾವ್ ಅವರಿಂದ ಚೆಕ್ ಪಡೆದಿದ್ದ ಪೀಟರ್, ಬಳಿಕ ಅದೇ ಚೆಕ್ ಆಧಾರವಾಗಿ ದೂರುದಾರರ ವಿರುದ್ಧ ಸುಳ್ಳು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿರುವುದಾಗಿ ತಿಳಿದುಬಂದಿದೆ. ಪ್ರಕರಣದ ಗಂಭೀರತೆ ಹಿನ್ನೆಲೆ ಈ ವಿಚಾರಣೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಸದ್ಯ ಸಿಐಡಿ ಅಧಿಕಾರಿಗಳು ಮನೆ ಶೋಧಿಸಿ, ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮುಂದಿನ ತನಿಖೆ ಮುಂದುವರಿದಿದೆ.

ಇದನ್ನೂ ಓದಿ ಮದುವೆ ನೆಪದಲ್ಲಿ 9 ಯುವತಿಯರ ಬಾಳಲ್ಲಿ ಚೆಲ್ಲಾಟವಾಡಿದ್ದ ‘ಮ್ಯಾಟ್ರಿಮೋನಿ ಮನ್ಮಥ’, ನಕಲಿ ಮಾವ ಪೊಲೀಸ್ ಬಲೆಗೆ

ಪೀಟರ್ ಡ್ಯಾಡಿ ವಿರುದ್ಧ ಬೆಂಗಳೂರು ನಗರದ ಅಶೋಕನಗರ, ಹಲಸೂರು, ಬೆಳ್ಳಂದೂರು, ಜೀವನ್ ಭೀಮಾನಗರ, ಪುಲಕೇಶಿನಗರ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿದ್ದು, ಹೆಚ್ಚಿನ ತನಿಖೆಗಾಗಿ ಸಿಐಡಿ ಆರ್ಥಿಕ ಅಪರಾಧ ದಳಕ್ಕೆ ವರ್ಗಾವಣೆ ಮಾಡಲಾಗಿದೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.